ಸುಪ್ರೀಂ ಕೋರ್ಟ್ನಲ್ಲಿ 39 ಮಹಿಳಾ ಸೇನಾ ಅಧಿಕಾರಿಗಳು ನಡೆಸಿದ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿ, ಇದೀಗ ಶಾಶ್ವತ ಆಯೋಗವನ್ನು (Permanent Commission) ಪಡೆದುಕೊಂಡಿದ್ದಾರೆ. ನೂತನ ಖಾಯಂ ಆಯೋಗವನ್ನು ಏಳು ಕರ್ತವ್ಯದ ದಿನಗಳ ಒಳಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.
ಪರ್ಮನೆಂಟ್ ಕಮಿಷನ್ (ಖಾಯಂ ಆಯೋಗ) ಎಂದರೆ ನಿವೃತ್ತಿಯವರೆಗೂ ಸೇನಾ ವೃತ್ತಿಯಲ್ಲಿ ಇರುವುದು. ಕಿರು ಸೇವಾ ಆಯೋಗವು 10 ವರ್ಷಗಳ ಅವಧಿಯದ್ದಾಗಿದೆ. ಖಾಯಂ ಆಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಇದ್ದರೆ ಅಧಿಕಾರಿಯು ನಾಲ್ಕು ವರ್ಷಗಳ ವಿಸ್ತರಣೆಯನ್ನು ಆಯ್ದುಕೊಳ್ಳಬಹುದಾಗಿದೆ.
ಖಾಯಂ ಆಯೋಗವನ್ನು ನಿರಾಕರಿಸಲ್ಪಟ್ಟಿದ್ದರಿಂದ ಕಿರು ಸೇವಾ ಆಯೋಗದ 71 ಮಹಿಳಾ ಅಧಿಕಾರಿಗಳು ಶಾಶ್ವತ ಆಯೋಗಕ್ಕಾಗಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ 71 ಅಧಿಕಾರಿಗಳ ಪೈಕಿ 39 ಮಹಿಳಾ ಅಧಿಕಾರಿಗಳು ಖಾಯಂ ಆಯೋಗಕ್ಕೆ ಅರ್ಹರಾಗಿದ್ದಾರೆ. ಇನ್ನು ಏಳು ಮಂದಿ ವೈದ್ಯಕೀಯವಾಗಿ ಅಸಮರ್ಥರು ಹಾಗೂ 25 ಮಂದಿ ‘ಶಿಸ್ತಿನ ಸಮಸ್ಯೆ’ ಹೊಂದಿದ್ದಾರೆ ಎಂದು ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ತಿಳಿಸಿತ್ತು.
ತಿರಸ್ಕೃತರಾಗಿರುವ 25 ಮಹಿಳಾ ಅಧಿಕಾರಿಗಳು ಯಾವ ಕಾರಣಕ್ಕಾಗಿ ಶಾಶ್ವತ ಆಯೋಗಕ್ಕೆ ಅರ್ಹತೆ ಪಡೆದುಕೊಂಡಿಲ್ಲ ಎಂಬುದನ್ನು ವಿವರಿಸುವ ವಿಸ್ತೃತ ವರದಿ ನೀಡುವಂತೆ ಸುಪ್ರೀಂಕೋರ್ಟ್ ಒಕ್ಕೂಟ ಸರ್ಕಾರಕ್ಕೆ ಸೂಚಿಸಿತ್ತು.
ಇದನ್ನೂ ಓದಿ: ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು
ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಹಾಗೂ ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರನ್ನು ಒಳಗೊಂಡ ನ್ಯಾಯಪೀಠ, ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ರಚಿಸುವಂತೆ ತೀರ್ಪು ನೀಡಿದೆ. ಅಲ್ಲದೆ, ಯಾವುದೇ ಅಧಿಕಾರಿಯನ್ನು ಸೇವೆಯಿಂದ ಬಿಡುಗಡೆ ಮಾಡಬಾರದು ಎಂದು ಅಕ್ಟೋಬರ್ 1ರಂದು ಮಧ್ಯಂತರ ಆದೇಶ ನೀಡಿತ್ತು.
ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಮಹಿಳಾ ಅಧಿಕಾರಿಗಳ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲರಾದ ವಿ. ಮೋಹನ, ಹುಜೇಫಾ ಅಹ್ಮದಿ ಮತ್ತು ಮೀನಾಕ್ಷಿ ಅರೋರಾ ಆರೋಪಿಸಿದ್ದರು.
ಕಳೆದ ಮಾರ್ಚ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಮಾನದಂಡವನ್ನು ತಲುಪಿದ ಕಿರಿಯ ಸೇವಾ ಆಯೋಗದ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗವನ್ನು ನೀಡಬೇಕೆಂದು ತೀರ್ಪು ನೀಡಿತ್ತು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು.
ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗವನ್ನು ನೀಡುವ ಸೇನೆಯ ಮೌಲ್ಯಮಾಪನ ಮಾನದಂಡವು ಅವರ ವಿರುದ್ಧ ವ್ಯವಸ್ಥಿತವಾಗಿ ತಾರತಮ್ಯ ಎಸಗುತ್ತಿದೆ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಈ ಹಿಂದೆ ಸುಪ್ರೀಂ ಕೋರ್ಟ್ನ ಮಹತ್ವದ ತೀರ್ಪಿನ ಪರಿಣಾಮವಾಗಿ ಜುಲೈ ತಿಂಗಳಿನಲ್ಲಿ 147 ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ನೀಡಲಾಗಿತ್ತು.
ಭಾರತೀಯ ಸೈನ್ಯದಲ್ಲಿ ಉನ್ನತ ನಾಯಕತ್ವದ ನೇತೃತ್ವಕ್ಕೆ ಸಶಕ್ತಗೊಳಿಸಲು ಶಾಶ್ವತ ಆಯೋಗ ಮಂಜೂರಾದ ಎಲ್ಲಾ ಮಹಿಳಾ ಅಧಿಕಾರಿಗಳನ್ನು ವಿಶೇಷ ತರಬೇತಿ ಕೋರ್ಸ್ಗಳಿಗೆ ಮತ್ತು ಸವಾಲಿನ ಮಿಲಿಟರಿ ಕಾರ್ಯಯೋಜನೆಗಳಿಗೆ ಒಳಪಡಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆ ನೀಡಿತ್ತು.
ಇದನ್ನೂ ಓದಿ: ನಕ್ಸಲೈಟ್ ಆರೋಪ: ವಿಠಲ ಮಲೆಕುಡಿಯ ನಿರ್ದೋಷಿ ಎಂದು ತೀರ್ಪಿತ್ತ ಕೋರ್ಟ್