Homeಮುಖಪುಟಪ್ರಶ್ನಿಸುವ ಪರಂಪರೆ ಕಟ್ಟಿದ ಪ್ರಖರ ಸುದ್ದಿಗಾರನ ನಿರ್ಗಮನ

ಪ್ರಶ್ನಿಸುವ ಪರಂಪರೆ ಕಟ್ಟಿದ ಪ್ರಖರ ಸುದ್ದಿಗಾರನ ನಿರ್ಗಮನ

- Advertisement -
- Advertisement -

ನಮ್ಮ ಜನತಂತ್ರದ ಆಧಾರ ಸ್ತಂಭಗಳನ್ನು ಅಲುಗಿಸಲಾಗುತ್ತಿರುವ ಈ ಸಂದಿಗ್ಧ ಕಾಲಘಟ್ಟದಲ್ಲಿ ದೇಶ ಒಬ್ಬ ಯೋಗ್ಯ ಪತ್ರಕರ್ತನನ್ನು ಕಳೆದುಕೊಂಡಿದೆ. ಹಿಂದೀ ಟೆಲಿವಿಷನ್ ಪತ್ರಿಕೋದ್ಯಮ ಪ್ರವರ್ತಕ ವಿನೋದ್ ದುವಾ ನಿಧನರಾಗಿದ್ದಾರೆ. ಸರ್ವಾಧಿಕಾರವನ್ನು ಧರ್ಮಾಂಧತೆಯನ್ನು ಕೋಮುವಾದವನ್ನು ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸುತ್ತಿದ್ದ ಧೀರ ಪತ್ರಿಕೋದ್ಯೋಗಿಯನ್ನು ಸಾವು ಸೆಳೆದುಕೊಂಡಿದೆ.

ಪತ್ನಿ ಪದ್ಮಾವತೀ ’ಚಿನ್ನಾ’ ದುವಾ ಅವರೊಂದಿಗೆ ಆರು ತಿಂಗಳ ಹಿಂದೆ ಕೋವಿಡ್ ಸೋಂಕಿಗೆ ಗುರಿಯಾಗಿದ್ದ ವಿನೋದ್ ಅವರ ಆರೋಗ್ಯ ಕುಸಿಯುತ್ತಲೇ ಹೋಯಿತು. ಚಿನ್ನಾ ಜೂನ್ ತಿಂಗಳಲ್ಲೇ ಅಗಲಿ ಹೋದರು.

ಹಳೆಯ ದಿಲ್ಲಿಯಲ್ಲಿ ಹುಟ್ಟಿ ಬೆಳೆದ ದುವಾ, ಹನ್ಸರಾಜ್ ಕಾಲೇಜಿನಿಂದ ಇಂಗ್ಲಿಷ್ ಪದವಿ ಪಡೆದು ದೆಹಲಿ ವಿಶ್ವಿವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು. ಪತ್ರಿಕೋದ್ಯಮಕ್ಕೆ ಪ್ರವೇಶಿಸುವ ಮುನ್ನ ದೆಹಲಿಯ ರಂಗಭೂಮಿ ವಲಯಗಳಲ್ಲಿ ಸಕ್ರಿಯರಾಗಿದ್ದರು.

ಆಳುವ ಪಕ್ಷ ಅವರ ಮೇಲೆ ರಾಜದ್ರೋಹದ ಕೇಸು ಹೆಟ್ಟಿ ಕಿರುಕುಳ ನೀಡಿದಾಗ ಅವರು ದೈಹಿಕರಾಗಿ ಜರ್ಝರಿತರು. ಸುಪ್ರೀಮ್ ಕೋರ್ಟು ಅವರ ಪರವಾಗಿ ತೀರ್ಪು ನೀಡಿತು. ರಾಜದ್ರೋಹದ ಕೇಸನ್ನು ವಜಾ ಮಾಡಿತು. ಅಧಿಕಾರಸ್ಥರು ಮತ್ತು ಅಧಿಕಾರವನ್ನು ಕಡೆಗಣ್ಣಿನಿಂದ ಕಂಡ ವಿರಳರು ದುವಾ. ಜನಹಿತಕ್ಕಾಗಿ ಹೇಮಾ ಹೇಮಿಗಳನ್ನು ಎದುರು ಹಾಕಿಕೊಳ್ಳಲು ಹಿಂದೆಮುಂದೆ ನೋಡದ ನಿರ್ಭೀತರು. ಕೇವಲ ಘೋಷಣೆಗೆ ಸೀಮಿತವಾಗದೆ ನಿಜ ಅರ್ಥದಲ್ಲಿ ನೇರ ಮತ್ತು ದಿಟ್ಟರಾಗಿದ್ದವರು ಅವರು. ಜನವಾಣಿ ಕಾರ್ಯಕ್ರಮದ ಸಂದರ್ಶನಗಳ ಸರಣಿಯಲ್ಲಿ ಅವರೆದುರು ಕುಳಿತ ಮಂತ್ರಿಮಾನ್ಯರು ತತ್ತರಿಸುತ್ತಿದ್ದ ಗಳಿಗೆಗಳಿದ್ದವು. ನಿಮ್ಮ ಕೆಲಸ ಕಾರ್ಯಗಳ ಮೌಲ್ಯಮಾಪನದಲ್ಲಿ ನಿಮಗೆ ಹತ್ತರಲ್ಲಿ ಮೂರೇ ಅಂಕ ನೀಡುತ್ತಿರುವುದಾಗಿ ಮಂತ್ರಿಗಳ ಮುಖಕ್ಕೇ ಹೇಳುವ ನೈತಿಕ ಧೈರ್ಯವನ್ನು ದುವಾ ಸಂಪಾದಿಸಿದ್ದರು. ಈ ಅವಹೇಳನವನ್ನು ಮತ್ತೆಮತ್ತೆ ಎದುರಿಸಿದ ಮಂತ್ರಿಗಳು ದೂರದರ್ಶನ ಬಿತ್ತರಿಸುತ್ತಿದ್ದ ಈ ಕಾರ್ಯಕ್ರಮವನ್ನೇ ರದ್ದು ಮಾಡುವಂತೆ ಪ್ರಧಾನಿಯ ಮೇಲೆ ಬಹುವಾದ ಒತ್ತಡ ತಂದದ್ದು ಉಂಟು. ಆದರೆ ಸಫಲರಾಗಲಿಲ್ಲ.

ದುವಾ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ನಿರರ್ಗಳರಾಗಿದ್ದರು. ಯಥಾಸ್ಥಿತಿಯನ್ನೂ, ಆಳುವ ವ್ಯವಸ್ಥೆಯನ್ನು ಅಂಜದೆ ಅಳುಕದೆ ಪ್ರಶ್ನಿಸುತ್ತಲೇ ಬಂದ ಅಪರೂಪದ ಪತ್ರಕರ್ತ. ಸೂಫೀ ಸಂಗೀತ ಮತ್ತು ಕವಿತೆಯೆಡೆಗಿನ ಅಗಾಧ ಪ್ರೇಮ ಅವರ ಸುದ್ದಿಗಾರಿಕೆಗೆ ಸೊಬಗು ಸಿರಿವಂತಿಕೆಗಳ ನೀಡಿತ್ತು.

ಅವರ ಆಕ್ರಮಣಶೀಲತೆಯಲ್ಲಿ ಇಂದಿನ ಬಹುತೇಕ ಆಂಕರುಗಳಂತೆ ಕೇವಲ ಭಾವ ಭಂಗಿಗಳ ಟೊಳ್ಳು ಇರಲಿಲ್ಲ. ಬದಲಾಗಿ ಅಧ್ಯಯನಶೀಲತೆ ಮತ್ತು ಆಳದ ತಿಳಿವಳಿಕೆಯ ಹರಿತ ಧಾರೆಯಿರುತ್ತಿತ್ತು.
ಅವರು ತಮ್ಮ ಕಾರ್ಯಕ್ರಮಗಳ ವೀಕ್ಷಿಸುತ್ತಿದ್ದವರ ಉದ್ಯೋಗಿಯಾಗಿದ್ದರೇ ವಿನಾ ಕಟ್ಟಕಡೆಯ ತನಕ ಯಾವುದೇ ಮಾಲೀಕರ ಉದ್ಯೋಗಿ ಆಗಿರಲಿಲ್ಲ. ಸ್ಥಾವರವಾಗಿ ಉಳಿಯದೆ ಜಂಗಮವಾಗಿ ಕೆಲಸ ಮಾಡಿದವರು. ಹತ್ತು ಹಲವು ಸುದ್ದಿ ಸಂಸ್ಥೆಗಳಿಗೆ ಗುತ್ತಿಗೆ ಕರಾರಿನ ಮೂಲಕ ಕಾರ್ಯಕ್ರಮಗಳನ್ನು ಮಾಡಿಕೊಟ್ಟವರು. ಗುತ್ತಿಗೆ ಮುಗಿದ ಕ್ಷಣವೇ ಮುಂದಿನ ಸಂಸ್ಥೆಗೆ ನಡೆಯುತ್ತಿದ್ದವರು. ಎಲ್ಲಿಯೂ ದೀರ್ಘ ಕಾಲ ನೆಲೆ ನಿಲ್ಲದೆ ಯಾಕೆ ಅಷ್ಟೊಂದು ಸಂಸ್ಥೆಗಳಿಗೆ ಕೆಲಸ ಮಾಡಿದಿರಿ ಎಂಬ ಪ್ರಶ್ನೆಗೆ ಅವರ ಉತ್ತರ- ನಿಷ್ಠುರನಾಗಿದ್ದ ನನ್ನನ್ನು ಯಾರೂ ಬಹುಕಾಲ ಇಷ್ಟಪಡುತ್ತಿರಲಿಲ್ಲ.

ಪತ್ರಿಕೋದ್ಯಮಕ್ಕೆ ಅವರು ಕಾಲಿಟ್ಟದ್ದು ದೂರದರ್ಶನದ ಮೂಲಕ. 80ರ ದಶಕಗಳಲ್ಲಿ ಎನ್‌ಡಿಟಿವಿಯ ಪ್ರಣಯ್ ರಾಯ್ ಜೊತೆ ಆರಂಭಿಸಿದ ವಿರಳ ಒಳನೋಟಗಳ ಚುರುಕಿನ ಚುನಾವಣಾ ವಿಶ್ಲೇಷಣೆಗಳು ದುವಾ ಅವರಿಗೆ ದಿನಬೆಳಗಾಗುವುದರಲ್ಲಿ ಖ್ಯಾತಿ ತಂದುಕೊಟ್ಟವು. ಉರ್ದು ಹಿಂದೀ ಸಾಹಿತ್ಯದ ಆಳದ ಓದು ಅವರ ಸುದ್ದಿ ಪ್ರಸ್ತುತಿಯಲ್ಲಿ ಪ್ರತಿಫಲಿಸುತ್ತಿತ್ತು. ಅವರ ಪದಲಾಲಿತ್ಯ, ಪ್ರಖರ ವಿಶ್ಲೇಷಣೆ, ಸುಡುಕೆಂಡಗಳನ್ನು ಉಡಿಯಲ್ಲಿ ಕಟ್ಟಿಕೊಂಡಿರುತ್ತಿದ್ದಂತಹ ಟೀಕೆ ಟಿಪ್ಪಣಿಗಳ ವಿಶಿಷ್ಟ ಸೂಜಿಗಲ್ಲಿನ ಶೈಲಿ ಆದರ್ಶ ಪತ್ರಕರ್ತನೊಬ್ಬನ ದಾರಿ ದೀವಿಗೆ.

ಪ್ರಣಯ್ ರಾಯ್ ಪ್ರಕಾರ ದುವಾ ತಮ್ಮ ಕಾಲದ ಏಕೈಕ ಮಹಾನ್ ಟಿವಿ ಪತ್ರಕರ್ತರಾಗಿದ್ದರು. ತಾವು ಸದಾ ಮೆಚ್ಚಿ ಗೌರವಿಸಿದ ಈ ಸೋಜಿಗದ ಪ್ರತಿಭೆಯಿಂದ ಸಾಕಷ್ಟು ಕಲಿತದ್ದಾಗಿ ಹೇಳಿದ್ದಾರೆ.
ಇಂದಿರಾ ಗಾಂಧೀ ಹೇರಿದ್ದ ತುರ್ತುಪರಿಸ್ಥಿತಿಯಂತಹುದೇ ಗಂಭೀರ ಕಳವಳಕಾರಿ ದುಸ್ಥಿತಿ ಈಗ ದೇಶವನ್ನು ಅವರಿಸಿದೆ. ಅಂದು ಬಸ್ಸುಗಳು ರೈಲುಗಾಡಿಗಳಲ್ಲಿ ಬಂಗಾರದ ದಿನಗಳು ಬರಲಿವೆ ಎಂಬ ಘೋಷಣೆಗಳನ್ನು ಬರೆಸಲಾಗಿತ್ತು. ಇಂದು ’ಅಚ್ಛೇ ದಿನ’ಗಳ ಆಮಿಷವನ್ನು ತೂಗು ಬಿಡಲಾಗಿದೆ. ಇಂದಿರಾ ಸುತ್ತಮುತ್ತಲ ಪಾಪಾಸುಕಳ್ಳಿ ಹಿಡಿಯಷ್ಟು ವ್ಯಕ್ತಿಗಳಿಗೆ ಸೀಮಿತವಾಗಿತ್ತು. ಆದರೆ ಇಂದು ಆಳುತ್ತಿರುವವರ ಹಿಂದೆ ದೇಶವ್ಯಾಪಿ ಬೃಹತ್ ಸಂಘಟನೆಯೇ ಇದೆ. ಅದು ಪ್ರತಿಪಾದಿಸುವ ಭೇದಭಾವದ ಸಿದ್ಧಾಂತವೇ ಆವರಿಸಿದೆ ಎಂಬುದು ದುವಾ ಭಾವನೆಯಾಗಿತ್ತು.

ಆಳುವವರ ಬಾಲ ಬಡಿಯುವ ಭಟ್ಟಂಗಿ ಸುದ್ದಿಗಾರಿಕೆಯನ್ನು ಅವರು ದರಬಾರಿ ಮತ್ತು ಸರಕಾರಿ ಎಂದು ಹೆಸರಿಟ್ಟು ಹಂಗಿಸುತ್ತಿದ್ದರು. ಭಾರತ ರಾಜಕಾರಣದ ಅತಿರಥ ಮಹಾರಥರನ್ನು ಸಂದರ್ಶಿಸಿದ್ದ ಅವರು ಭಟ್ಟಂಗಿ ಪ್ರಶ್ನೆಗಳನ್ನು ಎಂದೂ ಕೇಳಿದವರಲ್ಲ. ದೂರದರ್ಶನಕ್ಕಾಗಿ ಅವರು ನಡೆಸಿಕೊಟ್ಟ ಕೆದಕುವ ಶೋಧ ಎಂಬ ಅಜಮಾಸು ಅರ್ಥದ ’ಪರಖ್’ ಎಂಬ ಶೀರ್ಷಿಕೆಯ ಕಾರ್ಯಕ್ರಮ ಇಂದಿಗೂ ಅನುಕರಣೀಯ.

ಅಧಿಕಾರವನ್ನು ಸದಾ ಪ್ರಶ್ನಿಸಿದ ಪತ್ರಿಕೆಗಳಲ್ಲಿ ಒಂದಾದ ’ಜನಸತ್ತಾ’ದ ಮಾಜಿ ಸಂಪಾದಕ ಓಮ್ ಥನ್ವಿ ಅವರ ಪ್ರಕಾರ ದುವಾ ತಮ್ಮ ಟಿವಿ ಸುದ್ದಿ ಪ್ರಸ್ತುತಿಗಳ ಬರಹರೂಪವನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳುತ್ತಿರಲಿಲ್ಲ. ಆಂಕರ್‌ಗಳು ಅವಲಂಬಿಸುವ ಟೆಲಿಪ್ರಾಂಪ್ಟರಿನ ಹಂಗೂ ಅವರಿಗೆ ಇರಲಿಲ್ಲ. ಕ್ಯಾಮೆರಾ ಚಾಲೂ ಆಯಿತೆಂದರೆ ಅವರ ಆಲೋಚನೆಗಳು ಅಭಿಜಾತವಾಗಿ ಹರಿಯುತ್ತಿದ್ದವು. ಹರಿತ ವ್ಯಂಗ್ಯ ವಿಡಂಬನೆ ಮತ್ತು ಸೂಕ್ಷ್ಮ ಒಳನೋಟಗಳ ಲೀಲಾಜಾಲ ವಿಶ್ಲೇಷಣೆ ಅವರದಾಗಿತ್ತು. ತಪ್ಪು, ತಡವರಿಕೆ ರೀಟೇಕ್‌ಗಳ ಗೊಡವೆಯೇ ಅವರಿಗಿರಲಿಲ್ಲ. ಟೆಲಿವಿಷನ್ ಸುದ್ದಿ ತಂತ್ರಜ್ಞಾನ ಇನ್ನೂ ನಡೆಯಲು ಕಲಿಯುತ್ತಿದ್ದ ದಿನಗಳಲ್ಲಿ ಮಾಧ್ಯಮದ ಮೇಲೆ ಬಿಗಿ ಹಿಡಿತ ಸಾಧಿಸಿದ್ದರು ದುವಾ.

ಭೋಜನಪ್ರಿಯ ದುವಾ ಗಂಭೀರ ಸುದ್ದಿ ವಿಶ್ಲೇಷಣೆಯ ಜೊತೆಗೆ ’ಜಾಯ್ಕಾ ಇಂಡಿಯಾ ಕಾ’ ಎಂಬ ಅತ್ಯಂತ ಜನಪ್ರಿಯ ತಿಂಡಿ ತಿನಿಸು ಭೋಜನದ ಕಾರ್ಯಕ್ರಮವನ್ನೂ ದೀರ್ಘಕಾಲ ನಡೆಸಿಕೊಟ್ಟರು. ಕರ್ನಾಟಕವೂ ಸೇರಿದಂತೆ ದೇಶದ ಮೂಲೆಮೂಲೆಗಳ ಅಪರೂಪದ ರುಚಿಕರ ವ್ಯಂಜನಗಳು ಮತ್ತು ಹೊಟೆಲುಗಳನ್ನು ಪರಿಚಯಿಸಿದರು. ಮೈಸೂರಿನ ಗುರು ಸ್ವೀಟ್ಸ್‌ನಲ್ಲಿ ಮೈಸೂರು ಪಾಕ್ ಮೆದ್ದು ಹೊರಬಿದ್ದು ಅರಮನೆ ನಗರಿಯ ಸ್ವಚ್ಛತೆ ಮತ್ತು ಅಲ್ಲಿನ ಪೌರರ ನೈರ್ಮಲ್ಯಪ್ರಜ್ಞೆಯನ್ನು ಮೆಚ್ಚಿದ್ದು ಈ ಪತ್ರಕರ್ತನಿಗೆ ಇನ್ನೂ ನೆನಪಿದೆ. ವಿದೇಶಗಳಿಗೂ ಪಯಣಿಸಿದ ಅವರ ಈ ಕಾರ್ಯಕ್ರಮದ ಹೆಸರು ವಿಶೇಷವಾಗಿ ಉತ್ತರಭಾರತದ ಭೋಜನಪ್ರಿಯರ ನಾಲಗೆಗಳ ಮೇಲೆ ನಲಿಯಿತು.

ಟೆಲಿವಿಷನ್ ಪತ್ರಿಕೋದ್ಯಮದ ನಂತರ ಭಾರೀ ಸೆಟ್ಟುಗಳ ಸ್ಟುಡಿಯೋಗಳ ಅಂಧಾದುಂದಿನ ಹಂಗಿಲ್ಲದ ಸಾಮಾಜಿಕ ಅಂತರ್ಜಾಲ ತಾಣಗಳ ನೇರ ಸರಳ ಗುಣಗಳು ದುವಾ ಅವರನ್ನು ಸೆಳೆದಿದ್ದವು.

ಸಿದ್ಧಾರ್ಥ ವರದರಾಜನ್ ಸಂಗಾತಿಗಳು ನಡೆಸುವ ’ದಿ ವೈರ್’ ಹೆಸರಿನ ಡಿಜಿಟಲ್ ಸುದ್ದಿ ವೇದಿಕೆಗೆ ನಡೆಸಿಕೊಟ್ಟ ಸುದ್ದಿ ವಿಶ್ಲೇಷಣೆಗಳ ಪ್ರದರ್ಶನಗಳಿಗೆ ಚಿಕ್ಕಾಸನ್ನೂ ಪಡೆಯಲಿಲ್ಲ ಅವರು. ತಾವು ದುಡಿದ ಸಂಸ್ಥೆಗಳಿಗೆ ಘನತೆ ತಂದುಕೊಟ್ಟವರು. ಮೂರೂವರೆ ದಶಕಗಳ ಕಾಲ ಟೀವಿ ಪತ್ರಿಕೋದ್ಯಮದ ಬೆಳಕಿನ ಸ್ತಂಭವಾಗಿದ್ದವರು.

ಅಪ್ರತಿಮ ಅಭಿಜಾತ ಸಮಾಜಮುಖಿ ಸುದ್ದಿ ಸಂವಹನಕಾರ ಕಟ್ಟಕಡೆಯ ಸುದ್ದಿ ಪ್ರಸ್ತುತಿ ಮುಗಿಸಿ ಮರಳಿ ಬಾರದಂತೆ ಮರೆಯಾಗಿದ್ದಾನೆ. ಹೀಗೆ ನಿರ್ಗಮಿಸುವ ಕಾಲ ಇದಾಗಿರಲಿಲ್ಲ. ಆದರೆ ಕಾಲನನ್ನು ಗೆದ್ದವರು ಯಾರಿದ್ದಾರೆ?


ಇದನ್ನೂ ಓದಿ: ವಿನೋದ್ ದುವಾ ವಿರುದ್ಧ ಎಫ್‌ಐಆರ್ ರದ್ದು; ದೇಶದ್ರೋಹ ಕಾನೂನಿನ ಮೂಲಭೂತ ನಿಯಮಗಳನ್ನು ನೆನಪಿಸಿದ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...