Homeರಾಜಕೀಯಬೆಳಗಾವಿಯಲ್ಲೂ ಸೃಷ್ಟಿಯಾಯಿತಾ ಒಂದು ಮಿನಿ ರಿಪಬ್ಲಿಕ್?

ಬೆಳಗಾವಿಯಲ್ಲೂ ಸೃಷ್ಟಿಯಾಯಿತಾ ಒಂದು ಮಿನಿ ರಿಪಬ್ಲಿಕ್?

- Advertisement -
- Advertisement -

ಬಿಜೆಪಿಯ ಅಧಿಕಾರದಾಹ ಮತ್ತು ಬಿಜೆಪಿಯ ಪತ್ರಿಕೆಗಳು ಹಾಗೂ ಚಾನೆಲ್‍ಗಳ ನೀಚತನವನ್ನು ಎಷ್ಟು ಬೇಕಾದರೂ ಬಯ್ದುಕೊಳ್ಳಬಹುದು. ಆದರೆ, ಸಮ್ಮಿಶ್ರ ಸರ್ಕಾರದ ನೇತಾರರು, ಅದರಲ್ಲೂ ಕಾಂಗ್ರೆಸ್ ಪಕ್ಷದ ನೇತಾರರು ತಮ್ಮನ್ನೇ ಕೇಳಿಕೊಳ್ಳಬೇಕಾದ ಪ್ರಶ್ನೆ ಒಂದಿದೆ. ಅವರು ಅಧಿಕಾರಕ್ಕೆ ಬಂದಿದ್ದು ಯಾತಕ್ಕೆ? ತಮ್ಮಿಬ್ಬರ ಸಮ್ಮಿಶ್ರಕ್ಕೆ ಬಹುಮತವಿದೆ; ಜಾತ್ಯತೀತ ಸರ್ಕಾರ ರಚಿಸುತ್ತೇವೆ; ಜನಪರವಾದ ಆಡಳಿತ ನೀಡುತ್ತೇವೆ ಇತ್ಯಾದಿ ಹೇಳಿಕೊಂಡು ಬಂದವರು ಜನರ ಆಶೋತ್ತರಗಳಿಗೆ ಎಷ್ಟರಮಟ್ಟಿಗೆ ಗಮನ ಕೊಡುತ್ತಿದ್ದಾರೆ?
ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಬಳ್ಳಾರಿಯ ರೆಡ್ಡಿಗಳು ಮತ್ತು ರಾಮುಲು ನಡೆಸಿದಂತಹದ್ದೇ ಪಾಲಿಟಿಕ್ಸ್‍ಅನ್ನು ಚಿಕ್ಕ ಪ್ರಮಾಣದಲ್ಲಿ ಜಾರಕಿಹೊಳಿ ಸಹೋದರರು ನಡೆಸಿದಂತೆ ಕಾಣುತ್ತಿದೆ. ‘ನಮ್ಮ ಜಿಲ್ಲೆಗೆ ಬೇರೆಯವರು ತಲೆ ಹಾಕಬಾರದು; ನಾವು ಹೇಳಿದ ಅಧಿಕಾರಿಗಳನ್ನು ಇಲ್ಲಿಗೆ ಹಾಕಬೇಕು; ನಾವು ಹೇಳಿದವರಿಗೆ ಅಧಿಕಾರಸ್ಥಾನ ಕೊಡಬೇಕು, ಇಲ್ಲದಿದ್ದರೆ ಸರ್ಕಾರ ಉರುಳಿಸುವ ಶಕ್ತಿ ನಮಗೆ ಇದೆ’ ಎಂಬುದನ್ನೇ ರೆಡ್ಡಿ-ರಾಮುಲು ಹೇಳಿ ಸರ್ಕಾರವನ್ನು ಬ್ಲ್ಯಾಕ್‍ಮೇಲ್ ಮಾಡಿದ್ದರು.
ಇಂದು ಸಂದರ್ಭ ಬೇರೆ ಇದೆ. ವ್ಯಕ್ತಿಗಳೂ ಬೇರೆ. ಅದರಲ್ಲೂ ಸತೀಶ್ ಜಾರಕಿಹೊಳಿ ಉಳಿದವರಿಗಿಂತ ಭಿನ್ನವಾದ ರಾಜಕಾರಣಿ ಎಂದು ಹೆಸರು ಪಡೆದುಕೊಂಡಿದ್ದಾರೆ. ಆದರೂ ‘ಬೆಳಗಾವಿ ಮತ್ತು ಬಳ್ಳಾರಿಗಳಿಗೆ ಉಳಿದವರು ತಲೆ ಹಾಕುವಂತಿಲ್ಲ. ನಾವು ಹೇಳಿದ ಅಧಿಕಾರಿಗಳನ್ನು ಇಲ್ಲಿಗೆ ಹಾಕಬೇಕು. ನಾವು ಹೇಳಿದವರಿಗೆ ಅಧಿಕಾರ ಕೊಡಬೇಕು. ಸರ್ಕಾರ ಉರುಳಿಸುವ ಶಕ್ತಿ ನಮಗೂ ಇದೆ’ ಎಂಬ ಮಾತುಗಳು ಬಳ್ಳಾರಿ ಮಾತುಗಳಂತೆಯೇ ಕೇಳುತ್ತಿವೆ. ರಿಪಬ್ಲಿಕ್ ಮಾತುಗಳಂತೆ.
ಏಕೆಂದರೆ ಜನರಿಗೆ ಸಂಬಂಧಿಸಿದ ಯಾವ ಇಶ್ಯೂಗಳೂ ಇಲ್ಲಿ ಮುಂದೆ ಬಂದಿಲ್ಲ. ಈ ಸರ್ಕಾರವು ಟೇಕಾಫ್ ಆಯಿತಾ? ಸಾಮಾನ್ಯ ಜನರಿಗೆ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳಲ್ಲಿ – ರೈತರ ಸಾಲಮನ್ನಾ ಒಂದನ್ನು ಬಿಟ್ಟು ಉಳಿದಂತೆ – ಯಾವ್ಯಾವುದನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದೆ ಸಾಗಿದ್ದೇವೆ? ಎರಡೂ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಇನ್ನೂ ಯಾಕೆ ತಯಾರಾಗಿಲ್ಲ? ಜಾತ್ಯತೀತತೆಯನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ಮತ್ತು ಜನಪರವಾದ ನೀತಿಗಳನ್ನು ಅನುಷ್ಠಾನ ಮಾಡಲು ಅಧಿಕಾರ ಬಳಸಿಕೊಂಡು ಏನು ಮಾಡಬಹುದು? ಇವ್ಯಾವುವೂ ಎರಡೂ ಪಕ್ಷಗಳ ವರ್ತುಲಗಳಲ್ಲಿ ಚರ್ಚೆಯಾಗುತ್ತಿಲ್ಲ.
ಸರ್ಕಾರದ ಸ್ಥಿರತೆ, ತಮ್ಮ ಆದ್ಯತೆಗಳು, ಬಿಜೆಪಿಗಿಂತ ತಾವು ಹೇಗೆ ಭಿನ್ನ ಎಂಬುದನ್ನು ಸ್ಪಷ್ಟವಾಗಿ ಮಾತುಗಳಲ್ಲಿ ಹಾಗೂ ಸರ್ಕಾರದ ಕಾರ್ಯಕ್ರಮಗಳ ಮೂಲಕ ಮುಂದಿಡಬೇಕು ಎಂಬುದು ಎರಡೂ ಪಕ್ಷಗಳ ಮುಖಂಡರಿಗೆ ಆದ್ಯತೆಯಾಗಿದ್ದಂತೆ ತೋರುತ್ತಿಲ್ಲ. ಸಿದ್ದರಾಮಯ್ಯನವರು ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳದ ಶಾಂತಿವನದಲ್ಲಿದ್ದಾಗ ಮತ್ತು ಇದೀಗ ವಿದೇಶ ಪ್ರವಾಸಕ್ಕೆ ಹೋದಾಗ ಉಂಟಾದ ಭಿನ್ನಮತವು ಕಾಕತಾಳೀಯವೆಂಬಂತೆ ಕಾಣುತ್ತಿಲ್ಲ. ಶಾಂತಿವನದಿಂದ ಬೆಂಗಳೂರಿಗೆ ಮರಳಲು ಒಂದೇ ದಿನವಿದ್ದಾಗ ಇದೇ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರ ದಂಡು ಅಲ್ಲಿಗೆ ಹೋಗಿತ್ತು. ಅದೂ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದ ಸ್ಥಿರತೆಯ ಕುರಿತು ಅನುಮಾನ ವ್ಯಕ್ತಪಡಿಸಿದ ಮಾತುಗಳು ವಿಡಿಯೋ ರೆಕಾರ್ಡ್ ಆಗಿ ಲೀಕ್ ಆದ ನಂತರದಲ್ಲಿ. ಅದರ ಮೂಲಕ ತಾನೂ ಗುಂಪು ರಾಜಕೀಯ ಮಾಡಬಲ್ಲೆ ಎಂದು ತೋರಿಸಬೇಕೆಂದು ಸಿದ್ದರಾಮಯ್ಯನವರು ನಿಶ್ಚಯಿಸಿದರೆ ಎಂಬ ಪ್ರಶ್ನೆ ಉದ್ಭವವಾಗಿತ್ತು.
ಹಾಗಾಗಿಯೇ ಈ ಸಾರಿ ಸಿದ್ದರಾಮಯ್ಯನವರ ವಿದೇಶ ಪ್ರವಾಸದ ಸಂದರ್ಭದಲ್ಲಿ ಉದ್ಭವವಾದ ‘ಭಿನ್ನಮತದ’ ಚಟುವಟಿಕೆಗಳು ಅವರು ಬಂದ ತಕ್ಷಣ ನಿಲ್ಲುತ್ತವೆ ಮತ್ತು ಆ ಮೂಲಕ ತಾನು ಮಾತ್ರ ಈ ಭಿನ್ನಮತವನ್ನು ಶಮನ ಮಾಡಬಲ್ಲೆ ಎಂದು ತೋರಿಸುವ ಉದ್ದೇಶ ಅವರಿಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬಂದವು. ‘ಜಾತ್ಯತೀತ ಆಶಯಗಳಿಗೆ ಬದ್ಧವಾಗಿರುವ’ ಸಿದ್ದರಾಮಯ್ಯನವರು ಈ ಸಾರ್ವಜನಿಕ ಸಂದೇಶಗಳ ಕುರಿತು ಇನ್ನೂ ಹೆಚ್ಚಿನ ಎಚ್ಚರ ವಹಿಸದೇ ಇರುವುದು, ಮುಖ್ಯಮಂತ್ರಿಯೋತ್ತರ ಕಾಲದಲ್ಲಿ ಇರಬೇಕಾದ ಮುತ್ಸದ್ದಿತನದ ಕೊರತೆಯಲ್ಲದೇ ಬೇರೇನೂ ಅಲ್ಲ.
ಸಾಲಮನ್ನಾದ ಕುರಿತು ಇದುವರೆಗೂ ಗೊಂದಲವನ್ನು ಬಗೆಹರಿಸಿಲ್ಲ. ನಿಜಕ್ಕೂ ಎಷ್ಟು ಸಾವಿರ ಕೋಟಿಗಳ ಸಾಲ ಮನ್ನಾ ಆಗಿದೆ; ಎಷ್ಟು ಲಕ್ಷ ರೈತರು ಇದರಿಂದ ಅನುಕೂಲ ಪಡೆದುಕೊಳ್ಳುತ್ತಾರೆ ಎಂಬುದನ್ನು ಸರ್ಕಾರ ಅರ್ಧಂಬರ್ಧ ಹೇಳುವ ಪ್ರಯತ್ನ ಮಾಡಿದೆಯಾದರೂ ಯಾರೂ ಅದರಿಂದ ಕನ್‍ವಿನ್ಸ್ ಆದಂತೆ ಕಾಣುತ್ತಿಲ್ಲ. ಇನ್ನು ಖಾಸಗಿ ಸಾಲವನ್ನೂ ಮನ್ನಾ ಮಾಡುವುದು ಒಂದು ಕ್ರಾಂತಿಕಾರಿ ಯೋಜನೆ. ಆದರೆ ಯಾರಿಗೂ ಅದರಿಂದ ರೋಮಾಂಚನ ಆಗುತ್ತಿಲ್ಲ. ತುಣುಕು ತುಣುಕಾಗಿ ಸಾಲಮನ್ನಾದ ಕ್ರಮಗಳನ್ನು ಪ್ರಕಟಿಸುತ್ತಿರುವುದು ಒಂದೆಡೆಯಾದರೆ, ಖಾಸಗಿ ಸಾಲಮನ್ನಾ ಘೋಷಿಸಿದರೆ ಅದನ್ನು ಜಾರಿಗೆ ತರುವುದು ಹೇಗೆ ಮತ್ತು ಆಗ ಉಂಟಾಗುವ ಸಾಲ ಮಾರುಕಟ್ಟೆಯ ನಿರ್ವಾತವನ್ನು ತುಂಬಲು ಯಾವ ಬಗೆಯ ಸಾಂಸ್ಥಿಕ ಪರ್ಯಾಯವನ್ನು ಮಾಡುತ್ತೇವೆಂದು ಸರ್ಕಾರ ಮುಂದಿಟ್ಟಿಲ್ಲ.
ಹೀಗಾಗಿ ಈ ಸರ್ಕಾರದ ಅತ್ಯಂತ ಮಹತ್ವದ ಸಾಂಸ್ಥಿಕ ಮತ್ತು ಖಾಸಗಿ ಸಾಲಮನ್ನಾವೂ ರೈತರಲ್ಲಿ ವಿಶ್ವಾಸ ತುಂಬಿಲ್ಲ. ಇಲ್ಲಿ ಸರ್ಕಾರಕ್ಕೆ ಬರಬೇಕಾದ ಕ್ರೆಡಿಟ್ಟಿನ ಅಂಶ ಅಷ್ಟು ಮುಖ್ಯವಲ್ಲ. ಕೃಷಿ ಬಿಕ್ಕಟ್ಟಿನ ಗೋಜಲಿನಿಂದ ಹೊರಬರಲು ಏನಾದರೂ ಆಸರೆ ಸಿಗಬಹುದೇ ಎಂದು ಆಸೆಗಣ್ಣಿನಿಂದ ನೋಡುವ ರೈತರಲ್ಲಿ ಭರವಸೆ ಮೂಡಬೇಕು. ನಾಳೆ ಆ ಕಾರಣಕ್ಕೆ ಸರ್ಕಾರ ನಡೆಸುವ ಪಕ್ಷಗಳಿಗೆ ಅನುಕೂಲವಾಗುವುದಾದರೆ ಆಗಲಿ. ಹತ್ತಾರು ಸಾವಿರ ಕೋಟಿ ರೂ.ಗಳು ಬೊಕ್ಕಸದಿಂದ ಖರ್ಚಾದ ನಂತರವೂ ಸರ್ಕಾರ ತಮ್ಮ ಪರವಾಗಿದೆ ಎಂದು ಜನರಿಗೆ ಅನ್ನಿಸದಿದ್ದರೆ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಖಚಿತವಾಗುತ್ತದೆ ಅಷ್ಟೇ.
ಬಿಜೆಪಿಯ ಕಾಲದಲ್ಲಿ ಭೂಗರ್ಭವನ್ನು ಬಗೆದು ಲೂಟಿ ಮಾಡಿ ಹಂಚಿಕೊಳ್ಳಲು ಇಂತಹ ಕದನಗಳು ನಡೆದಿತ್ತು; ನಮ್ಮಲ್ಲಿ ಹಾಗಲ್ಲ. ತಮ್ಮ ಪಾಳೆಯಪಟ್ಟಿನ ಮೇಲಿನ ಹಿಡಿತಕ್ಕೆ ಅಷ್ಟೇ ಅಲ್ಪಸ್ವಲ್ಪ ಗುದ್ದಾಟ. ಜಾರಕಿಹೊಳಿ ಸೋದರರೂ ಶ್ರೀಮಂತ ಉದ್ದಿಮೆದಾರರೇ ಇರಬಹುದಾದರೂ, ರೆಡ್ಡಿ ಸೋದರರ ಪರಮ ಅಕ್ರಮ ದಂಧೆಯೂ ಇವರದ್ದೂ ಒಂದೇ ಅಲ್ಲ. ಬಳ್ಳಾರಿ ರಿಪಬ್ಲಿಕ್ ಎಂದಾಗ ಅಲ್ಲಿ ಒಂದರ್ಥದಲ್ಲಿ ಪ್ರಜಾಪ್ರಭುತ್ವವೇ ಇರಲಿಲ್ಲ; ವಿಧಾನಸಭೆಯೊಳಗೇ ಬಳ್ಳಾರಿಗೆ ಬನ್ನಿ ಎಂದು ವಿರೋಧ ಪಕ್ಷದ ನಾಯಕರಿಗೇ ಆವಾಜ್ó ಹಾಕಿದ್ದರು. ಇದು ಆ ರೀತಿ ಅಲ್ಲ. ಜಾತಿಗಳ ಬಲ ಮತ್ತು ಸಾಮಾಜಿಕ ಸ್ಥಾನಮಾನವೂ ಬೇರೆ ಇತ್ಯಾದಿ ಇತ್ಯಾದಿಗಳನ್ನೆಲ್ಲಾ ಹೇಳಬಹುದು. ಜೊತೆಗೆ ಪರಮಘಾತುಕತನ ಹಾಗೂ ಟಿಆರ್‍ಪಿ ದಾಹದಿಂದ ವರ್ತಿಸುತ್ತಿರುವ ಮಾಧ್ಯಮಗಳು ಇಲ್ಲದ್ದನ್ನೂ ಸೃಷ್ಟಿಸುತ್ತಿವೆ ಎಂಬ ಕಾರಣವನ್ನೂ ಮುಂದಿಡಬಹುದು. ಇವೆಲ್ಲವೂ ನಿಜ.
ಆದರೆ, ಅಷ್ಟೇನಾ? ಪರಮ ಘಾತುಕರಿಗೂ, ಸಾಧಾರಣ ಘಾತುಕರಿಗೂ ನಡುವಿನ ವ್ಯತ್ಯಾಸವಷ್ಟೇ ನಿಮ್ಮಿಬ್ಬರ ನಡುವೆ ಇರುವುದಾದಲ್ಲಿ, ಇತರ ಕಾರಣಗಳಿಗಾಗಿ ಜನರು ಎ ಟೀಂಅನ್ನೇ ಆರಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಆಗ ಅಯ್ಯೋ ನಮ್ಮ ಜಾತ್ಯತೀತತೆಗೆ ಜನರು ಓಟು ಹಾಕಲಿಲ್ಲ ಎಂದು ಗೋಳುಗರೆಯುವುದು. ಇಂತಹ ಪಕ್ಷಗಳಿಗೆ ಜನರು ಬುದ್ಧಿ ಕಲಿಸದೇ ಬಿಡುವುದಿಲ್ಲ.
ಸರ್ಕಾರವನ್ನು ಪರಿಣಾಮಕಾರಿಯಾಗಿ ಮುನ್ನಡೆಸುವುದರಲ್ಲಿ ಕುಮಾರಸ್ವಾಮಿಯವರೂ ಇನ್ನೂ ಪಾಸ್ ಆಗಿಲ್ಲ. ಅವರೂ ಕಾರಣಗಳನ್ನು ಹೇಳಬಹುದು. ತಾನು ಸಾಂದರ್ಭಿಕ ಶಿಶು, ದೈವಕೃಪೆ, ಸಿದ್ದರಾಮಯ್ಯನವರ ಅವಕೃಪೆ, ರಾಹುಲ್‍ಗಾಂಧಿ ಆಶೀರ್ವಾದ ಇತ್ಯಾದಿ ಇತ್ಯಾದಿಗಳೆಲ್ಲಾ ಆಗಾಗ್ಗೆ ಉದುರಿಸಬಹುದು. ಸಾಲಮನ್ನಾದ ಕಾರಣದಿಂದ ಉಳಿದಂತೆ ಹೆಚ್ಚಿನ ಆರ್ಥಿಕ ಅನುದಾನಗಳನ್ನು ನೀಡಲಾಗುತ್ತಿಲ್ಲ ಎಂದು ಕೆಲವೆಡೆ ಹೇಳುವುದು, ಸಾಲಮನ್ನಾದಿಂದ ಸರ್ಕಾರದ ಹಣಕಾಸಿನ ಸ್ಥಿತಿಯೇನೂ ತೊಂದರೆಗೀಡಾಗಿಲ್ಲ ಎಂದು ಇನ್ನೊಂದೆಡೆ ಹೇಳುವುದನ್ನು ಎಚ್‍ಡಿಕೆ ಮಾಡುತ್ತಿದ್ದಾರೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿದ್ದ ವಿವಿಧ ಸಮುದಾಯಗಳ ವ್ಯಕ್ತಿಗತ ಫಲಾನುಭವಿಗಳಿಗೆ ಹಣಕಾಸಿನ ನೆರವನ್ನು ನೀಡುವುದನ್ನು ಮಾಡುವುದು ಸಾಧ್ಯವಾಗದೇ ಹೋಗಬಹುದು. ಆದರೆ, ಇದುವರೆಗೂ ವರ್ಗಾವಣೆಯ ಪರ್ವವೇ ಮುಗಿದಂತಿಲ್ಲ; ಆರ್ಥಿಕೇತರವಾದ ಬಿಗಿ ಆಡಳಿತದ ಮೂಲಕ ಜಾರಿಗೆ ತರಬಹುದಾದ ಅದೆಷ್ಟೋ ಸಂಗತಿಗಳು ಎಲ್ಲಿವೆಯೋ ಅಲ್ಲೇ ಇವೆ.
ತನ್ನ ಕುಟುಂಬದೊಳಗೇ ಇರುವ ‘ನುರಿತ ಆಡಳಿತ ತಜ್ಞರು’, ಅಧಿಕಾರದಲ್ಲಿಲ್ಲದಾಗಲೂ ಅಲ್ಲಲ್ಲಿ ಪ್ರಭಾವ ಉಳಿಸಿಕೊಳ್ಳುವ ಮಟ್ಟಿಗಿನ ನೆಟ್‍ವರ್ಕ್ ಗೌಡರ ಕುಟುಂಬಕ್ಕಿದೆ. ಲೋಕಸೇವಾ ಆಯೋಗದ ಪ್ರಾಮುಖ್ಯತೆಯನ್ನು ಅವರಷ್ಟು ಚೆನ್ನಾಗಿ ಅರಿತವರು ಬೇರಿಲ್ಲ. ಅವರ ಕಾಲದಲ್ಲಿ ಆಯ್ಕೆಯಾದ ಬಹುತೇಕ ಅಧಿಕಾರಿಗಳು ಈಗ ಹಿರಿಯ ಅಧಿಕಾರಿಗಳಾಗಿದ್ದಾರೆ. ಹೀಗಾಗಿ ಅಧಿಕಾರಶಾಹಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಿದ್ದರಾಮಯ್ಯನವರಿಗೆ ಇದ್ದಷ್ಟು ಕಷ್ಟವಲ್ಲ. ಇಷ್ಟೆಲ್ಲಾ ಇದ್ದರೂ, ಇಂದಿಗೂ ಅಧಿಕಾರಿಗಳೇ ಬಹುತೇಕ ಇಲಾಖೆಗಳನ್ನು ನಡೆಸುತ್ತಿದ್ದಾರೆ. ದಕ್ಷತೆ, ಆರ್ಥಿಕ ಶಿಸ್ತು ಇತ್ಯಾದಿ ಹೆಸರುಗಳಲ್ಲಿ ಜನವಿರೋಧಿಯಾದ ಸರ್ಕಾರವನ್ನು ನಡೆಸುವುದು ಅವರಿಗೆ ಕರಗತವಾಗಿದೆ.
ಇಂತಹ ವಿಚಾರಗಳ ಮೇಲೆ ಕೇಂದ್ರೀಕರಿಸುವುದು ಮತ್ತು ಕೆಲವು ಜನಪ್ರಿಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸುವುದು ಸಮ್ಮಿಶ್ರ ಸರ್ಕಾರದ ಆದ್ಯತೆಯಾಗಬೇಕಿದೆ. ಅದನ್ನು ಬಿಟ್ಟು ಭಿನ್ನಮತದ ಚೇಷ್ಟೆಗಳಲ್ಲೇ ಮುಳುಗಿ ಹೋಗುವಂತೆ ಒಳಗೊಳಗಿನ ವ್ಯವಹಾರಗಳಲ್ಲೇ ನಿರತರಾಗಿದ್ದರೆ ಈ ಪಕ್ಷಗಳಿಗೆ ಭವಿಷ್ಯವಿರುವುದಿಲ್ಲ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಬಿಜೆಪಿಯ ಬಿ ಟೀಂನಂತೆ ಅಧಿಕಾರವನ್ನು ನಡೆಸುತ್ತಾ ಹೋಗಬಹುದು ಅಷ್ಟೇ.
ಇನ್ನಾದರೂ ಸರ್ಕಾರದ ಹನಿಮೂನ್ ಅವಧಿ ಮುಗಿದುಹೋಗಿದೆ ಎಂಬುದನ್ನು ಅರಿತು ಒಗ್ಗಟ್ಟಿನಿಂದ ಕೆಲಸ ಮಾಡಲಿ, ಇಲ್ಲವಾದರೆ ಪರಿಣಾಮಗಳನ್ನು ಅನುಭವಿಸುತ್ತಾರೆ ಎಂದಷ್ಟೇ 100 ಚಿಲ್ಲರೆ ದಿನಗಳ ಸರ್ಕಾರದ ಭವಿಷ್ಯದ ಕುರಿತು ಹೇಳಬಹುದು.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....