ನ್ಯೂಸ್ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಅವರಿಗೆ ಸ್ವತಂತ್ರವಾಗಿ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ಗೆ (ಎಐಐಎಂಎಸ್) ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ಪ್ರಬೀರ್ ಪುರ್ಕಾಯಸ್ಥ ಅವರ ವೈದ್ಯಕೀಯ ಸ್ಥಿತಿಯನ್ನು ಏಮ್ಸ್ ನಿರ್ದೇಶಕರು ನೇಮಿಸಿದ ಮಂಡಳಿಯಿಂದ ಪರೀಕ್ಷಿಸುವುದು ಸೂಕ್ತವಾಗಿರುತ್ತದೆ. ಮಂಡಳಿಯು ಜೈಲು ದಾಖಲೆಗಳನ್ನು ಮತ್ತು ಅರ್ಜಿದಾರರ ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಲಿದೆ ಎಂದು ನ್ಯಾಯಾಲಯ ಹೇಳಿದೆ.
ದೆಹಲಿ ಪೊಲೀಸರ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ನ್ಯೂಸ್ಕ್ಲಿಕ್ ಸಂಸ್ಥಾಪಕರು ವಿಶೇಷ ಚಿಕಿತ್ಸೆ ಕೇಳುತ್ತಿದ್ದಾರೆ. ಅಸಾರಾಂ ಬಾಪು ಅವರಿಗೆ ಏಮ್ಸ್ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬಹುದಾದರೆ, ಪುರಕಾಯಸ್ಥ ಕೂಡ ಚಿಕಿತ್ಸೆ ಪಡೆಯಬಹುದು ಎಂದು ಪೀಠ ಒತ್ತಿ ಹೇಳಿದೆ
ಜೋಧ್ಪುರದಲ್ಲಿ (ಅಸಾರಾಮ್) ಒಬ್ಬ ಅಪರಾಧಿ ಇದ್ದಾನೆ, ಅವರು ಏಮ್ಸ್ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀವು ಅವರನ್ನು ಬಿಡುಗಡೆ ಮಾಡುತ್ತೀರಿ ಮತ್ತು ಅವರಿಗೆ ಎಲ್ಲಿ ಬೇಕಾದರೂ ಚಿಕಿತ್ಸೆ ಕೊಡುತ್ತೀರಿ ಎನ್ನುವುದನ್ನು ನ್ಯಾಯಾಲಯ ಉಲ್ಲೇಖಿಸಿದೆ.
ಪುರ್ಕಾಯಸ್ಥ ಪರ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದಲ್ಲಿ ತನ್ನನ್ನು ಮತ್ತು ಇತರರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಪುರ್ಕಾಯಸ್ಥ ಸುಪ್ರೀಂ ಮೊರೆ ಹೋಗಿದ್ದರು.
ಅಕ್ಟೋಬರ್ 4ರಂದು ಪುರ್ಕಾಯಸ್ಥ ಮತ್ತು ಚಕ್ರವರ್ತಿಯವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ದೆಹಲಿ ಪೊಲೀಸರು ಸಲ್ಲಿಸಿದ ಮಾಹಿತಿ ಪ್ರಕಾರ, ನೆವಿಲ್ಲೆ ರಾಯ್ ಸಿಂಗಮ್, ಪ್ರಬೀರ್ ಪುರ್ಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಪರಸ್ಪರ ನೇರ ಸಂಪರ್ಕದಲ್ಲಿದ್ದರು ಮತ್ತು ಕಾಶ್ಮೀರವಿಲ್ಲದೆ ಭಾರತದ ನಕ್ಷೆಯನ್ನು ಹೇಗೆ ರಚಿಸುವುದು ಮತ್ತು ಅರುಣಾಚಲ ಪ್ರದೇಶವನ್ನು ವಿವಾದಿತ ಪ್ರದೇಶವೆಂದು ತೋರಿಸುವುದು ಹೇಗೆ ಎಂದು ಇವರು ಚರ್ಚಿಸುತ್ತಿರುವುದು ಕಂಡುಬಂದಿದೆ. ಈ ಉದ್ದೇಶವನ್ನು ಸಾಧಿಸಲು ಆರೋಪಿಗಳು ವಿದೇಶಿ ನಿಧಿಯ ಹೆಸರಿನಲ್ಲಿ ಪಿಪಿಕೆ ನ್ಯೂಸ್ಕ್ಲಿಕ್, ಜಿಸ್ಪಾನ್ ಇಂಡಿಯಾ, ಜೆಜೆ ಎಂಟರ್ಪ್ರೈಸಸ್, ವರ್ಚುನೆಟ್ ಸಿಸ್ಟಮ್ ಹೆಸರಿನ ಕಂಪನಿಗಳಲ್ಲಿ 115 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಭಾಗವಾಗಿ ಆನ್ಲೈನ್ ನ್ಯೂಸ್ ಪೋರ್ಟಲ್ ನ್ಯೂಸ್ ಕ್ಲಿಕ್ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗಿದೆ.
ದೆಹಲಿ ಪೊಲೀಸರ ವಿಶೇಷ ಕೋಶವು ನ್ಯೂಸ್ ಕ್ಲಿಕ್ಗೆ ಸಂಬಂಧಿಸಿದ ವಿವಿಧೆಡೆ ದಾಳಿ ನಡೆಸಿದ್ದು, ಈ ವೇಳೆ ಪತ್ರಕರ್ತರಿಂದ ಫೋನ್ಗಳು, ಹಾರ್ಡ್ ಡಿಸ್ಕ್ಗಳು ಮತ್ತು ಲ್ಯಾಪ್ಟಾಪ್ಗಳು ಸೇರಿದಂತೆ ಸುಮಾರು 250 ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ. ನ್ಯೂಸ್ಗೆ ಸಂಬಂಧಿಸಿದ 90ಕ್ಕೂ ಹೆಚ್ಚು ಪತ್ರಕರ್ತರ ನಿವಾಸಗಳಲ್ಲಿ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದರು. ಪ್ರಬೀರ್ ಪುರ್ಕಾಯಸ್ಥ ಮತ್ತು ನ್ಯೂಸ್ಕ್ಲಿಕ್ ಎಚ್ಆರ್ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ ಬಂಧಿಸಲಾಗಿತ್ತು.
ಇದನ್ನು ಓದಿ: ರಾಜ್ಯಸಭಾ ಚುನಾವಣೆ ನಂತರ ಹಿಮಾಚಲ ಕಾಂಗ್ರೆಸ್ನಲ್ಲಿ ಕೋಲಾಹಲ; ಡ್ಯಾಮೇಜ್ ಕಂಟ್ರೋಲಿಗೆ ಮುಂದಾದ ಡಿಕೆಶಿ