ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ದಿಕ್ಕುತಪ್ಪಿಸುವುದಕ್ಕಾಗಿ ಹಿಂದೂ-ಸಿಖ್ಖರ ನಡುವೆ ಕೋಮುದ್ವೇಷವನ್ನು ಹರಡಲಾಗುತ್ತಿದೆ ಎಂದು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದು, ಪರೋಕ್ಷವಾಗಿ ಬಿಜೆಪಿ-ಎನ್ಡಿಎ ಸರ್ಕಾರವನ್ನು ದೂರಿದ್ದಾರೆ.
“ರೈತರ ಆಂದೋಲನವನ್ನು ಸಿಖ್-ಹಿಂದೂ ಸಂಘರ್ಷವನ್ನಾಗಿಸಲು ಈ ಪ್ರಯತ್ನಗಳು ನಡೆಯುತ್ತಿವೆ. ಇದು ಈಗಾಗಲೇ ದೆಹಲಿಯಲ್ಲಿ ಪ್ರಾರಂಭವಾಗಿದೆ. ಈಗ ಇದನ್ನು ಪಂಜಾಬ್ನಲ್ಲಿ ಪುನರಾವರ್ತಿಸಲು ಬಯಸುತ್ತಿವೆ. ಅಕಾಲಿ ದಳವು ಶಾಂತಿ ಮತ್ತು ಕೋಮು ಸಹೋದರತ್ವವನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ” ಎಂದು ಅಮೃತಸರದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಸುಖ್ಬೀರ್ ಸಿಂಗ್ ಹೇಳಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಬಾಯ್ಕಾಟ್ ಅಭಿಯಾನ: ಏರ್ಟೆಲ್, ವೊಡಾಫೋನ್ ವಿರುದ್ಧ ದೂರು ನೀಡಿದ ಜಿಯೋ!
“ಎನ್ಡಿಎ ಸರ್ಕಾರವು ಫೆಡರಲಿಸಂ ಅನ್ನು ಮಾತ್ರವಲ್ಲದೆ ಪ್ರತಿಭಟಿಸುವ ಸ್ವಾತಂತ್ರ್ಯವನ್ನೂ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಇವರ ಪರವಾಗಿರುವವರನ್ನು ದೇಶಭಕ್ತರು ಎಂಬಂತೆ, ವಿರುದ್ಧವಾಗಿರುವವರು ದೇಶ ದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ” ಎಂದು ಆರೋಪಿಸಿದರು.
“ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕೇಂದ್ರ ಸಚಿವಾಲಯಕ್ಕೆ ರಾಜೀನಾಮೆ ನೀಡಿದ ಹರ್ಸಿಮ್ರತ್ ಕೌರ್ ಬಾದಲ್ ದೇಶ ದ್ರೋಹಿಯೇ? ತನ್ನ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ ಪ್ರಕಾಶ್ ಸಿಂಗ್ ಬಾದಲ್ ದೇಶದ್ರೋಹಿಯೇ? ಇವರನ್ನು ದೇಶದ್ರೋಹಿ ಎಂದು ಯಾರಾದರೂ ಹೇಳಬಹುದೇ?” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕೊರೊನಾ ಕಾರಣ ನೀಡಿ ಸಂಸತ್ತಿನ ’ಚಳಿಗಾಲದ ಅಧಿವೇಶನ’ ರದ್ದುಪಡಿಸಿದ ಕೇಂದ್ರ ಸರ್ಕಾರ
“ಕೃಷಿ ಕಾನೂನುಗಳ ಬಗ್ಗೆ ಕೇಂದ್ರ ಸರ್ಕಾರ ನೀಡಿದ ಸಮರ್ಥನೆಯನ್ನು ರೈತರು ಒಪ್ಪದ ಕಾರಣ ಅವರನ್ನು ಉಗ್ರಗಾಮಿಗಳು ಎಂದು ಬಿಂಬಿಸಲಾಯಿತು. ಅಕಾಲಿ ದಳವು ಒಕ್ಕೂಟ ವ್ಯವಸ್ಥೆಯ ಬಗ್ಗೆ ದನಿಯೆತ್ತಿದಾಗ ಪ್ರತ್ಯೇಕತಾವಾದಿಗಳು ಎಂದು ಬ್ರಾಂಡ್ ಮಾಡಲಾಯಿತು” ಎಂದು ಸುಖ್ಬೀರ್ ಸಿಂಗ್ ಹೇಳಿದರು.
ಅದೇ ಸ್ಥಳದಲ್ಲಿದ್ದ ಹರ್ಸಿಮ್ರತ್ ಕೌರ್ ಬಾದಲ್ ಮಾತನಾಡಿ, “ಸರ್ಕಾರದ ಪ್ರಸ್ತಾವಗಳಿಗೆ ಒಪ್ಪದ ಕಾರಣ ರೈತರನ್ನು ನಕ್ಸಲೈಟ್ ಮತ್ತು ಭಯೋತ್ಪಾದಕರು ಎಂದು ಕರೆಯುತ್ತಿರುವುದು ದುರದೃಷ್ಟಕರ. ಇಂತಹ ತಂತ್ರಗಳು ಕೇಂದ್ರಕ್ಕೆ ಸಹಾಯ ಮಾಡುವುದಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ 25,000 ಸೇನಾ ಪದಕಗಳನ್ನು ಹಿಂದಿರುಗಿಸಲು ಮುಂದಾದ ಮಾಜಿ ಸೈನಿಕರು!