ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರಿಗೆ ಜುಲೈ 13ರಂದು ಹಾಜರಾಗುವಂತೆ ಗುಜರಾತ್ ನ್ಯಾಯಾಲಯ ಬುಧವಾರ ಆದೇಶಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಪ್ರಧಾನಿ ಮೋದಿ ಅವರ ಶೈಕ್ಷಣಿಕ ಪದವಿ ಬಗ್ಗೆ ವ್ಯಂಗ್ಯ ಮತ್ತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಗುಜರಾತ್ ವಿಶ್ವವಿದ್ಯಾಲಯವು ಪ್ರಕರಣ ದಾಖಲಿಸಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರಣೆ ವೇಳೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಯೇಶ್ ಚೋವತಿಯಾ ಅವರು ಈ ಆದೇಶ ನೀಡಿದ್ದಾರೆ.
ಗುಜರಾತ್ ವಿಶ್ವವಿದ್ಯಾಲಯವು ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕೇಜಿವಾಲ್ ಮತ್ತು ಸಂಜಯ್ ಸಿಂಗ್ ಅವರಿಗೆ ಜೂನ್ 7ರಂದು ವಿಚಾರಣೆಗೆ ಹಾಜರಾಗುವಂತೆ ಅಹಮದಾಬಾದ್ನ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.
ಪ್ರಾಥಮಿಕ ಅವಲೋಕನದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ರ ಅಡಿಯಲ್ಲಿ ಇಬ್ಬರು ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ಮಾನನಷ್ಟ ಶಿಕ್ಷೆಗೆ ಸಂಬಂಧಿಸಿದಂತೆ ಪ್ರಕರಣವಿರುವುದು ಕಂಡುಬಂದಿದೆ ಎಂದು ನ್ಯಾಯಾಲಯ ಹೇಳಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಬುಧವಾರ ಈ ಪ್ರಕರಣ ವಿಚಾರಣೆಗೆ ಬಂದಾಗ, ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿದ್ದರು ಮತ್ತು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ದಾಖಲೆಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಆ ದಾಖಲೆಗಳನ್ನು ಅವರಿಗೆ ಒದಗಿಸಲಾಗಿದೆ. ಅಲ್ಲದೆ, ಅವರು ಆರೋಪಿಗಳಿಗೆ ಖುದ್ದು ಹಾಜರಾತಿಗೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದರು’ ಎಂದು ಗುಜರಾತ್ ವಿವಿಯ ವಕೀಲ ಅಮಿತ್ ನಾಯರ್ ತಿಳಿಸಿದರು.
ಇದನ್ನೂ ಓದಿ: ಪ್ರಧಾನಿಯ ಪದವಿ ಪ್ರಕರಣ: ಮಾನನಷ್ಟ ಮೊಕದ್ದಮೆಯಲ್ಲಿ ಕೇಜ್ರಿವಾಲ್, ಎಎಪಿ ಸಂಸದನಿಗೆ ಸಮನ್ಸ್
‘ಖುದ್ದು ಹಾಜರಾತಿಗೆ ವಿನಾಯಿತಿ ನೀಡಲು ಒಪ್ಪಿಗೆ ಸೂಚಿಸುವಾಗ, ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ತ್ವರಿತ ವಿಚಾರಣೆ ನಡೆಸುವಂತೆ ಸುತ್ತೋಲೆಯಲ್ಲಿದೆ ಎನ್ನುವುದನ್ನು ಕೋರ್ಟ್ ಎತ್ತಿ ಹೇಳಿ, ಅವರು ಯಾವಾಗ ಹಾಜರಾಗಲಿದ್ದಾರೆ? ಎಂದು ಪ್ರಶ್ನಿಸಿತು. ಆಗ, ಪ್ರತಿವಾದಿ ವಕೀಲರು ತಮ್ಮ ಕ್ಷಕಿದಾರರು ಜುಲೈ 13ರಂದು ವಿಚಾರಣೆಗೆ ಹಾಜರಿರುವುದಾಗಿ ಕೋರ್ಟ್ಗೆ ತಿಳಿಸಿದರು’ ಎಂದು ಅಮಿತ್ ನಾಯ ತಿಳಿಸಿದರು.
ಮೋದಿ ಅವರ ಶೈಕ್ಷಣಿಕ ಪದವಿ ಪ್ರಶ್ನಿಸಿ ಎಎಪಿಯ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದರು. ಮೋದಿಯವರ ಪದವಿ ಬಗ್ಗೆ ವಿವಿ ಬಗ್ಗೆ ಟೀಕಿಸುವ ಹೇಳಿಕೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದಾರೆ. ಗುಜರಾತ್ ವಿ.ವಿ ವಿರುದ್ಧದ ಅವರ ಹೇಳಿಕೆಗಳು ಮಾನಹಾನಿಕರವಾಗಿವೆ ಮತ್ತು ವಿ.ವಿಯ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶ ಹೊಂದಿವೆ ಎಂದು ಆರೋಪಿಸಿ ವಿ.ವಿ ರಿಜಿಸ್ಟ್ರಾರ್ ಪೀಯೂಷ್ ಪಟೇಲ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
”ಕೇಜ್ರಿವಾಲ್ ಹಾಗೂ ಸಿಂಗ್ ಅವರು ಪತ್ರಿಕಾಗೋಷ್ಠಿಗಳಲ್ಲಿ ಮತ್ತು ಟ್ವಿಟರ್ನಲ್ಲಿ ಮೋದಿ ಪದವಿಯ ಬಗ್ಗೆ ವಿಶ್ವವಿದ್ಯಾಲಯವನ್ನು ಗುರಿಯಾಗಿಸಿಕೊಂಡು “ಮಾನಹಾನಿಕರ” ಹೇಳಿಕೆಗಳನ್ನು ನೀಡಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ವಿರುದ್ಧ ಅವರ ಹೇಳಿಕೆಗಳು ಮಾನಹಾನಿಕರವಾಗಿದೆ ಮತ್ತು ವಿಶ್ವವಿದ್ಯಾಲಯದ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶವನ್ನು ಹೊಂದಿದೆ” ಎಂದು ದೂರುದಾರರು ಹೇಳಿದ್ದಾರೆ.
ಕೇಜ್ರಿವಾಲ್ ಹೇಳಿಕೆ: ”ಪದವಿ ಇದ್ದರೆ ಮತ್ತು ಅದು ನಿಜವಾಗಿದ್ದರೆ, ಅದನ್ನು ಏಕೆ ನೀಡುತ್ತಿಲ್ಲ?. ಅವರು ಪದವಿಯನ್ನು ನೀಡುತ್ತಿಲ್ಲ ಏಕೆಂದರೆ ಅದು ನಕಲಿಯಾಗಿರಬಹುದು ಮತ್ತು ಪ್ರಧಾನಿ ದೆಹಲಿ ವಿಶ್ವವಿದ್ಯಾಲಯ ಮತ್ತು ಗುಜರಾತ್ ವಿಶ್ವವಿದ್ಯಾಲಯದಲ್ಲಿ ಓದಿದ್ದರೆ, ಗುಜರಾತ್ ವಿಶ್ವವಿದ್ಯಾಲಯವು ತನ್ನ ವಿದ್ಯಾರ್ಥಿ ದೇಶದ ಪ್ರಧಾನಿಯಾದುದನ್ನು ಸಂಭ್ರಮಿಸಬೇಕಿತ್ತು” ಎಂದು ಹೇಳಿದ್ದರು.
ಸಂಜಯ್ ಸಿಂಗ್: ವಿಶ್ವವಿದ್ಯಾನಿಲಯದ ಪ್ರಕಾರ, “ಅವರು (ಜಿಯು) ಪ್ರಧಾನಿಯ ನಕಲಿ ಪದವಿಯನ್ನು ಅಸಲಿ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದರು.