2019 ರಲ್ಲಿ ನಡೆದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತದಲ್ಲಿ ಯಾರ ಕೈವಾಡವೂ ಇಲ್ಲ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದ ತನಿಖೆಯನ್ನು ದೆಹಲಿ ನ್ಯಾಯಾಲಯವು ಎತ್ತಿಹಿಡಿದಿದೆ.
2019 ರಲ್ಲಿ ರಾಯ್ ಬರೇಲಿಯಲ್ಲಿ ಅತ್ಯಾಚಾರ ಸಂತ್ರಸ್ತೆ, ಆಕೆಯ ಕುಟುಂಬ ಮತ್ತು ವಕೀಲರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅತಿ ವೇಗದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸಂತ್ರೆಸ್ತೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದ್ದರು. ಸಂತ್ರಸ್ತೆ ಮತ್ತು ವಕೀಲರು ತೀವ್ರವಾಗಿ ಗಾಯಗೊಂಡಿದ್ದರು.
ಕಾರು ಅಪಘಾತದಲ್ಲಿ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಜೀವಾವದಿ ಶಿಕ್ಷೆಗೆ ಗುರಿಯಾಗಿರುವ ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಮತ್ತು 9 ಮಂದಿಯ ಕೈವಾಡವಿದೆ ಎಂದು ಸಂತ್ರಸ್ತೆ ಕುಟುಂಬ ದೂರು ದಾಖಲಿಸಿತ್ತು. ಹೀಗಾಗಿ ಕುಲದೀಪ್ ಸಿಂಗ್ ಸೆಂಗಾರ್ ಮತ್ತು 9 ಮಂದಿ ಮೇಲೆ ಕೊಲೆ ಪ್ರಕರಣ ದಾಖಲಾಗಿತ್ತು.
ಈ ಆರೋಪಗಳನ್ನು ತಳ್ಳಿಹಾಕಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಧರ್ಮೇಶ್ ಶರ್ಮಾ, ದೂರುದಾರರ ಆಕ್ಷೇಪಣೆಗಳು ರೋಮಾಂಚಕ ಕಥೆಯಂತಿವೆ. ಆದರೆ ಅವು ಕೇವಲ ಅಂದಾಜು ಮತ್ತು ಊಹೆಗಳನ್ನು ಆಧರಿಸಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉನ್ನಾವೊ: ಅತ್ಯಾಚಾರದ ದೂರು ದಾಖಲಿಸಲು ವಿಫರಾಲದ ಜಿಲ್ಲಾಧಿಕಾರಿ ವಿರುದ್ದ ಕ್ರಮಕ್ಕೆ ಸಿಬಿಐ ಶಿಫಾರಸ್ಸು
ಸಿಬಿಐ ನಡೆಸಿದ ತನಿಖೆಯು ನಿಷ್ಠೆ, ನಿಖರತೆ ಮತ್ತು ಪ್ರಾಮಾಣಿಕತೆಯನ್ನು ಅನುಮಾನಿಸಲು ಯಾವುದೇ ಆಧಾರಗಳಿಲ್ಲ. ಕಾರು ಅಪಘಾತ ಘಟನೆಯ ಸಮರ್ಥನೀಯ ಸಂಗತಿಯನ್ನು ಸಂಸ್ಥೆ ಹೊರಹಾಕಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಘಟನೆಯಲ್ಲಿ ಕುಲದೀಪ್ ಸೆಂಗಾರ್ ಸೇರಿದಂತೆ ಟ್ರಕ್ ಚಾಲಕ ಅಥವಾ ಕ್ಲೀನರ್ ಅಥವಾ ಟ್ರಕ್ ಮಾಲೀಕರ ನಡುವೆ ಕ್ರಿಮಿನಲ್ ಪಿತೂರಿಯ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ತನಿಖಾ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
“ಆರೋಪಿತ ವ್ಯಕ್ತಿಗಳ ವಿರುದ್ಧ ಯಾವುದೇ ಪ್ರಕರಣವಿಲ್ಲ, ಆದ್ದರಿಂದ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 302 (ಕೊಲೆ) ಮತ್ತು 307 (ಕೊಲೆ ಯತ್ನ) ದ ಪ್ರಕರಣಗಳಿಲ್ಲ” ಎಂದು ಜುಲೈ 31 ರ ಆದೇಶದಲ್ಲಿ ನ್ಯಾಯಾಧೀಶ ಧರ್ಮೇಶ್ ಶರ್ಮಾ ಹೇಳಿದ್ದಾರೆ. ಜೊತೆಗೆ ಟ್ರಕ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ನಡೆದಿದೆ ಎಂದು ಆರೋಪಗಳನ್ನು ಮಾಡಲಾಗಿದೆ.
ಮಾರ್ಚ್ 4, 2020 ರಂದು ನ್ಯಾಯಾಂಗ ಬಂಧನದಲ್ಲಿದ್ದ ಅತ್ಯಾಚಾರ ಸಂತ್ರಸ್ತೆಯ ಕೊಲೆ ಪ್ರಕರಣದಲ್ಲಿ ಸೆಂಗಾರ್, ಆತನ ಸಹೋದರ ಮತ್ತು ಇತರ ಐವರು ಸಹಚರರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಡಿಸೆಂಬರ್ 20, 2019 ರಂದು, ಸೆಂಗರ್ಗೆ 2017 ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರತ್ಯೇಕ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಇದನ್ನೂ ಓದಿ: ಉನ್ನಾವೊ ದಲಿತ ಬಾಲಕಿಯರ ಸಾವು: ಪ್ರೀತಿ ನಿರಾಕರಿಸಿದ್ದಕ್ಕೆ ವಿಷಪ್ರಾಶನ ಮಾಡಿದವನ ಬಂಧನ