Homeಕರ್ನಾಟಕರುದ್ರಪ್ಪ ಲಮಾಣಿ: ಲಂಬಾಣಿ ತಾಂಡಾದಿಂದ ವಿಧಾನಸಭಾ ಉಪಸಭಾಧ್ಯಕ್ಷ ಗಾದಿಯವರೆಗೆ!

ರುದ್ರಪ್ಪ ಲಮಾಣಿ: ಲಂಬಾಣಿ ತಾಂಡಾದಿಂದ ವಿಧಾನಸಭಾ ಉಪಸಭಾಧ್ಯಕ್ಷ ಗಾದಿಯವರೆಗೆ!

- Advertisement -
- Advertisement -

ರಾಜಕಾರಣವೇ ಹಾಗೆ! ಎಲ್ಲ ತರ್ಕ-ಲೆಕ್ಕಾಚಾರ ತಲೆಕೆಳಗಾಗಿ ಯಾರಿಗೋ ಅಧಿಕಾರ-ಸ್ಥಾನಮಾನದ ಭಾಗ್ಯ ಬಂದುಬಿಡುತ್ತದೆ; ಅದರ ಅಡ್ಡ ಪರಿಣಾಮದಿಂದ ಇನ್ಯಾರೋ ರಾಜಕಾರಣದ ಮುಖ್ಯಭೂಮಿಕೆಯಿಂದ ನೇಪಥ್ಯಕ್ಕೆ ತಳ್ಳಲ್ಪಡುತ್ತಾರೆ; ಯಾರೋ ತನಗೆ ಬೇಡವೆಂದು ತಿರಸ್ಕರಿಸಿದ್ದ ಹುದ್ದೆ ಮತ್ಯಾರದೋ ದೆಸೆದ ಒಲಿದುಬಿಡುತ್ತದೆ. ಇಂಥದೆ ಒಂದು “ಪೊಲಿಟಿಕಲ್ ಮಿಸ್ಟರಿ” ಕಳೆದ ವಾರ ರಾಜ್ಯ ರಾಜಕೀಯದ ಪಡಸಾಲೆಯಲ್ಲಾಗಿ ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರುಜಿಲ್ಲೆಯ ಪರಮಾಪ್ತ ಸಹಚರ-ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ ತನಗೆ ಬೇಡವೇಬೇಡವೆಂದು ನಿರಾಕರಿಸಿದ್ದ (ಒಮ್ಮೆ ಒಪ್ಪಿಕೊಂಡಿರುವುದಾಗಿ ಹೇಳಿರುವ ವರದಿಯೂ ಆಗಿತ್ತು!) ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಪೀಠ ಹಾವೇರಿಯ ಎಮ್ಮೆಲ್ಲೆ ರುದ್ರಪ್ಪ ಲಮಾಣಿ ಪಾಲಿಗೆ ಬಯಸದೆ ಬಂದ ಭಾಗ್ಯವಾಗಿದೆ!

ಆಳುವ ಕಾಂಗ್ರೆಸ್ ಪಾರ್ಟಿಯ ಏಕೈಕ ಬಂಜಾರ ಸಮುದಾಯದ ಶಾಸಕ ರುದ್ರಪ್ಪ ಲಮಾಣಿ ಮಂತ್ರಿಯಾಗುವ ಆಸೆಯಲ್ಲಿದ್ದರು; ಲಂಬಾಣಿ ಕೋಟಾದಲ್ಲಿ ಸಚಿವಗಿರಿ ಖಂಡಿತವೆಂದು ಕನಸು ಕಾಣುತ್ತಿದ್ದ ರುದ್ರಪ್ಪ ಲಮಾಣಿಯವರಂತೆಯೇ, ಉಪ್ಪಾರ ಸಮುದಾಯದ ಏಕೈಕ ಪುಟ್ಟರಂಗ ಶೆಟ್ಟರೂ ತಮ್ಮನ್ನು ಸಿದ್ದು ಕೈಬಿಡಲಾರರೆಂದು ನಂಬಿಕೊಂಡಿದ್ದರು. ಈ ಇಬ್ಬರಿಗೂ ಮಂತ್ರಿ ಭಾಗ್ಯ ಪಕ್ಕಾ ಎಂದೆ ರಾಜಕೀಯ ವಿಶ್ಲೇಷಕರೂ ಲೆಕ್ಕಹಾಕಿ ತಾಳೆ ನೋಡಿದ್ದರು. ಆದರೆ ಸಿಎಂ ಸಿದ್ದು ಮತ್ತು ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಸ್ಥಾನ ಹಂಚಿಕೆಯ ಜಾತಿ ಪ್ರಾತಿನಿಧ್ಯ ಸರಿದೂಗಿಸುವ ಕಸರತ್ತಿನ ಕೊನೆ ಗಳಿಗೆಯಲ್ಲಿ ಪುಟ್ಟರಂಗಶೆಟ್ಟಿ ಮತ್ತು ರುದ್ರಪ್ಪ ಲಮಾಣಿಗೆ ಮಂತ್ರಿ ಕುರ್ಚಿ ಸಿಗಲಿಲ್ಲ; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತಾರಲ್ಲ, ಹಾಗಾಯಿತು ಈ ಇಬ್ಬರು ಸಚಿವಾಕಾಂಕ್ಷಿಗಳ ಪಾಡು. ಲಾಬಿ ಮಾಡುವ ತಾಕತ್ತಿಲ್ಲದ ಲಮಾಣಿ ತಗಾದೆ ಎತ್ತದೆ ತಣ್ಣಗುಳಿದರು; ಆದರೆ ಶೆಟ್ಟರು ಸೆಟಗೊಂಡರು.

ಪುಟ್ಟರಂಗ ಶೆಟ್ಟಿ

ಶೆಟ್ಟರನ್ನು ಕರೆಸಿದ ಸಿಎಂ ಸಿದ್ದು ವಿಧಾನಸಭೆಯ ಉಪ ಸಭಾಧ್ಯಕ್ಷ ಪಟ್ಟ ಕಟ್ಟುವ ಆಫರ್ ಇಟ್ಟರು. “ಬೇಡ, ಮಾಡುವುದಿದ್ದರೆ ಮಂತ್ರಿ ಮಾಡಿರಿ; ಇಲ್ಲದಿದ್ದರೆ ಏನು ಬೇಡ” ಎಂದು ಹಠ ಹಿಡಿದ ಶೆಟ್ಟರಿಗೆ ಸಿದ್ದು ಒಂದು ಹಂತದಲ್ಲಿ ಸಮಾಧಾನ ಮಾಡುವುದರಲ್ಲಿ ಯಶಸ್ವಿಯೂ ಆಗಿದ್ದರೆನ್ನಲಾಗಿದೆ. ಆ ನಂತರ ಏನಾಯಿತೋ ಏನೋ; ಶೆಟ್ಟರು ಉಪ ಸಭಾಧ್ಯಕ್ಷ ಗಾದಿ ಒಲ್ಲೆ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಅನಿವಾರ್ಯವಾಗಿ ಕಾಂಗ್ರೆಸ್ ಹಿರಿಯರು ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ “ಅರ್ಹ”ನ ಹುಡುಕಾಟಕ್ಕೆ ಇಳಿಯಬೇಕಾಗಿ ಬಂತು. ಲಾಭ-ನಷ್ಟದ ಚಿಂತನಮಂಥನಗಳು ನಡೆದವು; ಸಿದ್ದು ಸರಕಾರದಲ್ಲಿ ಮಂತ್ರಿಗಿರಿ ಸಿಗದ ಬಂಜಾರ ಸಮುದಾಯದ ಅಸಮಾಧಾನ ಬಗೆಹರಿಸಲು ಉಪ ಸಭಾಧ್ಯಕ್ಷ ಸ್ಥಾನವನ್ನು ಬಳಸಿಕೊಳ್ಳುವ ಯೋಜನೆ ರೂಪಿಸಲಾಯಿತು.

ಪರಿಶಿಷ್ಟ ವರ್ಗದಲ್ಲಿ ಪ್ರಬಲವಾಗಿರುವ “ಸ್ಪೃಶ್ಯ” ಲಂಬಾಣಿಗರು ಕಳೆದ ಬಾರಿಯ ಚುನಾವಣೆ ಹೊತ್ತಲ್ಲಿ ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದರು. ಬಿಜೆಪಿ ಸರಕಾರ ಚುನಾವಣೆ ಹೊಸ್ತಿಲಲ್ಲಿ ಒಳ ಮೀಸಲಾತಿಯ ಜಾರಿಗೆ ಹೊರಟಿದ್ದು ಲಂಬಾಣಿಗರ ಒಂದು ಗುಂಪನ್ನು ಕೆರಳಿಸಿತ್ತು. ಬಂಜಾರ ಸಮುದಾಯ “ಬಿಜೆಪಿ ಹಠವೋ; ತಾಂಡಾ ಬಚಾವೋ” ಎಂಬ ಅಭಿಯಾನದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಈ ಚುನಾವಣೆಯಲ್ಲಿ ಬೆಂಬಲಿಸಿತ್ತು. ವಿಧಾನಪರಿಷತ್ತಿನಲ್ಲಿ ಸರಕಾರಿ ಮುಖ್ಯ ಸಚೇತಕರಾಗಿರುವ ಪ್ರಕಾಶ್ ರಾಠೋಡ್ ಸಚಿವರಾಗುವ ಬಿರುಸಿನ ಪ್ರಯತ್ನಮಾಡಿ ವಿಫಲರಾಗಿದ್ದರು. ತಮ್ಮ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಂತರೂ ಸರಕಾರ ರಚನೆ ಸಂದರ್ಭದಲ್ಲಿ ಅವಕಾಶ ಕೊಡದೆ ಕಡೆಗಣಿಸಲಾಯಿತೆಂಬ ಬೇಸರ-ಬೇಗುದಿ ಲಂಬಾಣಿಗಳಲ್ಲಿತ್ತು. ಡೆಪ್ಯುಟಿ ಸ್ಪೀಕರ್ ಪೀಠದಲ್ಲಿ ಲಂಬಾಣಿಯೊಬ್ಬರನ್ನು ಪ್ರತಿಷ್ಠಾಪಿಸಿ ಆ ಸಮುದಾಯವನ್ನು ತೃಪ್ತಿಪಡಿಸಲು ಕಾಂಗ್ರೆಸ್‌ನ ಚಿಂತಕರ ಚಾವಡಿ ತೀರ್ಮಾನಿಸಿತು.

ಈ ತುರ್ತು ಒತ್ತಡದ ತಡಕಾಟದಲ್ಲಿ ಕಾಂಗ್ರೆಸ್ ’ಯಜಮಾನ’ರ ಕಣ್ಣಿಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಹಾವೇರಿಯಿಂದ ಚುನಾಯಿತರಾಗಿರುವ ರುದ್ರಪ್ಪ ಮಾನಪ್ಪ ಲಮಾಣಿ ಬೀಳುತ್ತಾರೆ. ಕಾಂಗ್ರೆಸ್ಸಿನಲ್ಲಿ ರುದ್ರಪ್ಪ ಲಮಾಣಿ ಬಿಟ್ಟರೆ ಇನ್ಯಾವ ಬಂಜಾರ ವರ್ಗದ ಶಾಸಕನಿಲ್ಲ. ಹೀಗಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನ ರುದ್ರಪ್ಪ ಲಮಾಣಿಯವರಿಗೆ ಅನಿರೀಕ್ಷಿತವಾಗಿ ಅರಸಿಬಂದಂತಾಗಿತ್ತು. ಮುಂದೆಂದಾದರೂ ಸಚಿವ ಸಂಪುಟ ಪುನರ್ವಿಂಗಡನೆ ಆದಾಗ ಅದೃಷ್ಟ ಖುಲಾಯಿಸಬಹುದೆಂದುಕೊಂಡಿದ್ದ ರುದ್ರಪ್ಪ ಲಮಾಣಿ ಕನಸು-ಮನಸ್ಸಿನಲ್ಲೂ ಉಪ-ಸಭಾಧ್ಯಕ್ಷನಾಗುವೆನೆಂದು ಎಣಿಸಿರಲಿಲ್ಲ. ಅನಾಯಾಸವಾಗಿ ಒಲಿದು ಬಂದಿರುವ ಸದನದ “ಸಣ್ಣ” ಪ್ರತಿಷ್ಠಿತ ಸ್ಥಾನವನ್ನು ಪುಟ್ಟರಂಗಶೆಟ್ಟರಂತೆ ನಿರಾಕರಿಸದೆ ಧನ್ಯತಾಭಾವದಿಂದ ಅಲಂಕರಿಸಿರುವ ರುದ್ರಪ್ಪ ಲಮಾಣಿ ಸ್ವಭಾವತಃ ಸೌಮ್ಯ ಗುಣ-ಲಕ್ಷಣದ ರಾಜಕಾರಣಿ; ಕಳೆದ ನಾಲ್ಕು ದಶಕದಿಂದ ಅವಿಭಜಿತ ಧಾರವಾಡ ಜಿಲ್ಲೆ ಮತ್ತು ಹಾವೇರಿ ಜಿಲ್ಲೆಯ ರಾಜಕಾರಣದಲ್ಲಿ “ಪಾಲಿಗೆ ಬಂದಿದ್ದೆ ಪಂಚಾಮೃತ”ವೆಂದು ಸ್ವೀಕರಿಸುತ್ತ ಬಂದವರು.

ಇದನ್ನೂ ಓದಿ: ನಮ್ಮ ಸಚಿವರಿವರು; “ನಿರಾಶ್ರಿತ” ಸಂತೋಷ್ ಲಾಡ್‌ಗೆ “ಪುನರ್ವಸತಿ” ಕಲ್ಪಿಸಿದ ಕಲಘಟಗಿಯ ದೆಸೆ ಬದಲಾದೀತೇ?!

ರಾಣೆಬೆನ್ನೂರು ತಾಲೂಕಿನ ಖಂಡೇರಾಯನಹಳ್ಳಿಯ ಪುಟ್ಟ ಲಂಬಾಣಿ ತಾಂಡಾದ ನಿರ್ಗತಿಕ ಜೋಪಡಿಯಲ್ಲಿ 1.6.1959ರಂದು ಜನಿಸಿದ ರುದ್ರಪ್ಪ ಲಮಾಣಿ ಅಧಿಕಾರ ರಾಜಕಾರಣದಲ್ಲಿ ಅದೃಷ್ಟಶಾಲಿ ಎಂದು ಹಾವೇರಿ ಜಿಲ್ಲೆಯ ಅವರ ವಾರಿಗೆಯ ರಾಜಕಾರಣಿಗಳು ಮಾತಾಡಿಕೊಳ್ಳುವುದು ಮಾಮೂಲು. ಬಿ.ಎ. ಪದವಿ ಮುಗಿಸಿಕೊಂಡು ಹೊಟ್ಟೆಪಾಡಿನ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ರುದ್ರಪ್ಪ ತಾಂಡಾ ರಾಜಕಾರಣ ಶುರುಹಚ್ಚಿಕೊಂಡಿದ್ದು 1980ರ ಸುಮಾರಿಗೆ. ತಳ ಸಮುದಾಯದ ಬಂಜಾರ ಕುಲದ ವಿದ್ಯಾವಂತ ತರುಣ ರುದ್ರಪ್ಪ ಲಮಾಣಿಯವರಿಗೆ 1985ರಲ್ಲಿ ಕಾಂಗ್ರೆಸ್ ಪಾರ್ಟಿಯಿಂದ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಗುತ್ತದೆ. 1985-89ರ ಅವಧಿಯಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ ಜಿಲ್ಲಾ ಪರಿಷತ್ ಸದಸ್ಯರಾಗಿದ್ದ ರುದ್ರಪ್ಪ 1990ರ ದಶಕದಲ್ಲಿ ಕಾಂಗ್ರೆಸ್‌ನ ಮುಂಚೂಣಿ ಲಂಬಾಣಿ ಮುಂದಾಳಾಗಿ ಗುರುತಿಸಲ್ಪಟ್ಟಿದ್ದರು.

1994ರ ಅಸೆಂಬ್ಲಿ ಇಲೆಕ್ಷನ್ ವೇಳೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದ ಬ್ಯಾಡಗಿಯಿಂದ ಕಾಂಗ್ರೆಸ್ ಹುರಿಯಾಳಾಗಿ ಸ್ಪರ್ಧೆಗಿಳಿದಿದ್ದ ರುದ್ರಪ್ಪ ಲಮಾಣಿ ಪ್ರಥಮ ಪ್ರಯತ್ನದಲ್ಲೆ ಎಡವಿದರು. ಆದರೆ 1999ರಲ್ಲಿ ಶಾಸಕರಾಗಿ ಆಯ್ಕೆಯಾದರು. ಆ ಎಮ್ಮೆಲ್ಲೆ ಅವಧಿಯಲ್ಲಿ ಬ್ಯಾಡಗಿ ಮತ್ತು ರಾಣೆಬೆನ್ನೂರಿನ ಕೆಲವು ಗ್ರಾಮಗಳಿಗೆ ತುಂಗಭದ್ರೆಯ ನೀರು ಹರಿಸಿ ಕುಡಿಯುವ ನೀರಿನ ಹಾಹಾಕಾರ ತಣಿಸಲು ಪ್ರಯತ್ನಿಸಿದ್ದರು; ಗುಡ್ಡದಮಲ್ಲಾಪುರ ಭಾಗದ 13 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದರೆಂಬ ಮೆಚ್ಚಿಕೆಯ ಮಾತುಗಳು ಈಗಲೂ ಕೇಳಿಬರುತ್ತವೆ. ಆದರೆ ಐದು ವರ್ಷದ ಬಳಿಕ ರುದ್ರಪ್ಪರಿಗೆ ಮರುಆಯ್ಕೆ ಸಾಧ್ಯವಾಗಲಿಲ್ಲ. ದಲಿತ ಮೀಸಲು ಕ್ಷೇತ್ರವಾದರೂ ಮೇಲ್ವರ್ಗದ ಲಿಂಗಾಯತರ ಹಿಡಿತಕ್ಕೆ ಒಳಪಟ್ಟಿದ್ದ ಬ್ಯಾಡಗಿಯಲ್ಲಿ 2004ರ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪರ ಜಾತಿ ರಾಜಕೀಯದ ಪ್ರಭಾವ ಜೋರಾಗಿತ್ತು. ಹೀಗಾಗಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ಸೋಲಬೇಕಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

2008ರ ಚುನಾವಣೆಯ ಪೂರ್ವದಲ್ಲಾದ ಅಸೆಂಬ್ಲಿ ಕ್ಷೇತ್ರಗಳ ಪುನರ್‌ವಿಂಗಡನೆ ಪ್ರಕ್ರಿಯೆಯಲ್ಲಿ ಬ್ಯಾಡಗಿ ಸಾಮಾನ್ಯ ಕ್ಷೇತ್ರವಾಯಿತು; ಪಕ್ಕದ ಹಾವೇರಿ ಪರಿಶಿಷ್ಟ ಜಾತಿಗೆ ಮೀಸಲಾಯಿತು. ರುದ್ರಪ್ಪ ಲಮಾಣಿ ಮತ್ತವರ ಸಾಂಪ್ರದಾಯಿಕ ಎದುರಾಳಿ ಬಿಜೆಪಿಯ ನೆಹರು ಓಲೇಕಾರ್ ಹಾವೇರಿಗೆ ವಲಸೆಬಂದರು. ಬ್ಯಾಡಗಿಯಂತೆ ಹಾವೇರಿಯು ಲಿಂಗಾಯತ ಏಕಸ್ವಾಮ್ಯದ ಅಖಾಡ. ಯಡಿಯೂರಪ್ಪ ಪ್ರಣೀತ ಹಿಂದುತ್ವದ ಗಿಲೀಟಿನ ಲಿಂಗಾಯತ “ಪ್ರಜ್ಞೆ” ಆಗ ಪರಾಕಾಷ್ಟೆ ತಲುಪಿತ್ತು. ರುದ್ರಪ್ಪ ಲಮಾಣಿ ಬಿಜೆಪಿಯ ಓಲೇಕಾರ್‌ಗೆ ದೊಡ್ಡ ಮತದಂತರದಿಂದ ಮಣಿಯಬೇಕಾಯಿತು. ಯಡಿಯೂರಪ್ಪ ಹಾವೇರಿಯನ್ನು ತನ್ನ ಶಕ್ತಿ ಕೇಂದ್ರವೆಂದು ನಂಬಿದ್ದ ಸ್ಥಳ. 2013ರ ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಬಿಜೆಪಿಗೆ ಸೆಡ್ಡು ಹೊಡೆದು ಕೆಜೆಪಿಗೆ ಜನ್ಮ ನೀಡಿದ್ದೇ ಈ ಹಾವೇರಿಯಲ್ಲಿ! ಆದರೆ ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ 30,208 ಮತಗಳ ಭರ್ಜರಿ ಜಯಗಳಿಸಿದರು.

ರುದ್ರಪ್ಪ ಲಮಾಣಿ ಅವರಿಗೆ ಸಿದ್ದು ಸರಕಾರ-1ರಲ್ಲಿ ಸ್ವತಂತ್ರ ನಿರ್ವಹಣೆಯ ಜವಳಿ, ಮುಜರಾಯಿ ಇಲಾಖೆಗಳ ಸಹಾಯಕ ಮಂತ್ರಿಯಾಗುವ ಯೋಗವೂ ಕೂಡಿಬಂತು. ಅದರೆ ಆಂಟಿ ಇನ್‌ಕಂಬೆನ್ಸ್‌ನಿಂದ ಮಂತ್ರಿ ಲಮಾಣಿ 2018ರಲ್ಲಿ ಯಡಿಯೂರಪ್ಪರ ಲಿಂಗಾಯತ ಪ್ರತಿಷ್ಠೆಯ ತಂತ್ರಗಾರಿಕೆ ಎದುರಿಸಲಾಗದೆ ಹಿಮ್ಮೆಟ್ಟಬೇಕಾಯಿತು. ಕಳೆದ ಮೇ ತಿಂಗಳಿನಲ್ಲಾದ ಚುನಾವಣೆಯಲ್ಲಿ ರುದ್ರಪ್ಪ ಲಮಾಣಿ 11,915 ಮತದಿಂದ ಮತ್ತೆ ಶಾಸಕನಾದರು; ಮಂತ್ರಿಯಾಗುವ ಅಭಿಲಾಷೆಯಲ್ಲಿದ್ದ ರುದ್ರಪ್ಪರಿಗೆ ಅದಕ್ಕಿಂತಲು ತಾತ್ವಿಕವಾಗಿ ಒಂದು ಗುಲಗುಂಜಿ ಹೆಚ್ಚೇ ವರ್ಚಸ್ಸು-ಪ್ರತಿಷ್ಠೆಯ ವಿಧಾನಸಭಾ ಉಪಾಧ್ಯಕ್ಷ ಹುದ್ದೆ ಲಭಿಸಿದೆ; ಮಂತ್ರಿಗಳಂತೆ ನೇರಾನೇರ ರಾಜಕಾರಣ ಮಾಡಲಾಗದಿದ್ದರೂ ಅಸಿಸ್ಟೆಂಟ್ ಹೆಡ್‌ಮಾಸ್ತರಿಕೆ ಗತ್ತು-ಗಾಂಭೀರ್ಯದಿಂದ ಎಲ್ಲ ಸಚಿವರ ಸಂಪರ್ಕ ಸಾಧಿಸಿ ಕ್ಷೇತ್ರದ ಪ್ರಗತಿ-ಅಭಿವೃದ್ಧಿಯ ಕೆಲಸ-ಕಾಮಗಾರಿ ಮಾಡಿಸುವ ಶಕ್ತಿ-ಸಾಮರ್ಥ್ಯ ಪ್ರಾಪ್ತವಾಗಿದೆ.

ತೀರಾ ಹಿಂದುಳಿದಿರುವ ಹಾವೇರಿ ತಾಲೂಕು ಮತ್ತು ಹಾವೇರಿ ಜಿಲ್ಲೆಗಳರೆಡಕ್ಕೂ ಎಲ್ಲ ಸಚಿವರಿಂದಾಗಬೇಕಾದ ಕೆಲಸಗಳ ದೊಡ್ಡ ಪಟ್ಟಿಯೇ ಇದೆ. ಸುದೀರ್ಘ 25 ವರ್ಷ ಹೋರಾಡಿ ಹಾವೇರಿ ಮತ್ತದರ ಸುತ್ತಲಿನ ತಾಲೂಕಿನ ಮಂದಿ ಪ್ರತ್ಯೇಕ ಜಿಲ್ಲೆ ಪಡೆದುಕೊಂಡಿದ್ದರು; ದುರಂತವೆಂದರೆ ಜಿಲ್ಲಾ ರಚನೆಯಾಗಿ 25 ವರ್ಷ ಕಳೆದರೂ ಅಭಿವೃದ್ಧಿ-ಬದಲಾವಣೆ ಎಂಬುದು ಕನಸಾಗಿಯೇ ಉಳಿದಿದೆ; ಜಿಲ್ಲೆಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಂಥ ಪರಮೋಚ್ಛ ಸ್ಥಾನದಲ್ಲಿದ್ದರೂ ಜಿಲ್ಲೆಯ ದೆಸೆ ಬದಲಾಗಲಿಲ್ಲ! ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಪ್ರತಿನಿಧಿಸುವ ಜಿಲ್ಲಾ ಕೇಂದ್ರ ಒಳಗೊಂಡಿರುವ ಹಾವೇರಿ ಅಸೆಂಬ್ಲಿ ಕ್ಷೇತ್ರವೆ ದೊಡ್ಡ ಕುಗ್ರಾಮದಂತಿದೆ. ಹಾವೇರಿ ನಗರದಲ್ಲಿ ನಾಲ್ಕು ಹೆಜ್ಜೆ ಹಾಕಿದರೆ ಹಿಂದುಳಿದಿರುವಿಕೆಯ ವ್ಯಾಖ್ಯಾನ ಮನದಟ್ಟಾಗುತ್ತದೆ. ರಸ್ತೆ, ಸಾರಿಗೆ, ಆರೋಗ್ಯ, ವಸತಿ, ಶಿಕ್ಷಣ, ಕುಡಿಯುವ ನೀರನಂಥ ಕನಿಷ್ಠ ಮೂಲಭೂತ ಸೌಕರ್ಯಕ್ಕಾಗಿ ಜನ ಗೋಳಾಡುತ್ತಿರುವುದು ಹೇಳತೀರದು.

ಜಿಲ್ಲಾ ಕೇಂದ್ರವೇ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಗಬ್ಬುನಾರುತ್ತಿದೆ; ಶಾಶ್ವತ ಕುಡಿಯುವ ನೀರು ಮತ್ತು ಒಳಚರಂಡಿಗಾಗಿ ಕೋಟಿಕೋಟಿ ಖರ್ಚು ಮಾಡುತ್ತ ಹಲವು ವರ್ಷ ಕಳೆದರೂ ಯೋಜನೆ ಸಾಕಾರಗೊಳ್ಳುತ್ತಿಲ್ಲ; ಏಕೆಂಬುದು ಬಿಡಿಸದ ಒಗಟಾಗಿದೆ ಎಂದು ಜನರು ಹೇಳುತ್ತಾರೆ. ಬೃಹತ್ ಕಟ್ಟಡವಿದ್ದರೂ ಅಗತ್ಯ ಸೌಕರ್ಯ ಮತ್ತು ವೈದ್ಯರಿಲ್ಲದೆ ಜಿಲ್ಲಾಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ಜನರು ಅನಿವಾರ್ಯವಾಗಿ ದಾವಣಗೆರೆ ಅಥವಾ ಹುಬ್ಬಳ್ಳಿ ಆಸ್ಪತ್ರೆಗಳನ್ನು ಅರಸುತ್ತ ಹೋಗುವಂತಾಗಿದೆ. ಸರಿಯಾದ ಶೈಕ್ಷಣಿತ ಸೌಲಭ್ಯವಿಲ್ಲದ ಹಾವೇರಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡುವ ಕೈಗಾರಿಕೆಗಳಿಲ್ಲ; ಕೃಷಿ ಪ್ರಧಾನವಾದ ಹಾವೇರಿಯಲ್ಲಿ ರೈತಾಪಿ ವರ್ಗಕ್ಕೆ ಆರ್ಥಿಕ ಚೈತನ್ಯ ನೀಡುವ ಕೃಷಿ ಉನ್ನತೀಕರಣದ ಪ್ರಯತ್ನಗಳಾಗುತ್ತಿಲ್ಲ.

ಜಿಲ್ಲೆ ರಚನೆಯಾಗುತ್ತಲೇ ರೈತರಿಗೆ ಆರ್ಥಿಕ ಸಾಲ-ಸೌಲಭ್ಯ ಒದಗಿಸುವ ಜಿಲ್ಲಾ ಮಧ್ಯವರ್ತಿ(ಡಿಸಿಸಿ) ಬ್ಯಾಂಕ್ ಸ್ಥಾಪನೆ ಆಗಬೇಕಿತ್ತು. ಇತ್ತೀಚೆಗಷ್ಟೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಲಾಗಿದೆಯಾದರೂ ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿಲ್ಲ. ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ-ಉದ್ಯಮ ಆರಂಭಿಸುವ ಹಲವು ಅವಕಾಶಗಳಿದ್ದರೂ ಅಧಿಕಾರಸ್ಥರು ಪ್ರಯತ್ನ ಮಾಡುತ್ತಿಲ್ಲ; ಮೆಕ್ಕೆ ಜೋಳ ಸಂರಕ್ಷಣೆಯ ಸೈಲೋ ಘಟಕ ಕೆಲಸಕ್ಕೆ ಬಾರದಾಗಿದೆ. ಸಂಗೂರು ಸಕ್ಕರೆ ಕಾರ್ಖಾನೆಯಿಂದ ಪ್ರಯೋಜನ ಇಲ್ಲದಾಗಿದೆ. ತುಂಗಾ ಮೇಲ್ದಂಡೆ ಯೋಜನೆಯ ಹೊಲಗಳಿಗೆ ನೀರು ಹರಿಸುವ ಬಸಿ ಕಾಲುವೆಗಳು (ಮರಿ ಕಾಲುವೆ) ಆಗುತ್ತಿಲ್ಲ; ಯೋಜನೆಗಾಗಿ ರೈತರಿಂದ ಸ್ವಾಧೀನಪಡೆದುಕೊಂಡ ಭೂಮಿಗೆ ಎರಡು ದಶಕದಿಂದ ಪರಿಹಾರ ಸಿಕ್ಕಿಲ್ಲ. ನೀರೂ ಇಲ್ಲ!;ಪರಿಹಾರವೂ ಇಲ್ಲ!! ಬೇಸಿಗೆಯಲ್ಲಿ ಹಾವೇರಿ ಮತ್ತು ಗುತ್ತಲಕ್ಕೆ 10-15 ದಿನಕ್ಕೊಮ್ಮೆ ಜೀವಜಲ ಸಿಕ್ಕರೆ ಪುಣ್ಯ. ಗುತ್ತಲ ತಾಲೂಕಿಗಾಗಿ ಜನರು ಹಲವು ವರ್ಷದಿಂದ ಹೋರಾಡುತ್ತಿದ್ದಾರೆ. ಈ ದೌರ್ಭಾಗ್ಯ-ದುರಂತಕ್ಕೆಲ್ಲ ಹೊಣೆಗೇಡಿ ಸಂಸದ-ಶಾಸಕ-ಸಚಿವರ ಉದಾಸೀನವೆ ಕಾರಣವೆಂಬ ಆಕ್ರೋಶ ಜನರಲ್ಲಿ ಮಡುಗಟ್ಟಿದೆ .ಈ ಸಮಸ್ಯೆಗಳನ್ನು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂಬ ಆಗ್ರಹದ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತವೆ.

ಕ್ವಾಸಿ ನ್ಯಾಯಾಲಯವಾದ ಸದನದ “ಉಪ ನ್ಯಾಯಾಧೀಶ” ಸ್ಥಾನದ ಪ್ರತಿಷ್ಠೆ-ಗೌರವ ಅರಿತು ಹೆಜ್ಜೆಯಿಡಬೇಕಾದ ಜವಾಬ್ದಾರಿಯೂ ರುದ್ರಪ್ಪ ಲಮಾಣಿಯವರ ಮೇಲಿದೆ. ಓಟ್ ಬ್ಯಾಂಕ್ ದೃಷ್ಟಿಕೋನದ ಮತೀಯ ಸಿದ್ಧಾಂತಿಗಳು ಸದನದ ದಿಕ್ಕುತಪ್ಪಿಸದಂತೆ ಎಚ್ಚರ ವಹಿಸಬೇಕಾಗಿದೆ; ಹುಚ್ಚು ಹೆಚ್ಚುಗಾರಿಕೆಗಾಗಿ ಕಿತ್ತಾಡುವವರನ್ನು ನಿಯಂತ್ರಿಸುವ ಧಾಡಸಿತನ ರೂಢಿಸಿಕೊಳ್ಳಬೇಕಾಗಿದೆ. ಸಂಸದೀಯ ಸಂಪ್ರದಾಯ, ಪ್ರಜಾಪ್ರಭುತ್ವ ಪರಂಪರೆ ಮತ್ತು ಸಂವಿಧಾನದ ಆಶಯ ಎತ್ತಿಹಿಡಿಯುವ ಪ್ರಜ್ಞೆ ರುದ್ರಪ್ಪ ಲಮಾಣಿಯವರಲ್ಲಿ ಸದಾ ಜಾಗೃತವಾಗಿರಲೆಂಬುದು “ನ್ಯಾಯಪಥ”ದ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾಜಭವನ’ಗಳನ್ನು ‘ಲೋಕಭವನ’ಗಳೆಂದು ಮರುನಾಮಕರಣ; ಇದು ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ಮೇಲಿನ ಆಕ್ರಮಣ: ಜಾಗೃತ ಕರ್ನಾಟಕ

ದೇಶಾದಾದ್ಯಂತ ಇರುವ ರಾಜಭವನಗಳ ಹೆಸರನ್ನು ಲೋಕಭವನ ಎಂದು ಮರುನಾಮಕರಣ ಮಾಡುವುದಾಗಿ ಕೇಂದ್ರ ಗೃಹಸಚಿವಾಲಯ ತೀರ್ಮಾನಿಸಿದೆ. ಕೇಂದ್ರದ  ಈ ನೀತಿಯನ್ನು ವಿರೋಧಿಸಿರುವ ಜಾಗೃತ ಕರ್ನಾಟಕ ದೇಶದ ಎಲ್ಲಾ ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ....

ಯುಜಿಸಿ ಈಕ್ವಿಟಿ ನಿಯಮಗಳ ಮೇಲಿನ ಸುಪ್ರೀಂ ಕೋರ್ಟ್ ತಡೆಗೆ ವಿದ್ಯಾರ್ಥಿಗಳ ಪ್ರತಿಭಟನೆ, ರೋಹಿತ್ ಕಾಯ್ದೆಗೆ ಒತ್ತಾಯ

ಯುಜಿಸಿ ಇಕ್ವಿಟಿ ನಿಯಮಗಳಿಗೆ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆಯ ವಿರುದ್ಧ ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯವನ್ನು ಎದುರಿಸಲು ಶಾಸನಬದ್ಧ ರೋಹಿತ್ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ)...

ನರವಾಣೆ ಅಪ್ರಕಟಿತ ಪುಸ್ತಕ ಗದ್ದಲ | ಸತ್ಯ ಹೊರಬಂದರೆ ಮೋದಿ, ರಾಜನಾಥ್ ಸಿಂಗ್ ಮುಖವಾಡ ಬಯಲಾಗಲಿದೆ : ರಾಹುಲ್ ಗಾಂಧಿ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕುರಿತು ರಾಹುಲ್ ಗಾಂಧಿ ಸೋಮವಾರ (ಫೆ.2) ಲೋಕಸಭೆಯಲ್ಲಿ ಉಲ್ಲೇಖಿಸಿದ್ದು, ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ...

ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ಘರ್ಷಣೆ : ಮೂವರ ಬಂಧನ

ಗುಜರಾತ್‌ನ ಪಠಾಣ್ ತಾಲೂಕಿನ ಚದ್ರುಮಣ ಗ್ರಾಮದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಐವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ದ ಎಸ್‌ಸಿ/ಎಸ್‌ಟಿ...

ಲೋಕಸಭೆಯಲ್ಲಿ ಲಡಾಖ್ ಬಿಕ್ಕಟ್ಟಿನ ಬಗ್ಗೆ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆ ಉಲ್ಲೇಖಿಸಿದ ರಾಹುಲ್ ಗಾಂಧಿ: ಸಭೆಯಲ್ಲಿ ತೀವ್ರ ಗದ್ದಲ

ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಆತ್ಮಚರಿತ್ರೆಯಿಂದ ಉಲ್ಲೇಖಿಸಲು ಪ್ರಯತ್ನಿಸಿದ ನಂತರ ಗದ್ದಲ ಭುಗಿಲೆದ್ದಿತು. ರಾಹುಲ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ರಕ್ಷಣಾ ಸಚಿವ...

ಪಂಜಾಬ್ ನಿರೀಕ್ಷೆಗಳನ್ನು ಪೂರೈಸುವಲ್ಲಿ ಕೇಂದ್ರ ಬಜೆಟ್ ಮತ್ತೊಮ್ಮೆ ವಿಫಲವಾಗಿದೆ: ಸಿಎಂ ಭಗವಂತ್ ಮಾನ್

ಕೇಂದ್ರ ಬಜೆಟ್ ಮತ್ತೊಮ್ಮೆ ಪಂಜಾಬ್‌ನ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಸಚಿವರು ಭಾನುವಾರ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ರೈತರಿಗೆ ಯಾವುದೇ...

ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ, ‘ಜೈ ಸಂವಿಧಾನ’ ಎನ್ನುವುದನ್ನು ಉಲ್ಲೇಖಿಸದೆ ಹೋದರು : ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ "ಜೈ ಸಂವಿಧಾನ" ಎನ್ನುವುದನ್ನೂ ಉಲ್ಲೇಖಿಸದೆ ತೆರಳಿದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಶಾಸಕ...

ಉತ್ತರಾಖಂಡ| ಹಿಂದುತ್ವ ಗುಂಪಿನ ಕಿರುಕುಳದಿಂದ ಮುಸ್ಲಿಂ ಅಂಗಡಿ ಮಾಲೀಕನನ್ನು ರಕ್ಷಿಸಿದ ದೀಪಕ್ ಕುಮಾರ್

ಸ್ಥಳೀಯ ಮುಸ್ಲಿಂ ಅಂಗಡಿ ಮಾಲೀಕನ ವಿರುದ್ಧ ಬಜರಂಗದಳ ಸದಸ್ಯರು ನೀಡುತ್ತಿದ್ದ ಕಿರುಕುಳವನ್ನು ಜಿಮ್ ಮಾಲೀಕ ದೀಪಕ್ ಕುಮಾರ್ ಸ್ಥಳದಲ್ಲೇ ಎದುರಿಸಿದ್ದಾರೆ. ಆಕ್ರೋಶಿತರಾದ ಹಿಂದುತ್ವ ಗುಂಪಿನ ಸದಸ್ಯರು ದೀಪಕ್ ವಿರುದ್ಧವೇ ಪ್ರತಿಭಟನೆ ನಡೆಸಿದ್ದು, ಹಲವಾರ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ...

ದಕ್ಷಿಣ ಪಿನಾಕಿನಿ ಜಲವಿವಾದ : ನ್ಯಾಯಮಂಡಳಿ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶ

ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ನ್ಯಾಯಮಂಡಳಿ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.2) ನಿರ್ದೇಶನ ನೀಡಿದೆ. ಕೇಂದ್ರ...