ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಠಾಣೆಗೆ ಬಂದ ವಕೀಲರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ. ಪೊಲೀಸ್ ಸಬ್ಇನ್ಸ್ಪೆಕ್ಟರ್ ಕ್ರಮವನ್ನು ಖಂಡಿಸಿ ತುಮಕೂರಿನಲ್ಲಿ ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಲು ಮುಂದಾದ ಘಟನೆ ನಡೆಯಿತು.
ವಕೀಲ ಹಬೀಬ್ ಡಿಸೆಂಬರ್ 14ರಂದು ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿದ್ದರು. ಯಾವುದೇ ತಪ್ಪು ಮಾಡದ ಅಮಾಯಕ ಯುವಕನೊಬ್ಬನನ್ನು ಠಾಣೆಗೆ ಕರೆತಂದು ಬಂಧನದಲ್ಲಿರಿಸಿರುವುದು ಸರಿಯಲ್ಲ. ಆ ಯುವಕನ ಅಪ್ಪ ತಪ್ಪು ಮಾಡಿದ್ದಾರೆ. ಆದರೆ ಪೊಲೀಸರು ಅವರ ಮಗನನ್ನು ಬಂಧಿಸಿ ಹಿಂಸೆ ನೀಡುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು. ಬಂಧಿತ ಅಮಾಯಕ ಯುವಕನನ್ನು ಬಿಡುಗಡೆ ಮಾಡಬೇಕು ಎಂದು ವಕೀಲ ಹಬೀಬ್ ಪೊಲೀಸರಿಗೆ ಮನವಿ ಮಾಡಿದ್ದಾರೆ.
ವಕೀಲ ಹಬೀಬ್ ಮಾಡಿದ ಮನವಿಗೆ ಸಬ್ ಇನ್ಸ್ ಪೆಕ್ಟರ್ ನವೀನ್ ಸ್ಪಂದಿಸದೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಯಾರನ್ನು ಬಂಧಿಸಬೇಕು ಬಿಡಬೇಕು ಎಂಬುದು ನನಗೆ ಗೊತ್ತು. ನೀನು ನನಗೆ ಹೇಳಲು ಬರಬೇಡ. ಹೈಕೋರ್ಟ್ ಗೆ ಬೇಕಾದರೆ ಹೋಗು ನಾನು ಅಲ್ಲಿಯೇ ಉತ್ತರಿಸುತ್ತೇನೆ. ನೀನು ಕೋರ್ಟ್ ನಲ್ಲಿ ಪ್ರಕರಣ ದಾಖಲಿಸು. ಅಲ್ಲಿಗೆ ಬಂದು ಹೇಳುತ್ತೇನೆ ಎಂದು ವಕೀಲ ಹಬೀಬ್ ಮೇಲೆ ದೌರ್ಜನ್ಯ ಮಾಡಲು ಮುಂದಾದರು ಎಂದು ಹೇಳಲಾಗಿದೆ.
ನಾನು ವಕೀಲ. ತಪ್ಪು ಮಾಡದ ಯುವಕನನ್ನು ತಂದು ಠಾಣೆಯಲ್ಲಿ ಹಿಂಸೆ ನೀಡುತ್ತಿದ್ದೀರಿ. ಇದು ತಪ್ಪು. ಯಾರು ತಪ್ಪು ಮಾಡಿದ್ದಾರೋ ಅವರನ್ನು ಬಂಧಿಸಿ. ಅಮಾಯಕನನ್ನು ಬಿಡುಗಡೆ ಮಾಡಿ ಎಂದು ಹಬೀಬ್ ಪರಿಪರಿಯಾಗಿ ಮನವಿ ಮಾಡಿದರೂ ಪೊಲೀಸರು ಬೇಜವಾಬ್ದಾರಿಯಿಂದ ನಡೆದುಕೊಂಡರೆಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ವಕೀಲರು ಜಿಲ್ಲಾ ನ್ಯಾಯಾಧೀಶರಿಗೆ ಮನವಿ ನೀಡಿ ಕೋರ್ಟ್ ಕಲಾಪ ಬಹಿಷ್ಕರಿಸಲು ಮುಂದಾದರು. ಪೊಲೀಸ್ ವರಿಷ್ಠಾಧಿಕಾರಿಗಳು ನಾಳೆಯೊಳಗೆ ಸಬ್ ಇನ್ಸ್ ಪೆಕ್ಟರ್ ನವೀನ ಅವರನ್ನು ಕರೆಸಿ ಮುಂದೆ ವಕೀಲರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುವಂತೆ ಎಚ್ಚರಿಕೆ ನೀಡಬೇಕು. ಕ್ರಮ ಕೈಕೊಳ್ಳದಿದ್ದರೆ ಕೋರ್ಟ್ ಕಲಾಪ ಬಹಿಷ್ಕರಿಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಉಪಸಭಾಪತಿಯನ್ನು ಎಳೆದಾಡಿದ ಕಾಂಗ್ರೆಸ್-ಬಿಜೆಪಿ ಸದಸ್ಯರು: ವಿಧಾನ ಪರಿಷತ್ನಲ್ಲಿ ಭಾರಿ ಗದ್ದಲ