Homeಕರ್ನಾಟಕನಮ್ಮ ಸಚಿವರಿವರು; ಮಗ್ಗಲು ಬದಲಿಸಿದ ಮಧು ಬಂಗಾರಪ್ಪನವರ ರಾಜಕೀಯ ಬದುಕು

ನಮ್ಮ ಸಚಿವರಿವರು; ಮಗ್ಗಲು ಬದಲಿಸಿದ ಮಧು ಬಂಗಾರಪ್ಪನವರ ರಾಜಕೀಯ ಬದುಕು

- Advertisement -
- Advertisement -

ಕರ್ನಾಟಕ ರಾಜಕಾರಣದ ದಿಕ್ಕುದೆಸೆಯನ್ನೇ ಬದಲಿಸುವ ತಾಕತ್ತಿನ ಮಾಸ್‌ಲೀಡರ್ ಎನಿಸಿದ್ದ ಸಾರೆಕೊಪ್ಪ ಬಂಗಾರಪ್ಪನವರ ಮುದ್ದಿನ ಮಗ ಮಧು ಬಂಗಾರಪ್ಪರ ಎರಡು ದಶಕದ ಹೊಯ್ದಾಟದ ರಾಜಕಾರಣ ಅಂತೂ ಹಳಿಗೇರಿದೆ; ಮಹತ್ವದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಮಂತ್ರಿಯಾಗುವ ಮೂಲಕ ಮಧು ರಾಜ್ಯ ರಾಜಕಾರಣದ ಮುನ್ನಲೆಗೆ ಬಂದಿದ್ದಾರೆ. ತನ್ಮೂಲಕ ಶಿವಮೊಗ್ಗ ಜಿಲ್ಲೆಯ ರಾಜಕೀಯವೂ ದೀರ್ಘ ಹೊರಳಾಟದ ಬಳಿಕ ಮಗ್ಗಲು ಬದಲಿಸಿದೆ. ಮತೀಯ ಮಸಲತ್ತಿನ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತಾಡಬಲ್ಲ ಮಧು ಮೇಲ್ವರ್ಗದ ಲಿಂಗಾಯತ ತಂತ್ರಗಾರಿಕೆ ಎದುರಿಸುತ್ತಲೇ ಶಿವಮೊಗ್ಗ ಜಿಲ್ಲೆಯನ್ನು ಕೋಮು ರಾಜಕಾರಣದ ಗುಂಗಿನಿಂದ ಅದು ಹೇಗೆ ಹೊರತರುತ್ತಾರೆಂಬ ಕುತೂಹಲವೀಗ ಮೂಡಿದೆ.

ಹಠ-ಛಲಗಳ ಬಂಗಾರಪ್ಪನವರ ಕೌಟುಂಬಿಕ ಬಿಕ್ಕಟ್ಟಿನ ಕುಲುಮೆಯಲ್ಲಿ ರಾಜಕಾರಣಿಯಾಗಿ ರೂಪುಗೊಂಡ ಮಧು ಮೊದಲು ಸಿನೆಮಾ, ಆಡಿಯೋ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಅಣ್ಣ ಕುಮಾರ್ ಬಂಗಾರಪ್ಪನವರಿಗೆ ಅಪ್ಪ ರಾಜಕೀಯ ದೀಕ್ಷೆ ಕೊಟ್ಟಾಗಲೂ ಮಧು ರಾಜಕೀಯದತ್ತ ಆಕರ್ಷಿತರಾದವರಲ್ಲ. ಯಾವಾಗ ಹಿರಿಯ ಮಗ ಮತ್ತು ಬಂಗಾರಪ್ಪರ ನಡುವೆ ಸಾಂಸಾರಿಕ ವೈಷಮ್ಯ ಬೆಳೆಯಿತೋ ಆಗ ಅನಿವಾರ್ಯವಾಗಿ ಮಧು ಅಪ್ಪನ ಆಣತಿಯಂತೆ ರಾಜಕಾರಣ ಮಾಡಬೇಕಾಗಿ ಬಂತು. ಕುಮಾರ್ ನಟ್ಟಿರುಳಿನಲಿ ತನ್ನನ್ನು ಮನೆಯಿಂದ ಹೊರಗಟ್ಟಿದ್ದಾನೆ ಎಂದು ಸೊರಬದ ನೆಲದಲ್ಲಿ ನಿಂತು ಕಣ್ಣೀರುಗರೆಯುತ್ತ ಬಂಗಾರಪ್ಪ ಮಧುರನ್ನು ಉತ್ತರಾಧಿಕಾರಿ ಎಂದು ಘೋಷಿಸಿದ್ದರು.

ಎಸ್ ಬಂಗಾರಪ್ಪ

ಬಂಗಾರಪ್ಪ ಮೂರು ಬಾರಿ ಕುಮಾರ್‌ರನ್ನು ಸೊರಬದ ಶಾಸಕನಾಗಿ ಮಾಡಿದ್ದರು; ಅಲ್ಲೇ ಕುಮಾರ್ ಅವರ ರಾಜಕೀಯಕ್ಕೆ ಇತಿಶ್ರೀ ಹಾಡಲು ಮಧು ಪಟ್ಟಾಭಿಷೇಕಕ್ಕೆ ಶತಾಯಗತಾಯ ಪ್ರಯತ್ನಿಸಿದ್ದರು. ಆದರೆ ಬಂಗಾರಪ್ಪರ ಜೀವಿತಾವಧಿವರೆಗಿದು ಸಾಧ್ಯವಾಗಿರಲಿಲ್ಲ. 2004ರಲ್ಲಿ ಬಂಗಾರಪ್ಪ ಬಿಜೆಪಿ ಸೇರಿದಾಗ ಎಸ್.ಎಂ.ಕೃಷ್ಣ ಸರಕಾರದಲ್ಲಿ ಮಂತ್ರಿಯಾಗಿದ್ದ ಕುಮಾರ್ ತಾನು ಅಪ್ಪನನ್ನು ಹಿಂಬಾಲಿಸುತ್ತೇನೆ ಎನ್ನುತ್ತ ಮಂತ್ರಿಗಿರಿ ತೊರೆದು ಬಿಜೆಪಿ ಬಾಗಿಲಿಗೆ ಹೋಗಿನಿಂತಿದ್ದರು. ಆದರೆ ಬಂಗಾರಪ್ಪ ಕುಮಾರ್‌ಗೆ ಪ್ರವೇಶ ಸಿಗದಂತೆ ಮಾಡಿದರು; ವಾಪಸ್ ಕಾಂಗ್ರೆಸ್ ಸೇರಿಕೊಂಡ ಕುಮಾರ್‌ಗೆ ಎದುರಾಳಿಯಾಗಿ ಮಧುವನ್ನು ಬಿಜೆಪಿ ಅಭ್ಯರ್ಥಿಯಾಗಿ ಬಂಗಾರಪ್ಪ ನಿಲ್ಲಿಸಿದರು. ಪಾರ್ಲಿಮೆಂಟ್ ಮತ್ತು ಅಸೆಂಬ್ಲಿಗೆ ಜತೆಯಾಗಿ ಚುನಾವಣೆ ನಡೆದ ಆ ಸಂದರ್ಭದಲ್ಲಿ ಬಂಗಾರಪ್ಪ ಸಂಸದರಾದರೂ ಮಧುರವರಿಗೆ ಮಾತ್ರ ಗೆಲುವು ದಕ್ಕಲಿಲ್ಲ; ಅಪ್ಪನ ದೈತ್ಯ ಶಕ್ತಿ ಎದುರಿಸಿ ಗೆದ್ದು ಕುಮಾರ್ ಅಚ್ಚರಿ ಮೂಡಿಸಿದ್ದರು.

2008ರ ಚುನಾವಣೆ ಹೊತ್ತಲ್ಲಿ ಬಂಗಾರಪ್ಪ ಜೆಡಿಎಸ್‌ನಲ್ಲಿ ಇದ್ದರು. ಮಧು ಜೆಡಿಎಸ್ ಹುರಿಯಾಳಾದರೆ, ಕುಮಾರ್ ಕಾಂಗ್ರೆಸ್ ಅಭ್ಯರ್ಥಿ; ಬಂಗಾರಪ್ಪರಿಂದಲೆ ಹೊಸನಗರದ ಬಿಜೆಪಿ ಶಾಸಕನಾಗಿದ್ದ ಹರತಾಳು ಹಾಲಪ್ಪ ಗುರುವಿಗೆ ತಿರುಮಂತ್ರ ಹಾಕಿ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದರು. ಅಣ್ಣ-ತಮ್ಮರ ಕಾಳಗದಲ್ಲಿ ದಾಯಾದಿ ಹಾಲಪ್ಪ ಸುಲಭವಾಗಿ ಶಾಸಕನಾದರು. 2013ರ ಚುನಾವಣೆ ವೇಳೆ ಬಂಗಾರಪ್ಪ ಇರಲಿಲ್ಲ; ತಂದೆಯ ಸಾವಿನ ಸಿಂಪಥಿಯಲ್ಲಿ ಮಧು ಜೆಡಿಎಸ್ ಶಾಸಕನಾಗಿ ಚುನಾಯಿತರಾದರು. ಅರಣ್ಯ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ರೈತರಿಗೆ ಹಕ್ಕುಪತ್ರ ಕೊಡಿಸಲು ಪಾದಯಾತ್ರೆ ಮಾಡಿದ್ದ ಮಧು ಶಾಸಕನಾಗುತ್ತಲೆ ರಾಜ್ಯ ನಾಯಕನಾಗುವ ಅವಸರಕ್ಕೆ ಬಿದ್ದರು; ರಾಜ್ಯದಾದ್ಯಂತ ಓಡಾಡುತ್ತ ಈಡಿಗರ ಮುಂದಾಳಾಗುವ ಪ್ರಯತ್ನದಲ್ಲಿ ಕ್ಷೇತ್ರದ ಮೇಲಿನ ಹಿಡಿತ ಕಳೆದುಕೊಂಡರು. ಹೀಗಾಗಿ ಮಧು 2018ರಲ್ಲಿ ಪರಾಭವ ಅನುಭವಿಸಬೇಕಾಯಿತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಇದನ್ನೂ ಓದಿ: ನಮ್ಮ ಸಚಿವರಿವರು; ನೇರ ನಿಷ್ಠುರಿ, ಅಹಿಂದದ ಮುಂಚೂಣಿ ರಾಜಕಾರಣಿ ಕ್ಯಾತ್ಸಂದ್ರ ಎನ್. ರಾಜಣ್ಣ

ಈ ನಡುವೆ ಎರಡು ಬಾರಿ ಯಡಿಯೂರಪ್ಪರ ಮಗ ರಾಘವೇಂದ್ರ ವಿರುದ್ಧ ಲೋಕಸಭೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿದ ಮಧು ಸೋಲು ಕಂಡರು. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದಾಗ ಸಿಎಂ ಕುಮಾರಸ್ವಾಮಿ ತನಗೆ ಪುನರ್‌ವಸತಿ ಕಲ್ಪಿಸಲಿಲ್ಲವೆಂದು ಬೇಜಾರು ಮಾಡಿಕೊಂಡ ಮಧು ಅವರಿಗೆ ಆ ಪಕ್ಷದಲ್ಲಿ ಭವಿಷ್ಯವಿಲ್ಲವೆಂಬುದು ಖಾತ್ರಿಯಾಗಿತ್ತು. ಪದೇಪದೇ ತಾನು ಬಂಗಾರಪ್ಪನವರ ಶಿಷ್ಯನೆಂದು ಹೇಳಿಕೊಳ್ಳುವ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುತ್ತಲೆ ಕಾಂಗ್ರೆಸ್ ಸೇರಿದ ಮಧುರವರಿಗೆ ಅಲ್ಲಿ ಮಹತ್ವವೂ ದೊರೆಯಿತು. ರಾಜ್ಯ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾಗಿ ರಾಜ್ಯ ಸುತ್ತಿದ ಮಧು ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರಾಗಿದ್ದರು. ಈ ಬಾರಿ ಅಣ್ಣ ಕುಮಾರ್‌ರನ್ನು ಭರ್ಜರಿ 44,352 ಮತದಂತರದಿಂದ ಮಣಿಸಿ ಎಮ್ಮೆಲ್ಲೆಯಾದರು. ಭಾವ (ಅಕ್ಕ ಗೀತಾ ಪತಿ), ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಶಿವರಾಜ್‌ಕುಮಾರ್‌ರನ್ನು ಕಾಂಗ್ರೆಸ್ ಪ್ರಚಾರಕ್ಕೆ ಬರುವಂತೆ ಮಾಡಿ ಪಕ್ಷದಲ್ಲಿ ವರ್ಚಸ್ಸು ಹೆಚ್ಚಿಸಿಕೊಂಡಿದ್ದ ಮಧು ಪಕ್ಕದ ಶಿರಸಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸ್ಪೀಕರ್ ಕಾಗೇರಿ ಎದುರಾಳಿಯಾಗಿದ್ದ ಸೋದರ ಮಾವ ಭೀಮಣ್ಣ ನಾಯ್ಕ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸತತ ಐದಾರು ಚುನಾವಣೆಯಲ್ಲಿ ಸೋತಿದ್ದ ಭೀಮಣ್ಣ ಈ ಬಾರಿ ಗೆಲ್ಲಲು, ಮಧು ಕ್ಷೇತ್ರದ ಬಹುಸಂಖ್ಯಾತ ದೀವರ ನಾಯಕರಲ್ಲಿ ಒಗ್ಗಟ್ಟು ಮೂಡಿಸಿದ್ದೇ ಕಾರಣವೆಂಬ ಮಾತು ಸಾಮಾನ್ಯವಾಗಿದೆ.

ಕುಮಾರ್ ಬಂಗಾರಪ್ಪ

ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರ ಜತೆಗೂ ಸಮಾನ ಸಂಬಂಧ ಕಾಯ್ದುಕೊಂಡಿದ್ದ ಮಧು ಈಡಿಗ ಸಮುದಾಯದ ಕೋಟಾದಲ್ಲಿ ಬಿ.ಕೆ.ಹರಿಪ್ರಸಾದ್‌ರಂಥ ಹಿರಿಯ ಮತ್ತು ದಿಲ್ಲಿ ದರ್ಬಾರಿನಲ್ಲಿ ಶ್ರಮದಾತರಿದ್ದ ಪ್ರಭಾವಿಯನ್ನು ಹಿಂದಿಕ್ಕಿ ಮಂತ್ರಿಗಿರಿ ಗಳಿಸಲು ಸಫಲರಾಗಿದ್ದಾರೆ. ಒಂದು ಹಂತದಲ್ಲಿ ಸಿದ್ದು ವಿರೋಧಿ ಹರಿ ಪರವಾಗಿ ಡಿಕೆಶಿ ವಕಾಲತ್ತು ಮಾಡಿದ್ದರೆನ್ನಲಾಗುತ್ತಿದೆ; ಆದರೆ ಮಲೆನಾಡು ಮತ್ತು ಉತ್ತರ ಕರಾವಳಿಯಲ್ಲಿ ಗಣನೀಯವಾಗಿರುವ ದೀವರ ಮೇಲೆ ಪ್ರಭಾವ ಬೀರಬಲ್ಲ ಯುವ ನಾಯಕ ಮಧು ಮಂತ್ರಿಯಾದರೆ ಫಾಯ್ದೆ ಜಾಸ್ತಿಯೆಂಬ ಲೆಕ್ಕಾಚಾರ ಸಿದ್ದು ಅವರದಾಗಿತ್ತೆಂಬ ಮಾತು ಕಾಂಗ್ರೆಸ್ ಬಿಡಾರದಿಂದ ಹೊರಬರುತ್ತಿದೆ. ಸ್ವಜಾತಿಗಳವರನ್ನು ಪ್ರಭಾವಿಸುವ ಸಾಮರ್ಥ್ಯ ಹರಿಗಿಂತಲೂ ಮಧುಗೆ ಜಾಸ್ತಿ ಎಂಬ ತರ್ಕ ಕರಾವಳಿ ಮತ್ತು ಮಲೆನಾಡಿನ ರಾಜಕೀಯ ಪಡಸಾಲೆಯಲ್ಲಿದೆ. ಜನಾರ್ದನ ಪೂಜಾರಿ, ಕಾಗೋಡು ತಿಮ್ಮಪ್ಪರಂಥ ಮುತ್ಸದ್ಧಿಗಳ ವಯೋ ಸಹಜ ನಿವೃತ್ತಿ, ಗೋಪಾಲ ಪೂಜಾರಿ, ವಿನಯ್‌ಕುಮಾರ್ ಸೊರಕೆ ಸೋಲು, ಮಾಲಿಕಯ್ಯ ಗುತ್ತೇದಾರ್ ಪಕ್ಷಾಂತರ ಮತ್ತು ಬೇಳೂರು ಗೋಪಾಲಕೃಷ್ಣ ಮತ್ತು ಭೀಮಣ್ಣ ನಾಯ್ಕ್‌ರಿಗೆ ಕ್ಷೇತ್ರದಾಚೆ ಪ್ರಭಾವ ಬೆಳೆಸಿಕೊಳ್ಳಲಾಗದ ನಿರ್ವಾತ ಸಂದರ್ಭದಲ್ಲಿ ಮಧು ಈಡಿಗ ಸಮುದಾಯದ ವರ್ಚಸ್ವಿ ಮುಂದಾಳಾಗಿ ಬೆಳೆಯುವ ಸೂಚನೆಗಳು ಗೋಚರಿಸುತ್ತಿವೆ.

ಮಧು ಉತ್ಸಾಹಿ ತರುಣ; ತಂದೆಯಂತೆ ಹಿಂದುಳಿದವರ ಮುಂದಾಳಾಗಬೇಕೆಂಬ ಒಳ ತುಡಿತದವರು. ಆದರೆ ಸ್ವಪಕ್ಷ ಮತ್ತು ವಿರೋಧ ಪಕ್ಷದಲ್ಲಿ ಘಟಾನುಘಟಿಗಳಿರುವ ಶಿವಮೊಗ್ಗ ರಾಜಕಾರಣದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾದ ಪರಿಸ್ಥಿತಿಯಿದೆ. ಶಿವಮೊಗ್ಗ ಮತೀಯವಾಗಷ್ಟೇ ಅಲ್ಲ, ರಾಜಕೀಯವಾಗಿಯೂ ಸೂಕ್ಷ್ಮವೇ. ಹಿಂದು-ಮುಸ್ಲಿಮ್ ಎರಡೂ ಕಡೆ ಅತಿರೇಕಿಗಳಿರುವ ಶಿವಮೊಗ್ಗ ನಗರದಲ್ಲಿ ಕೋಮು ಸೌಹಾರ್ದ ಬೆಳೆಸುವ ಹೊಣೆಗಾರಿಕೆ ಮಧು ಮೇಲಿದೆ. ಯಾರದೋ ರಾಜಕೀಯ ತೆವಲಿಗೆ ಅಮಾಯಕರ ಬದುಕು ಬರ್ಬಾದ್ ಆಗಬಾರದು. ಅರಣ್ಯ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿರುವ ರೈತರ ಸಮಸ್ಯೆ ಶಾಶ್ವತ ಪರಿಹಾರ ಕಾಣಬೇಕಾಗಿದೆ. ಜಿಲ್ಲೆಯ ಆರ್ಥಿಕ ಮೂಲವಾದ ಅಡಿಕೆ ತೋಟಗಳಿಗೆ ತಗಲುತ್ತಿರುವ ನಾನಾ ನಮೂನೆಯ ರೋಗ, ಅಡಿಕೆ ನಿಷೇಧ ಭಯ, ವಿದೇಶಿ ಅಡಿಕೆ ಹಾವಳಿ ಮತ್ತು ಅಸ್ಥಿರ ಧಾರಣೆಯಿಂದ ತೋಟ ಮಾಡುವವರು ಕಂಗೆಟ್ಟಿದ್ದಾರೆ. ಕಸ್ತೂರಿರಂಗನ್ ವರದಿ ತೂಗುಗತ್ತಿ ಮಲೆನಾಡಿಗರನ್ನು ಸತಾಯಿಸುತ್ತಿದೆ. ಈ ಸವಾಲುಗಳನ್ನೆಲ್ಲ ಮಧು ಗಂಭೀರವಾಗಿ ಪರಿಗಣಿಸಿ ಜನಪರವಾಗಿ ಉತ್ತರಿಸಿದರಷ್ಟೇ ಶಿವಮೊಗ್ಗದ ರಾಜಕಾರಣದಲ್ಲಿ “ಸ್ಥಿರ”ವಾಗಲು ಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.

ಭೀಮಣ್ಣ ನಾಯ್ಕ್

ಸಚಿವ ಮಧುರವರಿಗೆ ಸಿಕ್ಕಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯೂ ಸಹ ಗಂಭೀರ ಹೋಮ್ ವರ್ಕ್‌ನ ಅನಿವಾರ್ಯತೆಯದ್ದಾಗಿದೆ. ಹಿಜಾಬ್‌ನಂಥ ಅನವಶ್ಯಕ ವಿವಾದವನ್ನು ಹಿಂದಿನ ಬಿಜೆಪಿ ಸರಕಾರ ಸೃಷ್ಟಿಸಿಹೋಗಿದೆ; ಎಳೆಯರ ಮನಸ್ಸು ಕೆಡಿಸುವ ಕೇಸರಿ ಕೆಸರನ್ನು ಪಠ್ಯಪುಸ್ತಕದಲ್ಲಿ ತುಂಬಲಾಗಿದೆ. ಈ ಸಿಕ್ಕುಗಳನ್ನೆಲ್ಲ ಮಧು ಸೂಕ್ಷ್ಮವಾಗಿ ಬಿಡಿಸಬೇಕಾಗಿದೆ. ಸರಕಾರಿ ಶಾಲೆಗಳು ದುಬಾರಿ ಖಾಸಗಿ ಕಾನ್ವೆಂಟ್‌ಗಳ ಜತೆ ಪೈಪೋಟಿ ನಡೆಸಲಾಗದೆ ಸೋಲುತ್ತಿವೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಹೊಟ್ಟೆಪಾಡಿನ ಉದ್ಯೋಗಕ್ಕೆ ತೊಂದರೆ ಇಲ್ಲ ಎಂಬಂಥ ವಾತಾವರಣ ಸೃಷ್ಟಿ ಆಗಬೇಕಿದೆ.

ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ಬಂದಿರುವ ಗ್ರಾಮೀಣ ಕೃಪಾಂಕ-ಗ್ರಾಮೀಣ ಮೀಸಲಾತಿಯಲ್ಲಿನ ನ್ಯೂನತೆಯನ್ನು ಶಿಕ್ಷಣ ಸಚಿವ ಮಧು ಸರಿಪಡಿಸಬೇಕಾಗಿದೆ. ಬಂಗಾರಪ್ಪ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಾಂತಿಕಾರಿ ನಿಯಮ ರೂಪಿಸಿದ್ದರು. ಆದರೆ ಗ್ರಾಮೀಣ ಮೀಸಲಾತಿಯನ್ನು ಆಧುನಿಕ ಸಕಲ ಸೌಲಭ್ಯದ ಶಿಕ್ಷಣ ಪೂರೈಸಿರುವ ಅನರ್ಹ ನಗರವಾಸಿಗಳು ಕೂಡ ಲಪಟಾಯಿಸುತ್ತಿದ್ದಾರೆ. ಹಾಸ್ಟೆಲ್ ಮತ್ತಿತರ ಶೈಕ್ಷಣಿಕ ಸೌಲಭ್ಯದ ಕೊರತೆಯಿಂದಾಗಿ ಅನಿವಾರ್ಯವಾಗಿ ಪಟ್ಟಣದ ಶಾಲೆಯಲ್ಲಿ ಕಲಿತ ಅಸಹಾಯಕ ಹಳ್ಳಿಗಾಡಿನ ಅಭ್ಯರ್ಥಿಗಳಿಗೆ ಗ್ರಾಮೀಣ ಮೀಸಲಾತಿ ಸಿಗುತ್ತಿಲ್ಲ; ಗ್ರಾಮೀಣ ಸಮಸ್ಯೆ-ಸಂಕಷ್ಟ ಒಂಚೂರೂ ಗೊತ್ತಿಲ್ಲದ, ನಗರದ ಸಕಲ ಸವಲತ್ತಲ್ಲಿ ಬೆಳೆದ ವಿದ್ಯಾರ್ಥಿಗಳು, ನಗರದ ಅಂಚಿನ ಹೈ-ಫೈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿದರೂ ಅಂಥವರಿಗೆ ಗ್ರಾಮೀಣ ಮೀಸಲಾತಿ ಸಿಗುತ್ತಿದೆ. ಶಾಲಾ ಕಟ್ಟಡ ಗ್ರಾಮೀಣ ಪ್ರದೇಶದಲ್ಲಿರುವ ಸಂಗತಿಯಷ್ಟೇ ಗ್ರಾಮೀಣ ಮೀಸಲಾತಿ ಮಾನದಂಡ ಆಗಿರುವುದು ಸಾಮಾಜಿಕ ಅನ್ಯಾಯವೇ ಸರಿ. ವಿದ್ಯಾರ್ಥಿಗಳ ಗ್ರಾಮೀಣ ಹಿನ್ನೆಲೆ ಮಾನದಂಡ ಆಗಬೇಕೇ ಹೊರತು ಶಾಲೆಯ ಭೌತಿಕ ಇರುವಿಕೆ ಅಲ್ಲ. ಈ ವಿಪರ್ಯಾಸ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪಗೆ ಅರ್ಥವಾದೀತು ಎಂಬ ನಂಬಿಕೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....