Homeಅಂಕಣಗಳುಜನಸಾಮಾನ್ಯರನ್ನು ಕೆರಳಿಸಿದ ಪಠ್ಯಪುಸ್ತಕ ಪರಿಷ್ಕರಣೆ

ಜನಸಾಮಾನ್ಯರನ್ನು ಕೆರಳಿಸಿದ ಪಠ್ಯಪುಸ್ತಕ ಪರಿಷ್ಕರಣೆ

- Advertisement -
- Advertisement -

1973ರಲ್ಲಿ ಪ್ರಕಟವಾಗಿರುವ ಪಠ್ಯಪುಸ್ತಕವೊಂದು ಸಿಕ್ಕಿತು. ’ನ್ಯೂ ಮೆಥೆಡ್ ಕನ್ನಡ ಸಪ್ಲಿಮೆಂಟರಿ ರೀಡರ್ -5 ನೇ ತರಗತಿ’ ಎಂಬ ಶೀರ್ಷಿಕೆಯುಳ್ಳ ಅದರ ಹಿಂಬದಿ ಪುಟದಲ್ಲಿ ’ವಿದ್ಯಾ ಇಲಾಖೆಯಿಂದ ರಾಜ್ಯದ ಎಲ್ಲಾ 20 ಜಿಲ್ಲೆಗಳಿಗೂ ಮಂಜೂರಾಗಿದೆ’ ಎಂದು ನಮೂದಿಸಲಾಗಿದೆ. ವಿದ್ಯಾಭೂಷಣ ಪಂಡಿತ ಪ್ರಕಾಶ ಚಕ್ರವರ್ತಿ ಅನಂತಾಚಾರ್ ಅವರು ರಚಿಸಿರುವ ಈ ಪಠ್ಯಪುಸ್ತಕದ ಮೊದಲ ಅಧ್ಯಾಯ ’ಬಸವಣ್ಣನವರು’. ಅದರಲ್ಲಿ ಒಂದು ಸಾಲು ಇಂತಿದೆ: “ಸಂಪ್ರದಾಯದಂತೆ ಉಪನಯನ ಮಾಡಬೇಕೆಂದು ತಂದೆತಾಯಿಗಳು ಪ್ರಯತ್ನಿಸಿದರು. ಬಸವಣ್ಣನವರು ಒಪ್ಪಲಿಲ್ಲ. ಅವರು ಕಪ್ಪಡಿ ಸಂಗಮಕ್ಕೆ ಹೋದರು”. ಹೀಗೆ ಮುಂದುವರೆದು ಬಸವಣ್ಣನವರ ಸುಧಾರಣೆಗಳನ್ನು ಬಹಳ ಸೌಮ್ಯವಾದಿ ಭಾಷೆಯಲ್ಲಿಯೇ ಸಣ್ಣಮಕ್ಕಳಿಗೆ ತಿಳಿಹೇಳುವ ಪಾಠವದು. ಇದು 70ರ ದಶಕದಲ್ಲಿ ಬರೆದದ್ದು. 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಚರಿತ್ರೆಯನ್ನು, ಅವರ ವಚನಗಳಿಂದ ಅವರ ಬಗ್ಗೆ ಬರೆದ ಕಾವ್ಯಗಳು ಕಟ್ಟಿಕೊಡುವ ಐತಿಹ್ಯದಿಂದ ಕಟ್ಟಿಕೊಳ್ಳಲಾಗಿದೆ. ವೈದಿಕ ಧರ್ಮದಿಂದ ಸಿಡಿದೆದ್ದ ಬಸವಣ್ಣನವರ ಚಿಂತನೆಗಳನ್ನು, ಅವರು ರೂಪಿಸಲು ಪ್ರಯತ್ನಪಟ್ಟ ಜಾತಿರಹಿತ ಸಮಾಜವನ್ನು ಕಾಲಾನುಘಟ್ಟದಲ್ಲಿ ಅರಿತು ಶೋಧಿಸುವ ಕೆಲಸ ಇನ್ನೂ ನಡೆಯುತ್ತಲೇ ಇದೆ.

2022ರಲ್ಲಿ, ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ನಡೆದಿರುವ ಈ ತಿದ್ದುಪಡಿಯನ್ನು ಗಮನಿಸಿ: (ಭಾರತದ ಮತ ಪ್ರವರ್ತಕರು ಎಂಬ ಪಾಠದಲ್ಲಿ); “ಬಸವೇಶ್ವರರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಮಾದರಸ ಮತ್ತು ಮಾದಲಾಂಬಿಕೆಯ ಪುತ್ರರು. ಸಂಸ್ಕೃತ ಮತ್ತು ಕನ್ನಡಗಳನ್ನು ಕಲಿತು ತಮ್ಮ ಉಪನಯನವಾದ ನಂತರ ಕೂಡಲ ಸಂಗಮಕ್ಕೆ ನಡೆದರು. ಅಲ್ಲಿ ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು ಧ್ಯಾನ ಸಾಧನೆ ಮಾಡಿದರು. ಇವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು”. ಯಾವ ವೈದಿಕ-ಸನಾತನ ಧರ್ಮದ ಜಾತಿ ಪದ್ಧತಿ, ಮೇಲು-ಕೀಳು, ಅನಿಷ್ಠ ಕಂದಾಚಾರಗಳನ್ನು ಧಿಕ್ಕರಿಸಿ ಎಲ್ಲರೂ ಸಮಾನರಾಗಿ ಇಷ್ಟಲಿಂಗವನ್ನು ಪೂಜಿಸುವಂತಹ ಲಿಂಗಾಯತ ಸಮಾಜವನ್ನು ಸ್ಥಾಪಿಸಿದರೋ ಅಷ್ಟನ್ನೂ ಕಡೆಗಣಿಸುವ ಮತ್ತು ಮಕ್ಕಳಿಗೆ ಅದನ್ನು ಮರೆಮಾಚಿಸುವಂತಿರುವ ಈ ಪರಿಷ್ಕರಣೆಯ ವೈದಿಕ ಹುನ್ನಾರ ಯಾರಿಗಾದರೂ ಅರ್ಥವಾಗುವುದಿಲ್ಲವೇ?

ಇದೊಂದು ಸಣ್ಣ ಝಳಕ್ ಅಷ್ಟೇ. ಅಂಬೇಡ್ಕರ್ ಅವರು ’ಜಾತಿವ್ಯವಸ್ಥೆಯಿಂದ ಬೇಸತ್ತು ಹಿಂದೂ ಧರ್ಮವನ್ನು ತೊರೆದು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದ ಜಾತಿ ಮತ್ತು ಸಾಮಾಜಿಕ ಶ್ರೇಣೀಕರಣವನ್ನು ವಿರೋಧಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು’ ಎಂಬ ಸಾಲನ್ನು ತಿರುಚುವುದು, ಆರ್‌ಎಸ್‌ಎಸ್ ಸಂಸ್ಥೆಯನ್ನು ಮಕ್ಕಳಿಗೆ ಪರಿಚಯಿಸಲು ಅದರ ಸಂಸ್ಥಾಪಕ ಮತ್ತು ವಿನಾಶಕಾರಿ ಚಿಂತನೆಗಳನ್ನು ಪಸರಿಸಿದ ಹೆಡಗೇವಾರ್ ಪಾಠವನ್ನು ಸೇರಿಸುವುದು, ’ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ’ ಎಂಬ ಪಾಠದಲ್ಲಿ, ಭಾರತ-ಚೀನಾದ ಬಗೆಗಿನ ವಿಭಾಗದಲ್ಲಿ “ಮಾವೋವಾದಿಗಳು ಭಾರತದಲ್ಲಿ ನಕ್ಸಲವಾದವನ್ನು ಪಸರಿಸುವುದರಿಂದ ಈ ಎರಡು ರಾಷ್ಟ್ರಗಳ ಮಧ್ಯೆ ಮನಸ್ತಾಪವಿದೆ” ಎಂಬ ತಪ್ಪು ಮಾಹಿತಿಯ ಮತ್ತು ಅತಾರ್ಕಿಕ ಸಾಲನ್ನು ತುರುಕುವುದು, ಹಣವನ್ನು ಹೆಣ್ಣಿಗೆ ಹೋಲಿಸಿ ಬರೆದ ಬನ್ನಂಜೆ ಗೋವಿಂದಾಚಾರ್ಯರ ಪುರುಷಪ್ರಧಾನ ಪಾಠವನ್ನು ಸೇರಿಸುವುದು ಹೀಗೆ ಸಾಗಿರುವ ಪ್ರತಿಗಾಮಿ ಪರಿಷ್ಕರಣೆಯನ್ನು ಪಟ್ಟಿ ಮಾಡುತ್ತಾಹೋದರೆ ಅದೇ ಪುಸ್ತಕವಾಗಬಹುದು. ಇಂತಹ ಪ್ರತಿಗಾಮಿ ಪಠ್ಯ ಪರಿಷ್ಕರಣೆ ಮತ್ತು ಪ್ರತಿ ಸಂಗತಿಯನ್ನೂ ಬ್ರಾಹ್ಮಣ್ಯದ ಚೌಕಟ್ಟಿನಲ್ಲಿ ಮರು ನಿರೂಪಿಸುವ ಕುತಂತ್ರಕ್ಕೆ ಕನ್ನಡ ನಾಡು ಎಚ್ಚೆತ್ತಿರುವುದು ಕಳೆದ ಎರಡು ವಾರಗಳ ಮಹತ್ವದ ಬೆಳವಣಿಗೆ ಅನ್ನಬಹುದು.

ಈ ಹಿಂದೆಯೂ ಹಲವು ಬಾರಿ ಬಿಜೆಪಿ ಸರ್ಕಾರಗಳು ಪಠ್ಯಪುಸ್ತಕಗಳ ವಿಷಯದಲ್ಲಿ ಬಲಪಂಥೀಯ ಕೋಮುವಾದಿ ಚಿಂತನೆಗಳನ್ನು ಪ್ರಚುರಪಡಿಸುವ ಕೆಲಸ ಮಾಡಿದ್ದವು. ಹಿಂದೆ ಕೇಂದ್ರ ಸರ್ಕಾರದಲ್ಲಿ ಮುರಳಿ ಮನೋಹರ ಜೋಷಿ ಮಾನವ ಸಂಪನ್ಮೂಲ ಸಚಿವರಾಗಿದ್ದಾಗ, ಎನ್‌ಸಿಇಆರ್‌ಟಿ ಪಠ್ಯಗಳನ್ನು ಕೋಮುವಾದೀಕರಣಗೊಳಿಸುವ ಕೆಲಸ ನಡೆದಿತ್ತು. ಆಗಲೂ ದೇಶದ ವಿವಿಧ ಮೂಲಗಳ ಚಿಂತಕರಿಂದ, ಶಿಕ್ಷಣ ತಜ್ಞರಿಂದ ವಿರೋಧ ವ್ಯಕ್ತವಾಗಿತ್ತು. ಇತ್ತೀಚೆಗೆ ಕೂಡ ಕೆಲವು ದಿನಗಳ ಹಿಂದೆ ಸಿಬಿಎಸ್‌ಸಿ ಪಠ್ಯಗಳಲ್ಲಿ ಜನಕವಿ ಫೈಜ್ ಅಹ್ಮದ್ ಫೈಜ್ ಕವನ ಕೈಬಿಡುವ ಮತ್ತಿತರ ಜಾತ್ಯತೀತ ಧೋರಣೆಯ ಪಾಠಗಳಿಗೆ ಕತ್ತರಿ ಹಾಕುವ ಪ್ರಯೋಗ ನಡೆದಿತ್ತು. ಆದರೆ ಕರ್ನಾಟಕದ ಮಟ್ಟದಲ್ಲಿ ಆಗುತ್ತಿರುವ ಈ ಪರಿಷ್ಕರಣೆ ಒಂದು ಹಂತವನ್ನು ದಾಟಿ, ಕೆಲವು ತಿಂಗಳುಗಳಿಂದ ಇಲ್ಲಿ ನಡೆಯುತ್ತಿರುವ ಬಹುಸಂಖ್ಯಾತ ಮತೀಯವಾದದ ಹೇರಿಕೆಯ ಮುಂದುವರಿಕೆಯಂತೆ ಆಗಿದೆ. ಮತ್ತೆ ಈ ಪರಿಷ್ಕರಣೆಗೆ ಯಾವುದಾದರೂ ’ಕಾರಣ’ವನ್ನಾದರೂ ನೀಡಬೇಕು ಎನ್ನುವ ನಿಯಮವನ್ನೂ ಗಾಳಿಗೆ ತೂರಿ ಮನಬಂದಂತೆ (ಜಾತ್ರೆಗಳಲ್ಲಿ ಮುಸ್ಲಿಮರಿಗೆ ಅಂಗಡಿ ಹಾಕಲು ಅವಕಾಶ ನೀಡಬಾರದು ಎಂಬ ಕರೆಯಂತೆಯೇ) ಪಠ್ಯಗಳನ್ನು ಬಿಡುವ, ತಮ್ಮ ರಾಜಕೀಯ ಸಿದ್ಧಾಂತವನ್ನು ಹಸಿಹಸಿಯಾಗಿ ಸೇರಿಸುವ ಹುನ್ನಾರದಲ್ಲಿ ಎಂತಹ ಕೊಳಕು ಪಾಠವನ್ನಾದರೂ ಸೇರಿಸುವ ಹಂತಕ್ಕೆ ಬಂದುನಿಂತಿದೆ.

ಬಿಜೆಪಿ ಮತ್ತು ಸಂಘ ಪರಿವಾರದವರು ಮುಖ್ಯವಾಹಿನಿ ರಾಜಕಾರಣದಲ್ಲಿ ನೆಲೆಯೂರುವುದಕ್ಕೆ ಮುಂಚಿನಿಂದಲೂ, ಮಕ್ಕಳ ಶಿಕ್ಷಣದಲ್ಲಿ ತಮ್ಮ ಅಜೆಂಡಾವನ್ನು ನೆಲೆಯೂರಿಸುವ ಕೆಲಸವನ್ನು ಪರೋಕ್ಷವಾಗಿ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಒಂದು ಸಣ್ಣ ಉದಾಹರಣೆಯಾಗಿ, ರಾಷ್ಟ್ರೋತ್ಥಾನ ಪರಿಷತ್ತು, ಕಡಿಮೆ ಬೆಲೆಯ, ಕಡಿಮೆ ಪದಗಳ ಪುಸ್ತಕಗಳನ್ನು ಬರೆಸಿ ಮುದ್ರಿಸಿ ಶಾಲಾ ಗ್ರಂಥಾಲಯಗಳಿಗೆ ಹೋಗುವಂತೆ ಮಾಡಿ, ಮಕ್ಕಳ ಮನಸ್ಸಿನಲ್ಲಿ ಪ್ರತಿಗಾಮಿ ವ್ಯಕ್ತಿಗಳ ವಿಷಯಗಳನ್ನು ತುಂಬುವಂತೆ ಮಾಡಿದ್ದು. ಈ ವ್ಯವಸ್ಥಿತ ತಂತ್ರಗಾರಿಕೆ ಇಂದು ಕಡ್ಡಾಯ ಎಂಬಂತೆ ಮುಖ್ಯವಾಹಿನಿಗೆ ಬಂದು ವಕ್ಕರಿಸಿರುವುದು ಆತಂಕದ ಸಂಗತಿಯಾಗಿದೆ. ಇಂತಹ ಪ್ರಕಾಶಕರ ಸಂಚುಗಳ ಬಗ್ಗೆ ಕುವೆಂಪು 1974ರ ಒಂದು ಭಾಷಣದಲ್ಲಿಯೇ ಎಚ್ಚರಿಸಿದ್ದರು. (ಸಂಸ್ಕೃತಿ ಕ್ರಾಂತಿಗೆ ಕಹಳೆನಾಂದಿ! ಎಂಬ ಭಾಷಣ ಪ್ರಕಟವಾಗುವ ಹೊತ್ತಿಗೆ ಕುವೆಂಪು ಅವರು ಇನ್ನಷ್ಟು ವಿಷಯಗಳನ್ನು ಅದರಲ್ಲಿ ವಿಷಾದಪಡಿಸಿದ್ದಾರೆ). ಕುವೆಂಪು ಮಾತುಗಳಲ್ಲೇ ಕೇಳಿ: “ಅಂದು ಜಯತೀರ್ಥರು ಎಂಬ ಪುಸ್ತಕವನ್ನು ಟೀಕಿಸಿದ್ದೆ ಮಾತ್ರ. ಆದರೆ ರಾಷ್ಟ್ರೋತ್ಥಾನದವರು ಅವರ ಪುಸ್ತಕಗಳನ್ನೆಲ್ಲ ಕಳಿಸಿದ ಮೇಲೆ ನೋಡುತ್ತೇನೆ: ನನ್ನ ಟೀಕೆ ’ಜಯತೀರ್ಥ’ರಿಗಿಂತಲೂ ’ವಾದಿರಾಜ’ರಿಗೆ ಅನ್ವಯವಾಗುವಂತೆ ತೋರಿತು. ಅಂದರೆ ಏನು ತೋರುತ್ತದೆ? ನಿಜವಾಗಿಯೂ ಲೋಕಕ್ಕೂ ದೇಶಕ್ಕೂ ಸರ್ವಜನರಿಗೂ ಸೇವೆ ಮಾಡಿರುವ ವಿಭೂತಿ ವ್ಯಕ್ತಿಗಳ ವಿಚಾರದಲ್ಲಿ ಬರೆಯಲು ಬೇಕಾದಷ್ಟು ವಾಸ್ತವವಾದ ಸತ್ಯ ಸಂಗತಿಗಳೆ ಇರುವುದರಿಂದ ಅಲ್ಲಿ ಲೇಖಕ ಕಾಗಕ್ಕ ಗುಬ್ಬಕ್ಕನ ಕಟ್ಟುಕತೆಗೆ ಶರಣಾಗುವ ಅವಶ್ಯಕತೆಯೂ ಇರುವುದಿಲ್ಲ, ಅವಕಾಶವೂ ಇರುವುದಿಲ್ಲ. ಹಾಗಲ್ಲದೆ ಬರಿಯ ಒಂದು ಕೋಮಿಗೆ ಸೇರಿ, ಸಾರ್ವಜನಿಕ ಸೇವೆಯ ಸ್ವರೂಪದ ಯಾವ ಕೆಲಸವನ್ನೂ ಮಾಡದ ಸ್ಥಳೀಯ ಮಾತ್ರದವರನ್ನು ಅಟ್ಟಕ್ಕೇರಿಸುವ ಅಥವಾ ಅಕಾಶಕ್ಕೇರಿಸುವ ಸ್ವಜಾತಿ ಸ್ತೋತ್ರಕ್ಕೆ ಹೊರಟರೆ ಬರಿಯ ಸುಳ್ಳುಸುಳ್ಳು ಪವಾಡಗಳನ್ನೂ ಅಲ್ಲದ ಸಲ್ಲದ ಹೊಗಳಿಕೆಗಳನ್ನೂ ಬರೆದು ಸ್ವಮತ ಪ್ರಚಾರ ಮಾಡಬೇಕಾಗುತ್ತದೆ. ಈ ಜಯತೀರ್ಥ ಮತ್ತು ವಾದಿರಾಜರಂಥವರು ಬರಿಯ ಒಂದು ಕೋಮಿಗೆ ಪೂಜ್ಯರೂ ಗೌರವಾರ್ಹರೂ ಆಗುತ್ತಾರೆಯೆ ಹೊರತು ಉಳಿದವರಿಗೆ ನಗೆಪಾಟಲಾಗುತ್ತಾರೆ.”

ಮುಂದುವರಿದು ಹೇಳುತ್ತಾರೆ: “ಆದ್ದರಿಂದ ಈ ಪ್ರಕಾಶನ ಸಂಸ್ಥೆಗಳಿಗೆ ನನ್ನ ಸಲಹೆ: ಧಾರ್ಮಿಕ ಮತ್ತು ಅಧ್ಯಾತ್ಮಿಕ ವರ್ಗದ ವ್ಯಕ್ತಿಗಳನ್ನು ಕುರಿತು ಬರೆಯಿಸುವಾಗ ಕುದ್ರ ಕೋಮುವ್ಯಕ್ತಿಗಳನ್ನು ಆರಿಸಿಕೊಳ್ಳಬೇಡಿ: ವಿಶ್ವವ್ಯಕ್ತಿಗಳನ್ನೂ ರಾಷ್ಟ್ರವ್ಯಕ್ತಿಗಳನ್ನೂ ಮಾತ್ರ ಆರಿಸಿಕೊಳ್ಳಿ. ಮೌಢ್ಯ ಪ್ರಚೋದಕವಾಗುವಂತಹ ತೀರ್ಥಕ್ಷೇತ್ರಗಳ ಪವಾಡದ ಸುಳ್ಳುಸುಳ್ಳು ಕತೆಗಳನ್ನೆಲ್ಲ ನಿಜ ಎಂದು ಹೇಳಿ ಮಕ್ಕಳನ್ನೂ ಮೂಢರನ್ನಾಗಿ ಮಾಡಬೇಡಿ, ವೈಜ್ಞಾನಿಕ ದೃಷ್ಟಿಯ ವಿಚಾರವಂತರನ್ನಾಗಿ ಮಾಡಿ”.

ಮಕ್ಕಳ ಓದಿನ ಬಗ್ಗೆ ಸಂಘ ಪರಿವಾರದ ಪ್ರಕಾಶಕರಿಗೆ ಇಂತಹ ಕಿವಿಹಿಂಡುವ ಮಾತುಗಳನ್ನಾಡಿದ್ದ ವಿಶ್ವ ಕವಿ ಕುವೆಂಪು ಅವರ ಮೇಲೆ ಬ್ರಾಹ್ಮಣಶಾಹಿಯ ಕೆಲವು ಶಕ್ತಿಗಳು ದಾಳಿ ಮಾಡಿದ್ದವು. ಅದರ ಮುಂದುವರಿಕೆಯ
ಭಾಗವಾಗಿಯೇ ಸದರಿ ಪಠ್ಯಪುಸ್ತಕದ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕುವೆಂಪು ಅವರು ರಚಿಸಿದ ನಾಡಗೀತೆಯ ಸಾಲುಗಳನ್ನು ತಿರುಚಿ ಅವರಿಗೆ ಅವಮಾನಿಸುವ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು! ಇದು ಕೂಡ ಪಠ್ಯ ಪರಿಷ್ಕರಣೆಯ ಸಮಯದಲ್ಲಿ ಆಕ್ರೋಶವೆಬ್ಬಿಸಿದೆ. ಶಿಕ್ಷಣ ಕ್ಷೇತ್ರದಲ್ಲಾಗಲೀ, ಮಕ್ಕಳ ಕಲಿಕೆಯಲ್ಲಾಗಲೀ ಯಾವುದೇ ಅನುಭವವಿಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೆ ಹೆಸರುವಾಸಿಯಾಗಿದ್ದ ವ್ಯಕ್ತಿಯೊಬ್ಬನನ್ನು ಕೋಟ್ಯಂತರ ಮಕ್ಕಳು ಕಲಿಯುವ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡುವುದಕ್ಕೆ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ, ಬಹುತೇಕ ಒಂದೇ ಸಮುದಾಯದವರನ್ನು ಅದರ ಸದಸ್ಯರನ್ನಾಗಿಸಿ ರಾಜ್ಯ ಸರ್ಕಾರ ಮಕ್ಕಳ ಭವಿಷ್ಯದ ಜೊತೆಗೆ ಆಟ ಆಡುತ್ತಿರುವುದು ಅಕ್ಷಮ್ಯ.

ಈ ನಡೆಗಳನ್ನು ವಿರೋಧಿಸಿ ತಮ್ಮ ಪಾಠಕ್ಕೆ ನೀಡಿದ್ದ ಅನುಮತಿಯನ್ನು ಮೊದಲು ಹಿಂತೆಗೆದುಕೊಂಡ ಖ್ಯಾತ ಬರಹಗಾರ ದೇವನೂರ ಮಹದೇವ ಅವರನ್ನು ಸಂಘ ಪರಿವಾರದ ಟ್ರೋಲ್ ಪಡೆಗಳು ಗುರಿಯಾಗಿಸಿಕೊಂಡಿವೆ. ಬಸವಣ್ಣ, ಕುವೆಂಪುರವರ ನಂತರ ದೇವನೂರ ಮಹದೇವರನ್ನು ತಮ್ಮ ದಾಳಿಗೆ ಆಯ್ಕೆ ಮಾಡಿಕೊಂಡಿರುವುದು ಜನರನ್ನು ಇನ್ನಷ್ಟು ಕೋಪೋದ್ರಿಕ್ತಗೊಳಿಸಿದೆ. ಈ ಲೇಖನ ಬರೆಯುವ ಹೊತ್ತಿಗೆ ಇನ್ನೂ ಹತ್ತಾರು ಲೇಖಕರು ತಮ್ಮ ಪಾಠಗಳಿಗೆ ನೀಡಿದ ಅನುಮತಿಯನ್ನು ಹಿಂಪಡೆದು ಸಚಿವರಿಗೆ ಪತ್ರ ಬರೆದಿದ್ದಾರೆ. ಲಕ್ಷಾಂತರ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.

ಸರ್ಕಾರ ಎಚ್ಚೆತ್ತುಕೊಂಡು, ಮಾಡಿರುವ ಪರಿಷ್ಕರಣೆಯನ್ನು ರದ್ದುಗೊಳಿಸಿ ಹಿಂದಿನ ಪಠ್ಯವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವುದು ಯುಕ್ತ ಮತ್ತು ನ್ಯಾಯವಾದ ನಡೆಯಾಗಿದೆ.


ಇದನ್ನೂ ಓದಿ: ವಿಶೇಷ ವರದಿ: ಬಿಜೆಪಿ ಅವಧಿಯಲ್ಲಿ ಪರೀಕ್ಷಾ ಅಕ್ರಮ, ಎಡವಟ್ಟುಗಳು & ಶೈಕ್ಷಣಿಕ ಅವ್ಯವಸ್ಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...