“ನೀವು ಹಿಂದುತ್ವದ ಬಗ್ಗೆ ಮಾತನಾಡುತ್ತೀರಿ. ಯಾರದೋ ಫೋಟೋ ಹಾಕಿದರೆ ಬೆದರುವಷ್ಟು ನಿಮ್ಮ ಹಿಂದುತ್ವ ದುರ್ಬಲವೇ? ಚುನಾವಣೆ ಗೆಲ್ಲಲು ನಿಮಗೆ ಔರಂಗಜೇಬ್ ಬೇಕಾ? ಕರ್ನಾಟಕದಲ್ಲಿ ಬಜರಂಗ ಬಲಿ ನಿಮಗೆ ಸಹಾಯ ಮಾಡಲಿಲ್ಲ. ಹಾಗಾಗಿ ಮಹಾರಾಷ್ಟ್ರದಲ್ಲಿ ನಿಮಗೆ ಔರಂಗಜೇಬ್ ಹಿಡಿದುಕೊಂಡಿದ್ದೀರಿ” ಎಂದು ದೇವೇಂದ್ರ ಫಡ್ನವಿಸ್ ಉದ್ದೇಶಿಸಿ ಶಿವಸೇನೆ ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅವರನ್ನು ವೈಭವೀಕರಿಸುವ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಕುರಿತು ಹಿಂಸಾತ್ಮಕ ಪ್ರತಿಭಟನೆಯಲ್ಲಿ ಹೊರಗಿನವರು ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೋಮು ಘರ್ಷಣೆಗಳು ಹೆಚ್ಚುತ್ತಿರುವುದೇಕೆ ಎಂದು ರಾವತ್ ಪ್ರಶ್ನಿಸಿದ್ದಾರೆ.
ರಾಜ್ಯದ ಗೃಹ ಸಚಿವರೂ ಆಗಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಒಂದು ಕಡೆ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಾರೆ ಮತ್ತೊಂದು ಕಡೆ ಹಿಂದುತ್ವವಾದಿಗಳ ಆಕ್ರಮಣವನ್ನು ಸಮರ್ಥಿಸಿಕೊಂಡಿರುವುದನ್ನು ರಾವತ್ ಟೀಕಿಸಿದ್ದಾರೆ.
“ಔರಂಗಜೇಬನನ್ನು ವೈಭವೀಕರಿಸಿದರೆ ಪ್ರತಿಕ್ರಿಯೆ ಇರುತ್ತದೆ. ನಾವು ಅದನ್ನು ಸಹಿಸುವುದಿಲ್ಲ. ಇದು ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರ” ಎಂದು ಫಡ್ನವೀಸ್ ಹೇಳಿದ್ದರು.
ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾದ ಕಾರಣ ಫಡ್ನವೀಸ್ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಕೋಮುಗಲಭೆ ಸೃಷ್ಟಿಸುವುದು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಹೆಚ್ಚಿಸಿಕೊಳ್ಳುವ ಬಿಜೆಪಿಯ ಕುತಂತ್ರದ ಯೋಜನೆಯ ಭಾಗವಾಗಿದೆ. ಮುಂಬೈನಲ್ಲಿ ಮಹಿಳೆಯರು ಮತ್ತು ಹುಡುಗಿಯರು ಸುರಕ್ಷಿತವಾಗಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.
ಪ್ರಕರಣವೇನು?
ಮೊಘಲ್ ದೊರೆ ಔರಂಗ್ಜೇಬ್ ಮತ್ತು ಟಿಪ್ಪು ಸುಲ್ತಾನ್ ಇಬ್ಬರನ್ನೂ ವೈಭವೀಕರಿಸಿ ವಾಟ್ಸಪ್ನಲ್ಲಿ ಸ್ಟೆಟಸ್ ಹಾಕಿಕೊಂಡಿದ್ದ ಮೂವರು ಅಪ್ರಾಪ್ತ ಬಾಲಕರ ನಡೆಯನ್ನು ವಿರೋಧಿಸಿ ಮಹಾರಷ್ಟ್ರದ ಕೊಲ್ಲಾಪುರದಲ್ಲಿ ಬಲಪಂಥೀಯ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿವೆ. ಶಾಂತಿಯುತವಾಗಿ ಶುರುವಾಗಿದ್ದ ಈ ಪ್ರತಿಭಟನೆ ಕೆಲವೇ ಹೊತ್ತಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಕೊಲ್ಲಾಪುರದ ನಿವಾಸಿಗಳಾದ ಮೂವರು ಅಪ್ರಾಪ್ತರು ಮಂಗಳವಾರ ಔರಂಗ್ಜೇಬ್ ಮತ್ತು ಟಿಪ್ಪುವನ್ನು ವೈಭವೀಕರಿಸುವ ಫೋಟೋಗಳನ್ನು ವಾಟ್ಸಪ್ ಸ್ಟೇಟಸ್ನಲ್ಲಿ ಹಂಚಿಕೊಂಡು ವಿವಾದಾತ್ಮಕ ಆಡಿಯೋವನ್ನು ಹರಿಬಿಟ್ಟಿದ್ದರು ಎನ್ನಲಾಗಿದೆ. ಈ ಪೋಟೋಗಳು ಮತ್ತು ವಿವಾದಾತ್ಮಕ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಬಲಪಂಥೀಯ ಸಂಘಟನೆಗಳು ಬುಧವಾರ ಕೊಲ್ಲಾಪುರ ಬಂದ್ಗೆ ಕರೆ ನೀಡಿವೆ. ವಿಷಯ ತಿಳಿದ ಸ್ಥಳೀಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ರಾಹುಲ್ ರೇಖಾವರ್ ಕೂಡ ಕೆಲ ಸಂಘಟನೆಗಳ ಮುಖಂಡರನ್ನು ಭೇಟಿಯಾಗಿ ಬಂದ್ ಕರೆಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಆದರೆ, ಅವರ ಪ್ರಯತ್ನ ವಿಫಲವಾಗಿದೆ.
ಬುಧವಾರ ಬೆಳಗ್ಗೆ ಬಲಪಂಥೀಯ ಸಂಘಟನೆಗಳ ನೂರಾರು ಮಂದಿ ಕಾರ್ಯಕರ್ತರು ಕೊಲ್ಲಾಪುರದ ಶಿವಾಜಿ ಚೌಕ್ ಬಳಿ ಜಮಾಯಿಸಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಕೆಲ ಅಂಗಡಿ-ಮುಂಗಟ್ಟುಗಳನ್ನು ದೋಚಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಲಾಠಿ ಚಾರ್ಜ್ ನಡೆಸಿರುವ ಪೊಲೀಸರು 36 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ರಾಜ್ಯದ ಬೊಕ್ಕಸ ಬರಿದಾಗಿಸಿರುವುದನ್ನು ಸ್ವತಃ ಒಪ್ಪಿಕೊಂಡ ಬಿಜೆಪಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ