ಇಂದು ಒಂದು ದಿನದ ವಿಧಾನ ಪರಿಷತ್ ಅಧಿವೇಶನ ಆರಂಭವಾಗಬೇಕಿತ್ತು. ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ಮತ್ತು ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಆಡಳಿತರೂಢ ಬಿಜೆಪಿ ಪಕ್ಷ ಎಣಿಸಿತ್ತು. ಆದರೆ ಇಂದು ವಿಧಾನ ಪರಿಷತ್ ಅಧಿವೇಶನ ಆರಂಭವಾಗುವ ಮೊದಲೇ ಹಲವು ನಾಟಕೀಯ ಬೆಳವಣಿಗೆಗಳು ಜರುಗಿದ್ದು, ಗದ್ದಲ, ಕೈ-ಕೈ ಮಿಲಾಯಿಸುವ ಪರಿಸ್ಥಿತಿ ಉದ್ಭವಿಸಿತ್ತು.
ಇಂದಿನ ಕಲಾಪ ಆರಂಭವಾಗುವ ಮೊದಲೇ ಸಭಾಪತಿ ಸ್ಥಾನದಲ್ಲಿ ಸಭಾಪತಿಗಳಾದ ಪ್ರತಾಪ್ ಚಂದ್ರಶೆಟ್ಟಿಯವರು ಆಸೀನರಾಗುವ ಮೊದಲೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟುಸೇರಿ ಉಪಸಭಾಪತಿ ಧರ್ಮೇಗೌಡ ಅವರನ್ನು ಕುಳ್ಳಿರಿಸಿದ್ದಾರೆ! ಇದರಿಂದ ಕುಪಿತಗೊಂಡ ಕಾಂಗ್ರೆಸ್ ಸದಸ್ಯರು ಸಭಾಪತಿಗಳ ಆಸೀನದತ್ತ ನಡೆದು ಅವರನ್ನು ಆ ಸ್ಥಾನದಿಂದ ಹೊರಗೆಳೆಯಲು ಪ್ರಯತ್ನಿಸಿದ್ದಾರೆ. ಆ ಸಮಯಕ್ಕೆ ಬಿಜೆಪಿ ಸದಸ್ಯರು ಬಂದು ಅವರನ್ನು ಮತ್ತೆ ಅದೇ ಸ್ಥಾನದಲ್ಲಿ ಕುಳ್ಳಿರಿಸಿ ಕಲಾಪ ಮುಂದುವರೆಸಲು ಪ್ರಯತ್ನಿಸಿದ್ದಾರೆ. ಈ ಸಮಯದಲ್ಲಿ ಮಾರ್ಷಲ್ಗಳು ಏನು ಮಾಡಬೇಕೆಂದು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದಾರೆ!
ಕೆಲ ಸಮಯ ಪರಿಷತ್ ಅಧಿವೇಶನ ಅಕ್ಷರಶಃ ಜಗಳಬೀದಿಯಾಗಿ ಪರಿವರ್ತನೆಗೊಂಡಿದೆ. ಕಲಾಪ ಕಾರ್ಯಸೂಚಿ ಕಿತ್ತೆಸುವುದು, ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿಕೊಳ್ಳುವುದು, ಕೈ ಕೈ ಮಿಲಾಯಿಸುವುದು ನಡೆದಿದೆ. ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಸದಸ್ಯರು ಬಲವಂತವಾಗಿ ಉಪಸಭಾಪತಿ ಧರ್ಮೇಗೌಡರವರನ್ನು ಕೆಳಗಿಳಿಸಿ ಆ ಸ್ಥಾನದಲ್ಲಿ ತಮ್ಮ ಪಕ್ಷದ ಸದಸ್ಯರನ್ನು ಕೂಡಿಸಿದ್ದಾರೆ. ಅಲ್ಲದೆ ಬಲವಂತವಾಗಿ ಸಭಾಪತಿಗಳ ಕೊಠಡಿಯ ಬಾಗಿಲು ತೆರೆದು ಅವರನ್ನು ಕರೆತಂದು ಸಭಾಪತಿ ಸ್ಥಾನದಲ್ಲಿ ಕೂರಿಸಲು ಪ್ರಯತ್ನಿಸಿದ್ದಾರೆ. ನಂತರ ಮಾರ್ಷಲ್ಗಳ ರಕ್ಷಣೆಯಲ್ಲಿ ಸಭಾಪತಿ ಸ್ಥಾನಕ್ಕೆ ಬಂದ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿಯವರು ಅನಿರ್ಧಿಷ್ಟಾವಧಿಯವರೆಗೆ ಕಲಾಪ ಮುಂದೂಡಿದ್ದಾರೆ.
#WATCH Karnataka: Congress MLCs in Karnataka Assembly forcefully remove the chairman of the legislative council pic.twitter.com/XiefiNOgmq
— ANI (@ANI) December 15, 2020
ಸದನ ಆರಂಭವಾಗದಿದ್ದಾಗಲೇ ಬಿಜೆಪಿ ಮತ್ತು ಜೆಡಿಎಸ್ ಅಕ್ರಮವಾಗಿ ಉಪಸಭಾಪತಿಯನ್ನು ಸಭಾಪತಿ ಕುರ್ಚಿಯಲ್ಲಿ ಕೂರಿಸಿತು. ಬಿಜೆಪಿ ಇಂತಹ ಅಸಂವಿಧಾನಿಕ ಕೆಲಸಗಳನ್ನು ಮಾಡುತ್ತಿರುವುದು ದುರದೃಷ್ಟಕರ. ಕಾಂಗ್ರೆಸ್ ಸದಸ್ಯರು ಅವರನ್ನು ಆ ಸ್ಥಾನದಿಂದ ಕೆಳಗಿಳಿಯುವಂತೆ ಕೇಳಿಕೊಂಡೆವು. ಅವರು ಒಪ್ಪಲಿಲ್ಲ. ಅದು ಕಾನೂನುಬಾಹಿರ ಕ್ರಮವಾದ ಕಾರಣ ನಾವು ಅವರನ್ನು ಹೊರಹಾಕಬೇಕಾಯಿತು: ಎಂದು ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬೆಂಬಲಿತ ಸಭಾಪತಿ ಮತ್ತು ಉಪಸಭಾಪತಿ ಇದ್ದಾರೆ. ಜೆಡಿಎಸ್ ಇನ್ನೂ ಅಧಿಕೃತವಾಗಿ ತಮಗೆ ಸಭಾಪತಿಗಳ ಮೇಲೆ ವಿಶ್ವಾಸ ಇಲ್ಲ ಎಂದು ಹೇಳಿಲ್ಲ. ಆದರೆ ಬಿಜೆಪಿ ಸಭಾಪತಿ ಸ್ಥಾನ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಅದರ ಭಾಗವಾಗಿ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್ ನೀಡಿದೆ. ಅದೇ ಇಂದಿನ ಗದ್ದಲ ಗಲಾಟೆಗೆ ಕಾರಣವಾಗಿದೆ.
ಇದನ್ನೂ ಓದಿ: ಕೊರೊನಾ ಕಾರಣ ನೀಡಿ ಸಂಸತ್ತಿನ ’ಚಳಿಗಾಲದ ಅಧಿವೇಶನ’ ರದ್ದುಪಡಿಸಿದ ಕೇಂದ್ರ ಸರ್ಕಾರ
ಇಲ್ಲಿ ಕಾಂಗ್ರೆಸ್ ನದು ತಪ್ಪಿದೆ ಬಿಜೆಪಿ ಜೆಡಿಎಸ್ ತಪ್ಪು ಮಾಡಿದ್ದರೆ. ಕಾನೂನಿನ ಅಡಿಯಲ್ಲಿ ಕ್ರಮಜರಿಗಿಸಬಹುದಿತ್ತು. ಆದರೆ ಉಪ ಸಭಾಪತಿಯನ್ನು ಕತ್ತು ಹಿಡಿದು ದಬ್ಬಿರುವುದು ಸರಿಯಲ್ಲ. ಪರಿಷತ್ತಿನ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಅವರನ್ನು ಶಾಶ್ವತವಾಗಿ ಸದನದಿಂದ ಹೊರಗಡೆ ಇಡಬೇಕು.