‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ’ದಲ್ಲಿ ಮಾತನಾಡಲು ಕರ್ನಾಟಕ ಸರ್ಕಾರದಿಂದ ಆಹ್ವಾನಿತರಾಗಿದ್ದ ಯುಕೆಯಲ್ಲಿನ ಭಾರತೀಯ ಮೂಲದ ಪ್ರಾಧ್ಯಾಪಕಿ ನಿತಾಶಾ ಕೌಲ್ ಅವರು ಬೆಂಗಳೂರಿನಲ್ಲಿ ಬಂದಿಳಿದ ನಂತರ ನನಗೆ ಭಾರತಕ್ಕೆ ಪ್ರವೇಶ ನಿರಾಕರಿಸಲಾಗಿದ್ದು, ವಿಮಾನ ನಿಲ್ದಾಣದಿಂದ ವಾಪಾಸ್ಸು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಾಧ್ಯಾಪಕಿ ನಿತಾಶಾ ಕೌಲ್, ಈ ಹಿಂದೆ ಆರೆಸ್ಸೆಸ್ ವಿರುದ್ಧ ತಾನು ಮಾತನಾಡಿದ್ದಕ್ಕೆ ತನಗೆ ಪ್ರವೇಶ ನಿರಾಕರಿಸಲಾಗಿದೆ. ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಭಾರತಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆ. ಕರ್ನಾಟಕ ಸರ್ಕಾರದಿಂದ ಗೌರವಾನ್ವಿತ ಪ್ರತಿನಿಧಿಯಾಗಿ ನನ್ನನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿತ್ತು. ಆದರೆ ಕೇಂದ್ರ ಸರಕಾರವು ನನಗೆ ಪ್ರವೇಶವನ್ನು ನಿರಾಕರಿಸಿದೆ. ನನ್ನ ಎಲ್ಲಾ ದಾಖಲೆಗಳು ಮಾನ್ಯ ಮತ್ತು ಪ್ರಸ್ತುತವಾಗಿದೆ, ಆದರೂ ಪ್ರವೇಶ ನಿರಾಕರಿಸಲಾಗಿದೆ ಎಂದು ಯುಕೆಯ ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ನಿತಾಶಾ ಕೌಲ್ ಅವರು ಟ್ವೀಟ್ನಲ್ಲಿ ಬರೆದಿದ್ದಾರೆ.
ಅಧಿಕಾರಿಗಳು ದೆಹಲಿಯಿಂದ ಆದೇಶವಿದೆ ಎಂದು ಹೇಳಿದ್ದನ್ನು ಹೊರತುಪಡಿಸಿ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ನನ್ನ ಪ್ರಯಾಣಕ್ಕೆ ಕರ್ನಾಟಕ ಸರಕಾರ ವ್ಯವಸ್ಥೆ ಮಾಡಿತ್ತು ಮತ್ತು ನನ್ನ ಬಳಿ ಅಧಿಕೃತ ಪತ್ರವಿತ್ತು. ನನಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ದೆಹಲಿಯಿಂದ ನನಗೆ ಯಾವುದೇ ಸೂಚನೆ ಅಥವಾ ಮಾಹಿತಿಯನ್ನು ಮುಂಚಿತವಾಗಿ ನೀಡಿಲ್ಲ ಎಂದು ಕೌಲ್ ಹೇಳಿಕೊಂಡಿದ್ದಾರೆ.
ನಾನು ಲಂಡನ್ನಿಂದ ಬೆಂಗಳೂರಿಗೆ ಬರಲು ವಿಮಾನದಲ್ಲಿ 12 ಗಂಟೆಗಳನ್ನು ಕಳೆದಿದ್ದೇನೆ, ಹಲವಾರು ಗಂಟೆಗಳ ಕಾಲ ಅವರು ನನ್ನನ್ನು ಅಲ್ಲಿ-ಇಲ್ಲಿ ಕರೆದೊಯ್ದರು, ಪ್ರಕ್ರಿಯೆಯ ಕುರಿತು ಯಾವುದೇ ಮಾಹಿತಿಯನ್ನು ಒದಗಿಸಲಿಲ್ಲ, ನಂತರ 24 ಗಂಟೆಗಳ ಕಾಲ ಹೋಲ್ಡಿಂಗ್ ಸೆಲ್ನಲ್ಲಿ ತನಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿಲ್ಲ ಮತ್ತು ವಿಮಾನ ನಿಲ್ದಾಣಕ್ಕೆ ಡಜನ್ಗಟ್ಟಲೆ ಕರೆಗಳನ್ನು ಮಾಡಿದರೂ ಒಂದು ದಿಂಬು ಮತ್ತು ಹೊದಿಕೆಯಂತಹ ಮೂಲಭೂತ ಸೌಲಭ್ಯಗಳನ್ನು ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ನಿತಾಶಾ ಕೌಲ್ ಬೆಂಗಳೂರಿಗೆ ಬಂದಿಳಿದ 24 ಗಂಟೆಯ ನಂತರ, ಬ್ರಿಟಿಷ್ ಏರ್ವೇಸ್ ವಿಮಾನದ ಮೂಲಕ ಅವರನ್ನು ಲಂಡನ್ಗೆ ವಾಪಸ್ ಕಳುಹಿಸಲಾಗಿದೆ.
ಬಲಪಂಥೀಯ ಹಿಂದುತ್ವ ಟ್ರೋಲ್ಸ್ ವರ್ಷಗಳಿಂದ ನನಗೆ ಜೀವ ಬೆದರಿಕೆ, ಅತ್ಯಾಚಾರ, ನಿಷೇಧ ಇತ್ಯಾದಿ ಬೆದರಿಕೆ ಹಾಕಿದೆ. ಈ ಹಿಂದೆ, ನಾನು ಯುಕೆಯಲ್ಲಿ ವಾಸಿಸುತ್ತಿದ್ದರೂ ಮತ್ತು ನನ್ನ ಕೆಲಸಕ್ಕೆ ಯಾವುದೇ ಸಂಬಂಧವಿಲ್ಲದಿದ್ದರೂ ಸಹ ಅಧಿಕಾರಿಗಳು ನನ್ನ ವಯಸ್ಸಾದ ಅಸ್ವಸ್ಥ ತಾಯಿ ವಾಸಿಸುತ್ತಿರುವ ಕಾಶ್ಮೀರದ ಮನೆಗೆ ಬೆದರಿಸಲು ಪೊಲೀಸರನ್ನು ಕಳುಹಿಸಿದ್ದಾರೆ. ಅವರು ನಿವೃತ್ತ ಹಿಂದಿ ಶಿಕ್ಷಕಿ ಮತ್ತು ನನ್ನ ಏಕೈಕ ಬದುಕುಳಿದ ಪೋಷಕರು ಎಂದು ನಿತಾಶಾ ಕೌಲ್ ಟ್ವೀಟ್ ಮಾಡಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿನ 370ನೇ ವಿಧಿ ರದ್ದುಗೊಂಡ ನಂತರ ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು 2019ರಲ್ಲಿ ನಿತಾಶಾ ಕೌಲ್ ಅಮೆರಿಕಾದ ವಿದೇಶಾಂಗ ವ್ಯವಹಾರಗಳ ಸದನ ಸಮಿತಿಯೆದುರು ಸಾಕ್ಷ್ಯವನ್ನು ಹೇಳಿದ್ದರು.
ಇದನ್ನು ಓದಿ: ಭಾರತ್ ಜೋಡೋ ನ್ಯಾಯ ಯಾತ್ರೆ; ಪ್ರಜಾಪ್ರಭುತ್ವ-ಸಂವಿಧಾನ ಉಳಿಸುವುದೇ ನಮ್ಮೆಲ್ಲರ ದೊಡ್ಡ ಸವಾಲು: ಅಖಿಲೇಶ್ ಯಾದವ್