Homeಕರ್ನಾಟಕರುದ್ರಪ್ಪ ಲಮಾಣಿ: ಲಂಬಾಣಿ ತಾಂಡಾದಿಂದ ವಿಧಾನಸಭಾ ಉಪಸಭಾಧ್ಯಕ್ಷ ಗಾದಿಯವರೆಗೆ!

ರುದ್ರಪ್ಪ ಲಮಾಣಿ: ಲಂಬಾಣಿ ತಾಂಡಾದಿಂದ ವಿಧಾನಸಭಾ ಉಪಸಭಾಧ್ಯಕ್ಷ ಗಾದಿಯವರೆಗೆ!

- Advertisement -
- Advertisement -

ರಾಜಕಾರಣವೇ ಹಾಗೆ! ಎಲ್ಲ ತರ್ಕ-ಲೆಕ್ಕಾಚಾರ ತಲೆಕೆಳಗಾಗಿ ಯಾರಿಗೋ ಅಧಿಕಾರ-ಸ್ಥಾನಮಾನದ ಭಾಗ್ಯ ಬಂದುಬಿಡುತ್ತದೆ; ಅದರ ಅಡ್ಡ ಪರಿಣಾಮದಿಂದ ಇನ್ಯಾರೋ ರಾಜಕಾರಣದ ಮುಖ್ಯಭೂಮಿಕೆಯಿಂದ ನೇಪಥ್ಯಕ್ಕೆ ತಳ್ಳಲ್ಪಡುತ್ತಾರೆ; ಯಾರೋ ತನಗೆ ಬೇಡವೆಂದು ತಿರಸ್ಕರಿಸಿದ್ದ ಹುದ್ದೆ ಮತ್ಯಾರದೋ ದೆಸೆದ ಒಲಿದುಬಿಡುತ್ತದೆ. ಇಂಥದೆ ಒಂದು “ಪೊಲಿಟಿಕಲ್ ಮಿಸ್ಟರಿ” ಕಳೆದ ವಾರ ರಾಜ್ಯ ರಾಜಕೀಯದ ಪಡಸಾಲೆಯಲ್ಲಾಗಿ ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರುಜಿಲ್ಲೆಯ ಪರಮಾಪ್ತ ಸಹಚರ-ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ ತನಗೆ ಬೇಡವೇಬೇಡವೆಂದು ನಿರಾಕರಿಸಿದ್ದ (ಒಮ್ಮೆ ಒಪ್ಪಿಕೊಂಡಿರುವುದಾಗಿ ಹೇಳಿರುವ ವರದಿಯೂ ಆಗಿತ್ತು!) ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಪೀಠ ಹಾವೇರಿಯ ಎಮ್ಮೆಲ್ಲೆ ರುದ್ರಪ್ಪ ಲಮಾಣಿ ಪಾಲಿಗೆ ಬಯಸದೆ ಬಂದ ಭಾಗ್ಯವಾಗಿದೆ!

ಆಳುವ ಕಾಂಗ್ರೆಸ್ ಪಾರ್ಟಿಯ ಏಕೈಕ ಬಂಜಾರ ಸಮುದಾಯದ ಶಾಸಕ ರುದ್ರಪ್ಪ ಲಮಾಣಿ ಮಂತ್ರಿಯಾಗುವ ಆಸೆಯಲ್ಲಿದ್ದರು; ಲಂಬಾಣಿ ಕೋಟಾದಲ್ಲಿ ಸಚಿವಗಿರಿ ಖಂಡಿತವೆಂದು ಕನಸು ಕಾಣುತ್ತಿದ್ದ ರುದ್ರಪ್ಪ ಲಮಾಣಿಯವರಂತೆಯೇ, ಉಪ್ಪಾರ ಸಮುದಾಯದ ಏಕೈಕ ಪುಟ್ಟರಂಗ ಶೆಟ್ಟರೂ ತಮ್ಮನ್ನು ಸಿದ್ದು ಕೈಬಿಡಲಾರರೆಂದು ನಂಬಿಕೊಂಡಿದ್ದರು. ಈ ಇಬ್ಬರಿಗೂ ಮಂತ್ರಿ ಭಾಗ್ಯ ಪಕ್ಕಾ ಎಂದೆ ರಾಜಕೀಯ ವಿಶ್ಲೇಷಕರೂ ಲೆಕ್ಕಹಾಕಿ ತಾಳೆ ನೋಡಿದ್ದರು. ಆದರೆ ಸಿಎಂ ಸಿದ್ದು ಮತ್ತು ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಸ್ಥಾನ ಹಂಚಿಕೆಯ ಜಾತಿ ಪ್ರಾತಿನಿಧ್ಯ ಸರಿದೂಗಿಸುವ ಕಸರತ್ತಿನ ಕೊನೆ ಗಳಿಗೆಯಲ್ಲಿ ಪುಟ್ಟರಂಗಶೆಟ್ಟಿ ಮತ್ತು ರುದ್ರಪ್ಪ ಲಮಾಣಿಗೆ ಮಂತ್ರಿ ಕುರ್ಚಿ ಸಿಗಲಿಲ್ಲ; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತಾರಲ್ಲ, ಹಾಗಾಯಿತು ಈ ಇಬ್ಬರು ಸಚಿವಾಕಾಂಕ್ಷಿಗಳ ಪಾಡು. ಲಾಬಿ ಮಾಡುವ ತಾಕತ್ತಿಲ್ಲದ ಲಮಾಣಿ ತಗಾದೆ ಎತ್ತದೆ ತಣ್ಣಗುಳಿದರು; ಆದರೆ ಶೆಟ್ಟರು ಸೆಟಗೊಂಡರು.

ಪುಟ್ಟರಂಗ ಶೆಟ್ಟಿ

ಶೆಟ್ಟರನ್ನು ಕರೆಸಿದ ಸಿಎಂ ಸಿದ್ದು ವಿಧಾನಸಭೆಯ ಉಪ ಸಭಾಧ್ಯಕ್ಷ ಪಟ್ಟ ಕಟ್ಟುವ ಆಫರ್ ಇಟ್ಟರು. “ಬೇಡ, ಮಾಡುವುದಿದ್ದರೆ ಮಂತ್ರಿ ಮಾಡಿರಿ; ಇಲ್ಲದಿದ್ದರೆ ಏನು ಬೇಡ” ಎಂದು ಹಠ ಹಿಡಿದ ಶೆಟ್ಟರಿಗೆ ಸಿದ್ದು ಒಂದು ಹಂತದಲ್ಲಿ ಸಮಾಧಾನ ಮಾಡುವುದರಲ್ಲಿ ಯಶಸ್ವಿಯೂ ಆಗಿದ್ದರೆನ್ನಲಾಗಿದೆ. ಆ ನಂತರ ಏನಾಯಿತೋ ಏನೋ; ಶೆಟ್ಟರು ಉಪ ಸಭಾಧ್ಯಕ್ಷ ಗಾದಿ ಒಲ್ಲೆ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಅನಿವಾರ್ಯವಾಗಿ ಕಾಂಗ್ರೆಸ್ ಹಿರಿಯರು ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ “ಅರ್ಹ”ನ ಹುಡುಕಾಟಕ್ಕೆ ಇಳಿಯಬೇಕಾಗಿ ಬಂತು. ಲಾಭ-ನಷ್ಟದ ಚಿಂತನಮಂಥನಗಳು ನಡೆದವು; ಸಿದ್ದು ಸರಕಾರದಲ್ಲಿ ಮಂತ್ರಿಗಿರಿ ಸಿಗದ ಬಂಜಾರ ಸಮುದಾಯದ ಅಸಮಾಧಾನ ಬಗೆಹರಿಸಲು ಉಪ ಸಭಾಧ್ಯಕ್ಷ ಸ್ಥಾನವನ್ನು ಬಳಸಿಕೊಳ್ಳುವ ಯೋಜನೆ ರೂಪಿಸಲಾಯಿತು.

ಪರಿಶಿಷ್ಟ ವರ್ಗದಲ್ಲಿ ಪ್ರಬಲವಾಗಿರುವ “ಸ್ಪೃಶ್ಯ” ಲಂಬಾಣಿಗರು ಕಳೆದ ಬಾರಿಯ ಚುನಾವಣೆ ಹೊತ್ತಲ್ಲಿ ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದರು. ಬಿಜೆಪಿ ಸರಕಾರ ಚುನಾವಣೆ ಹೊಸ್ತಿಲಲ್ಲಿ ಒಳ ಮೀಸಲಾತಿಯ ಜಾರಿಗೆ ಹೊರಟಿದ್ದು ಲಂಬಾಣಿಗರ ಒಂದು ಗುಂಪನ್ನು ಕೆರಳಿಸಿತ್ತು. ಬಂಜಾರ ಸಮುದಾಯ “ಬಿಜೆಪಿ ಹಠವೋ; ತಾಂಡಾ ಬಚಾವೋ” ಎಂಬ ಅಭಿಯಾನದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಈ ಚುನಾವಣೆಯಲ್ಲಿ ಬೆಂಬಲಿಸಿತ್ತು. ವಿಧಾನಪರಿಷತ್ತಿನಲ್ಲಿ ಸರಕಾರಿ ಮುಖ್ಯ ಸಚೇತಕರಾಗಿರುವ ಪ್ರಕಾಶ್ ರಾಠೋಡ್ ಸಚಿವರಾಗುವ ಬಿರುಸಿನ ಪ್ರಯತ್ನಮಾಡಿ ವಿಫಲರಾಗಿದ್ದರು. ತಮ್ಮ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಂತರೂ ಸರಕಾರ ರಚನೆ ಸಂದರ್ಭದಲ್ಲಿ ಅವಕಾಶ ಕೊಡದೆ ಕಡೆಗಣಿಸಲಾಯಿತೆಂಬ ಬೇಸರ-ಬೇಗುದಿ ಲಂಬಾಣಿಗಳಲ್ಲಿತ್ತು. ಡೆಪ್ಯುಟಿ ಸ್ಪೀಕರ್ ಪೀಠದಲ್ಲಿ ಲಂಬಾಣಿಯೊಬ್ಬರನ್ನು ಪ್ರತಿಷ್ಠಾಪಿಸಿ ಆ ಸಮುದಾಯವನ್ನು ತೃಪ್ತಿಪಡಿಸಲು ಕಾಂಗ್ರೆಸ್‌ನ ಚಿಂತಕರ ಚಾವಡಿ ತೀರ್ಮಾನಿಸಿತು.

ಈ ತುರ್ತು ಒತ್ತಡದ ತಡಕಾಟದಲ್ಲಿ ಕಾಂಗ್ರೆಸ್ ’ಯಜಮಾನ’ರ ಕಣ್ಣಿಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಹಾವೇರಿಯಿಂದ ಚುನಾಯಿತರಾಗಿರುವ ರುದ್ರಪ್ಪ ಮಾನಪ್ಪ ಲಮಾಣಿ ಬೀಳುತ್ತಾರೆ. ಕಾಂಗ್ರೆಸ್ಸಿನಲ್ಲಿ ರುದ್ರಪ್ಪ ಲಮಾಣಿ ಬಿಟ್ಟರೆ ಇನ್ಯಾವ ಬಂಜಾರ ವರ್ಗದ ಶಾಸಕನಿಲ್ಲ. ಹೀಗಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನ ರುದ್ರಪ್ಪ ಲಮಾಣಿಯವರಿಗೆ ಅನಿರೀಕ್ಷಿತವಾಗಿ ಅರಸಿಬಂದಂತಾಗಿತ್ತು. ಮುಂದೆಂದಾದರೂ ಸಚಿವ ಸಂಪುಟ ಪುನರ್ವಿಂಗಡನೆ ಆದಾಗ ಅದೃಷ್ಟ ಖುಲಾಯಿಸಬಹುದೆಂದುಕೊಂಡಿದ್ದ ರುದ್ರಪ್ಪ ಲಮಾಣಿ ಕನಸು-ಮನಸ್ಸಿನಲ್ಲೂ ಉಪ-ಸಭಾಧ್ಯಕ್ಷನಾಗುವೆನೆಂದು ಎಣಿಸಿರಲಿಲ್ಲ. ಅನಾಯಾಸವಾಗಿ ಒಲಿದು ಬಂದಿರುವ ಸದನದ “ಸಣ್ಣ” ಪ್ರತಿಷ್ಠಿತ ಸ್ಥಾನವನ್ನು ಪುಟ್ಟರಂಗಶೆಟ್ಟರಂತೆ ನಿರಾಕರಿಸದೆ ಧನ್ಯತಾಭಾವದಿಂದ ಅಲಂಕರಿಸಿರುವ ರುದ್ರಪ್ಪ ಲಮಾಣಿ ಸ್ವಭಾವತಃ ಸೌಮ್ಯ ಗುಣ-ಲಕ್ಷಣದ ರಾಜಕಾರಣಿ; ಕಳೆದ ನಾಲ್ಕು ದಶಕದಿಂದ ಅವಿಭಜಿತ ಧಾರವಾಡ ಜಿಲ್ಲೆ ಮತ್ತು ಹಾವೇರಿ ಜಿಲ್ಲೆಯ ರಾಜಕಾರಣದಲ್ಲಿ “ಪಾಲಿಗೆ ಬಂದಿದ್ದೆ ಪಂಚಾಮೃತ”ವೆಂದು ಸ್ವೀಕರಿಸುತ್ತ ಬಂದವರು.

ಇದನ್ನೂ ಓದಿ: ನಮ್ಮ ಸಚಿವರಿವರು; “ನಿರಾಶ್ರಿತ” ಸಂತೋಷ್ ಲಾಡ್‌ಗೆ “ಪುನರ್ವಸತಿ” ಕಲ್ಪಿಸಿದ ಕಲಘಟಗಿಯ ದೆಸೆ ಬದಲಾದೀತೇ?!

ರಾಣೆಬೆನ್ನೂರು ತಾಲೂಕಿನ ಖಂಡೇರಾಯನಹಳ್ಳಿಯ ಪುಟ್ಟ ಲಂಬಾಣಿ ತಾಂಡಾದ ನಿರ್ಗತಿಕ ಜೋಪಡಿಯಲ್ಲಿ 1.6.1959ರಂದು ಜನಿಸಿದ ರುದ್ರಪ್ಪ ಲಮಾಣಿ ಅಧಿಕಾರ ರಾಜಕಾರಣದಲ್ಲಿ ಅದೃಷ್ಟಶಾಲಿ ಎಂದು ಹಾವೇರಿ ಜಿಲ್ಲೆಯ ಅವರ ವಾರಿಗೆಯ ರಾಜಕಾರಣಿಗಳು ಮಾತಾಡಿಕೊಳ್ಳುವುದು ಮಾಮೂಲು. ಬಿ.ಎ. ಪದವಿ ಮುಗಿಸಿಕೊಂಡು ಹೊಟ್ಟೆಪಾಡಿನ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ರುದ್ರಪ್ಪ ತಾಂಡಾ ರಾಜಕಾರಣ ಶುರುಹಚ್ಚಿಕೊಂಡಿದ್ದು 1980ರ ಸುಮಾರಿಗೆ. ತಳ ಸಮುದಾಯದ ಬಂಜಾರ ಕುಲದ ವಿದ್ಯಾವಂತ ತರುಣ ರುದ್ರಪ್ಪ ಲಮಾಣಿಯವರಿಗೆ 1985ರಲ್ಲಿ ಕಾಂಗ್ರೆಸ್ ಪಾರ್ಟಿಯಿಂದ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಗುತ್ತದೆ. 1985-89ರ ಅವಧಿಯಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ ಜಿಲ್ಲಾ ಪರಿಷತ್ ಸದಸ್ಯರಾಗಿದ್ದ ರುದ್ರಪ್ಪ 1990ರ ದಶಕದಲ್ಲಿ ಕಾಂಗ್ರೆಸ್‌ನ ಮುಂಚೂಣಿ ಲಂಬಾಣಿ ಮುಂದಾಳಾಗಿ ಗುರುತಿಸಲ್ಪಟ್ಟಿದ್ದರು.

1994ರ ಅಸೆಂಬ್ಲಿ ಇಲೆಕ್ಷನ್ ವೇಳೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದ ಬ್ಯಾಡಗಿಯಿಂದ ಕಾಂಗ್ರೆಸ್ ಹುರಿಯಾಳಾಗಿ ಸ್ಪರ್ಧೆಗಿಳಿದಿದ್ದ ರುದ್ರಪ್ಪ ಲಮಾಣಿ ಪ್ರಥಮ ಪ್ರಯತ್ನದಲ್ಲೆ ಎಡವಿದರು. ಆದರೆ 1999ರಲ್ಲಿ ಶಾಸಕರಾಗಿ ಆಯ್ಕೆಯಾದರು. ಆ ಎಮ್ಮೆಲ್ಲೆ ಅವಧಿಯಲ್ಲಿ ಬ್ಯಾಡಗಿ ಮತ್ತು ರಾಣೆಬೆನ್ನೂರಿನ ಕೆಲವು ಗ್ರಾಮಗಳಿಗೆ ತುಂಗಭದ್ರೆಯ ನೀರು ಹರಿಸಿ ಕುಡಿಯುವ ನೀರಿನ ಹಾಹಾಕಾರ ತಣಿಸಲು ಪ್ರಯತ್ನಿಸಿದ್ದರು; ಗುಡ್ಡದಮಲ್ಲಾಪುರ ಭಾಗದ 13 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದರೆಂಬ ಮೆಚ್ಚಿಕೆಯ ಮಾತುಗಳು ಈಗಲೂ ಕೇಳಿಬರುತ್ತವೆ. ಆದರೆ ಐದು ವರ್ಷದ ಬಳಿಕ ರುದ್ರಪ್ಪರಿಗೆ ಮರುಆಯ್ಕೆ ಸಾಧ್ಯವಾಗಲಿಲ್ಲ. ದಲಿತ ಮೀಸಲು ಕ್ಷೇತ್ರವಾದರೂ ಮೇಲ್ವರ್ಗದ ಲಿಂಗಾಯತರ ಹಿಡಿತಕ್ಕೆ ಒಳಪಟ್ಟಿದ್ದ ಬ್ಯಾಡಗಿಯಲ್ಲಿ 2004ರ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪರ ಜಾತಿ ರಾಜಕೀಯದ ಪ್ರಭಾವ ಜೋರಾಗಿತ್ತು. ಹೀಗಾಗಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ಸೋಲಬೇಕಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

2008ರ ಚುನಾವಣೆಯ ಪೂರ್ವದಲ್ಲಾದ ಅಸೆಂಬ್ಲಿ ಕ್ಷೇತ್ರಗಳ ಪುನರ್‌ವಿಂಗಡನೆ ಪ್ರಕ್ರಿಯೆಯಲ್ಲಿ ಬ್ಯಾಡಗಿ ಸಾಮಾನ್ಯ ಕ್ಷೇತ್ರವಾಯಿತು; ಪಕ್ಕದ ಹಾವೇರಿ ಪರಿಶಿಷ್ಟ ಜಾತಿಗೆ ಮೀಸಲಾಯಿತು. ರುದ್ರಪ್ಪ ಲಮಾಣಿ ಮತ್ತವರ ಸಾಂಪ್ರದಾಯಿಕ ಎದುರಾಳಿ ಬಿಜೆಪಿಯ ನೆಹರು ಓಲೇಕಾರ್ ಹಾವೇರಿಗೆ ವಲಸೆಬಂದರು. ಬ್ಯಾಡಗಿಯಂತೆ ಹಾವೇರಿಯು ಲಿಂಗಾಯತ ಏಕಸ್ವಾಮ್ಯದ ಅಖಾಡ. ಯಡಿಯೂರಪ್ಪ ಪ್ರಣೀತ ಹಿಂದುತ್ವದ ಗಿಲೀಟಿನ ಲಿಂಗಾಯತ “ಪ್ರಜ್ಞೆ” ಆಗ ಪರಾಕಾಷ್ಟೆ ತಲುಪಿತ್ತು. ರುದ್ರಪ್ಪ ಲಮಾಣಿ ಬಿಜೆಪಿಯ ಓಲೇಕಾರ್‌ಗೆ ದೊಡ್ಡ ಮತದಂತರದಿಂದ ಮಣಿಯಬೇಕಾಯಿತು. ಯಡಿಯೂರಪ್ಪ ಹಾವೇರಿಯನ್ನು ತನ್ನ ಶಕ್ತಿ ಕೇಂದ್ರವೆಂದು ನಂಬಿದ್ದ ಸ್ಥಳ. 2013ರ ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಬಿಜೆಪಿಗೆ ಸೆಡ್ಡು ಹೊಡೆದು ಕೆಜೆಪಿಗೆ ಜನ್ಮ ನೀಡಿದ್ದೇ ಈ ಹಾವೇರಿಯಲ್ಲಿ! ಆದರೆ ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ 30,208 ಮತಗಳ ಭರ್ಜರಿ ಜಯಗಳಿಸಿದರು.

ರುದ್ರಪ್ಪ ಲಮಾಣಿ ಅವರಿಗೆ ಸಿದ್ದು ಸರಕಾರ-1ರಲ್ಲಿ ಸ್ವತಂತ್ರ ನಿರ್ವಹಣೆಯ ಜವಳಿ, ಮುಜರಾಯಿ ಇಲಾಖೆಗಳ ಸಹಾಯಕ ಮಂತ್ರಿಯಾಗುವ ಯೋಗವೂ ಕೂಡಿಬಂತು. ಅದರೆ ಆಂಟಿ ಇನ್‌ಕಂಬೆನ್ಸ್‌ನಿಂದ ಮಂತ್ರಿ ಲಮಾಣಿ 2018ರಲ್ಲಿ ಯಡಿಯೂರಪ್ಪರ ಲಿಂಗಾಯತ ಪ್ರತಿಷ್ಠೆಯ ತಂತ್ರಗಾರಿಕೆ ಎದುರಿಸಲಾಗದೆ ಹಿಮ್ಮೆಟ್ಟಬೇಕಾಯಿತು. ಕಳೆದ ಮೇ ತಿಂಗಳಿನಲ್ಲಾದ ಚುನಾವಣೆಯಲ್ಲಿ ರುದ್ರಪ್ಪ ಲಮಾಣಿ 11,915 ಮತದಿಂದ ಮತ್ತೆ ಶಾಸಕನಾದರು; ಮಂತ್ರಿಯಾಗುವ ಅಭಿಲಾಷೆಯಲ್ಲಿದ್ದ ರುದ್ರಪ್ಪರಿಗೆ ಅದಕ್ಕಿಂತಲು ತಾತ್ವಿಕವಾಗಿ ಒಂದು ಗುಲಗುಂಜಿ ಹೆಚ್ಚೇ ವರ್ಚಸ್ಸು-ಪ್ರತಿಷ್ಠೆಯ ವಿಧಾನಸಭಾ ಉಪಾಧ್ಯಕ್ಷ ಹುದ್ದೆ ಲಭಿಸಿದೆ; ಮಂತ್ರಿಗಳಂತೆ ನೇರಾನೇರ ರಾಜಕಾರಣ ಮಾಡಲಾಗದಿದ್ದರೂ ಅಸಿಸ್ಟೆಂಟ್ ಹೆಡ್‌ಮಾಸ್ತರಿಕೆ ಗತ್ತು-ಗಾಂಭೀರ್ಯದಿಂದ ಎಲ್ಲ ಸಚಿವರ ಸಂಪರ್ಕ ಸಾಧಿಸಿ ಕ್ಷೇತ್ರದ ಪ್ರಗತಿ-ಅಭಿವೃದ್ಧಿಯ ಕೆಲಸ-ಕಾಮಗಾರಿ ಮಾಡಿಸುವ ಶಕ್ತಿ-ಸಾಮರ್ಥ್ಯ ಪ್ರಾಪ್ತವಾಗಿದೆ.

ತೀರಾ ಹಿಂದುಳಿದಿರುವ ಹಾವೇರಿ ತಾಲೂಕು ಮತ್ತು ಹಾವೇರಿ ಜಿಲ್ಲೆಗಳರೆಡಕ್ಕೂ ಎಲ್ಲ ಸಚಿವರಿಂದಾಗಬೇಕಾದ ಕೆಲಸಗಳ ದೊಡ್ಡ ಪಟ್ಟಿಯೇ ಇದೆ. ಸುದೀರ್ಘ 25 ವರ್ಷ ಹೋರಾಡಿ ಹಾವೇರಿ ಮತ್ತದರ ಸುತ್ತಲಿನ ತಾಲೂಕಿನ ಮಂದಿ ಪ್ರತ್ಯೇಕ ಜಿಲ್ಲೆ ಪಡೆದುಕೊಂಡಿದ್ದರು; ದುರಂತವೆಂದರೆ ಜಿಲ್ಲಾ ರಚನೆಯಾಗಿ 25 ವರ್ಷ ಕಳೆದರೂ ಅಭಿವೃದ್ಧಿ-ಬದಲಾವಣೆ ಎಂಬುದು ಕನಸಾಗಿಯೇ ಉಳಿದಿದೆ; ಜಿಲ್ಲೆಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಂಥ ಪರಮೋಚ್ಛ ಸ್ಥಾನದಲ್ಲಿದ್ದರೂ ಜಿಲ್ಲೆಯ ದೆಸೆ ಬದಲಾಗಲಿಲ್ಲ! ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಪ್ರತಿನಿಧಿಸುವ ಜಿಲ್ಲಾ ಕೇಂದ್ರ ಒಳಗೊಂಡಿರುವ ಹಾವೇರಿ ಅಸೆಂಬ್ಲಿ ಕ್ಷೇತ್ರವೆ ದೊಡ್ಡ ಕುಗ್ರಾಮದಂತಿದೆ. ಹಾವೇರಿ ನಗರದಲ್ಲಿ ನಾಲ್ಕು ಹೆಜ್ಜೆ ಹಾಕಿದರೆ ಹಿಂದುಳಿದಿರುವಿಕೆಯ ವ್ಯಾಖ್ಯಾನ ಮನದಟ್ಟಾಗುತ್ತದೆ. ರಸ್ತೆ, ಸಾರಿಗೆ, ಆರೋಗ್ಯ, ವಸತಿ, ಶಿಕ್ಷಣ, ಕುಡಿಯುವ ನೀರನಂಥ ಕನಿಷ್ಠ ಮೂಲಭೂತ ಸೌಕರ್ಯಕ್ಕಾಗಿ ಜನ ಗೋಳಾಡುತ್ತಿರುವುದು ಹೇಳತೀರದು.

ಜಿಲ್ಲಾ ಕೇಂದ್ರವೇ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಗಬ್ಬುನಾರುತ್ತಿದೆ; ಶಾಶ್ವತ ಕುಡಿಯುವ ನೀರು ಮತ್ತು ಒಳಚರಂಡಿಗಾಗಿ ಕೋಟಿಕೋಟಿ ಖರ್ಚು ಮಾಡುತ್ತ ಹಲವು ವರ್ಷ ಕಳೆದರೂ ಯೋಜನೆ ಸಾಕಾರಗೊಳ್ಳುತ್ತಿಲ್ಲ; ಏಕೆಂಬುದು ಬಿಡಿಸದ ಒಗಟಾಗಿದೆ ಎಂದು ಜನರು ಹೇಳುತ್ತಾರೆ. ಬೃಹತ್ ಕಟ್ಟಡವಿದ್ದರೂ ಅಗತ್ಯ ಸೌಕರ್ಯ ಮತ್ತು ವೈದ್ಯರಿಲ್ಲದೆ ಜಿಲ್ಲಾಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ಜನರು ಅನಿವಾರ್ಯವಾಗಿ ದಾವಣಗೆರೆ ಅಥವಾ ಹುಬ್ಬಳ್ಳಿ ಆಸ್ಪತ್ರೆಗಳನ್ನು ಅರಸುತ್ತ ಹೋಗುವಂತಾಗಿದೆ. ಸರಿಯಾದ ಶೈಕ್ಷಣಿತ ಸೌಲಭ್ಯವಿಲ್ಲದ ಹಾವೇರಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡುವ ಕೈಗಾರಿಕೆಗಳಿಲ್ಲ; ಕೃಷಿ ಪ್ರಧಾನವಾದ ಹಾವೇರಿಯಲ್ಲಿ ರೈತಾಪಿ ವರ್ಗಕ್ಕೆ ಆರ್ಥಿಕ ಚೈತನ್ಯ ನೀಡುವ ಕೃಷಿ ಉನ್ನತೀಕರಣದ ಪ್ರಯತ್ನಗಳಾಗುತ್ತಿಲ್ಲ.

ಜಿಲ್ಲೆ ರಚನೆಯಾಗುತ್ತಲೇ ರೈತರಿಗೆ ಆರ್ಥಿಕ ಸಾಲ-ಸೌಲಭ್ಯ ಒದಗಿಸುವ ಜಿಲ್ಲಾ ಮಧ್ಯವರ್ತಿ(ಡಿಸಿಸಿ) ಬ್ಯಾಂಕ್ ಸ್ಥಾಪನೆ ಆಗಬೇಕಿತ್ತು. ಇತ್ತೀಚೆಗಷ್ಟೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಲಾಗಿದೆಯಾದರೂ ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿಲ್ಲ. ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ-ಉದ್ಯಮ ಆರಂಭಿಸುವ ಹಲವು ಅವಕಾಶಗಳಿದ್ದರೂ ಅಧಿಕಾರಸ್ಥರು ಪ್ರಯತ್ನ ಮಾಡುತ್ತಿಲ್ಲ; ಮೆಕ್ಕೆ ಜೋಳ ಸಂರಕ್ಷಣೆಯ ಸೈಲೋ ಘಟಕ ಕೆಲಸಕ್ಕೆ ಬಾರದಾಗಿದೆ. ಸಂಗೂರು ಸಕ್ಕರೆ ಕಾರ್ಖಾನೆಯಿಂದ ಪ್ರಯೋಜನ ಇಲ್ಲದಾಗಿದೆ. ತುಂಗಾ ಮೇಲ್ದಂಡೆ ಯೋಜನೆಯ ಹೊಲಗಳಿಗೆ ನೀರು ಹರಿಸುವ ಬಸಿ ಕಾಲುವೆಗಳು (ಮರಿ ಕಾಲುವೆ) ಆಗುತ್ತಿಲ್ಲ; ಯೋಜನೆಗಾಗಿ ರೈತರಿಂದ ಸ್ವಾಧೀನಪಡೆದುಕೊಂಡ ಭೂಮಿಗೆ ಎರಡು ದಶಕದಿಂದ ಪರಿಹಾರ ಸಿಕ್ಕಿಲ್ಲ. ನೀರೂ ಇಲ್ಲ!;ಪರಿಹಾರವೂ ಇಲ್ಲ!! ಬೇಸಿಗೆಯಲ್ಲಿ ಹಾವೇರಿ ಮತ್ತು ಗುತ್ತಲಕ್ಕೆ 10-15 ದಿನಕ್ಕೊಮ್ಮೆ ಜೀವಜಲ ಸಿಕ್ಕರೆ ಪುಣ್ಯ. ಗುತ್ತಲ ತಾಲೂಕಿಗಾಗಿ ಜನರು ಹಲವು ವರ್ಷದಿಂದ ಹೋರಾಡುತ್ತಿದ್ದಾರೆ. ಈ ದೌರ್ಭಾಗ್ಯ-ದುರಂತಕ್ಕೆಲ್ಲ ಹೊಣೆಗೇಡಿ ಸಂಸದ-ಶಾಸಕ-ಸಚಿವರ ಉದಾಸೀನವೆ ಕಾರಣವೆಂಬ ಆಕ್ರೋಶ ಜನರಲ್ಲಿ ಮಡುಗಟ್ಟಿದೆ .ಈ ಸಮಸ್ಯೆಗಳನ್ನು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂಬ ಆಗ್ರಹದ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತವೆ.

ಕ್ವಾಸಿ ನ್ಯಾಯಾಲಯವಾದ ಸದನದ “ಉಪ ನ್ಯಾಯಾಧೀಶ” ಸ್ಥಾನದ ಪ್ರತಿಷ್ಠೆ-ಗೌರವ ಅರಿತು ಹೆಜ್ಜೆಯಿಡಬೇಕಾದ ಜವಾಬ್ದಾರಿಯೂ ರುದ್ರಪ್ಪ ಲಮಾಣಿಯವರ ಮೇಲಿದೆ. ಓಟ್ ಬ್ಯಾಂಕ್ ದೃಷ್ಟಿಕೋನದ ಮತೀಯ ಸಿದ್ಧಾಂತಿಗಳು ಸದನದ ದಿಕ್ಕುತಪ್ಪಿಸದಂತೆ ಎಚ್ಚರ ವಹಿಸಬೇಕಾಗಿದೆ; ಹುಚ್ಚು ಹೆಚ್ಚುಗಾರಿಕೆಗಾಗಿ ಕಿತ್ತಾಡುವವರನ್ನು ನಿಯಂತ್ರಿಸುವ ಧಾಡಸಿತನ ರೂಢಿಸಿಕೊಳ್ಳಬೇಕಾಗಿದೆ. ಸಂಸದೀಯ ಸಂಪ್ರದಾಯ, ಪ್ರಜಾಪ್ರಭುತ್ವ ಪರಂಪರೆ ಮತ್ತು ಸಂವಿಧಾನದ ಆಶಯ ಎತ್ತಿಹಿಡಿಯುವ ಪ್ರಜ್ಞೆ ರುದ್ರಪ್ಪ ಲಮಾಣಿಯವರಲ್ಲಿ ಸದಾ ಜಾಗೃತವಾಗಿರಲೆಂಬುದು “ನ್ಯಾಯಪಥ”ದ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಜಿತ್ ಪವಾರ್ ಸಾವು | ಪತನಗೊಂಡ ವಿಮಾನದ ನಿರ್ವಹಣಾ ಸಂಸ್ಥೆಗೂ ಟಿಡಿಪಿಗೂ ನಂಟು : ರೋಹಿತ್ ಪವಾರ್

ಅಜಿತ್ ಪವಾರ್ ಸಾವಿಗೆ ಕಾರಣವಾದ ಪತನಗೊಂಡ ವಿಮಾನದ ನಿರ್ವಾಹಕ ಸಂಸ್ಥೆ ವಿಎಸ್ಆರ್ ವೆಂಚರ್ಸ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಡುವೆ ಸಂಬಂಧವಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್ ಪವಾರ್ ಬಣದ)...

ಆಪರೇಷನ್ ಡೆಮಾಲಿಶ್‌ಮೆಂಟ್ ಅಡಿಯಲ್ಲಿ 200ಕ್ಕೂ ಹೆಚ್ಚು ನಕ್ಸಲ್ ಸ್ಮಾರಕಗಳನ್ನು ನೆಲಸಮಗೊಳಿಸಿದ ಭದ್ರತಾ ಪಡೆಗಳು 

ನವದೆಹಲಿ: ನಕ್ಸಲ್ ಚಟುವಟಿಕೆಗಳ ವಿರುದ್ಧ ತೀವ್ರಗೊಂಡ ಕಾರ್ಯಾಚರಣೆ ನಿರ್ಣಾಯಕ ಹಂತವನ್ನು ಪ್ರವೇಶಿಸಿರುವುದಾಗಿ ಭದ್ರತಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.  ಆಪರೇಷನ್ ಡೆಮಾಲಿಶ್‌ಮೆಂಟ್ ಎಂದು ಕರೆಯಲ್ಪಡುವ ಇತ್ತೀಚಿನ ಕಾರ್ಯಾಚರಣೆಯ ಅಡಿಯಲ್ಲಿ ನಕ್ಸಲ್ ಕಾರ್ಯಕರ್ತರು ತಮ್ಮ ನಾಯಕರನ್ನು ಸ್ಮರಿಸಲು ಮತ್ತು...

ಮುಸ್ಲಿಮರಿಗೆ ನೀಡಿದ್ದ 5% ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರದ ಕ್ರಮ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಗೆ ಅರ್ಜಿ 

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ 5% ಮೀಸಲಾತಿಯನ್ನು ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಮುಂಬೈ ಮೂಲದ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಕೀಲ ಸೈಯದ್ ಎಜಾಜ್ ಅಬ್ಬಾಸ್ ನಖ್ವಿ ಅವರು ವಕೀಲ...

ವಿಧಾನಸಭಾ ಚುನಾವಣೆಯಲ್ಲಿ ನೇಮಮ್ ನಿಂದ ಸ್ಪರ್ಧಿಸುವ ಬಯಕೆಯನ್ನು ಪುನರುಚ್ಚರಿಸಿದ ಬಿಜೆಪಿ ಕೇರಳ ಅಧ್ಯಕ್ಷ ರಾಜೀವ್ ಚಂದ್ರಶೇಖರ್ 

ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ನೇಮಮ್ ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ಇಚ್ಛೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಭಾನುವಾರ ಪುನರುಚ್ಚರಿಸಿದ್ದಾರೆ. ನೇಮಮ್‌ನಲ್ಲಿ ಬಿಜೆಪಿಯ ಚುನಾವಣಾ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದ ನಂತರ...

ಯುವತಿಯನ್ನು ಬಂಧಿಸಿಟ್ಟು ಚಿತ್ರಹಿಂಸೆ : ಆರೋಪಿಯ ಬಂಧನ

ಯುವಕನೋರ್ವ ತನ್ನ ಲಿವ್-ಇನ್ ಸಂಗಾತಿಯಾದ 19 ವರ್ಷದ ಯುವತಿಯನ್ನು ಕೊಠಡಿಯಲ್ಲಿ ಬಂಧಿಸಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಗುರುಗಾಂವ್‌ನ ಸೆಕ್ಟರ್ 69ರಲ್ಲಿ ನಡೆದಿದೆ. ಆರೋಪಿಯನ್ನು ದೆಹಲಿಯ ನರೇಲಾ ನಿವಾಸಿ 19 ವರ್ಷದ ಶಿವಂ ಎಂದು ಗುರುತಿಸಲಾಗಿದೆ....

ಕೋಝಿಕ್ಕೋಡ್‌: ಆಹಾರ ಸೇವಿಸಿ, ಬಿಲ್ ಪಾವತಿಸಲು ನಿರಾಕರಿಸಿದ ಮೂವರ ತಂಡದಿಂದ ರೆಸ್ಟೋರೆಂಟ್ ಧ್ವಂಸ

ಕೋಝಿಕ್ಕೋಡ್ (ಕೇರಳ): ಆಹಾರ ಸೇವಿಸಿ, ಹಣ ನೀಡಲು ನಿರಾಕರಿಸಿದ ಮೂವರು ಸದಸ್ಯರ ಗುಂಪೊಂದು ಬಿಲ್ ಕೇಳಿದ್ದಕ್ಕೆ ರೆಸ್ಟೋರೆಂಟ್ ಅನ್ನು ಧ್ವಂಸಗೊಳಿಸಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು,...

ಲೈಂಗಿಕ ದೌರ್ಜನ್ಯ ಆರೋಪ : ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

ಇಬ್ಬರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜ್ಯೋತಿಷ್ ಪೀಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ವಿಶೇಷ ಪೋಕ್ಸೋ ನ್ಯಾಯಾಲಯ...

ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಶಿಕ್ಷಕಿಯಿಂದ ಹಲ್ಲೆ

ಶಾಲಾ ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕಿ, ಆಕೆಯ ಹೆಸರನ್ನು ದಾಖಲಾತಿಯಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯ...

ಚಿಕ್ಕಮಗಳೂರಿನಲ್ಲಿ ಒಂದೇ ವಾರದಲ್ಲಿ ಕಾಡಾನೆ ದಾಳಿಗೆ ಎರಡನೇ ಸಾವು; ಆನೆ ಸೆರೆ; ಸರ್ಕಾರದ ವಿರುದ್ಧ ಸ್ಥಳೀಯರ ಪ್ರತಿಭಟನೆ

ಚಿಕ್ಕಮಗಳೂರಿನ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳಿದಾಗ ಹೊಸಪೇಟೆ ಮೂಲದ ಬೋರಮ್ಮ(34), ಕಾಡಾನೆ...

ಬಿಜೆಪಿ ಸೇರ್ಪಡೆಯಾದ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಬೋರಾ ಭಾನುವಾರ (ಫೆ.22) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬೋರಾ ಫೆ. 16ರಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ...