Homeಮುಖಪುಟಸಾಮಾಜಿಕ ಸಂವೇದನೆಯ ಸೂಕ್ಷ್ಮ ನಟ ವಿಜಯ್ ಸೇತುಪಥಿ

ಸಾಮಾಜಿಕ ಸಂವೇದನೆಯ ಸೂಕ್ಷ್ಮ ನಟ ವಿಜಯ್ ಸೇತುಪಥಿ

ಧರ್ಮದುರೈ, ಇರೈವಿ, ಸೂಡು ಕವ್ವುಮ್, ತೆಣ್ಮೆರ್ಕು ಪರವಾಕುಟ್ರು, ಕಾವನ್ ಅದ್ಭುತ ಎನಿಸುವ ಪ್ರಮುಖ ಚಿತ್ರಗಳು

- Advertisement -
- Advertisement -

| ಮುತ್ತುರಾಜು |

‘ವಿಕ್ರಂವೇದ’ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಸೂಪರ್ ಡೂಪರ್ ಹಿಟ್ ಆದ ಚಿತ್ರ. ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಮೂರನ್ನೂ ಒಳಗೊಂಡ ಈ ಚಿತ್ರ ಪ್ರೊಫೆಶನಲ್ ಎಥಿಕ್ಸ್ ಬಗ್ಗೆಯೂ ಮಾತಾಡುತ್ತದೆ. ಬಾಕ್ಸ್ ಆಫೀಸ್‍ನಲ್ಲಿ ಸಾಕಷ್ಟು ಹಣ ಮಾಡಿದ ಈ ಚಿತ್ರದಲ್ಲಿ ವಿಜಯ್ ಸೇತುಪಥಿಯ ನಟನೆ, ಮ್ಯಾನರಿಸಂ ಎಲ್ಲರ ಗಮನ ಸೆಳೆಯಿತು. ಇತ್ತಿಚೇಗೆ ಬಿಡುಗಡೆಯಾದ ನವಿರು ಪ್ರೇಮಕಥೆಯ ತಮಿಳಿನ ’96 ಸಹ ಎಲ್ಲರ ಮನಗೆದ್ದ ಚಿತ್ರ.

ವಿಕ್ರಂವೇದ ಚಿತ್ರದಲ್ಲಿ
’96 ಚಿತ್ರದ ದೃಶ್ಯ

ಆದರೆ ವಿಜಯ್ ಸೇತುಪಥಿ ಏನು ಎನ್ನುವುದನ್ನು ಈ ಚಿತ್ರಗಳು ಹೇಳುವುದಿಲ್ಲ. ತಮಿಳಿನಲ್ಲಿ ಬಂದಿರುವ ಕಡಿಮೆ ಬಜೆಟ್‍ನ ಹತ್ತಾರು ಸಾಮಾಜಿಕ ತುಡಿತದ ಸಿನೆಮಾಗಳು ಅವರನ್ನು ಸಂಪೂರ್ಣ ಅರ್ಥ ಮಾಡಿಸುತ್ತವೆ. ಒಂದೊಂದು ಸಿನೆಮಾಗಳು ಒಂದೊಂದು ಲೋಕವನ್ನು ನಮ್ಮೆದೆರು ತೆರೆದಿಡುತ್ತವೆ. ಅವುಗಳನ್ನು ನೋಡುತ್ತಿದ್ದಂತೆಯೇ ಅವರ ಬಗ್ಗೆ ನಮ್ಮಲ್ಲಿ ಗೌರವದ ಭಾವನೆ ಮೂಡಿಸುತ್ತವೆ. ಧರ್ಮದುರೈ, ಇರೈವಿ, ಸೂಡು ಕವ್ವುಮ್, ತೆಣ್ಮೆರ್ಕು ಪರವಾಕುಟ್ರು, ಕಾವನ್ ಅಂತಹ ಸಾಲಿಗೆ ಸೇರುವ ಪ್ರಮುಖ ಚಿತ್ರಗಳು.

ಸೇತುಪಥಿ ಅಭಿನಯದ ನಾನು ಮೊದಲು ನೋಡಿದ ಚಿತ್ರ ಧರ್ಮದುರೈ. ಯೂ ಟ್ಯೂಬ್‍ನಲ್ಲಿ ಆಕಸ್ಮಿಕವಾಗಿ ಸಿಕ್ಕಿದ ಈ ಸಿನೆಮಾ ಮೊದಲ 15 ನಿಮಿಷದಲ್ಲೇ ಬೋರ್ ಅನ್ನಿಸಲಿಕ್ಕೆ ಶುರುವಾಯಿತು. 10 ನಿಮಿಷ ಸ್ಕಿಪ್ ಮಾಡಿದೆ. ನಂತರ ಎಷ್ಟು ಇಷ್ಟವಾಯಿತೆಂದರೆ ಪುನಃ ಮೊದಲಿಂದ ನೋಡಲು ಶುರು ಮಾಡಿದೆ. ಸಿನಿಮಾ ಮುಗಿಯುವ ಹೊತ್ತಿಗೆ ನಾನು ಬೇರೊಂದು ಲೋಕದಲ್ಲಿ ಕಳೆದುಹೋಗಿದ್ದೆ. ಮಾನವೀಯತೆಯ ಮಳೆಯನ್ನೇ ಸುರಿಸುವ ಇದರಲ್ಲಿ ನಾವು ತೋಯ್ದು ಹೋಗುತ್ತೇವೆ.

ಮೆಡಿಕಲ್ ಓದುವಾಗ ಧರ್ಮದುರೈಗೆ (ಸೇತುಪಥಿ) ಸ್ಟೆಲ್ಲಾ ಮತ್ತು ಶುಭಾ ಎಂಬ ಇಬ್ಬರು ಒಳ್ಳೆಯ ಸ್ನೇಹಿತರು. ಆ ಇಬ್ಬರಿಗೂ ಇವನ ಮೇಲೆ ಅವ್ಯಕ್ತ ಪ್ರೀತಿ. ಸಮಾಜಮುಖಿ ವೈದ್ಯರುಗಳು ಹೇಗಿರಬೇಕೆಂಬ ಪಾಠವನ್ನು ಅವರ ಗುರುಗಳಾದ ಡಾ.ಕಾಮರಾಜ್‍ರವರಿಂದ ಪಡೆದ ಧರ್ಮದುರೈ ತನ್ನೂರಲ್ಲಿ ಕ್ಲಿನಿಕ್ ಆರಂಭಿಸಿ ತನ್ನ ಕುಗ್ರಾಮ ಗ್ರಾಮದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಬೇಕೆಂಬ ಕನಸನ್ನು ನನಸಾಗಿಸಿಕೊಳ್ಳುತ್ತಾನೆ. ಧರ್ಮದುರೈಗೆ ತಾನು ಮೆಚ್ಚಿದ ಹುಡುಗಿಯನ್ನು ಮದುವೆಯಾಗಲು ವರದಕ್ಷಿಣೆಯ ಕಾರಣಕ್ಕೆ ತನ್ನ ಅಣ್ಣತಮ್ಮಂದಿರೇ ಅಡ್ಡಬರುತ್ತಾರೆ. ಆತನ ಪ್ರಿಯೆ ಬಡವರ ಮನೆಯ ಅನ್ಬುಸೆಲ್ವಿ ಮತ್ತು ಆಕೆಯ ತಂದೆ ಅವಮಾನ ತಾಳದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಧರ್ಮದುರೈ ಚಿತ್ರ

ಅಲ್ಲಿಂದ ಆತನದು ನಿರ್ಲಿಪ್ತಭಾವ. ಕುಡಿತ ಬಿಟ್ಟರೆ ತನಗೂ ಸಮಾಜಕ್ಕೂ ಸಂಬಂಧವಿಲ್ಲ. ಚೀಟಿ, ಬಡ್ಡಿ ವ್ಯವಹಾರ ಮಾಡುವ ಕುಟುಂಬವಾದರೂ ಧರ್ಮದುರೈಗೆ ಇದರಲ್ಲಿ ಯಾವುದೇ ಆಸಕ್ತಿ ಇಲ್ಲ. ಮನೆಯವರ ಕಾಟ ತಾಳಲಾರದೇ ತಪ್ಪಿಸಿಕೊಂಡು ಹೋಗುವ ಧರ್ಮದುರೈಗೆ ಸ್ಟೆಲ್ಲಾ ಸಾವಿನ ಸುದ್ದಿ ಅಪ್ಪಳಿಸುತ್ತದೆ. ನಂತರ ಶುಭಾ ಆತನನ್ನು ಕಾಪಿಟ್ಟು ಪೋಷಿಸುತ್ತಾಳೆ. ನಮ್ಮ ಬದುಕಿನ ಗುರಿಯೇನು? ಉದ್ದೇಶಗಳ ಕುರಿತು ಚರ್ಚಿಸುತ್ತಾರೆ. ನಂತರ ಅವರಿಬ್ಬರೂ ಒಟ್ಟು ಸೇರಿ ಬದುಕುವುದಲ್ಲದೇ ಅವರ ಗುರುಗಳ ಹೆಸರಿನಲ್ಲಿ ಆಸ್ಪತ್ರೆ ತೆರೆದು ಪ್ರೀತಿಯಿಂದ ಸೇವೆ ನೀಡುತ್ತಾರೆ. ಅಲ್ಲಿ ಟ್ರಾನ್ಸ್ ಜೆಂಡರ್ ಒಬ್ಬರನ್ನು ಕೆಲಸಕ್ಕೆ ನೇಮಿಸಿಕೊಂಡು ಮಾದರಿಯಾಗುತ್ತಾರೆ.

ಒಟ್ಟಾರೆ ಮನುಷ್ಯನ ಸಣ್ಣತನಗಳು, ಪ್ರೀತಿ, ಮಾದರಿ, ಸಮಾನತೆಯ ಭಾವ, ಮಾನವೀಯತೆಯ ಜೊತೆಗೆ ಸ್ಥಳೀಯ ತಮಿಳಿನ ಸೊಗಡು ಸಿನೆಮಾದಲ್ಲಿ ವ್ಯಕ್ತವಾಗುತ್ತದೆ. ಹಿರೋಗಳೆಂದರೆ ಬೆಳ್ಳಗೆ, ಸಿಕ್ಸ್‍ಪ್ಯಾಕ್ ದೇಹ, ಆಕರ್ಷಕ ಡ್ರೆಸ್ಸುಗಳಿಂದ ಮಿಂಚುವ ಮನೋಭಾವವಿರುವಾಗ ಇಲ್ಲಿ ಅವ್ಯಾವುವು ಇಲ್ಲದೇ ಕಪ್ಪುಬಣ್ಣದ, ದಪ್ಪದೇಹದ ಸೇತುಪಥಿ ನಟನೆಯೇ ನಮ್ಮನ್ನು ಮನಸೋರೆಗೊಳ್ಳುತ್ತದೆ.

ಇರೈವಿ ಚಿತ್ರದ ಪೋಸ್ಟರ್
ಪೆಣ್ಮೆರ್ಕು ಪರುವಾಕಾಟ್ರು ಸಿನಿಮಾದ ದೃಶ್ಯ

ಜೋರಾಗಿ ಮಳೆ ಬರುತ್ತಿರುತ್ತದೆ. ಬಡವರ ಮನೆಯ ಹುಡುಗಿ ತಾನು ಯಾರನ್ನಾದರೂ ಪ್ರೀತಿಸಿದರೆ ನಮ್ಮ ಮನೆಯವರು ಸುಮ್ಮನೇ ಬಿಡುತ್ತಾರಾ ಎಂದು ಸಹಪಾಠಿಗಳೊಂದಿಗೆ ಹೇಳುತ್ತಾಳೆ. ಅದೇ ಮಳೆ, ಇನ್ನೊಂದು ಕಡೆ ಶ್ರೀಮಂತ ಮನೆಯ ಹುಡುಗಿ ತಾನು ಇಷ್ಟಪಟ್ಟ ಪ್ರಖ್ಯಾತ ಸಿನೆಮಾ ನಿರ್ದೇಶಕನ ಜೊತೆ ಮದುವೆಯಾಗುವ ಸಂಭ್ರಮದಲ್ಲಿದ್ದಾಳೆ. ಅದಕ್ಕಾಗಿ ತನ್ನ ತಂದೆಯನ್ನು ಒಪ್ಪಿಸಲು ಪಟ್ಟ ಪರಿಪಾಡಲನ್ನು ಸ್ನೇಹಿತಳೊಂದಿಗೆ ವರ್ಣಿಸುತ್ತಿದ್ದಾಳೆ. ಹೀಗೆ ಆರಂಭವಾಗುವ ಇರೈವಿ ಸಿನೆಮಾ ಅಂತ್ಯದ ವೇಳೆಗೆ ದೀರ್ಘ ವಿಷಾದದೊಂದಿಗೆ ನಮ್ಮನ್ನು ಕಾಡುತ್ತದೆ.

ಅತುಲ್ ಪ್ರಖ್ಯಾತ ಸಿನೆಮಾ ನಿರ್ದೇಶಕ. ಶ್ರೀಮಂತ ಹುಡುಗಿಯನ್ನು ಮದುವೆಯಾಗುವ, ಒಬ್ಬ ಮಗಳಿರುವ ಈತ ಸಂಪೂರ್ಣ ಮದ್ಯವ್ಯಸನಿ. ಮುಂಗೋಪಿ ಮೈಕಲ್ ಪಾತ್ರದಲ್ಲಿ ವಿಜಯ್ ಸೇತುಪಥಿ ಬಡವರ ಮನೆಯ ಹುಡುಗಿಯನ್ನು ಬಲವಂತವಾಗಿ ಮದುವೆಯಾಗುತ್ತಾನೆ. ಈತನಿಗೂ ಒಬ್ಬ ಮಗಳಿರುತ್ತಾಳೆ. ಮೈಕಲ್, ಅತುಲ್ ಮತ್ತು ಆತನ ತಮ್ಮ ಜಗನ್ ಈ ಮೂವರ ನಡುವೆ ಗಾಢಸ್ನೇಹ. ಅತುಲ್ ಮತ್ತು ಮೈಕಲ್ ಅಪ್ಪಟ ಮನುಷ್ಯ ಪ್ರೀತಿಯ ಜೀವಗಳು. ಆದರೆ ಅವರ ಕುಡಿತ ಮತ್ತು ಮುಂಗೋಪ ಗುಣಗಳಿಂದ ಅವರು ಮಾಡುವ ಕೃತ್ಯಗಳು ಅವರನ್ನು ಮೇಲೇಳದಷ್ಟು ಪ್ರಪಾತಕ್ಕೆ ತಳ್ಳುತ್ತವೆ.

ಸೂಡು ಕವ್ವುಮ್ ಚಿತ್ರದಲ್ಲಿ

ಅತುಲ್ ಕುಡಿತದಿಂದ ಬೇಸತ್ತು ಡೈವೋರ್ಸ್ ನೀಡಿ ಬೇರೊಬ್ಬನನ್ನು ಪ್ರೀತಿಸಲು ಆತನ ಹೆಂಡತಿ ಹಲವು ಬಾರಿ ಬಯಸಿರುತ್ತಾಳೆ. ಕೊನೆಗೆ ಅತುಲ್ ತಾನು ಖಂಡಿತ ಬದಲಾಗುವುದಾಗಿಯೂ ಪ್ರತಿ ಸಲ ಒತ್ತಾಯ ಮಾಡಿ ಅದಕ್ಕೆ ಅವಕಾಶ ನೀಡುವುದಿಲ್ಲ. ಇತ್ತ ಅತುಲ್‍ಗಾಗಿ ಕೊಲೆಯೊಂದನ್ನು ಮಾಡಿ ಜೈಲು ಸೇರಿದ ಮೈಕಲ್ ಎರಡು ವರ್ಷದ ನಂತರ ಬಿಡುಗಡೆಯಾಗಿ ತನ್ನ ಹೆಂಡತಿಯೊಂದಿಗೆ ಸಹಜ ಪ್ರೀತಿಯಿಂದ ಹೊಸ ಜೀವನಕ್ಕೆ ಹಾತೊರೆಯುತ್ತಾನೆ. ಈ ಇಬ್ಬರು ಹೆಣ್ಣು ಮಕ್ಕಳು ತಮ್ಮ ಗಂಡಂದೀರು ಬದಲಾಗಲು ಬಹಳ ಅವಕಾಶಗಳನ್ನು ನೀಡುತ್ತಾ, ಹೊಸ ಬದುಕಿನ ಕನಸು ಕಾಣುತ್ತಾ. ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ.

ಆದರೆ ಅತುಲ್ ತಮ್ಮ ಜಗನ್ ಮಾತ್ರ ದುಷ್ಟತನಗಳ ಕೂಪ. ಕಳ್ಳತನ, ಕಂಡವರ ಹೆಂಡತಿಯ ಮೇಲಿನ ಮೋಹ, ಅಪರಿಮಿತ ಸ್ವಾರ್ಥದ ಕಾರಣಕ್ಕಾಗಿ ಆತ ಮೈಕಲ್ ನಿಂದಲೇ ಕೊಲೆಯಾಗುವ ಪರಿಸ್ಥಿತಿ ಬರುತ್ತದೆ. ಊರು ಬಿಡುವ ಮೈಕಲ್‍ನನ್ನು ತಮ್ಮನ ಸಾವಿನಿಂದ ಸಿಟ್ಟಿಗೇಳುವ ಅತುಲ್ ಕೊಂದು ಜೈಲು ಸೇರುತ್ತಾನೆ. ಮತ್ತೆ ಮಳೆ ಬರುತ್ತದೆ, ಇತ್ತ ಮೈಕಲ್ ಹೆಂಡತಿ ಬೀದಿ ಪಾಲಾಗುತ್ತಾಳೆ. ಅಪ್ಪ ಎಲ್ಲಿ ಎಂದು ಕೇಳುವ ತನ್ನ ಮಗಳಿಗೆ ಮಳೆಯಲ್ಲಿ ಆಡಲು ಹೇಳಿ ಕರೆದೊಯ್ಯುತ್ತಾಳೆ. ಅತ್ತ ಅತುಲ್ ಹೆಂಡತಿ ಸಹ ಮಾನಸಿಕವಾಗಿ ಖಿನ್ನಳಾಗುತ್ತಾಳೆ. ಮಳೆಯಲಿ ಆಡಲು ಬಯಸುವ ತನ್ನ ಮಗಳಿಗೆ ನಮ್ಮಂತವರು ಮಳೆಯಲ್ಲಿ ನೆನಯಬಾರದೆಂದು ದುಃಖದಿಂದ ಹೇಳುತ್ತಾಳೆ. ಅಲ್ಲಿಗೆ ಸಿನಿಮಾ ಮುಕ್ತಾಯವಾಗುತ್ತದೆ. ಅವರಿಬ್ಬರ ನಟನೆಯೇ ಸಿನಿಮಾದ ಜೀವಾಳವಾಗಿದೆ.

ಇದನ್ನು ಓದಿ: ಸತ್ಯಜಿತ್ ರೇ ರವರ ಜನ ಅರಣ್ಯ ಸಿನಿಮಾದ ಕುರಿತು

ಆದರೆ ಈ ಸಿನೆಮಾ ಹಲವು ಪ್ರಶ್ನೆಗಳನ್ನು ಉಳಿಸಿಹೋಗುತ್ತದೆ. ಮನುಷ್ಯನ ಕೋಪ-ತಾಪಗಳು ಎಂತಹ ದುರಂತ ತರುತ್ತವೆ ಎಂಬುದನ್ನು ತೋರಿಸುತ್ತದೆ. ಜೊತೆಗೆ ಎಲ್ಲವನ್ನು ಸಹಿಸುವ, ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಮಹಿಳೆಯರ ಯಾತನೆಯನ್ನು ಸಮರ್ಥವಾಗಿ ಮಂಡಿಸುತ್ತದೆ.

ಕಾವನ್ ಚಿತ್ರದಲ್ಲಿ

ವಿಜಯ್ ಸೇತುಪಥಿ ಸಿನಿಮಾಗಳ ಕಥೆಯ ಆಯ್ಕೆಯೇ ವಿಶಿಷ್ಟವಾದದು. ಭ್ರಷ್ಟಾಚಾರಕ್ಕೆ ಇಂದಿನ ಸಮಾಜ ಒಗ್ಗಿಕೊಂಡಿರವ ಅಪಾಯದ ಕುರಿತು ವ್ಯಂಗ್ಯವಾಗಿ ಬಂದ ಅವರ ‘ಸೂಡುಕವ್ವಮ್’ ಸಿನಿಮಾವನ್ನು ಪಾಕಿಸ್ತಾನದಲ್ಲಿ ರೀಮೇಕ್ ಮಾಡಲಾಗಿದೆ ಅಂದರೆ ನೀವು ನಂಬಲೇಬೇಕು. ತೆಣ್ಮೆರ್ಕು ಪರವಾಕುಟ್ರು ಸಿನಿಮವು ಕುರಿ ಕಾಯುವ ತಾಯಿಯೊಬ್ಬಳ ದಿಟ್ಟ ಕಥೆ ಮತ್ತು ಆಕೆಯ ಮಗನ ಪ್ರೇಮಕಥೆಯಾದರೆ, ಕಾವನ್ ಮಾಧ್ಯಮ ಲೋಕದ ಭ್ರಷ್ಟತೆ ಮತ್ತು ಪರ್ಯಾಯ ಮಾಧ್ಯಮಗಳ ಕುರಿತು ಮಾತನಾಡುತ್ತದೆ. ಕೇವಲ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿರುವ ಸೇತುಪಥಿ ಸಿನಿಮಾಗಳನ್ನೊಮ್ಮೆ ನೋಡಿ. ಜೀವನ ಪ್ರೀತಿಯನ್ನು ಅನುಭವಿಸಿ.

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ – ಮೈಕೆಲ್ ಹಾನೆಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...