Homeಮುಖಪುಟಹೋರಾಟನಿರತ ರೈತರನ್ನು ವಿರೋಧ ಪಕ್ಷಗಳು ದಾರಿ ತಪ್ಪಿಸುತ್ತಿವೆ: ನರೇಂದ್ರ ಮೋದಿ

ಹೋರಾಟನಿರತ ರೈತರನ್ನು ವಿರೋಧ ಪಕ್ಷಗಳು ದಾರಿ ತಪ್ಪಿಸುತ್ತಿವೆ: ನರೇಂದ್ರ ಮೋದಿ

ನಮ್ಮ ಸರ್ಕಾರ ರೈತರ ಎಲ್ಲಾ ಸಮಸ್ಯೆಗಳನ್ನು ದಿನದ 24 ಗಂಟೆಯೂ ಆಲಿಸಲು ಸಿದ್ದವಾಗಿದೆ ಎಂದು ನಾನು ಎಲ್ಲ ರೈತ ಸಹೋದರ ಮತ್ತು ಸಹೋದರಿಯರಿಗೆ ಭರವಸೆ ನೀಡುತ್ತೇನೆ.

- Advertisement -
- Advertisement -

ದೇಶದಲ್ಲಿ ರೈತ ಹೋರಾಟ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಹಿಂಪಡೆಯಲಿ ಎಂದು ರೈತರು 20 ದಿನಗಳಿಂದ ಹೋರಾಟ ನೆಸುತ್ತಿದ್ದು, ನಿನ್ನೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಇಂದು ತಮ್ಮ ವಿವಾದಾತ್ಮಕ ಕಾನೂನುಗಳನ್ನು ಸಮರ್ಥಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಹೋರಾಟನಿರತ ರೈತರನ್ನು ವಿರೋಧ ಪಕ್ಷಗಳು ದಾರಿ ತಪ್ಪಿಸುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

“ಈಗ ಆಗಿರುವ ಕೃಷಿ ಸುಧಾರಣೆಗಳು ಅನೇಕ ವರ್ಷಗಳಿಂದ ರೈತ ಸಂಘಗಳು ಮತ್ತು ಪ್ರತಿಪಕ್ಷಗಳು ಕೇಳುತ್ತಿರುವ ಸುಧಾರಣೆಗಳೇ ಆಗಿವೆ. ಭಾರತ ಸರ್ಕಾರ ಯಾವಾಗಲೂ ರೈತ ಕಲ್ಯಾಣಕ್ಕೆ ಬದ್ಧವಾಗಿದೆ. ಅವರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ನಾವು ರೈತರಿಗೆ ಭರವಸೆ ನೀಡುತ್ತೇವೆ” ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿದ್ದ ಟ್ರೂಡೊ: ಭಾರತ-ಕೆನಡಾ ರಾಜಕೀಯ ಸಂಬಂಧದಲ್ಲಿ ಬಿರುಕು!

“ಇಂದು ಪ್ರತಿಪಕ್ಷಗಳಲ್ಲಿ ಕುಳಿತು ರೈತರನ್ನು ದಾರಿ ತಪ್ಪಿಸುತ್ತಿರುವವರು ತಮ್ಮ ಸರ್ಕಾರದ ಅವಧಿಯಲ್ಲಿ ಈ ಕೃಷಿ ಸುಧಾರಣೆಗಳ ಪರವಾಗಿದ್ದರು. ಅವರು ತಮ್ಮ ಸರ್ಕಾರದ ಅವಧಿಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇಂದು ರಾಷ್ಟ್ರವು ಐತಿಹಾಸಿಕ ಹೆಜ್ಜೆ ಇಟ್ಟಾಗ ಇವರು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ” ಎಂದು ಪ್ರಧಾನಿ ಕಛ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದ್ದಾರೆ.

ದೆಹಲಿಯಲ್ಲಿರುವ ರೈತರನ್ನು ದಿಕ್ಕತಪ್ಪಿಸುವ ಪಿತೂರಿ ನಡೆಯುತ್ತಿದೆ. ಈ ಕೃಷಿ ಕಾಯ್ದೆಗಳಿಂದ ರೈತರ ಭೂಮಿಯನ್ನು ಇತರರು ಕಬಳಿಸುತ್ತಾರೆ ಎಂದು ರೈತರು ಹೆದರಿದ್ದಾರೆ. ಡೈರಿ ಕಂಪನಿಗಳು ನಿಮ್ಮಿಂದ ಹಾಲನ್ನು ಕೊಂಡುಕೊಳ್ಳುತ್ತವೆಯೊ? ಅಥವಾ ನಿಮ್ಮ ಹಸುಗಳನ್ನು ಕಿತ್ತುಕೊಳ್ಳುತ್ತಿವೆಯೋ ನೀವು ಹೇಳಿ? ಎಂದು ಮೋದಿ ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರ ರೈತರ ಎಲ್ಲಾ ಸಮಸ್ಯೆಗಳನ್ನು ದಿನದ 24 ಗಂಟೆಯೂ ಆಲಿಸಲು ಸಿದ್ದವಾಗಿದೆ ಎಂದು ನಾನು ಎಲ್ಲ ರೈತ ಸಹೋದರ ಮತ್ತು ಸಹೋದರಿಯರಿಗೆ ಭರವಸೆ ನೀಡುತ್ತೇನೆ. ಮೊದಲ ದಿನದಿಂದಲೂ ರೈತರ ಹಿತರಕ್ಷಣೆಯೇ ನಮ್ಮ ಆದ್ಯತೆಯೆಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಸಂಸತ್ ಭವನದ ನಿರ್ಮಾಣಕ್ಕೆ ಟಾಟಾ ಕಂಪೆನಿ ಆಯ್ಕೆಯಾಗಿದ್ದು ಹೇಗೆ: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

ಕೇಂದ್ರ ಸರ್ಕಾರದ ಬಿಜೆಪಿ ನಾಯಕರು ತಾವು ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳಲು ಪದೇ ಪದೇ ಪ್ರತಿಪಕ್ಷಗಳತ್ತ ಬೆರಳು ತೋರಿಸುತ್ತಲೇ ಇದೆ. ಮೋದಿ ಸರ್ಕಾರ ಜಾರಿಗೆ ತಂದ ಜಿಎಸ್‌ಟಿ ಕೂಡ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ ಎಂದು ನುಣುಚಿಕೊಂಡಿತ್ತು.

ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುವ ಬಿಜೆಪಿ, ಇಕ್ಕಟ್ಟಿನ ಸಂದರ್ಭದಲ್ಲೆಲ್ಲಾ ‘ಇದು ಕಾಂಗ್ರೆಸ್‌ನ ಯೋಜನೆ’ ಎಂದು ನುಣುಚಿಕೊಳ್ಳುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪ ವ್ಯಕ್ತವಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲೂ AAP ಸ್ಪರ್ಧೆ: ಕೇಜ್ರಿವಾಲ್ ಘೋಷಣೆ

ಈ ಹಿಂದೆಯೂ ರೈತರ ಹೋರಾಟವನ್ನು ಖಂಡಿಸಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ “ಈಗ ಎನ್‌ಡಿಎ ಸರ್ಕಾರ ಯಾವ ಕಾನೂನುಗಳನ್ನು ಅಂಗೀಕರಿಸಿದೆಯೇ ಅವೆಲ್ಲವನ್ನು ಸಹ ಯುಪಿಎ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಲು ಬಯಸಿದ್ದವು. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಖಾಸಗೀಕರಣದ ಪರವಾಗಿತ್ತು. ಈಗ ಅವರೆಲ್ಲಾ ಈ ಕಾನೂನುಗಳನ್ನು ವಿರೋಧಿಸುವುದು ಅವರ ಇಬ್ಬಂದಿತನ” ಎಂದು ಹೇಳಿದ್ದರು.

ತಮ್ಮ ಆಡಳಿತದಲ್ಲಿ ಏನೇ ಒಳ್ಳೆಯದಾದರೂ ಅವುಗಳ ಕ್ರೆಡಿಟ್ ಬಿಜೆಪಿಗೇ ಸೇರುತ್ತದೆ. ಆದರೆ ಏನಾದರೂ ಕೆಡುಕಾದರೆ ಅದಕ್ಕೆ ನೆಹರೂ, ಕಾಂಗ್ರೆಸ್ ಕಾರಣ ಎಂದು ಹೇಳಿ ತಪ್ಪಿಸಿಕೊಳ್ಳುತ್ತದೆ. ಇದು ಬಿಜೆಪಿಯ ಅನೈತಿಕ ರಾಜಕಾರಣವನ್ನು ತೋರಿಸುತ್ತದೆ ನೆಟ್ಟಿಗರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಉಪಸಭಾಪತಿಯನ್ನು ಎಳೆದಾಡಿದ ಕಾಂಗ್ರೆಸ್-ಬಿಜೆಪಿ ಸದಸ್ಯರು: ವಿಧಾನ ಪರಿಷತ್‌ನಲ್ಲಿ ಭಾರಿ ಗದ್ದಲ

2022ರ ವೇಳೆಗೆ ರೈತರ ಆದಾಯ ಡಬಲ್ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಆದರೆ ಈಗ ಅದರ ಬದಲು ಮೂರು ಕಾಯ್ದೆಗಳನ್ನು ಜಾರಿಗೊಳಿಸಿದ್ದಾರೆ. ಆರಂಭದಿಂದಲು ಈ ಕಾಯ್ದೆ ರೈತರ ಒಳಿತಿಗಾಗಿ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಮೋದಿ ಸರ್ಕಾರ ಯಾವುದೇ ರೈತರೊಂದಿಗೆ ಚರ್ಚಿಸದೇ ಸುಗ್ರೀವಾಜ್ಞೆಗಳ ಮೂಲಕ ಈ ಕಾನೂನುಗಳನ್ನು ತಂದಿದ್ದಲ್ಲದೇ ವಿರೋಧ ಪಕ್ಷಗಳ ಮತ್ತು ರೈತರ ಭಾರೀ ವಿರೋಧದ ನಡುವೆಯೂ ಚರ್ಚೆ ನಡೆಸದೆ ಅಂಗೀಕರಿಸಿದೆ.

ಆರಂಭದಲ್ಲಿ ರೈತರು ಈ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಆರಂಭಿಸಿದಾಗ ಅವರನ್ನು ಖಲಿಸ್ತಾನಿಗಳು, ಭಯೋತ್ಪಾದಕರು, ನಕ್ಸಲರು ಎಂದು ಬಿಂಬಿಸಿದ್ದಲ್ಲದೇ ಅವರ ಮೇಲೆ ಲಾಠೀ ಪ್ರಹಾರ, ಟಿಯರ್ ಗ್ಯಾಸ್, ಜಲಫಿರಂಗಿಗಳನ್ನು ಪ್ರಯೋಗ ಮಾಡಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿತ್ತು. ಆದರೆ ರೈತರು ಇದಾವುದಕ್ಕೂ ಹೆದರದೇ ದಿಟ್ಟ ಹೋರಾಟ ನಡೆಸಿದ ನಂತರ ಅನಿವಾರ್ಯವಾಗಿ ಸರ್ಕಾರ ಅವರೊಂದಿಗೆ ಮಾತುಕತೆ ನಡೆಸಿತ್ತು.

ಇದನ್ನೂ ಓದಿ: ತುಮಕೂರು: ವಕೀಲರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ -ಸಬ್‌ಇನ್ಸ್‌ಪೆಕ್ಟರ್ ವಿರುದ್ದ ಕ್ರಮಕ್ಕೆ ವಕೀಲರ ಆಗ್ರಹ

ಇನ್ನೊಂದು ಕಡೆ ವಿರೋಧ ಪಕ್ಷಗಳು ರೈತರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎನ್ನುತ್ತಿದ್ದ ಕೇಂದ್ರ ಈಗ ರೈತರು ಬಗ್ಗದೇ ಇರುವುದರಿಂದ ಮತ್ತೆ ವಿರೋಧ ಪಕ್ಷಗಳ ಮೇಲೆ ದಾಳಿ ನಡೆಸುತ್ತಿದೆ. ಅವರೂ ಖಾಸಗೀಕರಣದ ಪರವಾಗಿದ್ದರು ಎನ್ನುವ ನೆಪ ನೀಡುವ ಮೂಲಕ ಈ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ.

ಆದರೆ ಕೇಂದ್ರ ಸರ್ಕಾರದ ಈ ಗೊಡ್ಡು ಸಮರ್ಥನೆಗಳು ನಡೆಯುವುದಿಲ್ಲ ಎಂಬಂತೆ ರೈತರು ಪಟ್ಟುಬಿಡದೇ ದಿಟ್ಟ ಹೋರಾಟ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಕೊರೆಯುವ ಚಳಿಯಲ್ಲಿ ರೈತ ಹೋರಾಟಗಾರರು; ಕರುಣೆ ಇಲ್ಲದ ಸರ್ಕಾರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...