Homeಕರ್ನಾಟಕವಿಶೇಷ ವರದಿ: ಬಿಜೆಪಿ ಅವಧಿಯಲ್ಲಿ ಪರೀಕ್ಷಾ ಅಕ್ರಮ, ಎಡವಟ್ಟುಗಳು & ಶೈಕ್ಷಣಿಕ ಅವ್ಯವಸ್ಥೆ

ವಿಶೇಷ ವರದಿ: ಬಿಜೆಪಿ ಅವಧಿಯಲ್ಲಿ ಪರೀಕ್ಷಾ ಅಕ್ರಮ, ಎಡವಟ್ಟುಗಳು & ಶೈಕ್ಷಣಿಕ ಅವ್ಯವಸ್ಥೆ

40% ಕಮಿಷನ್ ಭ್ರಷ್ಟಾಚಾರ ಮುನ್ನೆಲೆಗೆ ಬಂದ ಬಳಿಕ ಪಿಎಸ್‌ಐ ಪರೀಕ್ಷೆ ಹಗರಣ ಹೊರಬಿದ್ದಿದೆ. ಶೈಕ್ಷಣಿಕ ವ್ಯವಸ್ಥೆ ಹಳ್ಳಹಿಡಿಯುತ್ತಿರುವ ಸೂಚನೆಯಾಗಿ ಕೆಲವು ಪ್ರಕರಣಗಳನ್ನು ಇಲ್ಲಿ ಉದಾಹರಿಸಲಾಗಿದೆ.

- Advertisement -
- Advertisement -

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಈಗ ಪೇಚಿಗೆ ಸಿಲುಕಿದೆ. ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಭಾರೀ ಸಂಚಲನ ಮೂಡಿಸಿದ್ದು, ಸಚಿವರಾದಿಯಾಗಿ ಈ ಅಕ್ರಮದಲ್ಲಿ ಪಾಲ್ಗೊಂಡಿರುವ ಆರೋಪಗಳು ಬಂದಿವೆ. ಬಿಜೆಪಿಯ ಕಾರ್ಯಕರ್ತೆ ಹಾಗೂ ಪಿಎಸ್‌ಐ ಪರೀಕ್ಷೆ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ನಿಷ್ಪಕ್ಷಪಾತ ತನಿಖೆಗೆ ಆಗ್ರಹಗಳು ಕೇಳಿ ಬರುತ್ತಿರುವ ಹೊತ್ತಿನಲ್ಲೇ ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಪ್ರಾಮಾಣಿಕವಾಗಿ ಪರೀಕ್ಷೆಯನ್ನು ಬರೆದು, ಆಸೆಗಣ್ಣಿನಿಂದ ಭವಿಷ್ಯವನ್ನು ನೋಡುತ್ತಿದ್ದ ಅಭ್ಯರ್ಥಿಗಳು ಆಘಾತಕ್ಕೊಳಗಾಗಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ದೊಡ್ಡ ದೊಡ್ಡ ತಲೆಗಳನ್ನು ಉಳಿಸಲೆಂದೇ ಮರುಪರೀಕ್ಷೆಗೆ ಸರ್ಕಾರ ಮುಂದಾಗಿದೆ ಎಂದು ವಿರೋಧ ಪಕ್ಷದ ನಾಯಕರು ಟೀಕಿಸುತ್ತಿದ್ದಾರೆ.

ನರೇಂದ್ರ ಮೋದಿಯವರ ನಾಯಕತ್ವದಲ್ಲಿ ರಾಷ್ಟ್ರದ ಆಡಳಿತ ಚುಕ್ಕಾಣಿಯನ್ನು ಕಳೆದ 8 ವರ್ಷಗಳಿಂದ ಬಿಜೆಪಿ ಹಿಡಿದಿದ್ದರೆ, ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್‌ ಕಮಲದ ಮೂಲಕ ಉರುಳಿಸಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಬಿ.ಎಸ್‌.ಯಡಿಯೂರಪ್ಪನವರ ನಂತರ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಮೇಲೆ ಕೋಮು ಸಂಬಂಧಿತ ಸಂಗತಿಗಳಿಗೆ ಸದಾ ಸುದ್ದಿಯಾಗುತ್ತಿರುವ ರಾಜ್ಯವೀಗ, ಭ್ರಷ್ಟಾಚಾರದಲ್ಲೂ ಸದ್ದು ಮಾಡುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

40% ಕಮಿಷನ್‌ ಇಲ್ಲದೆ ಯಾವುದೇ ಕಾಮಗಾರಿಗಳು ನಡೆಯುವುದಿಲ್ಲ ಎಂದು ಗುತ್ತಿಗೆದಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ಮೋದಿಯವರಿಗೂ ಪತ್ರ ಬರೆದಿದ್ದಾರೆ. ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಅವರು ಕೆ.ಎಸ್.ಈಶ್ವರಪ್ಪನವರ ಮೇಲೆ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದರು. ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಈಶ್ವರಪ್ಪನವರು, “ಸ್ವ ಇಚ್ಛೆಯಿಂದ” ಈ ನಿರ್ಧಾರ ಕೈಗೊಂಡಿರುವುದಾಗಿ ಕಾರಣ ನೀಡಿದ್ದರು. ಪರ್ಸೆಂಟೇಜ್‌ ಫೈಲ್ಸ್‌ ಧೂಳು ಹಿಡಿಡುವ ಮುನ್ನವೇ ಪಿಎಸ್‌ಐ ಪರೀಕ್ಷೆ ಅಕ್ರಮದ ಘಾಟು ಜೋರಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಡೆದ ಇತರ ಪರೀಕ್ಷೆಗಳಲ್ಲೂ ಗೊಂದಲಗಳು ಏರ್ಪಟ್ಟಿವೆ. ಕನ್ನಡದ ವಿಷಯದಲ್ಲಂತೂ ಇದು ಪದೇ ಪದೇ ಪುನಾವರ್ತನೆಯಾಗುತ್ತಲೇ ಇದೆ. ಮತ್ತೊಂದೆಡೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ, ಅವೈಜ್ಞಾನಿಕ ಶೈಕ್ಷಣಿಕ ವ್ಯವಸ್ಥೆಯಿಂದಾಗಿ ಬಡ ಮಕ್ಕಳ ಶಿಕ್ಷಣ ಡೋಲಾಯಮಾನವಾಗಿದೆ.

ಇದನ್ನೂ ಓದಿರಿ: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ನಾಯಕರ ರಕ್ಷಣೆಗೆ ಪರೀಕ್ಷೆ ರದ್ದು: ಡಿ.ಕೆ.ಶಿವಕುಮಾರ್‌

ಪಿಎಸ್‌ಐ ಪರೀಕ್ಷೆ ಅಕ್ರಮ

545 ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆದಿದ್ದ ಬೆಂಗಳೂರಿನ 7 ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದಾಗಿ ಸಿಐಡಿ ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿ ವರದಿ ಸಲ್ಲಿಸಿದ್ದಾರೆ. ಕಲಬುರಗಿ ಜ್ಞಾನಜ್ಯೋತಿ ಶಾಲೆಯಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ 11 ಅಭ್ಯರ್ಥಿಗಳ ಪೈಕಿ 8 ಮಂದಿಯನ್ನು ಈಗಾಗಲೇ ಬಂಧಿಸಿದ್ದಾರೆ.

ಬೆಂಗಳೂರಿನ 7 ಕೇಂದ್ರಗಳಲ್ಲಿ ಪರೀಕ್ಷೆ ಬರೆದು ಹುದ್ದೆಗೆ ಆಯ್ಕೆಯಾಗಿದ್ದ 22 ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳು ಅನುಮಾನಾಸ್ಪದವಾಗಿವೆ. 12 ಮಂದಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇನ್ನೂ 10 ಮಂದಿಯ ಬಂಧನ ಆಗಬೇಕಿದೆ ಎಂದು ಮೂಲಗಳು ಹೇಳುತ್ತಿವೆ. ಹೀಗೆ ಪಿಎಸ್‌ಐ ಪರೀಕ್ಷೆ ಹಗರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಲೇ ಇದೆ. ಮತ್ತಷ್ಟು ಮಂದಿ ವಿಚಾರಣೆಗೆ ಹಾಜರಾಗುತ್ತಲೇ ಇದ್ದಾರೆ.

ಐಚ್ಛಿಕ ಕನ್ನಡ ಪರೀಕ್ಷೆಯಲ್ಲಿ ಸಾಲು ಸಾಲು ತಪ್ಪುಗಳು

7 ವರ್ಷಗಳ ಬಳಿಕ ನಡೆಸಲಾದ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಕನ್ನಡ ಐಚ್ಛಿಕ ಪ್ರಶ್ನೆ ಪತ್ರಿಕೆಯಲ್ಲಿ ಸಾಲು ಸಾಲು ತಪ್ಪುಗಳಾಗಿವೆ. ದೋಷಗಳ ವಿರುದ್ಧ ಹುದ್ದೆಯ ಆಕಾಂಕ್ಷಿಗಳು ಧ್ವನಿ ಎತ್ತಿದ್ದಾರೆ. ಜೊತೆಗೆ ಪ್ರಶ್ನೆ ಪತ್ರಿಕೆಯಲ್ಲಾಗಿರುವ 25ಕ್ಕೂ ಹೆಚ್ಚು ತಪ್ಪುಗಳನ್ನು ಗುರುತಿಸಿದ್ದಾರೆ. ಪ್ರಕರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕದವನ್ನು ತಟ್ಟಿದ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಪ್ರತಿಕ್ರಿಯೆ ನೀಡಿದ್ದು, ಅಲ್ಲಿಯೂ ಕೆಇಎ ಎಡವಟ್ಟು ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತಪ್ಪುಗಳನ್ನು ನಮೂದಿಸಿ ಅಭ್ಯರ್ಥಿ ಡಾ.ಎಂ.ರವಿ ಬರೆದಿದ್ದ ಪತ್ರದ ಕಾರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೆಇಎ ಕೇವಲ ಐದು ಅಂಶಗಳಿಗೆ ಮಾತ್ರ ಸಮಜಾಯಿಷಿ ನೀಡಿ ಇನ್ನುಳಿದ ವಿಚಾರಗಳಿಗೆ ಮೌನ ತಾಳಿದೆ. ಪ್ರಶ್ನೆ ಪತ್ರಿಕೆಯಲ್ಲಿದ್ದ ಹಲವು ಗೊಂದಲಕಾರಿ ಅಂಶಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

‘ವಿಮರ್ಶೆಯ ಪರಿಭಾಷೆ’ ಕೃತಿಯನ್ನು ‘ವಿಮರ್ಶೆಯ ನರಿಭಾಷೆ’ ಎಂದು ತಿರುಚಲಾಗಿತ್ತು. ಪ್ರೇಮಕವಿ ಕೆ.ಎಸ್‌.ನರಸಿಂಹಸ್ವಾಮಿ ಅವರ ಹೆಸರನ್ನು ಕೆ.ಎಸ್. ನರಸಿಂಹವರ್ಮ ಎಂದು ಬರೆಯಲಾಗಿತ್ತು. ಕೆಲವಡೆ ಪ್ರಶ್ನೆಗಳನ್ನು ಹೇಗೆ ಗ್ರಹಿಸಿ ಉತ್ತರಿಸಬೇಕೆಂಬ ಸೂಚನೆಗಳಿರಲಿಲ್ಲ. ಹೀಗೆ ಸುಮಾರು 25ಕ್ಕೂ ಹೆಚ್ಚು ತಪ್ಪುಗಳಾಗಿದ್ದರೂ ಕೆಇಎ ಕೇವಲ 5 ತಪ್ಪುಗಳಿಗೆ ಮಾತ್ರ ಪ್ರತಿಕ್ರಿಯೆ ನೀಡಿ ಕೈ ತೊಳೆದುಕೊಂಡಿದೆ. (ಹೆಚ್ಚಿನ ವಿವರಗಳಿಗೆ ‘ಇಲ್ಲಿ’ ಕ್ಲಿಕ್‌ ಮಾಡಿ)

ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಪ್ರತ್ಯಕ್ಷ; ಕೊನೆಗೂ ಬಗೆಹರಿಯದ ಸಮಸ್ಯೆ

ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ 2021ರ ಡಿಸೆಂಬರ್‌ 26ರಂದು ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು ನುಸುಳಿ ಅಭ್ಯರ್ಥಿಗಳು ಗೊಂದಲಕ್ಕೆ ಸಿಲುಕಿದರು. ತಾಂತ್ರಿಕ ದೋಷದಿಂದಾಗಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಭಾಷೆಯ ಪ್ರಶ್ನೆಗಳು ಬಂದಿದ್ದು, ಮರು ಪರೀಕ್ಷೆ ನಡೆಸುವುದಾಗಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಹೇಳಿತ್ತು.

ಇದನ್ನೂ ಓದಿರಿ: ಪಿಎಸ್‌ಐ ಪರೀಕ್ಷೆ ಅಕ್ರಮ: ಗೃಹಸಚಿವರನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಎಎಪಿ ಮನವಿ

“ಮರುಪರೀಕ್ಷೆಯನ್ನೇನೋ ನಡೆಸಿದರು. ಆದರೆ ಅಲ್ಲಿಯೂ ಎಡವಟ್ಟಾಗಿದೆ. ಎಲ್ಲ ನೊಂದ ಅಭ್ಯರ್ಥಿಗಳಿಗೆ ನ್ಯಾಯ ದೊರಕಲಿಲ್ಲ. ಆನ್‌ಲೈನ್‌ ಪರೀಕ್ಷೆ ಬರೆಯುವ ವೇಳೆ, ಗೊಂದಲ ಉಂಟಾದರೂ ಅನೇಕರು ಸಬ್‌ಮಿಟ್ ಕೊಟ್ಟಿದ್ದರು. ಆದರೆ ಯಾರು ಸಬ್‌ ಮಿಟ್ ಕೊಟ್ಟಿರಲಿಲ್ಲವೋ ಅಂಥವರಿಗೆ ಮಾತ್ರ ಮತ್ತೆ ಪರೀಕ್ಷೆ ನಡೆಸಲಾಗಿತ್ತು” ಎನ್ನುತ್ತಾರೆ ತುಮಕೂರಿನ ಸಿಂಗ್ರಿಹಳ್ಳಿ ಹರೀಶ್‌.

ಎನ್‌ಇಟಿ ಹಾಗೂ ಜೆಆರ್‌ಎಫ್‌ ವಿಚಾರದಲ್ಲಿ ಕನ್ನಡದಲ್ಲಿ ಆಗಿರುವ ಅನ್ಯಾಯದ ಕುರಿತು ‘ಪ್ರಜಾವಾಣಿ’ಯಲ್ಲಿ ಲೇಖನ ಬರೆದಿದ್ದ ಗೋವಿಂದರಾಜು ಎಂ.ಕಲ್ಲೂರು ಹಾಗೂ ಅಮರ್‌ ಅವರು ‘ನಾನುಗೌರಿ.ಕಾಂ’ ಜೊತೆಗೆ ವಿಷಯಗಳನ್ನು ಹಂಚಿಕೊಂಡರು.

“ಕೀ ಆನ್ಸರ್‌ನಲ್ಲಿಯೂ ತಪ್ಪುಗಳಿದ್ದವು. ಸಮಸ್ಯೆಯ ಕುರಿತು ರಾಜ್ಯಸಭೆಯಲ್ಲಿ ಎಲ್‌.ಹನುಮಂತಯ್ಯ ಮಾತನಾಡಿದರು. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಯುಜಿಸಿಗೆ ಪತ್ರ ಬರೆದರು. ಆದರೆ ಎಲ್ಲವನ್ನೂ ನಿರ್ಲಕ್ಷಿಸಿ ಫೆ. 19ರಂದು ಪರೀಕ್ಷಾ ಫಲಿತಾಂಶವನ್ನು ನೀಡಲಾಯಿತು. ಆದರೆ ಇತರೆ ಭಾಷೆಗಳಿಗೆ ಸಿಕ್ಕಿರುವ ಆದ್ಯತೆ ಕನ್ನಡಕ್ಕೆ ಸಿಗಲಿಲ್ಲ. ಫೆಲೋಶಿಪ್‌ ನೀಡುವಲ್ಲಿಯೂ ತಾರತಮ್ಯ ಎಸಗಲಾಗಿದೆ” ಎಂದು ತಿಳಿಸಿದರು.

“ಕನ್ನಡದಲ್ಲಿ 100 ಅಭ್ಯರ್ಥಿಗಳು ಬೋಧನೆಯ ಅರ್ಹತೆ ಗಳಿಸಿದರೆ, ಕೇವಲ 15 ಅಭ್ಯರ್ಥಿಗಳು ಫೆಲೊಶಿಪ್‌ಗೆ ಆಯ್ಕೆಯಾಗಿದ್ದಾರೆ. ವರ್ಷವರ್ಷವೂ ಈ ತಾರತಮ್ಯ ಮುಂದುವರಿದಿದೆ. ಕಳೆದ ಸಲ ಹಿಂದಿ ವಿಷಯದಲ್ಲಿ 816 ಅಭ್ಯರ್ಥಿಗಳು ಫೆಲೋಶಿಪ್‌ಗೆ ಆಯ್ಕೆಯಾಗಿದ್ದರೆ, ಈ ಭಾರಿ 819 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಂಸ್ಕೃತ ವಿಷಯದಲ್ಲಿ ಕಳೆದ ವರ್ಷ 126 ಮಂದಿಗೆ ಫೆಲೋಶಿಪ್‌ ದೊರೆತಿತ್ತು. ಈ ವರ್ಷ ಆ ಸಂಖ್ಯೆ 126ರಿಂದ 212ಕ್ಕೆ ಏರಿದೆ. ಫೆಲೋಶಿಪ್‌ ವಿಚಾರದಲ್ಲಿ ಇತರ ಭಾಷೆಯವರಿಗೆ ನೀಡಿದ ಆದ್ಯತೆ ಕನ್ನಡಿಗರಿಗೆ ಸಿಕ್ಕಿಲ್ಲ. ತಮಿಳು 20ರಿಂದ 84ಕ್ಕೆ, ತೆಲುಗು 34ರಿಂದ 44ಕ್ಕೆ, ಬೆಂಗಾಲಿ 41ರಿಂದ 86ಕ್ಕೆ ಏರಿಕೆ ಕಂಡಿವೆ. ಕನ್ನಡಿಗರಿಗೆ ನೀಡಿದ ಫೆಲೋಶಿಪ್‌ ಮಾತ್ರ ವರ್ಷ ವರ್ಷವೂ ಕಡಿಮೆಯಾಗುತ್ತಲೇ ಇದೆ” ಎಂದು ವಿಷಾದಿಸಿದರು.

“2018ರ ಡಿಸೆಂಬರ್‌ನಿಂದ ಇಲ್ಲಿಯವರೆಗೂ ಒಟ್ಟು 5 ಬಾರಿ ಎನ್‍ಇಟಿ/ಜೆಆರ್‌ಎಫ್ ಪರೀಕ್ಷೆ ನಡೆದಿದೆ. ಹಿಂದಿಯಲ್ಲಿ ಫೆಲೋಶಿಪ್‌ಗೆ ಆಯ್ಕೆಯಾದವರ ಸಂಖ್ಯೆ ಕ್ರಮವಾಗಿ 278, 283, 389, 816, 819. ಸಂಸ್ಕೃತದಲ್ಲಿ ಕ್ರಮವಾಗಿ 54, 137, 142, 126, 212 ಆಯ್ಕೆಯಾಗಿದ್ದಾರೆ. ಆದರೆ ಕನ್ನಡದ ಸಂಖ್ಯೆ ಕ್ರಮವಾಗಿ 48, 34, 50, 30, 15 ಆಗಿದೆ” ಎಂದು ಗೋವಿಂದ್ ಹಾಗೂ ಅಮರ್‌‌ ವಿವರಿಸಿದರು.

ಪರೀಕ್ಷೆಯಿಂದ ಹೊರಗುಳಿದ ಪ್ರೌಢಶಾಲಾ ವಿದ್ಯಾರ್ಥಿಗಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳು ಗೈರು ಹಾಜರಾಗಿರುವುದು ಕೂಡ ಶೈಕ್ಷಣಿಕ ಅವ್ಯವಸ್ಥೆಯನ್ನು ಸೂಚಿಸುತ್ತದೆ. ಗಣಿತ, ವಿಜ್ಞಾನ ಅಷ್ಟೇ ಅಲ್ಲದೇ ಭಾಷಾ ವಿಷಯಗಳ ಪರೀಕ್ಷೆಗೂ ವಿದ್ಯಾರ್ಥಿಗಳು ದೊಡ್ಡ ಮಟ್ಟದಲ್ಲಿ ಗೈರಾಗಿದ್ದಾರೆ.

ರಾಜ್ಯದ 3,444 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ದ್ವಿತೀಯ ಭಾಷಾ ವಿಷಯದ ಪರೀಕ್ಷೆಗೆ ಒಟ್ಟು 8,46,143 ವಿದ್ಯಾರ್ಥಿಗಳು ಹಾಜರಾಗಿದ್ದರು. ಆದರೆ 22,063 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಾದ ಯು.ಎಚ್‌.ಉಮರ್‌,  “ಅವೈಜ್ಞಾನಿಕ ಲಾಕ್‌ಡೌನ್‌ನಿಂದಾಗಿ ಮಕ್ಕಳ ಕಲಿಕೆಗೆ ಪೆಟ್ಟುಬಿದ್ದಿದೆ. ಇದಕ್ಕೆ ಸರ್ಕಾರವೇ ನೇರಹೊಣೆ. ಕಳೆದ ವರ್ಷ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಯಿತು. ಈ ವರ್ಷ ಪರೀಕ್ಷೆ ನಡೆಸಿದರು. ಸಾವಿರಾರು ಮಕ್ಕಳು ಪರೀಕ್ಷೆಗೆ ಗೈರಾಗಲು ಹಿಜಾಬ್‌ ಕಾರಣ ಎನ್ನಲಾಗದು. ಗೈರಾದವರಲ್ಲಿ ಗಂಡು ಮಕ್ಕಳೇ ಹೆಚ್ಚಿದ್ದಾರೆ. ಎರಡು ವರ್ಷ ಆನ್‌ಲೈನ್‌ ತರಗತಿಗಳನ್ನು ನಡೆಸಿದ ಕಾರಣ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾದರು. ಹೀಗಿರುವಾಗ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಹೇಗೆ ಎದುರಿಸಲು ಸಾಧ್ಯ?” ಎಂದು ಪ್ರಶ್ನಿಸಿದರು.

“ಬಡವರ ಪರವಾಗಿ ಯಾವುದೇ ಸರ್ಕಾರ ಇರುವುದಿಲ್ಲ. ಉಳ್ಳವರ ಪರವಾಗಿಯೇ ಇವೆ. ಶುಲ್ಕ ಹೆಚ್ಚಳ ಮಾಡುವುದು, ಖಾಸಗಿಯವರಿಗೆ ಅನುಮತಿ ನೀಡುವುದು, ಮೀಸಲು ಸೀಟ್‌ಗಳನ್ನು ಕಡಿಮೆ ಮಾಡುವುದು ನಡೆಯುತ್ತಿದೆ. ವರ್ಷವರ್ಷವೂ ಈ ತಾರತಮ್ಯವನ್ನು ಮುಂದುವರಿಸಲಾಗುತ್ತಿದೆ” ಎಂದು ವಿಷಾದಿಸಿದರು.

ಎನ್‌ಇಪಿ ಅವಾಂತರಕ್ಕೆ ಮದ್ದುಂಟೆ?

ಯಾವುದೇ ಚರ್ಚೆ, ಸಮಲೋಚನೆ ನಡೆಯದೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಂತಹಂತವಾಗಿ ಜಾರಿಯಾಗುತ್ತಿರುವುದು ಶೈಕ್ಷಣಿಕ ವ್ಯವಸ್ಥೆ ಮತ್ತಷ್ಟು ಹದಗೆಡಲು ಕಾರಣವಾಗಿದೆ. ಅಸಂಘಟಿತ, ಶೋಷಿತ ಸಮುದಾಯಗಳನ್ನು ಶಿಕ್ಷಣದಿಂದ ವಿಮುಖರನ್ನಾಗಿಸುವೇ ಎನ್‌ಇಪಿಯ ಉದ್ದೇಶ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯಬೇಕೆಂದರೆ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಎದುರಿಸಬೇಕಿದೆ. ಸಿಯುಇಟಿಯನ್ನು ರಾಜ್ಯ ಸರ್ಕಾರದ ಅಡಿಯಲ್ಲಿನ ಸಾರ್ವಜನಿಕ ವಿಶ್ವವಿದ್ಯಾನಿಲಯ, ಕಾಲೇಜುಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಪ್ರವೇಶಾತಿಗೂ ಅಳವಡಿಸಿಕೊಳ್ಳಬೇಕೆಂಬ ಸಲಹೆಯನ್ನು ಯುಜಿಸಿ ನೀಡಿದೆ. ಸಿಯುಇಟಿ ಮತ್ತೊಂದು ನೀಟ್‌ ಆಗುವ ಆತಂಕವನ್ನು ಶಿಕ್ಷಣ ತಜ್ಞರು ಊಹಿಸಿದ್ದಾರೆ.

ಇದನ್ನೂ ಓದಿರಿ: ಹಿಜಾಬ್ ವಿಚಾರದಲ್ಲಿ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ: ‘ಮಿಸ್‌ ಯುನಿವರ್ಸ್’ ಹರ್ನಾಜ್ ಸಂಧು

ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಬರುತ್ತಿರುವ ಸಿಯುಇಟಿಯಂತಹ ಪರೀಕ್ಷೆಗಳು ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ ಎಂದು ಎನ್‌ಇಪಿಯ ಆಳ, ಅಗಲ, ಉದ್ದೇಶ, ಗುರಿಯನ್ನು ಸೂಕ್ಷ್ಮವಾಗಿ ಗಮನಿಸಿದವರು ಹೇಳುತ್ತಿದ್ದಾರೆ. ಸಿಯುಇಟಿ ಜಾರಿಯನ್ನು ವಿರೋಧಿಸುತ್ತಿದ್ದಾರೆ.

ಶಿಕ್ಷಣ ತಜ್ಞರಾದ ಶ್ರೀಪಾದ್ ಭಟ್‌, “ಎಲ್ಲ ಹಂತದಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು ಎನ್ನುತ್ತದೆ ಎನ್‌ಇಪಿ. ಕಾಲೇಜು ಸೇರ್ಪಡೆಗೆ, ಹಾಸ್ಟೆಲ್‌ ಪ್ರವೇಶಾತಿಗೆ- ಹೀಗೆ ಎಲ್ಲೆಡೆಯೂ ಸ್ಪರ್ಧಾತ್ಮಕ ಪರೀಕ್ಷೆ ನಡೆಯಬೇಕು. ಸ್ಪರ್ಧೆ ಇರಬೇಕು ಅನ್ನುತ್ತದೆ. ನಾವು ಎಷ್ಟೇ ಅಸಮಾನ ಶಿಕ್ಷಣ ವ್ಯವಸ್ಥೆ, ಗ್ರಾಮೀಣ ಶಿಕ್ಷಣ ಪರಿಸ್ಥಿತಿ, ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಎಂದರೂ, ಶೇ. 66ರಷ್ಟಿರುವ ಗ್ರಾಮೀಣ ವಿದ್ಯಾರ್ಥಿಗಳು, ಎಲ್ಲ ಸೌಲಭ್ಯಗಳನ್ನು ಹೊಂದಿರುವ ನಗರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದು ಎಂದು ಹೇಳುತ್ತಾ ಬಂದಿದ್ದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಮಸ್ಯೆಗಳಿದ್ದರೆ ನಿಮ್ಮ ಹಣೆಬರಹ ಎನ್ನುತ್ತಾರೆ. ರಾಜ್ಯದ ಹಣೆಬರಹ ಎನ್ನುತ್ತಾರೆ. ಬಳ್ಳಾರಿಯಲ್ಲಿ, ಚಾಮರಾಜನಗರದಲ್ಲಿ ಶಾಲೆ ಸರಿ ಇಲ್ಲವೆಂದಾರೆ ಎನ್‌ಟಿಎ ಏನು ಮಾಡಲಾಗದು ಎಂದು ಪ್ರತಿಕ್ರಿಯಿಸುತ್ತಾರೆ” ಎಂಬ ಬೇಸರ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿರಿ: ರಾಶ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020: ಹಿಂದು-ಮುಂದು

‘ನಾನುಗೌರಿ.ಕಾಂ’ ಜೊತೆ ಮಾತನಾಡಿರುವ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅವರು, “ಪ್ರವೇಶಾತಿ ಪರೀಕ್ಷೆಗಳೇ ತಪ್ಪು. ಯಾಕೆಂದರೆ ಪ್ರವೇಶಾತಿ ಪರೀಕ್ಷೆಗಳನ್ನು ನಡೆಸಿದರೆ ಹತ್ತನೇ ತರಗತಿ, ಹನ್ನೆರಡನೇ ತರಗತಿಯ ಕ್ವಾಲಿಫೈ ಪರೀಕ್ಷೆಗಳಿಗೆ ಅರ್ಥವಿಲ್ಲದಂತಾಗುತ್ತದೆ. ಶಿಕ್ಷಣವನ್ನು ಕೇಂದ್ರೀಕೃತ ಮಾಡುವುದು ಸರಿಯಲ್ಲ. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ. ಅಂದರೆ ಆಯಾ ರಾಜ್ಯದ ತೀರ್ಮಾನಕ್ಕೆ ಬರುತ್ತದೆ. ಕೇಂದ್ರೀಯ ವಿಶ್ವವಿದ್ಯಾನಿಲಯವನ್ನು ಕೇಂದ್ರ ಸ್ಥಾಪಿಸಿರಬಹುದು, ಅನುದಾನ ಕೊಟ್ಟಿರಬಹುದು. ಆದರೆ ಆಯಾ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಧ್ಯೆ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಅದರ ವಿರುದ್ಧ ರಾಜ್ಯ ಸರ್ಕಾರ ಧ್ವನಿ ಎತ್ತಬೇಕಾಗುತ್ತದೆ” ಎಂದಿದ್ದಾರೆ.

“ಮುಂದಿನ ದಿನಗಳಲ್ಲಿ ಗುಣಾತ್ಮಕ ಶಿಕ್ಷಣದ ಬದಲು ಕೋಚಿಂಗ್‌ ಸೆಂಟರ್‌ಗಳು ಪ್ರಾರಂಭವಾಗುತ್ತವೆ. ಪ್ರವೇಶಾತಿ ಪಡೆಯಲಿಕ್ಕಾಗಿ ಕೋಚಿಂಗ್ ಪಡೆಯಲು ವಿದ್ಯಾರ್ಥಿಗಳು ಹೋಗುತ್ತಾರೆ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಕೋಚಿಂಗ್ ಕೇಂದ್ರೀತ ಮಾಡಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸುತ್ತಾರೆ ವಿ.ಪಿ.ನಿರಂಜನಾರಾಧ್ಯ.

ಶಿಕ್ಷಣದ ಕೋಮುವಾದಿಕಾರಣ; ಇತಿಹಾಸ ಪಠ್ಯಗಳಿಗೆ ಕತ್ತರಿ

ಒಂದೆಡೆ ಪರೀಕ್ಷೆಗಳು, ಶಿಕ್ಷಣ ವ್ಯವಸ್ಥೆ ಗೊಂದಲಕಾರಿಯಾಗುತ್ತಿದ್ದರೆ ಮತ್ತೊಂದೆಡೆ ಪಠ್ಯವನ್ನು ಕೇಸರೀಕರಣ ಮಾಡುವ, ಇತಿಹಾಸ ಪಾಠಗಳಿಗೆ ಕತ್ತರಿ ಹಾಕುವ ಪ್ರಯೋಗಗಳು ನಡೆಯುತ್ತಿವೆ.

ಬಲಪಂಥೀಯ ವಿಚಾರಧಾರೆಗಳ ಮೂಲಕ ಗುರುತಿಸಿಕೊಂಡ ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದ್ದು, ವರದಿಯನ್ನು ಸಮಿತಿ ನೀಡಿದೆ. ಇತಿಹಾಸ ಪಠ್ಯದಲ್ಲಿ ಕತ್ತರಿ ಪ್ರಯೋಗ ಮಾಡಲಾಗುತ್ತಿದೆ. ಟಿಪ್ಪು ಸುಲ್ತಾನನ ಸಾಧನೆಗಳನ್ನು ಪ್ರಾಥಮಿಕ ಶಾಲಾ ಪಠ್ಯದಲ್ಲಿ ಮರೆಮಾಚಲಾಗುತ್ತಿದೆ. “ರೇಷ್ಮೆ ಕೃಷಿಗೆ ಟಿಪ್ಪು ನೀಡಿದ ಕೊಡುಗೆ, ರಾಕೆಟ್ ತಂತ್ರಜ್ಞಾನ, ಹಿಂದೂ ದೇವಾಲಯಗಳಿಗೆ, ಶೃಂಗೇರಿ ಮಠಕ್ಕೆ ನೀಡಿದ ದಾನ ದತ್ತಿ, ಹೊಸ ಧರ್ಮಗಳ ಉದಯಕ್ಕೆ ಕಾರಣಗಳು” ಇತ್ಯಾದಿ ವಿಷಯಗಳನ್ನು ಕೈಬಿಡಲಾಗುತ್ತಿದೆ. “ಸಿಂಧೂ ನದಿ ನಾಗರಿಕತೆಯನ್ನು ಸಿಂಧೂ ಸರಸ್ವತಿ ನಾಗರಿಕತೆ” ಎಂದು ನಾಮಕರಣ ಮಾಡಲಾಗಿದೆ.

ಇಷ್ಟೇ ಅಲ್ಲದೇ ಸಿಬಿಎಸ್‌ಇ ಪಠ್ಯದಲ್ಲೂ ಕೋಮುವಾದಿ ರಾಜಕಾರಣ ನಡೆಯುತ್ತಿದೆ. ಮೊಘಲ್‌ ಸಾಮ್ರಾಟರ ಇತಿಹಾಸ ಪಾಠವನ್ನು ಕಡಿತಗೊಳಿಸಲಾಗಿದೆ.

ಹೀಗೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ವ್ಯವಸ್ಥೆ ವಿವಾದದ ಕೇಂದ್ರವಾಗಿದೆ. ಪರೀಕ್ಷೆಗಳು ಅವ್ಯವಸ್ಥೆಯ ಆಗರವಾಗುತ್ತಿವೆ. ಇದಕ್ಕೆಲ್ಲ ಪರಿಹಾರ ಎಲ್ಲಿದೆ? ಡಬ್ಬಲ್‌ ಇಂಜಿನ್‌ ಸರ್ಕಾರ ಮಾಡಬೇಕಿರುವ ಕೆಲಸವಾದರೂ ಯಾವುದು? ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರು ಯಾರು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ನಿಧನ

0
ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ಮಂಗಳವಾರ ನಿಧನರಾಗಿದ್ದಾರೆ. 81 ವರ್ಷ ಪ್ರಾಯದ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಹೃದಯಾಘಾತದಿಂದ ಇಂದು ನಿಧರಾಗಿದ್ದಾರೆ. ಹುಣಸೂರಿನಲ್ಲಿ ಆಗಸ್ಟ್ 19,1942ರಂದು ದ್ವಾರಕೀಶ್ ಜನಿಸಿದ್ದಾರೆ....