Homeಕರ್ನಾಟಕಮೈಸೂರು: ಜ.25ರಿಂದ ‘ನಿರಂತರ ರಂಗ ಉತ್ಸವ’, ಐದು ನಾಟಕಗಳ ಪ್ರದರ್ಶನ

ಮೈಸೂರು: ಜ.25ರಿಂದ ‘ನಿರಂತರ ರಂಗ ಉತ್ಸವ’, ಐದು ನಾಟಕಗಳ ಪ್ರದರ್ಶನ

ಉತ್ಸವದಲ್ಲಿ ಪ್ರದರ್ಶನವಾಗುವ ಐದು ನಾಟಕಗಳ ಪರಿಚಯ ಇಲ್ಲಿದೆ

- Advertisement -
- Advertisement -

ಮೈಸೂರು: ನಿರಂತರ ಫೌಂಡೇಶನ್ ಆಯೋಜಿಸುತ್ತಾ ಬರುತ್ತಿರುವ ಪ್ರತಿಷ್ಟಿತ ‘ನಿರಂತರ ರಂಗ ಉತ್ಸವ’ ಈ ಬಾರಿ ಜನವರಿ 25ರಿಂದ ಜ.29ರವರೆಗೆ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ನಡೆಯಲಿದೆ.

ಪ್ರತಿದಿನ ಸಂಜೆ ಏಳು ಗಂಟೆಗೆ ಒಂದೊಂದು ನಾಟಕವನ್ನು ಪ್ರದರ್ಶಿಸಲಾಗುತ್ತದೆ. ಜ.25ರಂದು ಸಂಜೆ 6.15ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ನಿರಂತರ ಸಂಸ್ಥೆಯ ಪ್ರಸಾದ್ ಕುಂದೂರು ಪಾಲ್ಗೊಳ್ಳಲಿದ್ದಾರೆ.

ಜ.26ರಂದು ಪ್ರಜಾವಾಣಿ ಮೈಸೂರು ಬ್ಯುರೋ ಸಂಪಾದಕರಾದ ಕೆ.ನರಸಿಂಹಮೂರ್ತಿ, ಜ.27ರಂದು ಶಿಕ್ಷಣತಜ್ಞ ನಾ.ದಿವಾಕರ್‌, ಹಿರಿಯ ರಂಗಕರ್ಮಿ ಇಂದಿರಾ ನಾಯರ್‌, ಜ.28ರಂದು ಡಾ.ಡಿ.ಬಿ.ನಟೇಶ್‌, ಬೆಂಗಳೂರು ಹಸಿರು ಫೌಂಡೇಷನ್‌ನ ಹೊನ್ಗಳ್ಳಿ ಗಂಗಾಧರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜ.29ರಂದು ಸಂಜೆ 6.15ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು ಕವಿ ಆರಿಫ್ ರಾಜ್‌, ಬಿಬಿಎಂಪಿ ವಿಶೇಷ ಆಯುಕ್ತ, ಮಂತ್ರಿಮಂತ್ರಿಯವರ ಕಾರ್ಯದರ್ಶಿ ಜಯರಾಮ್ ರಾಯಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುದರ್ಶನ್, ನಿರಂತರ ಸಂಸ್ಥೆಯ ಶ್ರೀನಿವಾಸ್ ಪಾಲಹಳ್ಳಿ ಹಾಜರಿರುವರು.

ಪ್ರದರ್ಶನವಾಗುವ ನಾಟಕಗಳ ವಿವರ

ಜನವರಿ 25
ನಾಟಕ: ಶಾಂತಕವಿಗಳ ವಿಶ್ರಾಂತಿ
ತಂಡ: ಗೊಂಬೆಮನೆ, ಧಾರವಾಡ
ರಚನೆ & ನಿರ್ದೇಶನ: ಪ್ರಕಾಶ್ ಗರುಡ

ನಾಟಕದ ಬಗ್ಗೆ: ಇದು ಕನ್ನಡದ ಆದ್ಯ ನಾಟಕಕಾರ ಎಂದು ಹೆಸರಾದ ಸಕ್ಕರಿ ಬಾಳಾಚಾರ್ಯ ‘ಶಾಂತಕವಿ’ಗಳ ಜೀವನ-ಸಾಧನೆಗಳ ಕುರಿತಾದ ನಾಟಕ. ಹೆಸರೇ ಸೂಚಿಸುವಂತೆ ಶಾಂತಕವಿಗಳು ಉರ್ಫ್ ಸಕ್ಕರಿ ಬಾಳಾಚಾರ್ಯರೇ ಇದರ ಕೇಂದ್ರ ಪಾತ್ರ. ಐತಿಹಾಸಿಕ ವಿವರಗಳನ್ನು ಒಳಗೊಂಡಿರುವುದರಿಂದ ಇದನ್ನು ದಾಖಲಾತೀ ನಾಟಿಕೆ ಎಂದು ಕರೆಯಲಾಗಿದೆ. ನಾಟಿಕಾ ಎಂಬ ಪದದ ಪ್ರಯೋಗವು ಭರತಮುನಿಯ ನಾಟ್ಯಶಾಸ್ತ್ರ (ಅಧ್ಯಾಯ 20)ದಲ್ಲಿಯೂ ಮತ್ತು ಧನಂಜಯನ ದಶರೂಪಕ (ಪ್ರಕಾಶ- 3)ದಲ್ಲಿಯೂ ಕಂಡುಬರುತ್ತದೆ. ಈ ನಾಟಕ ಶಾಂತಕವಿಗಳ ಕನ್ನಡತ್ವದ ಶೋಧನೆಗಾಗಿ ಹೊಸ ರಂಗಭೂಮಿಯನ್ನು ಕಟ್ಟಲು ಅವರು ಪಟ್ಟಶ್ರಮ ಎದುರಿಸಿದ ಬಿಕ್ಕಟ್ಟುಗಳನ್ನು ಅವರ ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳ ಹಿನ್ನೆಲೆಯಲ್ಲಿ ಕಟ್ಟಿಕೊಡಲು ಪ್ರಸ್ತುತ ಪ್ರಯೋಗದಲ್ಲಿ ಪ್ರಯತ್ನಿಸಲಾಗಿದೆ.

***

ಜನವರಿ 26
ನಾಟಕ: ವಾರಸುದಾರಾ
ರಚನೆ: ಜಯರಾಂ ರಾಯಪುರ
ತಂಡ: ನಿರಂತರ, ಮೈಸೂರು
ನಿ: ಪ್ರಸಾದ್ ಕುಂದೂರು

ನಾಟಕದ ಬಗ್ಗೆ: ಹಿಂದೂಸ್ತಾನದ ಚರಿತ್ರೆಯಲ್ಲಿ ಮೊಘಲ್ ಸಾಮ್ರಾಜ್ಯದ ಇತಿಹಾಸ ಎಂದೂ ಮರೆಯಲಾಗದ ಅಧ್ಯಾಯ. ಟರ್ಕಿಯಿಂದ ಬಂದ ತೈಮೂರ್ ವಂಶಸ್ಥರಾದರೂ, ಈ ಭಾರತೀಯ ನೆಲದ ಸಂಸ್ಕೃತಿ-ಸಂಘರ್ಷಗಳನ್ನು, ಭಾವೈಕ್ಯತೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ, ಬೃಹತ್ ಸಾಮ್ರಾಜ್ಯದ ಒಡೆತನ ಹೊಂದಿದ್ದ ಮೊಘಲರು, ಮೌರ್ಯರ ನಂತರ ಅಖಂಡ ಹಿಂದೂಸ್ತಾನವನ್ನು ಆಳಿದವರು. ಸರ್ವ ಧರ್ಮಗಳ ಗೌರವಿಸಿ ಪೊರೆಯುವ ಅಕ್ಬರ್‌ನ ಧಾರ್ಮಿಕ ಮತ್ತು ರಾಜಕೀಯ ಚಿಂತನೆಗಳು ಶಹಜಹಾನ್ ಮತ್ತು ಅವನ ಅತ್ಯಂತ ಪ್ರೀತಿಯ ಹಿರಿಯ ಮಗ ದಾರಶಿಕೋನ ಮರಣದಲ್ಲಿ ಪರ್ಯಾವಸನಗೊಳ್ಳುತ್ತದೆ. ಶಹಜಹಾನನ ನಾಲ್ಕು ಮಕ್ಕಳಾದ ದಾರಶಿಕೋ, ಮುರಾದ್, ಶೂಜ, ಜೌರಂಗಜೇಬನಿಗೆ ಮೊಘಲ್ ಹಾಗೂ ಹಿಂದುಸ್ತಾನದ ಬಾದಶಹ ಆಗಬೇಕಾದರೆ ತಮ್ಮ ಅಣ್ಣತಮ್ಮಂದಿರನ್ನೇ ಕೊಂದು ಗಾದಿ ಹಿಡಿಯಬೇಕು. ಇಲ್ಲವಾದರೆ ಪ್ರಾಣ ಕಳೆದುಕೊಂಡು ಪಟ್ಟ ಏರುವವನಿಗೆ ಮೆಟ್ಟಿಲಾಗಬೇಕು. ಹೀಗೆ ತೈಮೂರ್ ವಂಶವಳಿಯ ಈ ರಾಜಕೀಯ ದುರಂತದ ಚರಿತ್ರೆಯೊಳಗೆ ಯಾರು ಶಹಜಹಾನನ ನಂತರ ಮಯೂರ ಸಿಂಹಾಸನದ ಮೇಲೆ ಕೂತು ಅಖಂಡ ಹಿಂದೂಸ್ತಾನವನ್ನು ಆಳಲು ಯೋಗ್ಯರೋ ಎಂದು ಯುದ್ಧವೇ ನಿರ್ಧರಿಸಬೇಕಾಗುತ್ತದೆ. ಇಂತಹ ಮೊಘಲ್ ಸುಲ್ತಾನತ್ತಿಗಾಗಿ ನಡೆದ ರೋಚಕ ಕಾಳಗದ ಕಥನವೇ “ವಾರಸುದಾರಾ”.

****

ಜನವರಿ 27
ನಾಟಕ: ನವಿಲು ಪುರಾಣ
ರಚನೆ: ಪ್ರೊ.ಕೆ.ಈ.ರಾಧಾಕೃಷ್ಣ
ತಂಡ: ಅನೇಕ, ಬೆಂಗಳೂರುನಿ: ಸುರೇಶ್ ಆನಗಳ್ಳಿ

ನಾಟಕದ ಬಗ್ಗೆ: ಮಹಾನ್ ಉರ್ದು ಲೇಖಕ ಇನ್ತಿಜಾರ್ ಹುಸೇನರ ಕತೆಯಿಂದ ಪ್ರೇರಿತವಾದ ‘ನವಿಲು ಪುರಾಣ’ವನ್ನು ಕನ್ನಡದಲ್ಲಿ ಕಥಾರೂಪಕವಾಗಿ ರಚಿಸಿದವರು- ಸಾಂಸ್ಕೃತಿಕ ಲೋಕದಲ್ಲಿ ಕ್ರಿಯಾಶೀಲವಾಗಿರುವ ಪ್ರೊ.ಕೆ.ಈ.ರಾಧಾಕೃಷ್ಣ ಅವರು. ರಂಗ ಪ್ರದರ್ಶನಕ್ಕೆ ಪರಿಕಲ್ಪಿಸಿ ಅಳವಡಿಸಿದವರು ಮತ್ತು ನಿರ್ದೇಶಿಸಿದವರು, ನಾಡಿನ ಶ್ರೇಷ್ಠ ರಂಗತಪಸ್ವಿ ಸುರೇಶ್ ಅನಗಳ್ಳಿಯವರು.

ವಿನಾಶಕಾರಿ ಯುದ್ಧದ ಪರಿಣಾಮವಾಗಿ ನೆಲೆ ಕಳೆದುಕೊಂಡು ನಿರಾಶ್ರಿತವಾದ ನವಿಲು – ಈ ನಾಟಕದ ಕೇಂದ್ರ ರೂಪಕ. ಈ ರೂಪಕದ ಸುತ್ತ – ಪುರಾಣ, ಇತಿಹಾಸ, ವರ್ತಮಾನ ಕಾಲಘಟ್ಟಗಳ ಹಲವಾರು ಘಟನೆಗಳು ಬಿಚ್ಚಿಕೊಳ್ಳುತ್ತವೆ. ಯುದ್ಧವೆಂದರೆ ಪರರ ನೆಲವನ್ನು, ಸಂಪತ್ತನ್ನು ಕಸಿದುಕೊಳ್ಳುವ ದುಷ್ಟರ ಹುನ್ನಾರವೇ ತಾನೇ? ಬಲಾಢ್ಯರು ಸೃಷ್ಟಿಸುವ ಇಂತಹ ಯುದ್ಧೋನ್ಮಾದ ಹಾಗೂ ಅದರ ಪರಿಣಾಮವಾಗಿ ದುರ್ಬಲರು ತಮ್ಮ ನೆಲೆ ಕಳೆದುಕೊಂಡು ನಿರಾಶ್ರಿತರಾಗುವ ಧಾರುಣ ವಿದ್ಯಮಾನಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲುತ್ತದೆ- ಸ್ವತ: ತನ್ನ ನೆಲವನ್ನೇ ಕಳೆದುಕೊಂಡ ನವಿಲು! ನವಿಲು ಪುರಾಣವು ಯುದ್ಧದ ಪರಿಣಾಮವಾಗಿ ನೆಲವಿಹೀನರಾಗುವ ನಾಗರಿಕರ ಸಂಕಟದ ಕಥೆ ಮಾತ್ರವಲ್ಲ; ಸಕಲ ಜೀವ ಸಂಕುಲವನ್ನು ಒಳಗೊಂಡ ಪರಿಸರ ವಿನಾಶದ ಕಥೆಯೂ ಹೌದು. ಹಿಂದೊಮ್ಮೆ ತಿಳಿನೀರ ಕೊಳದಲ್ಲಿ ವಿಹರಿಸುತ್ತಿದ್ದ ರಾಜಹಂಸವು ಇಂದು ಬಡಕಲು ಬಾತುಕೋಳಿಯಾಗಿ ರೂಪಾಂತರಗೊಂಡ ವಿಷಾದದ ಎಳೆಯೂ ಈ ನಾಟಕದ ಕಥಾ ನೇಯ್ಗೆಯಲ್ಲಿದೆ.

ನವಿಲು ಪುರಾಣ ಪ್ರಯೋಗ ವಿನ್ಯಾಸದ ಕುರಿತು: ಈ ನಾಟಕದಲ್ಲಿ ರಂಗಭೂಮಿಗೆ ವಿಶಿಷ್ಟವಾದ ನಾಟಕೀಯ ಸಂಭಾಷಣೆಯ ಬದಲಿಗೆ, ಸಣ್ಣ ಕಥಾ ಸಾಹಿತ್ಯ ಪ್ರಕಾರದಲ್ಲಿ ಬಳಕೆಯಾಗುವ ಕಥನ ನಿರೂಪಣಾ ಶೈಲಿಗೆ ಒತ್ತು ಕೊಡಲಾಗಿದೆ. ಅಂದರೆ, ನಟನು ತಾನು ನಿರ್ವಹಿಸಬೇಕಾದ ಕ್ರಿಯೆಗಳನ್ನು ಪಾತ್ರದ ಹೊರ ನಿಂತು ನಿರೂಪಿಸಲಾಗುತ್ತದೆ ಹಾಗೂ ಮರುಕ್ಷಣವೇ ಪಾತ್ರವಾಗಿ ಮಾರ್ಪಟ್ಟು ಪಾತ್ರದ ಸಂಭಾಷಣೆಯನ್ನು ಹೇಳುತ್ತಾನೆ. ಈ ರೀತಿ ಏಕಕಾಲದಲ್ಲೇ ನಟ-ಪಾತ್ರ ದ್ವಂದ್ವ ಪ್ರಸ್ತುತಿಯ ಜೊತೆಗೆ ಸಾಕ್ಷ ಚಿತ್ರಗಳ ನೈಜ ಬಿಂಬಗಳ ತುಣುಕು; ಸಮೂಹ ನಟನೆಯ ನಾಟಕೀಯತೆ; ಅತಿ- ವಾಸ್ತವತೆಗಳ ಬೃಹತ್ ಬೊಂಬೆಗಳ ಆಟ – ಇತ್ಯಾದಿ ಹಲವು ಮಾಧ್ಯಮಗಳ ಮಿಶ್ರಣದ ಪಾಕವನ್ನು ನವಿಲು ಪುರಾಣದ ದೃಷ್ಟಾಂಶಗಳಲ್ಲಿ ಪ್ರಯೋಗಿಸಲಾಗಿದೆ.

***

ಜನವರಿ 28
ನಾಟಕ: ಮಿಸ್. ಸದಾರಮೆ
ರಚನೆ: ಬೆಳ್ಳಾವೆ ನರಹರಿ ಶಾಸ್ತ್ರಿ
ತಂಡ: ಸಮಷ್ಟಿ, ಬೆಂಗಳೂರು
ನಿ: ಮಂಜುನಾಥ ಎಲ್ ಬಡಿಗೇರ

ನಾಟಕದ ಬಗ್ಗೆ: ಮಿಸ್ ಸದಾರಮೆ ನಾಟಕವು ಬೆಳ್ಳಾವೆ ನರಹರಿ ಶಾಸ್ತ್ರಿಗಳಿಂದ ವಿರಚಿರ್ತವಾದ ಮೂಲ “ಸದಾರಮಾ ನಾಟಕಂ”ನ ಪರಿಷ್ಕೃತ ಆವೃತ್ತಿ. ಮೂಲತಃ ಈ ನಾಟಕವು ಗುಬ್ಬಿ ಕಂಪೆನಿಯಲ್ಲಿ ಸಾವಿರಾರು ಪ್ರದರ್ಶನಗಳನ್ನು ಕಂಡು ನಂತರ ಹಿರಣ್ಣಯ್ಯನವರಿಂದ ಹಲವಾರು ಪ್ರಯೋಗಗಳನ್ನು ಕಂಡು ಪ್ರಸಿದ್ದವಾಗಿದೆ. ನಂತರ ಇದನ್ನು ಕೆ ವಿ ಸುಬ್ಬಣ್ಣನವರು ಪ್ರಸ್ತುತ ಸನ್ನಿವೇಷಕ್ಕೆ ಬದಲಾಯಿಸಿ “ಮಿಸ್ ಸದಾರಮೆ” ಎಂದು ಬಿ ವಿ ಕಾರಂತರ ನಿರ್ದೇಶನದಲ್ಲಿ ನೀನಾಸಂ ತಿರುಗಾಟದಲ್ಲಿ ನೂರಾರು ಪ್ರದರ್ಶನಗಳನ್ನು ಮಾಡಿಸಿದರು. ಈ ನಾಟಕವು ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಪ್ರಯೋಗವಾದ ದಾಖಲೆಗಳಿವೆ.

ವರ್ತಕ ಬಂಗಾರ ಶೆಟ್ಟಿಯ ಮಗಳಾದ ಸದಾರಮೆಯಿಂದ ಆಕರ್ಷಿತನಾದ ರಾಜಕುಮಾರ ರಾಜ್ಯ ಕೋಶಾದಿಗಳನ್ನು ಬಿಟ್ಟು ಮದುವೆಯಾಗಿ, ಅವಳೊಂದಿಗೆ ದೇಶಾಂತರ ಹೊರಟು ಹೋಗುತ್ತಾನೆ. ವಿಧಿಯ ವೈಪರೀತ್ಯದಿಂದಾಗಿ ಗಂಡ-ಹೆಂಡತಿಯರು ಒಬ್ಬರಿಂದೊಬ್ಬರು ಅಗಲಿ ಮುಗ್ದೆಯಾದ ಸದಾರಮೆ ಹಲವಾರು ಕಷ್ಟ ಕಾರ್ಪಣ್ಯಗಳಿಗೆ ಸಿಲುಕಿಕೊಳ್ಳುತ್ತಾಳೆ. ಇವನ್ನೆಲ್ಲ ಯಶಸ್ವಿಯಾಗಿ ಎದುರಿಸಿ ಕೊನೆಗೆ ಅವರು ಮತ್ತೆ ಒಂದಾಗುತ್ತಾರೆ.
ನಾಟಕ ಹಾಸ್ಯ ಸನ್ನಿವೇಶಗಳಿಂದ ಕೂಡಿದ್ದು, ಕಂಪೆನಿ ನಾಟಕ ಶೈಲಿಯ ಹಾಡುಗಳಿಂದ ವೈಭವೀಕರಿಸಲ್ಪಟ್ಟಿದೆ. ನಿರ್ದೇಶಕರು ನಾಟಕದ ಮೂಲ ಕಥೆಗೆ ಹೊಸ ವ್ಯಾಖ್ಯಾನವನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ.

****

ಜನವರಿ 29
ನಾಟಕ: ದಕ್ಲಕಥಾ ದೇವಿಕಾವ್ಯ
ತಂಡ: ಜಂಗಮ ಕಲೆಕ್ಟಿವ್, ಬೆಂಗಳೂರು
ರಚನೆ & ನಿರ್ದೇಶನ: ಲಕ್ಷ್ಮಣ ಕೆ.ಪಿ.

ನಾಟಕದ ಬಗ್ಗೆ: ‘ದಕ್ಲ ಕಥಾ ದೇವಿ ಕಾವ್ಯ’ ಕನ್ನಡ ಮಹತ್ವದ ಬರಹಗಾರರು ಮತ್ತು ಕರ್ನಾಟಕ ‘ದಲಿತ ಸಂಘರ್ಷ ಸಮಿತಿ’ಯ ಸ್ಥಾಪಕ ಸದಸ್ಯರು ಆದ ಕೆ.ಬಿ.ಸಿದ್ಧಯ್ಯ ಅವರ ಖಂಡಕಾವ್ಯ ಮತ್ತು ಕಥನಗಳನ್ನು ಒಟ್ಟಿಗೆ ಹೊಸೆದು ಕಟ್ಟಿರುವ ರಂಗಪ್ರಯೋಗ. ತಳಾತೀತಳ ಸಮುದಾಯಗಳ ಕಲ್ಪನೆಯಲ್ಲಿ ಅರಳಿರುವ ಭೂಮಿ ಹುಟ್ಟಿದ, ಜೀವ ಹುಟ್ಟಿದ ಕಥನದಿಂದ ಆರಂಭವಾಗುವ ಈ ಪ್ರಯೋಗ, ಈ ಸಮುದಾಯಗಳ ಆಚರಣೆ ನಂಬುಗೆ, ಹಸಿವು, ಬಯಕೆ, ಹಾಡು-ಪಾಡನ್ನು ಬಿಚ್ಚಿಡುತ್ತಾ ಹರಿಯುತ್ತದೆ. ‘ನುಡಿ’ ಎನ್ನುವುದು ಈ ಸಮುದಾಯಗಳಿಗೆ ಮೈಯ್ಯನ್ನು ಬಿಟ್ಟಿರಲಾಗದ ಉಸುರಿದ್ದಂತೆ. ಅರೆ, ತಮಟೆಯಂತಹ ವಾದ್ಯಗಳು ಆ ನುಡಿಬಳ್ಳಿಯ ಕುಡಿಗಳು. ಹೀಗೆ ಅಸ್ಪೃಶ್ಯ ಜಗತ್ತು ನಾದ ಜಗತ್ತು ಕೂಡ ಹೌದು. ಹೀಗಿರುವಾಗ ಶತಮಾನಗಳಿಂದ ದೂರವಿದ್ದ ‘ಅಕ್ಷರ’ವೆಂಬ ಮತ್ತೊಂದು ಅಂಗ ಅಸ್ಪೃಶ್ಯ ಮೈ ಪ್ರಜ್ಞೆಗೆ ತಾಕಿಕೊಂಡಾಗ ಅಲ್ಲಿ ಉಂಟಾಗುವ ಪ್ರೀತಿ, ಹಗೆಯ ಸಂಬಂಧವನ್ನು ಪ್ರಯೋಗ ಎದುರಾಗುತ್ತದೆ. ಹೀಗೆ ‘ಅಸ್ಪೃಶ್ಯತೆ ಮತ್ತು ಅಕ್ಷರದ ಅನುಭವದಿಂದ ದಕ್ಕಿದ ಅರಿವಿನ ಮೂಲಕ ನಮ್ಮಾಳದ ಮನುಷ್ಯನನ್ನು ಎದುರುಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...

SIR | ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸರ್ಕಾರಿ ಸೌಲಭ್ಯ: ಸಿಎಂ

ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳು ಹಾಗೂ ಇತರ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಗಂಭೀರ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಕಡ್ಡಾಯವಾಗಿ...