Homeಅಂಕಣಗಳುನಿಮಗೆ ಭೀಮ್ ಆರ್ಮಿ ಗೊತ್ತಿರಬಹುದು; ಭೀಮ್ ಪಾಠಶಾಲಾ?

ನಿಮಗೆ ಭೀಮ್ ಆರ್ಮಿ ಗೊತ್ತಿರಬಹುದು; ಭೀಮ್ ಪಾಠಶಾಲಾ?

- Advertisement -
- Advertisement -

ಚಂದ್ರಶೇಖರ್ ಆಜಾದ್ ‘ರಾವಣ್’, ಯಾವುದೇ ಬಾಲಿವುಡ್ ಹೀರೋಗೂ ಕಡಿಮೆಯಿಲ್ಲದಂತೆ ಸಂಚಲನ ಮೂಡಿಸಿರುವ ಹೆಸರುಗಳಲ್ಲೊಂದು. ಈವರೆಗೆ ರಾಮಾಯಣದ ರಾವಣನ ಪೌರಾಣಿಕ ಪಾತ್ರವನ್ನು ಬಿಟ್ಟು ಆ ಹೆಸರಿನ ಇನ್ಯಾವ ವ್ಯಕ್ತಿಯ ಬಗ್ಗೆಯೂ ಗೊತ್ತಿಲ್ಲದವರೂ ಕೂಡಾ, ಕಳೆದ ಕೆಲವು ದಿನಗಳಲ್ಲಿ ಮಾಧ್ಯಮಗಳು ಪದೇ ಪದೇ ಪ್ರಸ್ತಾಪಿಸಿದ ಈ ಹೆಸರಿನ ವ್ಯಕ್ತಿಯ ಬಗ್ಗೆ ಕುತೂಹಲದಿಂದ ಪರಿಶೀಲಿಸುವಂತಾಯಿತು. ವಿವರಗಳನ್ನು ಕೆದಕಿದವರಿಗೆ ಕಂಡಿದ್ದು ಚಂದ್ರಶೇಖರ್ ಅಥವಾ ರಾವಣ್ ಎಂಬ ಪಶ್ಚಿಮ ಉತ್ತರ ಪ್ರದೇಶದ ದಲಿತ ಯುವ ವಕೀಲನೊಬ್ಬನು ಹೊಸ ತಲೆಮಾರನ್ನು ಪ್ರಭಾವಿಸಿದ ರೀತಿ; ವಿಶೇಷವಾಗಿ ಈತ, ವಿನಯ್ ರತನ್‍ಸಿಂಗ್ ಎಂಬ ಮತ್ತೊಬ್ಬ ದಲಿತ ಯುವ ವಕೀಲನೊಂದಿಗೆ ಸೇರಿ ಕಟ್ಟಿದ ‘ಭೀಮ್ ಆರ್ಮಿ’ ತಂಡವು ದಲಿತ ಯುವಕರಲ್ಲಿ ಮಿಲಿಟೆನ್ಸಿಯನ್ನು ಹುಟ್ಟುಹಾಕಿ ಯಾರಿಗೂ ತಲೆಬಾಗಿ ಬದುಕಬೇಡಿ ಎಂಬ ಸಂದೇಶ; ನಂತರ ಆಜಾದ್ ಮೇಲೆ ಸುಳ್ಳು ಕೇಸುಗಳನ್ನು ಜಡಿದು ಜೈಲುಪಾಲು ಮಾಡಿ ಇವೆಲ್ಲವನ್ನೂ ಹತ್ತಿಕ್ಕಲು ಉತ್ತರ ಪ್ರದೇಶದ ಸರ್ಕಾರ ನಡೆಸಿದ ವಿಫಲ ಯತ್ನ ಮತ್ತು ನಂತರ ಅನಿವಾರ್ಯವಾಗಿ ಈ ಸೆಪ್ಟೆಂಬರ್ 13ರ ಮಧ್ಯರಾತ್ರಿ ಚಂದ್ರಶೇಖರ್ ಆಜಾದ್ ರ  ಬಿಡುಗಡೆ!

ಇವೆಲ್ಲವೂ ಕೇವಲ 30ರ ಆಸುಪಾಸಿನಲ್ಲಿರುವ, ದಲಿತರ ಪರವಾದ ಖಚಿತವಾದ ರಾಜಕೀಯ ನಿಲುವುಗಳನ್ನುಳ್ಳ, ಪ್ರಖರ ವಾಗ್ಮಿಯೂ ಹೋರಾಟಗಾರನೂ ಆದ ಈ ಯುವಕನನ್ನು ಭಾರತದ ಬಹುಪಾಲು ದಲಿತ ಮತ್ತು ಚಿಂತನಶೀಲ ಯುವಕರ ಕಣ್ಮಣಿಯಾಗಿಸಿದೆ. ತಮ್ಮ ಸಮುದಾಯವನ್ನು ಸುದೀರ್ಘ ಕಾಲದಿಂದ ಕಾಡುತ್ತಾ ಬಂದಿರುವ ಉತ್ತರ ಪ್ರದೇಶದ ಬಲಾಢ್ಯ ಠಾಕೂರ್ ಸಮುದಾಯದ ರೀತಿಯಂತೆ ಉದ್ದೇಶಪೂರ್ವಕವಾಗಿಯೇ ಮೇಲೆತ್ತಿ ತಿರುಗಿಸಿದ ಮೀಸೆಯನ್ನೂ, ಬಲಗೈಗೆ ಧರಿಸುವ ದಪ್ಪ ಕಡಗವನ್ನೂ ತಮ್ಮ ವಿಶಿಷ್ಟ (ಸಿಗ್ನೇಚರ್) ಶೈಲಿಯಾಗಿಸಿಕೊಂಡಿರುವ ಭೀಮ್ ಆರ್ಮಿಯ ಹೋರಾಟಗಾರರು ಸದ್ಯಕ್ಕೆ ಸಮಾನತೆಯನ್ನು ಕನಸುವ ಯುವಕರ ಫ್ಯಾಶನ್ ಐಕಾನ್‍ಗಳು ಕೂಡಾ ಹೌದು!

ಚಂದ್ರಶೇಖರ್ ಆಜಾದ್ ‘ರಾವಣ್’ ಭೀಮ್ ಆರ್ಮಿಯನ್ನು ಆರಂಭಿಸಿದ್ದು 2015ರ ಜುಲೈನಲ್ಲಿ. ‘ರಾವಣ್’ ಎಂಬುದು ಖಳನಾಯಕರಂತೆ ಬಿಂಬಿಸಲ್ಪಟ್ಟ ಈ ದೇಶದ ಮೂಲನಿವಾಸಿ ಹೋರಾಟಗಾರರ ನಿಜವಾದ ಇತಿಹಾಸವನ್ನು ಎತ್ತಿತೋರುವುದಕ್ಕಾಗಿ ಬೇಕೆಂದೇ ಇಟ್ಟುಕೊಂಡ ಹೆಸರು. ಠಾಕೂರರ ಉಸಿರುಕಟ್ಟಿಸುವ ದಮನ ದಬ್ಬಾಳಿಕೆಗಳ ನಡುವೆ ತಲೆಯೆತ್ತಲು ಹೆಣಗುತ್ತಿದ್ದ ಸಹರಾನ್‍ಪುರದ ದಲಿತ ಸಮುದಾಯದೊಳಕ್ಕೆ ಅಂಬೇಡ್ಕರ್ ಚಿಂತನೆಗಳೊಂದಿಗೆ ಅವರ ತಂಡ ನುಗ್ಗಿತು. ಅತ್ಯಂತ ಸಣ್ಣ ಅವಧಿಯಲ್ಲಿ ಜನಬೆಂಬಲವನ್ನೂ, ಜನಪ್ರಿಯತೆಯನ್ನೂ ಗಳಿಸಿದ ಆಜಾದ್ ರ ಮಿಂಚಿನ ವೇಗವು ದಲಿತ ಸಮುದಾಯದಲ್ಲಿ ಐಕ್ಯತೆಯನ್ನು ತಂದಿತ್ತು. ಇದು ಬಲಾಢ್ಯ ಸಮುದಾಯಗಳ ಫ್ಯೂಡಲ್ ದೊರೆಗಳ ಮತ್ತು ಉತ್ತರ ಪ್ರದೇಶದ ಸರಕಾರಗಳ (ಈಗಿನ ಮತ್ತು ಹಿಂದಿನ) ನಿದ್ದೆ ಕೆಡಿಸಿತ್ತು. ಆದ್ದರಿಂದಲೇ, ಸುಮಾರು 24 ಗಂಭೀರ ದೋಷಾರೋಪಗಳನ್ನು ಅವರ ಮೇಲೆ ಹೊರಿಸಿತು. ಅದು ಸಾಲದೆಂದು ದೇಶದ ಭದ್ರತೆಗೇ ಅಪಾಯವಾಗುವಂತಹ ಕೆಲಸ ಮಾಡಿದ್ದಾನೆಂದು ಆರೋಪಿಸುತ್ತಾ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ಯ ಅತಿ ಗಂಭೀರ ಆರೋಪಗಳನ್ನೂ ಬಳಸಿ 2017ರಲ್ಲಿ ಅವರನ್ನು ಜೈಲಿಗೆ ದಬ್ಬಲಾಯಿತು.

ಆದರೆ, ಈ ಸುದ್ದಿಗಳ ನಡುವೆ ಭೀಮ್ ಆರ್ಮಿಯು ತನ್ನ ಹುಟ್ಟಿನೊಂದಿಗೇನೆ ಆರಂಭಿಸಿದ ‘ಭೀಮ್ ಪಾಠ್‍ಶಾಲಾ’ಗಳ ಯಶಸ್ಸಿನ ಕಥೆ ಸ್ವಲ್ಪ ಮಸುಕಾದಂತಾಗಿದೆ. ಮೊಟ್ಟಮೊದಲ ಭೀಮ್ ಪಾಠ್‍ಶಾಲಾ 2015ರಲ್ಲಿ ಸಹರನ್‍ಪುರದ ಫತೇಪುರ್ ಭಾಡೋ ಗ್ರಾಮದಲ್ಲಿ ಆರಂಭವಾಯಿತು. ಭೀಮ್ ಆರ್ಮಿ (ಈ ಸಂಘಟನೆಯ ಪೂರ್ಣ ಹೆಸರು ‘ಭೀಮ್ ಆರ್ಮಿ ಭಾರತ್ ಏಕ್ತಾ ಮಿಶನ್’)ಯ ಸಂಸ್ಥಾಪಕರಾದ ಆಜಾದ್ ಮತ್ತು ವಿನಯ್ ರತನ್‍ರಿಗೆ ಮತ್ತು ಅವರ ಜೊತೆಗಾರರಿಗೆ ಇಂತಹ ಶಾಲೆಗಳ ಅಗತ್ಯವೇನೆಂಬುದು ನಿಚ್ಚಳವಾಗಿ ತಿಳಿದಿತ್ತು.
‘ಯಾವುದೇ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಮೊದಲ ಹತ್ತು ವರ್ಷಗಳಲ್ಲಿ ಆ ಮಗು ಏನು ಕಲಿಯುತ್ತದೆಂಬುದು ಬಹಳ ಮುಖ್ಯ. ಆದರೆ ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳು ಅಸಹನೀಯವಾದ ಸ್ಥಿತಿಯಲ್ಲಿವೆ. ಬಹುಪಾಲು ದಲಿತ ಸಮುದಾಯ ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಭರಿಸುವ ಸ್ಥಿತಿಯಲ್ಲಿಲ್ಲ; ಒಂದು ವೇಳೆ ಹಾಗೆ ಖಾಸಗಿ ಶಾಲೆಗಳಿಗೆ ಕಳಿಸಿದರೂ ಜಾತಿಯ ಕಾರಣದಿಂದಾಗಿ ಅಲ್ಲಿ ಅವರಿಗೆ ಸಮಾನ ಗೌರವ ಅಥವಾ ಕಲಿಕೆ ಸಿಗುವುದಿಲ್ಲವೆಂಬುದು ಗೊತ್ತೇ ಇದೆ. ಬಾಬಾಸಾಹೇಬರು ಶಿಕ್ಷಣಕ್ಕೆ ಪ್ರಮುಖ ಸ್ಥಾನ ಕೊಟ್ಟಿದ್ದು ಸುಮ್ಮನೇ ಅಲ್ಲ. ಅದಕ್ಕಾಗಿಯೇ ನಮ್ಮ ಸಂಘಟನೆಯ ಮೊದಲ ಮತ್ತು ಆದ್ಯತೆಯ ಕೆಲಸವಾಗಿ ನಾವು ಆರಂಭಿಸಿದ್ದು ಉಚಿತವಾಗಿ ಉತ್ತಮ ಕಲಿಕೆಯನ್ನು ರೂಪಿಸುವ ‘ಭೀಮ್ ಪಾಠ್‍ಶಾಲಾ’ಗಳನ್ನು’ ಎನ್ನುತ್ತಾರೆ ಸಿಂಗ್.

ಈ ಶಾಲೆಗಳಲ್ಲಿ ಮಕ್ಕಳು ಪಠ್ಯ ವಿಷಯಗಳಾದ ಗಣಿತ, ವಿಜ್ಞಾನ, ಇಂಗ್ಲೀಷ್ ಮೊದಲಾದವುಗಳ ಜೊತೆಗೆ, ಇತಿಹಾಸದ ಪುಟಗಳಲ್ಲಿ ಹೂತುಹೋಗಿರುವ ದಲಿತ ಸಮುದಾಯದ ಚರಿತ್ರೆಯನ್ನೂ, ಶೋಷಿತರ ವಿಮೋಚನೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಜೀವನ ಚಿತ್ರಣಗಳನ್ನೂ, ಅಂಬೇಡ್ಕರ್‍ರವರ ಚಿಂತನೆಗಳನ್ನೂ ಕಲಿಯುತ್ತಾರೆ. ಆರಂಭದಲ್ಲಿ ಸಹರನ್‍ಪುರದ ಸುತ್ತಲಿನ ಪ್ರದೇಶದಲ್ಲಷ್ಟೇ ಸಂಜೆಯ ಕೋಚಿಂಗ್ ತರಗತಿಗಳಾಗಿ 2 ಗಂಟೆಗಳ ಕಾಲ ನಡೆಯುತ್ತಿದ್ದ ಈ ಶಾಲೆಗಳು ಬಹಳ ವೇಗವಾಗಿ ಮೀರಟ್, ಮುಜಫ್ಫರ್‍ನಗರ್, ಆಗ್ರಾ ಮೊದಲಾದೆಡೆಗಳಿಗೂ ವ್ಯಾಪಿಸಿದವು. ಇಂದು ಸುಮಾರು 350ರಷ್ಟು ‘ಭೀಮ್ ಪಾಠ್‍ಶಾಲಾ’ಗಳು ಕಾರ್ಯನಿರ್ವಹಿಸುತ್ತಿದ್ದು ಸಾವಿರದ ಸಂಖ್ಯೆಯನ್ನು ಮುಟ್ಟುವ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ.

ಮೊದಲ ಶಾಲೆ ಫತೇಪುರದಲ್ಲಿ ಆರಂಭವಾಗುತ್ತಿದ್ದಂತೆ ಬುಢಖೇರಾದ ದಲಿತ ಯುವಕರಿಗೆ ತಮ್ಮಲ್ಲೂ ಇಂತಹ ಶಾಲೆ ಬೇಕೆಂದೆನಿಸಿತು. ನಿವೃತ್ತ ಶಿಕ್ಷಕ ಕನ್ವರ್ ಪಾಲ್ ಸಿಂಗ್‍ರವರ ಮನೆಯೆದುರಿನ ಖಾಲಿ ಬಯಲೇ ಶಾಲಾ ಆವರಣವಾದರೆ ಆಗಷ್ಟೇ 10ನೇ ತರಗತಿ ಮುಗಿಸಿದ್ದ 15 ವರ್ಷದ ಸಿಂಗ್‍ರವರ ಕಿರಿಯ ಪುತ್ರಿ ನಿಶಾ ಆ ಭೀಮ್ ಶಾಲೆಯ ಮೊದಲ ಬೋಧಕಿಯಾದಳು. ಮೊದಲ ದಿನ 30 ಇದ್ದ ಮಕ್ಕಳ ಸಂಖ್ಯೆ ಕೇವಲ 2 ವಾರಗಳಲ್ಲಿ 100ರ ಸಂಖ್ಯೆಯನ್ನೂ ದಾಟಿ ಹಿಗ್ಗುತ್ತಾ ಹೋಗಿ ಶಾಲೆಯನ್ನು ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಸೃಷ್ಟಿಸಿತು. ಈಗ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳು 1-4 ಹಾಗೂ 5-9ರವರೆಗಿನ ವಿಭಾಗಗಳಲ್ಲಿ ನಿರಂತರ ಕಲಿಕೆಯಲ್ಲಿದ್ದಾರೆ.

ಇದೇ ಶಾಲೆಯ ಹಿರಿಯ ವಿದ್ಯಾರ್ಥಿನಿ ರಚನಾ, ತನ್ನ ಔಪಚಾರಿಕ ಖಾಸಗಿ ಶಾಲೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತರಗತಿಗೆ ಮೊದಲ ಸ್ಥಾನ ಗಳಿಸಿ ಆಜಾದ್ ರವರಿಂದ ಬಹುಮಾನ ಪಡೆದಿರುವುದನ್ನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ರಚನಾ ಕೂಲಿಕಾರ್ಮಿಕರಾದ ತನ್ನ ತಂದೆತಾಯಿಯರ 7 ಮಂದಿ ಮಕ್ಕಳಲ್ಲಿ ಒಬ್ಬಳು. ‘ಭೀಮ್ ಆರ್ಮಿಯೊಂದಿಗೆ ಗುರುತಿಸಿಕೊಂಡಿರುವುದರಿಂದ ನಾವು ದಲಿತ ಹೆಣ್ಣುಮಕ್ಕಳು ಇಂದು ಲೈಂಗಿಕ ದೌರ್ಜನ್ಯಗಳ ಭೀತಿಯಿಲ್ಲದೆ ಸೈಕಲ್ ತುಳಿದುಕೊಂಡು ಶಾಲೆಗೆ ಹೋಗಲು ಸಾಧ್ಯವಾಗುತ್ತಿದೆ. ನಾನು ಜೀವಶಾಸ್ತ್ರ ಕಲಿತು ಮುಂದೆ ವೈದ್ಯೆಯಾಗಬೇಕು, ನೊಂದವರಿಗಾಗಿ ಉಚಿತ ಚಿಕಿತ್ಸಾಲಯಗಳನ್ನು ತೆರೆಯಬೇಕು’ ಎಂಬ ಕನಸು ಕಾಣುವುದು ರಚನಾಗೆ ಈಗ ಸಾಧ್ಯವಾಗಿದೆ. ಆಕೆಯು ಭೀಮಶಾಲೆಯ ಮತ್ತೊಬ್ಬ ಸ್ವಯಂಸೇವಕ ಬೋಧಕಿ!

ಈ ಅನೌಪಚಾರಿಕ ಶಾಲೆಗಳು ದಲಿತ ಸ್ವಾಭಿಮಾನದ, ಅರಿವಿನ ಮತ್ತು ಐಕ್ಯತೆಯ ಪ್ರತೀಕಗಳಾಗಿ ಛಾಪು ಮೂಡಿಸುತ್ತಾ ವಿಸ್ತರಣೆಗೊಳ್ಳುತ್ತಲೇ ಹೋಗುತ್ತಿವೆ.
ಶೋಷಿತರ ಸ್ವಾಭಿಮಾನದ ಚಳವಳಿಗಳಿಗೆ ಶಿಕ್ಷಣವು ಕೇವಲ ಅನ್ನದ ಮಾರ್ಗ ಮಾತ್ರವಲ್ಲ; ಸಮಾಜ ಪರಿವರ್ತನೆಯ ಮಾರ್ಗ. ಶೋಷಿತ ಸಮುದಾಯಗಳು ತಮ್ಮದೇ ಆದ ಸಾಮಾಜಿಕ ಸಾಂಸ್ಕøತಿಕ ಗುರುತನ್ನು ಗಳಿಸಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಮಾರ್ಗ. ಆದ್ದರಿಂದಲೇ ರಷ್ಯಾ ಕ್ರಾಂತಿಯ ನಂತರ ಲೆನಿನ್ ತಮ್ಮ ಭಾಷಣವೊಂದರಲ್ಲಿ “ರಷ್ಯಾದ ದುಡಿಯುವ ಜನತೆಯ ಶೇ.90ಕ್ಕಿಂತ ಹೆಚ್ಚು ಮಂದಿ ಶಿಕ್ಷಣ ಪಡೆದಿಲ್ಲ; ಆದರೆ, ಬಂಡವಾಳಶಾಹಿಗಳ ಮೇಲೆ ವಿಜಯ ಸಾಧಿಸಲು ತಮಗೆ ಅದು ಬೇಕೇಬೇಕು ಎಂಬುದನ್ನು ಅರಿತಿದ್ದಾರೆ. ಇಲ್ಲಿ ಶಿಕ್ಷಣ ಕೇವಲ ಅಕ್ಷರ ಜ್ಞಾನವಲ್ಲ, ಹೊಸ ಮಾನವರ ಹುಟ್ಟು” ಎನ್ನುತ್ತಾರೆ. ಇದೇ ಮಾದರಿಯಲ್ಲಿ ಭೀಮ್ ಪಾಠಶಾಲೆಯ ಪ್ರಯೋಗ ಏಕಕಾಲದಲ್ಲಿ ರಚನಾತ್ಮಕವಾದದ್ದೂ ಹಾಗೂ ಅತ್ಯಂತ ರಾಜಕೀಯವಾದದ್ದೂ ಹೌದು.

ಛತ್ತೀಸ್‍ಗಢದಲ್ಲಿ ಹೋರಾಟ ಮತ್ತು ರಚನಾತ್ಮಕ ಕೆಲಸಗಳು ಜೊತೆಜೊತೆಯಾಗಿ ಸಾಗಬೇಕಿರುವ ಕುರಿತು ಛತ್ತೀಸ್‍ಗಡ ಮುಕ್ತಿ ಮೋರ್ಚಾದ ಸಂಸ್ಥಾಪಕ ಶಂಕರ್ ಗುಹಾ ನಿಯೋಗಿ ‘ಸಂಘರ್ಷ್ ಔರ್ ನಿರ್ಮಾಣ್’ ಎಂದು ಸೂತ್ರೀಕರಿಸಿದ್ದರು. ಶಹೀದ್ ಶಾಲೆಗಳು ಮತ್ತು ಶಹೀದ್ ಆಸ್ಪತ್ರೆಗಳು ಇಂದಿಗೂ ಮಾದರಿ ಸಂಸ್ಥೆಗಳಾಗಿವೆ. ಮಹಾರಾಷ್ಟ್ರದಲ್ಲಿ ಅನೂಪ್ ವಾರ್ಧಾರವರು ನಡೆಸುತ್ತಿರುವ ನಳಂದ ಅಕಾಡೆಮಿಯ ಪ್ರಯೋಗದ ಕುರಿತು, ಅವರ ಸಂದರ್ಶನದ ಮೂಲಕ ಓದುಗರಿಗೆ ‘ಪತ್ರಿಕೆ’ ತಿಳಿಸಿತ್ತು.

ಬಹುಶಃ ಸಂಘರ್ಷ್ ಔರ್ ನಿರ್ಮಾಣ್‍ಗಳು ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ. ಈ ತಲೆಮಾರಿನ ಯುವಜನರನ್ನು ಒಳಗೊಂಡು, ಮಕ್ಕಳು ಕುಟುಂಬ ಎಲ್ಲರನ್ನೂ ಜೊತೆಗೊಯ್ಯಬಲ್ಲ ಹೋರಾಟದ ಮಾದರಿಗಳು ಹೆಚ್ಚೆಚ್ಚು ಜನರನ್ನೂ ತಲುಪುತ್ತವೆ ಹಾಗೂ ಇದರ ಪ್ರಭಾವ ಹಾಗೂ ಪರಿಣಾಮ ದೂರಗಾಮಿಯಾದದ್ದೂ ಆಗಿರುತ್ತದೆ. ಇದನ್ನು ಭೀಮ್‍ಆರ್ಮಿ ತಂಡವು ಚೆನ್ನಾಗಿಯೇ ಮನಗಂಡಿದೆ. ಅವರಿಗೊಂದು ಜೈಭೀಮ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...