HomeUncategorizedರೋಹಿಂಗ್ಯಾ ನಿರಾಶ್ರಿತರಿಗೆ ದೆಹಲಿ ಸರ್ಕಾರ ಸೌಲಭ್ಯಗಳನ್ನು ಒದಗಿಸಿದೆ ಎಂದು ಸುಳ್ಳು ಸುದ್ದಿ ಹಂಚುತ್ತಿರುವ ಬಿಜೆಪಿ

ರೋಹಿಂಗ್ಯಾ ನಿರಾಶ್ರಿತರಿಗೆ ದೆಹಲಿ ಸರ್ಕಾರ ಸೌಲಭ್ಯಗಳನ್ನು ಒದಗಿಸಿದೆ ಎಂದು ಸುಳ್ಳು ಸುದ್ದಿ ಹಂಚುತ್ತಿರುವ ಬಿಜೆಪಿ

- Advertisement -
- Advertisement -

ಉತ್ತರ ಪ್ರದೇಶ ಸರ್ಕಾರವು ಜುಲೈ 22 ರ ಬೆಳಗಿನ ಜಾವ 4 ಗಂಟೆಗೆ ದೆಹಲಿಯ ಮದನ್‌ಪುರ್‌ ಖದರ್‌ ಪ್ರದೇಶದಲ್ಲಿನ ಹಲವಾರು ರೋಹಿಂಗ್ಯಾ ಶಿಬಿರಗಳನ್ನು ‘ಅಕ್ರಮ’ ನಿರ್ಮಾಣ ಎಂಬ ಕಾರಣ ನೀಡಿ ಧ್ವಂಸಗೊಳಿಸಿತು. ಈ ಭೂಮಿ ಉತ್ತರ ಪ್ರದೇಶದ ನೀರಾವರಿ ಇಲಾಖೆಗೆ ಸೇರಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿದ್ದವು. ಯುಪಿಯ ಜಲ ಶಕ್ತಿ ಸಚಿವ ಮಹೇಂದ್ರ ಸಿಂಗ್ ಅವರು ಧ್ವಂಸಗೊಳಿಸುವಿಕೆಯ ವಿಡಿಯೋವನ್ನು ಟ್ವೀಟ್ ಮಾಡಿ ಯೋಗಿ ಸರ್ಕಾರವನ್ನು ಶ್ಲಾಘಿಸಿದ್ದರು.

ಇದರ ನಂತರ, ಬಿಜೆಪಿ ಪರ ಪ್ರಚಾರ ಮಾಡುವ ‘ಪ್ಯಾರಾ ಹಿಂದುಸ್ತಾನ್’ ಎಂಬ ಸುದ್ದಿ ಚಾನೆಲ್‌ ಹಲವಾರು ಗ್ರೌಂಡ್‌ ರಿಪೋರ್ಟ್‌ಗಳನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದು, (ಜುಲೈ 22, ಜುಲೈ 23, ಜುಲೈ 24) ಅದರಲ್ಲಿ ದೆಹಲಿ ನಾಗರಿಕರನ್ನು ನಿರ್ಲಕ್ಷಿಸಿ ಎಎಪಿ ಸರ್ಕಾರವು ರೋಹಿಂಗ್ಯಾಗಳಿಗೆ ನೀರು, ವಿದ್ಯುತ್ ಮತ್ತು ನಗದು ಒದಗಿಸುತ್ತಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ: ಅರಳಿ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ ಎಂಬ ವೈರಲ್ ವಿಡಿಯೋ ಸುಳ್ಳು: ವಾಸ್ತವವೇನು?

ಜುಲೈ 23 ರಂದು, ಪ್ಯಾರಾ ಹಿಂದುಸ್ತಾನ್ ಚಾನೆಲ್‌ ಮಾಡಿದ ಪ್ರತಿಪಾದನೆಯನ್ನೆ ಪುನರುಚ್ಚರಿಸಿ, ವರದಿಯ ಸಣ್ಣ ಭಾಗವನ್ನು ಟ್ವೀಟ್‌ ಮಾಡಿರುವ ದೆಹಲಿ ಬಿಜೆಪಿ, “ದೆಹಲಿಯ ನಾಗರಿಕರಿಗೆ ಯಾವುದೇ ಪಡಿತರವಿಲ್ಲ, ವಿದ್ಯುತ್ ಇಲ್ಲ. ಆದರೆ ರೋಹಿಂಗ್ಯಾ ನುಸುಳುಕೋರರಿಗೆ, ಕೇಜ್ರಿವಾಲ್ ಸರ್ಕಾರವು ನಗದು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ. ದೆಹಲಿ ನಾಗರೀಕರು ಮಾಡಿದ ತಪ್ಪೇನು ಮುಖ್ಯಮಂತ್ರಿ ಸಾಹೇಬರೇ?” ಎಂದು ಪ್ರಶ್ನಿಸಿತ್ತು.

 

ಇದೇ ವಿಡಿಯೋವನ್ನು ಬಿಜೆಪಿ ದೆಹಲಿ ವಕ್ತಾರ ತಜಿಂದರ್ ಪಾಲ್ ಸಿಂಗ್ ಬಗ್ಗಾ ಟ್ವೀಟ್ ಮಾಡಿದ್ದಾರೆ. ಉತ್ತರಾಖಂಡ್ ಮತ್ತು ಗುಜರಾತ್‌ನಲ್ಲಿ ಜನರು ಎಎಪಿಗೆ ಮತ ಹಾಕಿದರೆ, ರಾಜ್ಯವು ಕೂಡಾ ದೆಹಲಿಯಂತೆ ‘ರೂಪಾಂತರಗೊಳ್ಳುತ್ತದೆ’ ಎಂದು ಅವರು ಬರೆದಿದ್ದಾರೆ.

ಫ್ಯಾಕ್ಟ್‌ಚೆಕ್

ರೋಹಿಂಗ್ಯಾಗಳು ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತ ಸಮುದಾಯವಾಗಿದ್ದು, 2010 ರಿಂದ ನಡೆಯುವ ಹಿಂಸಾಚಾರಕ್ಕೆ ಬೇಸೆತ್ತು ಮಯಾನ್ಮಾರ್‌ನಿಂದ ಪಲಾಯನ ಮಾಡುತ್ತಿದ್ದಾರೆ. 2018 ರಲ್ಲಿ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್(UNHCR) ‘ದಿ ಪ್ರಿಂಟ್‌’ಗೆ ನೀಡಿದ ಹೇಳಿಕೆಯಂತೆ 40,000 ರೋಹಿಂಗ್ಯಾ ನಿರಾಶ್ರಿತರು ದೆಹಲಿ, ಜಮ್ಮು, ಹರಿಯಾಣ, ಹೈದರಾಬಾದ್ ಮತ್ತು ಜೈಪುರದಲ್ಲಿ ವಾಸಿಸುತ್ತಿದ್ದಾರೆ. ಆದಾಗ್ಯೂ, ದೆಹಲಿಯಲ್ಲಿರುವ UNHCR ಕಚೇರಿಯ ಮೂಲಕ ಕೇವಲ 17,500 ಜನರನ್ನು ನೋಂದಾಯಿಸಿದೆ.

ದಿ ಪ್ರಿಂಟ್ ಪ್ರಕಾರ, ದೆಹಲಿಯು ರೋಹಿಂಗ್ಯಾ ನಿರಾಶ್ರಿತ ಶಿಬಿರವಿರುವ ಪ್ರಮುಖ ಪ್ರದೇಶವಾಗಿದೆ. ಇಲ್ಲಿ ಐದು ದೊಡ್ಡ ಅನಧಿಕೃತ ಶಿಬಿರಗಳಿದ್ದು, ಜಸೋಲಾದಂತಹ ಪ್ರದೇಶಗಳಲ್ಲಿ ಮತ್ತು ಯಮುನಾ ನದಿಯ ದಡದಲ್ಲಿ ಈ ತಾಣಗಳು ಇದೆ. ಯುಪಿ ಸರ್ಕಾರ ಇತ್ತೀಚೆಗೆ ಧ್ವಂಸ ಮಾಡಿರುವ ಮದನ್‌ಪುರ್‌ ಖದರ್‌ ಕೂಡಾ ಯಮುನಾ ನದಿಯ ಸಮೀಪದಲ್ಲಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡ ವರ ಬೇಕಾಗಿದ್ದಾನೆ’- ಇದು ನಿಜವಾದ ಪ್ರಕಟಣೆಯಲ್ಲ

ಮದನ್‌ಪುರ್‌ ಖದರ್‌ನ ರೋಹಿಂಗ್ಯಾ ಸಮುದಾಯದ ನಾಯಕ ಸಲೀಂ ಜೊತೆ ಆಲ್ಟ್ ನ್ಯೂಸ್ ಮಾತನಾಡಿದ್ದು, 2012 ರಿಂದ 50 ಕ್ಕೂ ಹೆಚ್ಚು ಕುಟುಂಬಗಳು ಮದನ್‌ಪುರ್‌ ಖದರ್‌ ಪ್ರದೇಶದಲ್ಲಿ ನೆಲೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರು ಇರುವ ಪ್ರದೇಶವು ಏಪ್ರಿಲ್ 2018 ಮತ್ತು ಜೂನ್ 2021 ರಲ್ಲಿ ಬೆಂಕಿಗೆ ಆಹುತಿಯಾಗಿತ್ತು. 2021 ರ ಬೆಂಕಿಗೆ ಎರಡು ತಿಂಗಳ ಮೊದಲು ಯಾವುದೆ ಕಾರಣಗಳನ್ನು ಉಲ್ಲೇಖಿಸದೆ ಶಿಬಿರಗಳಲ್ಲಿನ ಕುಟುಂಬಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದರಿಂದ ರೋಹಿಂಗ್ಯಾ ನಿರಾಶ್ರಿತರು ಭಯದಿಂದ ಬದುಕುತ್ತಿದ್ದಾರೆ ಎಂದು ಕಾರವಾನ್ ವರದಿ ಮಾಡಿದೆ.

ಕೆಳದ ವರ್ಷಗಳಲ್ಲಿ, ಮೂಲಭೂತ ಮಾನವ ಹಕ್ಕುಗಳು ಮತ್ತು ಕಾರಣವಿಲ್ಲದೆ ನಡೆಯುವ ಬಂಧನವನ್ನು ತಡೆಗಟ್ಟಲು ಕೋರಿ ರೋಹಿಂಗ್ಯಾ ಸಮುದಾಯದ ನಾಯಕರು ಎರಡು ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಜಾಫರ್ ಉಲ್ಲಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ (859/2013) ಮತ್ತು ಮೊಹಮ್ಮದ್ ಸಲೀಮುಲ್ಲಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ (793/2017). ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್, ಕಾಲಿನ್ ಗೊನ್ಸಾಲ್ವಿಸ್ ಮತ್ತು ಚಂದರ್ ಉದಯ್ ಸಿಂಗ್ (ಯುಎನ್ ವಿಶೇಷ ವರದಿಗಾರರಾಗಿ) ಈ ಅರ್ಜಿದಾರರನ್ನು ಪ್ರತಿನಿಧಿಸಿದ್ದಾರೆ.

ಆದಾಗ್ಯೂ ಏಪ್ರಿಲ್ 8 ರಂದು, ಮೊಹಮ್ಮದ್ ಸಲೀಮುಲ್ಲಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, ರೋಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡುವುದನ್ನು ತಡೆಯುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಸುಪ್ರೀಂಕೋರ್ಟ್‌‌ನ ಈ ನಡೆಯನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ಚಂದರ್ ಉದಯ್ ಸಿಂಗ್ ಟೀಕಿಸಿದ್ದಾರೆ.

ಭಾರತವು 1951 ರ ನಿರಾಶ್ರಿತರ ಸಮಾವೇಶದಲ್ಲಿ ಭಾಗಿಯಾಗಿಲ್ಲ, ಜೊತಗೆ ದೇಶವು ನಿರಾಶ್ರಿತರ ರಕ್ಷಣೆಯ ಯಾವುದೆ ನೀತಿಯನ್ನು ಹೊಂದಿಲ್ಲ. ಆದರೆ 1959 ರ ನರಮೇಧದ ಅಪರಾಧದ ತಡೆಗಟ್ಟುವಿಕೆ ಮತ್ತು ಶಿಕ್ಷೆ ಕುರಿತ ಒಪ್ಪಂದಕ್ಕೆ ಭಾರತವು ಒಪ್ಪಿಕೊಂಡಿದೆ ಎಂಬುದನ್ನು ಓದುಗರು ಗಮನಿಸಬೇಕು. 2016 ರಲ್ಲಿ ಭಾರತವು ನರಮೇಧವನ್ನು ಅಂತಾರಾಷ್ಟ್ರೀಯ ಅಪರಾಧವೆಂದು ಗುರುತಿಸುತ್ತದೆ ಮತ್ತು ಇದು ಭಾರತದ ಸಾಮಾನ್ಯ ಕಾನೂನಿನ ಒಂದು ಭಾಗವಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಫ್ಯಾಕ್ಟ್‌ ಚೆಕ್: ಕೊವೀಡ್ ಲಸಿಕೆ ಪಡೆದ ಮೇಲೆ ಮ್ಯಾಗ್ನೆಟಿಕ್ (ಅಯಸ್ಕಾಂತೀಯ) ಶಕ್ತಿ ದೊರೆಯುತ್ತದೆಯೇ?

ಈ ವರದಿಯಲ್ಲಿ ನಾವು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ:

  • ಮದನ್‌ಪುರ್‌ ಖದರ್‌ನಲ್ಲಿ ರೊಹಿಂಗ್ಯಾಗಳಿಗೆ ಎಎಪಿ ಸರ್ಕಾರ ಒದಗಿಸಿದ ಸೌಲಭ್ಯಗಳನ್ನು ದೆಹಲಿ ನಾಗರಿಕರಿಗೆ ಒದಗಿಸಿದ ಸೌಲಭ್ಯಗಳಿಗೆ ಹೋಲಿಸಬಹುದೇ?
  • ಮದನ್‌ಪುರ್‌ ಖದರ್‌ನಲ್ಲಿ ರೊಹಿಂಗ್ಯಾ ನಿರಾಶ್ರಿತರಿಗೆ ಎಎಪಿ ಸರ್ಕಾರ ನಗದು ನೀಡಿದೆಯೇ?
  • ಯುಪಿ ಸರ್ಕಾರವು ದೆಹಲಿಯಲ್ಲಿ ಭೂಮಿಯನ್ನು ಹೊಂದಿದೆಯೇ?
  • ಯುಪಿ ಸರ್ಕಾರದ ಒಡೆತನದ ಭೂಮಿಯನ್ನು ರೋಹಿಂಗ್ಯಾ ನಿರಾಶ್ರಿತರು ಅತಿಕ್ರಮಿಸಿಕೊಂಡಿದ್ದಾರೆಯೇ?

ಮದನ್‌ಪುರ್‌ ಖದರ್‌ನಲ್ಲಿರುವ ರೋಹಿಂಗ್ಯಾಗಳಿಗೆ ದೆಹಲಿ ನಾಗರಿಕರಿಗೆ ಒದಗಿಸಿದ ಸೌಲಭ್ಯಗಳಿಗೆ ಹೋಲಿಸಬಹುದೇ?

ಆಲ್ಟ್‌ನ್ಯೂಸ್ ಆಗ್ನೇಯ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ವಿಶ್ವೇಂದ್ರ ಅವರೊಂದಿಗೆ ಮಾತನಾಡಿದ್ದು, ಅವರು ಹೇಳಿದಂತೆ, “ನಾವು ಒದಗಿಸುವ ನೆರವು ವಿಪತ್ತು ನಿರ್ವಹಣೆ ಪರಿಹಾರದ ವ್ಯಾಪ್ತಿಯಲ್ಲಿದೆ. ಜೂನ್ 2021 ರಲ್ಲಿ ರೋಹಿಂಗ್ಯಾ ಶಿಬಿರವು ಬೆಂಕಿಯಲ್ಲಿ ಸುಟ್ಟುಹೋದ ನಂತರ, ನಾವು ಅವರಿಗೆ ಬೇಸಿಗೆಯಲ್ಲಿನ ಉಷ್ಣತೆಯನ್ನು ಸಹಿಸಿಕೊಳ್ಳಲು ಫ್ಯಾನ್‌ಗಳು ಮತ್ತು ಡೇರೆಗಳನ್ನು ಸ್ಥಾಪಿಸಿದೆವು. ಅದರ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಮೀಟರ್ ಅನ್ನು ಸಹ ಸ್ಥಾಪಿಸಲಾಗಿದೆ. 50 ಕ್ಕೂ ಹೆಚ್ಚು ಕುಟುಂಬಗಳಿಗೆ ನೀರು ಪೂರೈಸಲು ಒಂದು ಟ್ಯಾಂಕರ್ ನಿಯೋಜಿಸಲಾಗಿದೆ. ಆದರೆ, ಈ ಸಹಾಯವನ್ನು ದೆಹಲಿಯ ನಾಗರಿಕರು ಪಡೆಯುವುದರೊಂದಿಗೆ ಹೋಲಿಸುವುದು ಸರಿಯಲ್ಲ.

2018 ರಲ್ಲಿ, ಜಾಫರ್ ಉಲ್ಲಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ (859/2013) ಪ್ರಕರಣದಲ್ಲಿ, ಕಲಿಂದಿಕುಂಜ್‌ನ ಮದನಪರ್ ಖದರ್ ಸೇರಿದಂತೆ ಅನೇಕ ರೋಹಿಂಗ್ಯಾ ಶಿಬಿರಗಳಲ್ಲಿನ ಆರೋಗ್ಯ ಸೌಲಭ್ಯಗಳ ಕುರಿತು ಸುಪ್ರೀಂ ಕೋರ್ಟ್ ಆದೇಶ ನೀಡಿತು.

ದೆಹಲಿ ಸಂಬಂಧಿತ ನ್ಯಾಯವ್ಯಾಪ್ತಿಯ ಕಂದಾಯ ಮ್ಯಾಜಿಸ್ಟ್ರೇಟರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸುವಂತೆ ನ್ಯಾಯಾಲಯವು ನಿರ್ದೇಶಿಸಿತು. ನಿರಾಶ್ರಿತರಿಗೆ ಯಾವುದೇ ಸೌಲಭ್ಯವನ್ನು ನಿರಾಕರಿಸುವುದು ಸೇರಿದಂತೆ ಅಲ್ಲಿನವರು ಎದುರಿಸುತ್ತಿರುವ ಕುಂದುಕೊರತೆಗಳನ್ನು ಈ ಅಧಿಕಾರಿಗಳು ಪರಿಹರಿಸಬೇಕಿತ್ತು (ಪಿಡಿಎಫ್ ನೋಡಿ). ಈ ಸ್ಥಾನವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಸೋನಿಯಾ ಗಾಂಧಿಯ ಎಡಿಟೆಡ್‌‌ ಚಿತ್ರವನ್ನು ಹಂಚುತ್ತಿರುವ ಬಿಜೆಪಿ

“ಜೀವನದ ಮೂಲಭೂತ ಅವಶ್ಯಕತೆಗಳ ಹಕ್ಕು ಪೌರತ್ವ ಅಥವಾ ರಾಷ್ಟ್ರೀಯತೆಯಿಂದ ಬರುವುದಲ್ಲ, ಅದು ಮಾನವೀಯತೆಯ ಮೂಲ ತತ್ವಗಳಿಂದ ಬರುತ್ತದೆ. ಭಾರತ ಸಂವಿಧಾನದಲ್ಲಿ, ಇದು ಎಲ್ಲ ಮನುಷ್ಯರಿಗೂ ಅನ್ವಯವಾಗುವ ಅನುಚ್ಛೇದ 21 ರ ಮೂಲಕ ಖಾತರಿಪಡಿಸಲಾಗಿದೆ. ಆದ್ದರಿಂದ, ರೋಹಿಂಗ್ಯಾಗಳಿಗೆ ನೀರು ಸರಬರಾಜು ಮತ್ತು ವಿದ್ಯುತ್‌ ನೀಡುವಂತಹ ಬರಿಯ ಬದುಕು ಒದಗಿಸುವ ಮಾನವೀಯ ಕೆಲಸಗಳನ್ನು ಭಾರತದ ನಾಗರಿಕರಿಗೆ ಅನ್ಯಾಯವೆಂದು ಅರ್ಥೈಸುವುದು ತಪ್ಪು” ಎಂದು ವಕೀಲ ಚಂದರ್ ಉದಯ್ ಸಿಂಗ್‌ ಹೇಳುತ್ತಾರೆ.

ರೋಹಿಂಗ್ಯಾ ಸಮುದಾಯದ ನಾಯಕ ಸಲೀಂ, “ಮೊದಲ ಎರಡು ವರ್ಷಗಳಲ್ಲಿ ನಮಗೆ ವಿದ್ಯುತ್ ಅಥವಾ ನೀರು ಪೂರೈಕೆ ಇರಲಿಲ್ಲ. 2014 ರಲ್ಲಿ, ನಾವು ವಿವಿಧ ದಾರಿಗಳ ಮೂಲಕ ವಿದ್ಯುಚ್ಛಕ್ತಿಯನ್ನು ವ್ಯವಸ್ಥೆಗೊಳಿಸಿದ್ದೆವು. ನಮಗೆ ನೀಡುವ ವಿದ್ಯುತ್‌‌ಗೆ ನಾವು ಹಣವನ್ನು ಪಾವತಿಸುತ್ತಿದ್ದೇವೆ ಎಂಬುದನ್ನು ದಯವಿಟ್ಟು ಗಮನಿಸಬೇಕು. ಅನೇಕ ಬಾರಿ ಅಧಿಕಾರಿಗಳು ಬಂದು ಅದನ್ನು ಸಂಪರ್ಕ ಕಡಿತಗೊಳಿಸುತ್ತಾರೆ” ಎಂದು ಹೇಳುತ್ತಾರೆ.

“2018 ರಲ್ಲಿ ಶಿಬಿರಗಳಲ್ಲಿ ಬೆಂಕಿ ಕಾಣಿಸಿಕೊಂಡ ನಂತರ, ಉಪವಿಭಾಗಾಧಿಕಾರಿ ನಮಗೆ ಟೆಂಟ್‌ಗಳನ್ನು ಸ್ಥಾಪಿಸಿತು ಮತ್ತು ವಿದ್ಯುತ್ ಪೂರೈಕೆಗಾಗಿ ಮೀಟರ್ ಅನ್ನು ಅಳವಡಿಸಿತು. ಆದಾಗ್ಯೂ, ಅದನ್ನು ಅಳವಡಿಸಿದ ಐದು ತಿಂಗಳ ನಂತರ, ಕೆಲವು ವೈರಿಂಗ್ ಸಮಸ್ಯೆ ಉಂಟಾಯಿತು, ಆದ್ದರಿಂದ ನಾವು ಮತ್ತೇ ಹಳೆಯ ವಿಧಾನಗಳನ್ನು ಆಶ್ರಯಿಸಬೇಕಾಯಿತು” ಎಂದು ಸಲೀಂ ಹೇಳುತ್ತಾರೆ.

ನೀರು ಸರಬರಾಜು ಕುರಿತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಲೀಂ, “2019 ರವರೆಗೆ ನಾವು ಕೈಪಂಪ್‌ಗಳನ್ನು ಅವಲಂಬಿಸಿದ್ದೇವೆ. 2019 ರ ಕೊನೆಯ ತಿಂಗಳಲ್ಲಿ, ನಾವು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾರಂಭಿಸಿದೆವು. ಆದಾಗ್ಯೂ, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಅದೂ ನಿಂತುಹೋಯಿತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ‘ಅನುಕಂಪಕ್ಕಾಗಿ ಗಾಝಾ ನಾಟಕವಾಡುತ್ತಿದೆ’ ಎಂದು ಎಡಿಟೆಡ್‌‌ ವಿಡಿಯೊ ಶೇರ್‌ ಮಾಡುತ್ತಿರುವ ಬಲಪಂಥೀಯರು!

“ಜುಲೈ 22 ರ ಸ್ಥಳಾಂತರದ ನಂತರ, ಉಪವಿಭಾಗಾಧಿಕಾರಿ ಹೊಸ ಟೆಂಟ್‌ಗಳನ್ನು ಮತ್ತು ವಿದ್ಯುತ್ ಪೂರೈಕೆಗಾಗಿ ಮೀಟರ್ ಅನ್ನು ಅಳವಡಿಸಿತು” ಎಂದು ಸಲೀಂ ಹೇಳಿದ್ದಾರೆ.

ಮದಪುರ್ ಖದರ್‌ನಲ್ಲಿ ಯುಪಿ ಸರ್ಕಾರವು ರೋಹಿಂಗ್ಯಾ ಸ್ಲಂಗಳನ್ನು ಸ್ಥಳಾಂತರಿಸಿದ ನಂತರ ಹೊಸ ಮೀಟರ್ ಅನ್ನು ಅಳವಡಿಸಲಾಯಿತು.

ಅಧಿಕಾರಿಗಳು ಅವರನ್ನು ಸ್ಥಳಾಂತರಿಸುವ ಬಗ್ಗೆ ವದಂತಿಗಳಿವೆ ಎಂದು ಸಲೀಂ ಹೇಳುತ್ತಾರೆ. ಅವರು ದಿನಗೂಲಿ ಪಡೆಯುವುದನ್ನು ಮುಂದುವರಿಸಲು ಮತ್ತು ಮುಖ್ಯವಾಗಿ ತಮ್ಮ ಮಕ್ಕಳಿಗೆ ಮೂಲಭೂತ ಆರೋಗ್ಯ ಮತ್ತು ಶಿಕ್ಷಣವನ್ನು ಪಡೆಯಲು ಅವರನ್ನು ಸ್ಥಳಾಂತರಿಸಬೇಕೆಂದು ಅವರು ಆಶಿಸಿದ್ದಾರೆ.

ಮದನ್ಪುರ್ ಖದರ್ ಪ್ರದೇಶದಲ್ಲಿರುವ ರೋಹಿಂಗ್ಯಾ ಸಮುದಾಯಕ್ಕೆ ಎಎಪಿ ಸರ್ಕಾರದಿಂದ ಕನಿಷ್ಠ ಮೊತ್ತವನ್ನು ಒದಗಿಸಲಾಗುತ್ತಿದೆ. ದೆಹಲಿ ಸೇರಿದಂತೆ ಭಾರತದಾದ್ಯಂತ ರೋಹಿಂಗ್ಯಾ ನಿರಾಶ್ರಿತರಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಸಂಬಂಧಿತ ಉಪವಿಭಾಗಾಧಿಕಾರಿಳಿಗೆ ನಿರ್ದೇಶನ ನೀಡಿತ್ತು.

ರೊಹಿಂಗ್ಯಾಗಳಿಗೆ ಎಎಪಿ ಸರ್ಕಾರ ನಗದು ನೀಡಿತ್ತೇ?

ಮದನ್‌ಪುರ್ ಖದರ್‌ನಲ್ಲಿ ದೆಹಲಿ ಸರ್ಕಾರ ರೋಹಿಂಗ್ಯಾಗಳಿಗೆ ನಗದು ನೀಡುತ್ತಿದೆ ಎಂಬ ಹೇಳಿಕೆಯನ್ನು ವಿಶ್ವೇಂದ್ರ ತಳ್ಳಿಹಾಕಿದ್ದಾರೆ. “ಅದು ನಿಜವಾಗಿದ್ದಲ್ಲಿ ಹಲವಾರು ಸರ್ಕಾರಿ ಪ್ರಕ್ರಿಯೆಗಳು ಒಳಗೊಂಡಿರುತ್ತವೆ. ಅದಕ್ಕೆ ಸುದೀರ್ಘವಾದ ಆಧಾರಗಳೂ ಇರುತ್ತದೆ. ಅಂತಹದ್ದೇನೂ ಸಂಭವಿಸಿಲ್ಲ” ಎಂದು ಹೇಳುತ್ತಾರೆ.

ಪ್ಯಾರಾ ಹಿಂದುಸ್ತಾನ್ ವರದಿಯಲ್ಲಿ, ದೆಹಲಿ ಸರ್ಕಾರವು ನಗದು ನೀಡಿಲ್ಲ ಎಂದು ಅನೇಕ ಜನರು ಹೇಳಿದ್ದನ್ನು ಓದುಗರು ಗಮನಿಸಬೇಕು. ಆದಾಗ್ಯೂ, ವರದಿಗಾರರು ಅದನ್ನು ಕಡೆಗಣಿಸಿ ಮತ್ತು ವೈಯಕ್ತಿಕವಾಗಿ ಹಣವನ್ನು ಒದಗಿಸಲಾಗಿದೆ ಎಂದು ಪದೇ ಪದೇ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಟೂಲ್‌ಕಿಟ್‌ ಎಕ್ಸ್‌ಪೋಸ್ಡ್‌‌’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!

ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರು ಜೂನ್ 2021 ರ ಬೆಂಕಿಯ ನಂತರ ನಗದು ದೇಣಿಗೆ ನೀಡಿದ್ದಾರೆ ಎಂದು ಸಲೀಂ ಮಾಹಿತಿ ನೀಡಿದರು.

ಯುಪಿ ಸರ್ಕಾರವು ದೆಹಲಿಯಲ್ಲಿ ಭೂಮಿಯನ್ನು ಹೊಂದಿದೆಯೇ?

ದೆಹಲಿಯ ಭೌಗೋಳಿಕ ಪ್ರದೇಶದೊಳಗೆ ಯುಪಿ ಸರ್ಕಾರದ ಹಸ್ತಕ್ಷೇಪವು ಈ ವಿವಾದದ ಅತ್ಯಂತ ಗೊಂದಲಮಯ ಅಂಶಗಳಲ್ಲಿ ಒಂದಾಗಿದೆ.

ದಿ ಹಿಂದು, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಸುದ್ದಿ ಸಂಸ್ಥೆಗಳು ಯುಪಿ ಸರ್ಕಾರವು ದೆಹಲಿಯಲ್ಲಿ ಹಲವಾರು ಎಕರೆಗಳನ್ನು ಹೊಂದಿದೆ ಎಂದು ಸೂಚಿಸುತ್ತದೆ.

ಮಾರ್ಚ್‌ನಲ್ಲಿ, ಯುಪಿಯ ಜಲಶಕ್ತಿ ಸಚಿವ ಮಹೇಂದ್ರ ಸಿಂಗ್ ಟೈಮ್ಸ್ ಆಫ್ ಇಂಡಿಯಾಕ್ಕೆ, “ಯುಪಿ ನೀರಾವರಿ ಇಲಾಖೆಯು ಓಖ್ಲಾ, ಜಸೋಲಾ, ಮದನಪುರ ಖದರ್, ಆಲಿ, ಸೈದಾಬಾದ್, ಜೈತ್‌ಪುರ್, ಮೋಲಾರ್ ಬ್ಯಾಂಡ್ ಮತ್ತು ಖಜೂರಿ ಖಾಸ್‌ನಲ್ಲಿ ಭೂಮಿಯನ್ನು ಹೊಂದಿದೆ” ಎಂದು ಹೇಳಿದ್ದಾರೆ.

ರೋಹಿಂಗ್ಯಾಗಳು ಯುಪಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದ್ದಾರೆಯೇ?

“2015 ಕ್ಕಿಂತ ಮೊದಲು, ರೋಹಿಂಗ್ಯಾ ಶಿಬಿರವು ಜಕಾತ್ ಫೌಂಡೇಶನ್ ಭೂಮಿಯಲ್ಲಿತ್ತು. ನಂತರ, ಯುಪಿ ಸರ್ಕಾರಿ ಭೂಮಿಯಲ್ಲಿ ಹಲವಾರು ರೋಹಿಂಗ್ಯಾ ಕುಟುಂಬಗಳು ಕೊಳೆಗೇರಿಗಳನ್ನು ಸ್ಥಾಪಿಸಲಾಯಿತು.

ಕಳೆದ ವರ್ಷಗಳಲ್ಲಿ, ಯುಪಿ ಸರ್ಕಾರವು ಎಲ್ಲಾ ಅತಿಕ್ರಮಣಗಳನ್ನು ತೆರವುಗೊಳಿಸುವ ಬಗ್ಗೆ ಒತ್ತಾಯಿಸುತ್ತಿದೆ. ಕೊರೊನಾ ಎರಡನೇ ಅಲೆಯ ನಂತರ ಇದು ತೀವ್ರಗೊಂಡಿದೆ.

ಇದನ್ನೂ ಓದಿ: ಗುಜರಾತ್ ನಕಲಿ ರೆಮ್ಡೆಸಿವಿರ್ ದಂಧೆ: ಬಂಧಿತರಲ್ಲಿ ಇಬ್ಬರು ಮುಸ್ಲಿಮರಷ್ಟೇ ಅಲ್ಲ, 5 ಹಿಂದೂಗಳೂ ಇದ್ದಾರೆ!

ಪ್ರಸ್ತುತ, ಯಾವುದೇ ರೋಹಿಂಗ್ಯಾ ಸದಸ್ಯರು ಯುಪಿ ಸರ್ಕಾರಿ ಭೂಮಿಯಲ್ಲಿ ಇಲ್ಲ. ಅವರು ಜಕಾತ್ ಫೌಂಡೇಶನ್ ಭೂಮಿಗೆ ಸ್ಥಳಾಂತರಗೊಂಡರು ಎಂದು ಆಗ್ನೇಯ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ವಿಶ್ವೇಂದ್ರ ಹೇಳಿದ್ದಾರೆ.

ಕೆಳಗಿನ ಗೂಗಲ್ ಮ್ಯಾಪ್ ಸ್ಕ್ರೀನ್‌ಶಾಟ್ ಜುಲೈ 22 ರ ದ್ವಂಸಪಡಿಸುವಿಕೆಯ ಮೊದಲು ಶಿಬಿರಗಳು ಹರಡಿರುವ ಪ್ರದೇಶಗಳನ್ನು ತೋರಿಸುತ್ತದೆ. ಕೆಂಪು ಬಣ್ಣದಲ್ಲಿ ಗುರುತಿಸಲಾದ ಭಾಗವು ಜಕಾತ್ ಫೌಂಡೇಶನ್‌ಗೆ ಸೇರಿದ್ದು. ಹಸಿರು ರೇಖೆಯ ಉದ್ದಕ್ಕೂ ಸುಮಾರು 16 ಡೇರೆಗಳನ್ನು ವಿಸ್ತರಿಸಲಾಗಿದೆ. ಯುಪಿ ಸರ್ಕಾರಿ ಭೂಮಿಯಲ್ಲಿ ಹಲವಾರು ಡೇರೆಗಳನ್ನು ನಿರ್ಮಿಸಲಾಗಿದ್ದು, ಹಳದಿ ಬಣ್ಣದಲ್ಲಿ ಗುರುತಿಸಲಾಗಿದೆ. ಯುಪಿ ಸರ್ಕಾರಿ ಭೂಮಿಯಲ್ಲಿರುವ ಶಿಬಿರಗಳನ್ನು ತೆಗೆದುಹಾಕಲಾಗಿದೆ ಮತ್ತು ಎಲ್ಲಾ ಕುಟುಂಬಗಳು ಪ್ರಸ್ತುತ ಕೆಂಪು ಚೌಕ ಮತ್ತು ಹಸಿರು ರೇಖೆಯೊಳಗೆ ವಾಸಿಸುತ್ತವೆ.

“ನಿರಾಶ್ರಿತರನ್ನು ನಿರ್ವಹಿಸುವ ವಿಷಯವು ಗೃಹ ಸಚಿವಾಲಯ ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಯ ಅಡಿಯಲ್ಲಿ ಬರುತ್ತದೆ. ನನ್ನ ಅರಿವಿನ ಪ್ರಕಾರ, ದೆಹಲಿಯಲ್ಲಿರುವ ಎಲ್ಲಾ ರೋಹಿಂಗ್ಯಾ ನಿರಾಶ್ರಿತರನ್ನು ಒಂದೇ ಸ್ಥಳದಲ್ಲಿ ಸ್ಥಳಾಂತರಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ವಿಶ್ವೇಂದ್ರ ಹೇಳಿದ್ದಾರೆ.

ಮದನ್‌ಪುರ್ ಖದರ್‌ನಲ್ಲಿರುವ ರೋಹಿಂಗ್ಯಾ ಶಿಬಿರಗಳ ಪರಿಸ್ಥಿತಿಯನ್ನು ವಿವರಿಸಿದ ಸಲೀಂ, “ನಾವು 2014 ರವರೆಗೆ ಇಂತಹ ಇಕ್ಕಟ್ಟಾದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೆವು, ನಮ್ಮಲ್ಲಿ ಕೆಲವರು ಯುಪಿ ಸರ್ಕಾರಿ ಭೂಮಿಗೆ ಸ್ಥಳಾಂತರಗೊಳ್ಳಬೇಕಾಯಿತು” ಎಂದು ಹೇಳಿದ್ದಾರೆ.

ಆಲ್ಟ್ ನ್ಯೂಸ್ ದಿ ಕಾರವಾನ್‌ನ ಮಲ್ಟಿಮೀಡಿಯಾ ನಿರ್ಮಾಪಕರಾದ ಸಿಕೆ ವಿಜಯಕುಮಾರ್ ಅವರೊಂದಿಗೆ ಮಾತನಾಡಿದೆ. ಅವರು “ಪ್ರಸ್ತುತವಾಗಿ, ಹೆಚ್ಚಿನ ನಿರಾಶ್ರಿತರ ಡೇರೆಗಳನ್ನು ಜಕಾತ್ ಫೌಂಡೇಶನ್ ಪ್ಲಾಟ್‌ನಲ್ಲಿ ಸ್ಥಾಪಿಸಲಾಗಿದೆ. ಸುಮಾರು 16 ಡೇರೆಗಳು ಪಕ್ಕದ ಬೀದಿಯಲ್ಲಿವೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ರೋಗಿಯನ್ನು ಆಸ್ಪತ್ರೆಯ ಸಿಬ್ಬಂದಿ ಕೊಲ್ಲುತ್ತಿದ್ದಾರೆ ಎಂಬ ಈ ವಿಡಿಯೊ ಸುಳ್ಳು!

ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಯುಪಿ ಸರ್ಕಾರಿ ಭೂಮಿಯಲ್ಲಿ ರೋಹಿಂಗ್ಯಾ ಕುಟುಂಬಗಳು ಸ್ಥಾಪಿಸಿದ ಮನೆಗಳನ್ನು ಜುಲೈ 22 ರಂದು ಕೆಡವಲಾಯಿತು.

ಯೂಟ್ಯೂಬ್‌ನಲ್ಲಿ ಪ್ಯಾರಾ ಹಿಂದೂಸ್ತಾನ್ 24 ಲಕ್ಷ ಚಂದಾದಾರರನ್ನು ಹೊಂದಿದೆ.

ಮದನ್‌ಪುರ್ ಖದರ್‌‌ನಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರದಿಂದ ಮಾಡಿದ್ದ ಜುಲೈ 23 ರ ವೀಡಿಯೋ ಪತ್ರಿಕೋದ್ಯಮದ ‘ಗ್ರೌಂಡ್ ರಿಪೋರ್ಟ್’ ಆಗಿರಲಿಲ್ಲ. ರೋಹಿಂಗ್ಯಾ ನಿರಾಶ್ರಿತರಿಗೆ ಸೌಕರ್ಯಗಳನ್ನು ಒದಗಿಸುತ್ತಾ ದೆಹಲಿ ಸರ್ಕಾರವು ದೆಹಲಿಯ ನಾಗರಿಕರನ್ನು ಕಡೆಗಣಿಸುತ್ತಿದೆ ಎಂದು ಬಿಂಬಿಸಲು ಚಾನೆಲ್ ಪ್ರಯತ್ನಿಸಿತ್ತು.

ಆದರೆ, ಸುಪ್ರೀಂಕೋರ್ಟ್‌ ನಿರ್ದೇಶನಗಳ ಪ್ರಕಾರ ಬದುಕಲು ಉದ್ದೇಶಪೂರ್ವಕವಾಗಿ ಕನಿಷ್ಠ ನೆರವು ನೀಡಲಾಗುತ್ತದೆ. ಆದರೆ ಚಾನೆಲ್‌ ವರದಿಗಾರರು ಅವರ ಡೇರೆಗಳನ್ನು ಪ್ರವೇಶಿಸಿ, ಇಕ್ಕಟ್ಟಾದ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಕಿರುಕುಳ ನೀಡಿ, ಅವರ ಮಾತುಗಳನ್ನು ತಿರುಚಿದ್ದಾರೆ. ಅನೇಕರು ಮಾತನಾಡಲು ನಿರಾಕರಿಸಿದಾಗ, ವರದಿಗಾರರು ಅವರನ್ನು ಹಿಂಬಾಲಿಸಿ ತೊಂದರೆ ನೀಡಿದ್ದಾರೆ.

ರೋಹಿಂಗ್ಯಾ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್‌ನ ಶಿಕ್ಷಣ ಮುಖ್ಯಸ್ಥ ಅಲಿ ಜೋಹರ್ ಆಲ್ಟ್ ನ್ಯೂಸ್‌ಗೆ ಹೇಳಿದಂತೆ, “ಪ್ಯಾರಾ ಹಿಂದುಸ್ತಾನದ ಪತ್ರಿಕೋದ್ಯಮ ಅನೈತಿಕವಾಗಿದೆ. ಡೇರೆಗಳು ನಾಶವಾದ ನಂತರ ಜನರ ಕಷ್ಟಗಳನ್ನು ತೋರಿಸುವ ಬದಲು, ಅವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಸುಳ್ಳು ವರದಿ ಮಾಡಿದೆ. ಯಾವುದೇ ಶೌಚಾಲಯಗಳಿಲ್ಲ ಎಂದು ಚಾನೆಲ್ ವರದಿ ಮಾಡಲಿಲ್ಲ. ಮಹಿಳೆಯರು ಮತ್ತು ಮಕ್ಕಳು ಮೂಲಭೂತ ಸೌಕರ್ಯಗಳಿಲ್ಲದೆ ಹೇಗೆ ಇದ್ದಾರೆ ಎಂಬುದರ ಬಗ್ಗೆ ಗಮನಹರಿಸಲಿಲ್ಲ?” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಪೆ: ಆಲ್ಟ್‌‌ನ್ಯೂಸ್‌

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ದೇಶಾದ್ಯಂತ ಆಕ್ಸಿಜನ್ ಪ್ಲಾಂಟ್‌ ಸ್ಥಾಪನೆ ವಿಳಂಬಕ್ಕೆ ಮೋದಿ ಸರ್ಕಾರವೇ ಕಾರಣ ಹೊರತು ರಾಜ್ಯಗಳಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...