Homeಮುಖಪುಟಶಾರೂಕ್ ಖಾನ್ ಯಾರೆಂದು ಗೊತ್ತಿಲ್ಲವೆಂದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ: ನಂತರ ನಡೆದಿದ್ದು ಇದು...

ಶಾರೂಕ್ ಖಾನ್ ಯಾರೆಂದು ಗೊತ್ತಿಲ್ಲವೆಂದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ: ನಂತರ ನಡೆದಿದ್ದು ಇದು…

- Advertisement -
- Advertisement -

ಅಸ್ಸಾಂನ ಗುವಾಹಟಿಯಲ್ಲಿ ಪಠಾಣ್ ಚಿತ್ರದ ಪ್ರೀಮಿಯರ್ ಶೋ ಪ್ರದರ್ಶನದ ವೇಳೆ ಬಲಪಂಥೀಯ ಕಾರ್ಯಕರ್ತರು ದಾಂಧಲೆ ನಡೆಸಿರುವ ವಿಷಯದ ಶನಿವಾರ ಕುರಿತು ಪ್ರತಿಕ್ರಿಯಿಸಿದ್ದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, “ಶಾರೂಕ್ ಖಾನ್ ಯಾರು? ಅವರ ಬಗ್ಗೆಯಾಗಲಿ ಅಥವಾ ಪಠಾಣ್ ಚಿತ್ರದ ಬಗ್ಗೆ ನನಗೆ ಏನೂ ತಿಳಿದಿಲ್ಲ” ಎಂದಿದ್ದರು.

ಶಾರೂಕ್ ಖಾನ್ ಬಾಲಿವುಡ್ ಸೂಪರ್‌ಸ್ಟಾರ್ ಎಂದು ಪತ್ರಕರ್ತರು ಹೇಳಿದಾಗ, “ರಾಜ್ಯದ ಜನರು ಅಸ್ಸಾಮಿ ಚಲನಚಿತ್ರಗಳ ಬಗ್ಗೆ ಕಾಳಜಿ ವಹಿಸಬೇಕೆ ಹೊರತು ಬಾಲಿವುಡ್‌ ಸಿನಿಮಾಗಳ ಕುರಿತಲ್ಲ. ಅವರ ಚಿತ್ರತಂಡಕ್ಕೆ ಯಾವುದೇ ತೊಂದರೆಯಾದ ಬಗ್ಗೆ ನನಗೆ ದೂರು ಬಂದಿಲ್ಲ. ಶಾರೂಕ್ ಖಾನ್ ನನಗೆ ಫೋನ್ ಮಾಡಿಲ್ಲ. ಒಂದು ವೇಳೆ ಅವರು ಫೋನ್ ಮಾಡಿದರೆ ಆ ವಿಷಯದ ಕುರಿತು ಪರಿಶೀಲಿಸುತ್ತೇನೆ” ಬಿಸ್ವಾ ಶರ್ಮಾ ಹೇಳಿದ್ದರು.

ಶನಿವಾರ ಗುವಾಹಟಿಯ ಗೋಲ್ಡ್ ಸಿನಿಮಾ ಹಾಲ್‌ಗೆ ನುಗ್ಗಿದ ಬಲಪಂಥೀಯ ಕಾರ್ಯಕರ್ತರು ಚಿತ್ರದ ಪೋಸ್ಟರ್ ಮತ್ತು ಸಿನಿಮಾ ಸ್ಕ್ರೀನ್‌ ಅನ್ನು ಹರಿದು ಹಾಕಿ ದಾಂಧಲೆ ನಡೆಸಿದ್ದರು. ಹಾಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಅಸ್ಸಾಂ ಸಿಎಂ ಮೇಲೆ ಒತ್ತಡ ಹೇರಲಾಗಿತ್ತು.

ಈ ಘಟನೆಯ ನಂತರ ಶಾರೂಕ್ ಖಾನ್ ನೇರವಾಗಿ ಹಿಮಂತ ಬಿಸ್ವಾ ಶರ್ಮಾರವರಿಗೆ ಫೋನ್ ಮಾಡಿ ಮಾತನಾಡಿದ್ದಾರೆ. ಪಠಾಣ್ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡುತ್ತಿರುವುದರು ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಆಗ ಹಿಮಂತಾ ಬಿಸ್ವಾ ಶರ್ಮಾರವರು ಪಠಾಣ್ ಚಿತ್ರತಂಡಕ್ಕೆ ಬೆಂಬಲ ನೀಡುವುದಾಗಿ ಮತ್ತು ಚಿತ್ರಬಿಡುಗಡೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಈ ಕುರಿತು ಟ್ವೀಟ್ ಮಾಡಿರುವ ಅವರು “ಬಾಲಿವುಡ್ ನಟ ಶಾರೂಕ್ ಖಾನ್‌ರವರು ಇಂದು ಬೆಳಿಗ್ಗೆ 2 ಗಂಟೆ ಸಮಯಕ್ಕೆ ಕರೆ ಮಾಡಿ ಮಾತನಾಡಿದರು. ತಮ್ಮ ಚಿತ್ರದ ಪ್ರದರ್ಶನದ ವೇಳೆ ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ, ನಾವು ವಿಚಾರಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ” ಎಂದಿದ್ದಾರೆ.

ಶಾರೂಕ್ ಖಾನ್‌ರವರು ಚಿತ್ರಮಂದಿರ ಮಾಲೀಕರಿಗೂ ಸಹ ಫೋನ್ ಮಾಡಿ ಮಾತನಾಡಿದ್ದಾರೆ. ನಡೆದುದ್ದರ ಬಗ್ಗೆ ಕಳವಳ ವ್ಯಕ್ತಪಡಿಸಿ ಘಟನೆಯ ಸಂಪೂರ್ಣ ವಿವರ ಕೊಡಿ ಎಂದರು ಎನ್ನಲಾಗಿದೆ.

ಶಾರೂಕ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರವು ಇದೇ 25 ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ. ಕೆಲ ಬಲಪಂಥೀಯ ಕಾರ್ಯಕರ್ತರು ಸಿನಿಮಾ ಬ್ಯಾನ್ ಮಾಡಬೇಕೆದು ಹಠ ಹಿಡಿದಿದ್ದಾರೆ.

ಇದನ್ನೂ ಓದಿ: ಪಡುಕೋಣೆಯವರ ‘ಪಠಾಣ್’ ಸಿನಿಮಾ ಬ್ಯಾನ್‌ ಮಾಡುವುದಾಗಿ ಮಧ್ಯಪ್ರದೇಶದ ಗೃಹ ಸಚಿವ ಬೆದರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read