ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ಭೂಷಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಕುರಿತು ಕ್ಷಿಪ್ರ ತನಿಖೆ ನಡೆಸುವುದಾಗಿ ಕ್ರೀಡಾ ಸಚಿವರು ಭರವಸೆ ನೀಡಿದ ನಂತರ ಭಾರತದ ಅಗ್ರ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಸಧ್ಯಕ್ಕೆ ಸ್ಥಗಿತಗೊಳಿಸಿದ್ದಾರೆ.
ಆರೋಪಿತ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ಏಪ್ರಿಲ್ ನಿಂದ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಅವರ ಪ್ರತಿಭಟನೆಗೆ ರೈತ ಸಂಘಟನೆಗಳು ಹಾಗೂ ಹಲವು ರಾಜಕೀಯ ನಾಯಕರು ಬೆಂಬಲ ಸೂಚಿಸಿದ್ದಾರೆ.
ಬುಧವಾರ, ಪ್ರತಿಭಟನಾ ನಿರತ ಕುಸ್ತಿಪಟುಗಳು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾಗಿ ಸುಮಾರು ಆರು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಜೂನ್ 15ರೊಳಗೆ ಸಿಂಗ್ ವಿರುದ್ಧ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸುತ್ತಾರೆ ಎಂದು ಠಾಕೂರ್ ಹೇಳಿದರು.
”ಅಲ್ಲಿಯವರೆಗೆ ಯಾವುದೇ ಪ್ರದರ್ಶನಗಳನ್ನು ನಡೆಸುವುದಿಲ್ಲ ಎಂದು ಕುಸ್ತಿಪಟುಗಳು ಭರವಸೆ ನೀಡಿದ್ದಾರೆ” ಎಂದು ಅನುರಾಗ್ ಠಾಕೂರ್ ಹೇಳಿದರು.
”ಜೂನ್ 30ರೊಳಗೆ ಡಬ್ಲ್ಯುಎಫ್ಐ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿದೆ ಮತ್ತು ಹೊಸ ಪ್ಯಾನೆಲ್ನಲ್ಲಿ ಸಿಂಗ್ ಅಥವಾ ಅವರ ಯಾವುದೇ ನಿಕಟ ಸಹವರ್ತಿಗಳು ಪಾತ್ರವನ್ನು ಹೊಂದಿರುವುದಿಲ್ಲ” ಎಂದು ಹೇಳಿದರು.
ಕುಸ್ತಿಪಟುಗಳು ಮೊದಲು ಜನವರಿಯಲ್ಲಿ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಆಗ ಬ್ರಿಜ್ಭೂಷಣ್ ಸಿಂಗ್ ಅವರನ್ನು ಆಡಳಿತಾತ್ಮಕ ಅಧಿಕಾರದಿಂದ ಕೆಲವು ವಾರಗಳವರೆಗೆ ಭಾರತದ ಕ್ರೀಡಾ ಸಚಿವಾಲಯವು ದೂರ ಇಟ್ಟಿತು. ಸರ್ಕಾರವು ಅವರ ದೂರುಗಳನ್ನು ತನಿಖೆ ಮಾಡುವುದಾಗಿ ಭರವಸೆ ನೀಡಿದ ನಂತರ ಅದೇ ತಿಂಗಳು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತು.
ಸರ್ಕಾರದ ಭರವಸೆ ನಂಬಿ ಕುಸ್ತಿಪಟುಗಳು ಪ್ರತಿಭಟನೆಯಿಂದ ಹಿಂದೆ ಸರಿದರು. ಆದರೆ, ಸರ್ಕಾರ ಬ್ರಿಜ್ಭೂಷಣ್ ವಿರುದ್ಧ ಯಾವುದೇ ಕ್ರಮ ತಗೆದುಕೊಳ್ಳಲಿಲ್ಲ. ಹಾಗಾಗಿ ಕುಸ್ತಿಪಟುಗಳು ಏಪ್ರಿಲ್ನಲ್ಲಿ ಬ್ರಿಜ್ಭೂಷಣ್ ಬಂಧನಕ್ಕೆ ಆಗ್ರಹಿಸಿ ಪುನಃ ಪ್ರತಿಭಟನೆಯನ್ನು ಆರಂಭಿಸಿದರು.
ಆಡಳಿತಾರೂಢ ಬಿಜೆಪಿಯ ಪ್ರಭಾವಿ ಸಂಸದರಾಗಿರುವ ಸಿಂಗ್ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಕುಸ್ತಿಪಟುಗಳ ಪ್ರತಿಭಟನೆಯು “ರಾಜಕೀಯ ಪ್ರೇರಿತ” ಎಂದು ಆರೋಪಿಸಿದ್ದಾರೆ.
ಕಳೆದ ತಿಂಗಳು, ಕುಸ್ತಿಪಟುಗಳು ಸೇರಿದಂತೆ ಅವರನ್ನು ಬೆಂಬಲಿಸುವವರು ಹೊಸ ಸಂಸತ್ ಕಟ್ಟಡದತ್ತ ಮೆರವಣಿಗೆ ಮಾಡಲು ಪ್ರಯತ್ನಿಸಿದಾಗ ಅವರನ್ನು ಬಂಧಿಸಲಾಯಿತು. ಅವರ ವಿರುದ್ಧ ಪೊಲೀಸರು ಗಲಭೆ ಸೇರಿದಂತೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಅವರ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿದ್ದಾರೆ.
ದೇಶಕ್ಕೆ ಪದಕ ತಂದುಕೊಟ್ಟ ಕ್ರೀಡಾಪಟುಗಳನ್ನು ರಸ್ತಯೆ ಮಧ್ಯೆ ಎಳೆದಾಡಿದ್ದು, ಬಸ್ಗಳಲ್ಲಿ ಎಳೆದುಕೊಂಡು ಹೋಗುವ ದೃಶ್ಯಗಳು ಸಾಕಷ್ಟು ವೈರಲ್ ಆಗಿದ್ದವು. ಅನೇಕ ಕ್ರೀಡಾಪಟುಗಳು ಮತ್ತು ವಿರೋಧ ಪಕ್ಷದ ರಾಜಕಾರಣಿಗಳು ಸರ್ಕಾರವನ್ನು ಟೀಕಿಸಿದ್ದರು.
ಮೇ 30 ರಂದು, ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಗೆ ಎಸೆಯುವುದಾಗಿ ಎಚ್ಚರಿಕೆ ನೀಡಿದರು. ಆಬಂಳಿಕ ರೈತ ಮುಖಂಡರು ಕುಸ್ತರಿಪಟುಗಳನ್ನು ತಡೆದು ಸರ್ಕಾರಕ್ಕೆ ಐದು ದಿನಗಳ ಗಡುವು ನೀಡಿದರು. ಪ್ರತಿಭಟನಾಕಾರರ ನಿಯೋಗವು ಕಳೆದ ಶನಿವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿತು.
ಕಿರುಕುಳದ ಬಗ್ಗೆ ಮೋದಿಗೆ ಹೇಳಿದ್ದೆ ಎಂದು ಭಾರತೀಯ ಕುಸ್ತಿಪಟು ಹೇಳುತ್ತಾರೆ. ‘#MeToo’ ಪ್ರತಿಭಟನೆಗಾಗಿ ಭಾರತದ ಕುಸ್ತಿಪಟುಗಳು ಒಲಿಂಪಿಕ್ ಕನಸನ್ನು ಪಣಕ್ಕಿಟ್ಟಿದ್ದಾರೆ.
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯೂಡಬ್ಲ್ಯು) – ಕ್ರೀಡೆಯ ಅಂತರರಾಷ್ಟ್ರೀಯ ಆಡಳಿತ ಮಂಡಳಿ – ಕುಸ್ತಿಪಟುಗಳನ್ನು ನಡೆಸಿಕೊಂಡ ರೀತಿಯನ್ನು ಖಂಡಿಸಿ ಹೇಳಿಕೆಗಳನ್ನು ನೀಡಿತು. ಅವರು ಸಿಂಗ್ ವಿರುದ್ಧದ ತನಿಖೆ ನಡೆಸದಿರುವುದಕ್ಕೆ ಟೀಕಿಸಿದರು.
ಇಲ್ಲಿಯವರೆಗೆ, ಪೊಲೀಸರು ಸಿಂಗ್ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ, ಇದರಲ್ಲಿ ಒಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿಯಲ್ಲಿ ದಾಖಲಾಗಿದೆ. ಪೊಲೀಸರು ಬ್ರಿಜ್ಭೂಷಣ್ ಸಿಂಗ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಆದರೆ ಇನ್ನೂ ಬಂಧಿಸಿಲ್ಲ.
ಬುಧವಾರ, ಠಾಕೂರ್ ಅವರನ್ನು ಭೇಟಿ ಮಾಡಿದ ನಿಯೋಗದ ಭಾಗವಾಗಿದ್ದ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪೂನಿಯಾ, ಮುಂದಿನ ವಾರದೊಳಗೆ ಸಿಂಗ್ ವಿರುದ್ಧ ಪೊಲೀಸ್ ತನಿಖೆಯನ್ನು ಪೂರ್ಣಗೊಳಿಸುವುದಾಗಿ ಸರ್ಕಾರ ಅವರಿಗೆ ಭರವಸೆ ನೀಡಿದೆ ಎಂದು ಹೇಳಿದರು.
“ಆದರೆ ಜೂನ್ 15 ರೊಳಗೆ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ” ಎಂದು ಬಜರಂಗ್ ಪೂನಿಯಾ ಹೇಳಿದ್ದಾರೆ.