Homeಅಂಕಣಗಳುನಿಮಗೆ ಭೀಮ್ ಆರ್ಮಿ ಗೊತ್ತಿರಬಹುದು; ಭೀಮ್ ಪಾಠಶಾಲಾ?

ನಿಮಗೆ ಭೀಮ್ ಆರ್ಮಿ ಗೊತ್ತಿರಬಹುದು; ಭೀಮ್ ಪಾಠಶಾಲಾ?

- Advertisement -
- Advertisement -

ಚಂದ್ರಶೇಖರ್ ಆಜಾದ್ ‘ರಾವಣ್’, ಯಾವುದೇ ಬಾಲಿವುಡ್ ಹೀರೋಗೂ ಕಡಿಮೆಯಿಲ್ಲದಂತೆ ಸಂಚಲನ ಮೂಡಿಸಿರುವ ಹೆಸರುಗಳಲ್ಲೊಂದು. ಈವರೆಗೆ ರಾಮಾಯಣದ ರಾವಣನ ಪೌರಾಣಿಕ ಪಾತ್ರವನ್ನು ಬಿಟ್ಟು ಆ ಹೆಸರಿನ ಇನ್ಯಾವ ವ್ಯಕ್ತಿಯ ಬಗ್ಗೆಯೂ ಗೊತ್ತಿಲ್ಲದವರೂ ಕೂಡಾ, ಕಳೆದ ಕೆಲವು ದಿನಗಳಲ್ಲಿ ಮಾಧ್ಯಮಗಳು ಪದೇ ಪದೇ ಪ್ರಸ್ತಾಪಿಸಿದ ಈ ಹೆಸರಿನ ವ್ಯಕ್ತಿಯ ಬಗ್ಗೆ ಕುತೂಹಲದಿಂದ ಪರಿಶೀಲಿಸುವಂತಾಯಿತು. ವಿವರಗಳನ್ನು ಕೆದಕಿದವರಿಗೆ ಕಂಡಿದ್ದು ಚಂದ್ರಶೇಖರ್ ಅಥವಾ ರಾವಣ್ ಎಂಬ ಪಶ್ಚಿಮ ಉತ್ತರ ಪ್ರದೇಶದ ದಲಿತ ಯುವ ವಕೀಲನೊಬ್ಬನು ಹೊಸ ತಲೆಮಾರನ್ನು ಪ್ರಭಾವಿಸಿದ ರೀತಿ; ವಿಶೇಷವಾಗಿ ಈತ, ವಿನಯ್ ರತನ್‍ಸಿಂಗ್ ಎಂಬ ಮತ್ತೊಬ್ಬ ದಲಿತ ಯುವ ವಕೀಲನೊಂದಿಗೆ ಸೇರಿ ಕಟ್ಟಿದ ‘ಭೀಮ್ ಆರ್ಮಿ’ ತಂಡವು ದಲಿತ ಯುವಕರಲ್ಲಿ ಮಿಲಿಟೆನ್ಸಿಯನ್ನು ಹುಟ್ಟುಹಾಕಿ ಯಾರಿಗೂ ತಲೆಬಾಗಿ ಬದುಕಬೇಡಿ ಎಂಬ ಸಂದೇಶ; ನಂತರ ಆಜಾದ್ ಮೇಲೆ ಸುಳ್ಳು ಕೇಸುಗಳನ್ನು ಜಡಿದು ಜೈಲುಪಾಲು ಮಾಡಿ ಇವೆಲ್ಲವನ್ನೂ ಹತ್ತಿಕ್ಕಲು ಉತ್ತರ ಪ್ರದೇಶದ ಸರ್ಕಾರ ನಡೆಸಿದ ವಿಫಲ ಯತ್ನ ಮತ್ತು ನಂತರ ಅನಿವಾರ್ಯವಾಗಿ ಈ ಸೆಪ್ಟೆಂಬರ್ 13ರ ಮಧ್ಯರಾತ್ರಿ ಚಂದ್ರಶೇಖರ್ ಆಜಾದ್ ರ  ಬಿಡುಗಡೆ!

ಇವೆಲ್ಲವೂ ಕೇವಲ 30ರ ಆಸುಪಾಸಿನಲ್ಲಿರುವ, ದಲಿತರ ಪರವಾದ ಖಚಿತವಾದ ರಾಜಕೀಯ ನಿಲುವುಗಳನ್ನುಳ್ಳ, ಪ್ರಖರ ವಾಗ್ಮಿಯೂ ಹೋರಾಟಗಾರನೂ ಆದ ಈ ಯುವಕನನ್ನು ಭಾರತದ ಬಹುಪಾಲು ದಲಿತ ಮತ್ತು ಚಿಂತನಶೀಲ ಯುವಕರ ಕಣ್ಮಣಿಯಾಗಿಸಿದೆ. ತಮ್ಮ ಸಮುದಾಯವನ್ನು ಸುದೀರ್ಘ ಕಾಲದಿಂದ ಕಾಡುತ್ತಾ ಬಂದಿರುವ ಉತ್ತರ ಪ್ರದೇಶದ ಬಲಾಢ್ಯ ಠಾಕೂರ್ ಸಮುದಾಯದ ರೀತಿಯಂತೆ ಉದ್ದೇಶಪೂರ್ವಕವಾಗಿಯೇ ಮೇಲೆತ್ತಿ ತಿರುಗಿಸಿದ ಮೀಸೆಯನ್ನೂ, ಬಲಗೈಗೆ ಧರಿಸುವ ದಪ್ಪ ಕಡಗವನ್ನೂ ತಮ್ಮ ವಿಶಿಷ್ಟ (ಸಿಗ್ನೇಚರ್) ಶೈಲಿಯಾಗಿಸಿಕೊಂಡಿರುವ ಭೀಮ್ ಆರ್ಮಿಯ ಹೋರಾಟಗಾರರು ಸದ್ಯಕ್ಕೆ ಸಮಾನತೆಯನ್ನು ಕನಸುವ ಯುವಕರ ಫ್ಯಾಶನ್ ಐಕಾನ್‍ಗಳು ಕೂಡಾ ಹೌದು!

ಚಂದ್ರಶೇಖರ್ ಆಜಾದ್ ‘ರಾವಣ್’ ಭೀಮ್ ಆರ್ಮಿಯನ್ನು ಆರಂಭಿಸಿದ್ದು 2015ರ ಜುಲೈನಲ್ಲಿ. ‘ರಾವಣ್’ ಎಂಬುದು ಖಳನಾಯಕರಂತೆ ಬಿಂಬಿಸಲ್ಪಟ್ಟ ಈ ದೇಶದ ಮೂಲನಿವಾಸಿ ಹೋರಾಟಗಾರರ ನಿಜವಾದ ಇತಿಹಾಸವನ್ನು ಎತ್ತಿತೋರುವುದಕ್ಕಾಗಿ ಬೇಕೆಂದೇ ಇಟ್ಟುಕೊಂಡ ಹೆಸರು. ಠಾಕೂರರ ಉಸಿರುಕಟ್ಟಿಸುವ ದಮನ ದಬ್ಬಾಳಿಕೆಗಳ ನಡುವೆ ತಲೆಯೆತ್ತಲು ಹೆಣಗುತ್ತಿದ್ದ ಸಹರಾನ್‍ಪುರದ ದಲಿತ ಸಮುದಾಯದೊಳಕ್ಕೆ ಅಂಬೇಡ್ಕರ್ ಚಿಂತನೆಗಳೊಂದಿಗೆ ಅವರ ತಂಡ ನುಗ್ಗಿತು. ಅತ್ಯಂತ ಸಣ್ಣ ಅವಧಿಯಲ್ಲಿ ಜನಬೆಂಬಲವನ್ನೂ, ಜನಪ್ರಿಯತೆಯನ್ನೂ ಗಳಿಸಿದ ಆಜಾದ್ ರ ಮಿಂಚಿನ ವೇಗವು ದಲಿತ ಸಮುದಾಯದಲ್ಲಿ ಐಕ್ಯತೆಯನ್ನು ತಂದಿತ್ತು. ಇದು ಬಲಾಢ್ಯ ಸಮುದಾಯಗಳ ಫ್ಯೂಡಲ್ ದೊರೆಗಳ ಮತ್ತು ಉತ್ತರ ಪ್ರದೇಶದ ಸರಕಾರಗಳ (ಈಗಿನ ಮತ್ತು ಹಿಂದಿನ) ನಿದ್ದೆ ಕೆಡಿಸಿತ್ತು. ಆದ್ದರಿಂದಲೇ, ಸುಮಾರು 24 ಗಂಭೀರ ದೋಷಾರೋಪಗಳನ್ನು ಅವರ ಮೇಲೆ ಹೊರಿಸಿತು. ಅದು ಸಾಲದೆಂದು ದೇಶದ ಭದ್ರತೆಗೇ ಅಪಾಯವಾಗುವಂತಹ ಕೆಲಸ ಮಾಡಿದ್ದಾನೆಂದು ಆರೋಪಿಸುತ್ತಾ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ಯ ಅತಿ ಗಂಭೀರ ಆರೋಪಗಳನ್ನೂ ಬಳಸಿ 2017ರಲ್ಲಿ ಅವರನ್ನು ಜೈಲಿಗೆ ದಬ್ಬಲಾಯಿತು.

ಆದರೆ, ಈ ಸುದ್ದಿಗಳ ನಡುವೆ ಭೀಮ್ ಆರ್ಮಿಯು ತನ್ನ ಹುಟ್ಟಿನೊಂದಿಗೇನೆ ಆರಂಭಿಸಿದ ‘ಭೀಮ್ ಪಾಠ್‍ಶಾಲಾ’ಗಳ ಯಶಸ್ಸಿನ ಕಥೆ ಸ್ವಲ್ಪ ಮಸುಕಾದಂತಾಗಿದೆ. ಮೊಟ್ಟಮೊದಲ ಭೀಮ್ ಪಾಠ್‍ಶಾಲಾ 2015ರಲ್ಲಿ ಸಹರನ್‍ಪುರದ ಫತೇಪುರ್ ಭಾಡೋ ಗ್ರಾಮದಲ್ಲಿ ಆರಂಭವಾಯಿತು. ಭೀಮ್ ಆರ್ಮಿ (ಈ ಸಂಘಟನೆಯ ಪೂರ್ಣ ಹೆಸರು ‘ಭೀಮ್ ಆರ್ಮಿ ಭಾರತ್ ಏಕ್ತಾ ಮಿಶನ್’)ಯ ಸಂಸ್ಥಾಪಕರಾದ ಆಜಾದ್ ಮತ್ತು ವಿನಯ್ ರತನ್‍ರಿಗೆ ಮತ್ತು ಅವರ ಜೊತೆಗಾರರಿಗೆ ಇಂತಹ ಶಾಲೆಗಳ ಅಗತ್ಯವೇನೆಂಬುದು ನಿಚ್ಚಳವಾಗಿ ತಿಳಿದಿತ್ತು.
‘ಯಾವುದೇ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಮೊದಲ ಹತ್ತು ವರ್ಷಗಳಲ್ಲಿ ಆ ಮಗು ಏನು ಕಲಿಯುತ್ತದೆಂಬುದು ಬಹಳ ಮುಖ್ಯ. ಆದರೆ ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳು ಅಸಹನೀಯವಾದ ಸ್ಥಿತಿಯಲ್ಲಿವೆ. ಬಹುಪಾಲು ದಲಿತ ಸಮುದಾಯ ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಭರಿಸುವ ಸ್ಥಿತಿಯಲ್ಲಿಲ್ಲ; ಒಂದು ವೇಳೆ ಹಾಗೆ ಖಾಸಗಿ ಶಾಲೆಗಳಿಗೆ ಕಳಿಸಿದರೂ ಜಾತಿಯ ಕಾರಣದಿಂದಾಗಿ ಅಲ್ಲಿ ಅವರಿಗೆ ಸಮಾನ ಗೌರವ ಅಥವಾ ಕಲಿಕೆ ಸಿಗುವುದಿಲ್ಲವೆಂಬುದು ಗೊತ್ತೇ ಇದೆ. ಬಾಬಾಸಾಹೇಬರು ಶಿಕ್ಷಣಕ್ಕೆ ಪ್ರಮುಖ ಸ್ಥಾನ ಕೊಟ್ಟಿದ್ದು ಸುಮ್ಮನೇ ಅಲ್ಲ. ಅದಕ್ಕಾಗಿಯೇ ನಮ್ಮ ಸಂಘಟನೆಯ ಮೊದಲ ಮತ್ತು ಆದ್ಯತೆಯ ಕೆಲಸವಾಗಿ ನಾವು ಆರಂಭಿಸಿದ್ದು ಉಚಿತವಾಗಿ ಉತ್ತಮ ಕಲಿಕೆಯನ್ನು ರೂಪಿಸುವ ‘ಭೀಮ್ ಪಾಠ್‍ಶಾಲಾ’ಗಳನ್ನು’ ಎನ್ನುತ್ತಾರೆ ಸಿಂಗ್.

ಈ ಶಾಲೆಗಳಲ್ಲಿ ಮಕ್ಕಳು ಪಠ್ಯ ವಿಷಯಗಳಾದ ಗಣಿತ, ವಿಜ್ಞಾನ, ಇಂಗ್ಲೀಷ್ ಮೊದಲಾದವುಗಳ ಜೊತೆಗೆ, ಇತಿಹಾಸದ ಪುಟಗಳಲ್ಲಿ ಹೂತುಹೋಗಿರುವ ದಲಿತ ಸಮುದಾಯದ ಚರಿತ್ರೆಯನ್ನೂ, ಶೋಷಿತರ ವಿಮೋಚನೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಜೀವನ ಚಿತ್ರಣಗಳನ್ನೂ, ಅಂಬೇಡ್ಕರ್‍ರವರ ಚಿಂತನೆಗಳನ್ನೂ ಕಲಿಯುತ್ತಾರೆ. ಆರಂಭದಲ್ಲಿ ಸಹರನ್‍ಪುರದ ಸುತ್ತಲಿನ ಪ್ರದೇಶದಲ್ಲಷ್ಟೇ ಸಂಜೆಯ ಕೋಚಿಂಗ್ ತರಗತಿಗಳಾಗಿ 2 ಗಂಟೆಗಳ ಕಾಲ ನಡೆಯುತ್ತಿದ್ದ ಈ ಶಾಲೆಗಳು ಬಹಳ ವೇಗವಾಗಿ ಮೀರಟ್, ಮುಜಫ್ಫರ್‍ನಗರ್, ಆಗ್ರಾ ಮೊದಲಾದೆಡೆಗಳಿಗೂ ವ್ಯಾಪಿಸಿದವು. ಇಂದು ಸುಮಾರು 350ರಷ್ಟು ‘ಭೀಮ್ ಪಾಠ್‍ಶಾಲಾ’ಗಳು ಕಾರ್ಯನಿರ್ವಹಿಸುತ್ತಿದ್ದು ಸಾವಿರದ ಸಂಖ್ಯೆಯನ್ನು ಮುಟ್ಟುವ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ.

ಮೊದಲ ಶಾಲೆ ಫತೇಪುರದಲ್ಲಿ ಆರಂಭವಾಗುತ್ತಿದ್ದಂತೆ ಬುಢಖೇರಾದ ದಲಿತ ಯುವಕರಿಗೆ ತಮ್ಮಲ್ಲೂ ಇಂತಹ ಶಾಲೆ ಬೇಕೆಂದೆನಿಸಿತು. ನಿವೃತ್ತ ಶಿಕ್ಷಕ ಕನ್ವರ್ ಪಾಲ್ ಸಿಂಗ್‍ರವರ ಮನೆಯೆದುರಿನ ಖಾಲಿ ಬಯಲೇ ಶಾಲಾ ಆವರಣವಾದರೆ ಆಗಷ್ಟೇ 10ನೇ ತರಗತಿ ಮುಗಿಸಿದ್ದ 15 ವರ್ಷದ ಸಿಂಗ್‍ರವರ ಕಿರಿಯ ಪುತ್ರಿ ನಿಶಾ ಆ ಭೀಮ್ ಶಾಲೆಯ ಮೊದಲ ಬೋಧಕಿಯಾದಳು. ಮೊದಲ ದಿನ 30 ಇದ್ದ ಮಕ್ಕಳ ಸಂಖ್ಯೆ ಕೇವಲ 2 ವಾರಗಳಲ್ಲಿ 100ರ ಸಂಖ್ಯೆಯನ್ನೂ ದಾಟಿ ಹಿಗ್ಗುತ್ತಾ ಹೋಗಿ ಶಾಲೆಯನ್ನು ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಸೃಷ್ಟಿಸಿತು. ಈಗ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳು 1-4 ಹಾಗೂ 5-9ರವರೆಗಿನ ವಿಭಾಗಗಳಲ್ಲಿ ನಿರಂತರ ಕಲಿಕೆಯಲ್ಲಿದ್ದಾರೆ.

ಇದೇ ಶಾಲೆಯ ಹಿರಿಯ ವಿದ್ಯಾರ್ಥಿನಿ ರಚನಾ, ತನ್ನ ಔಪಚಾರಿಕ ಖಾಸಗಿ ಶಾಲೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತರಗತಿಗೆ ಮೊದಲ ಸ್ಥಾನ ಗಳಿಸಿ ಆಜಾದ್ ರವರಿಂದ ಬಹುಮಾನ ಪಡೆದಿರುವುದನ್ನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ರಚನಾ ಕೂಲಿಕಾರ್ಮಿಕರಾದ ತನ್ನ ತಂದೆತಾಯಿಯರ 7 ಮಂದಿ ಮಕ್ಕಳಲ್ಲಿ ಒಬ್ಬಳು. ‘ಭೀಮ್ ಆರ್ಮಿಯೊಂದಿಗೆ ಗುರುತಿಸಿಕೊಂಡಿರುವುದರಿಂದ ನಾವು ದಲಿತ ಹೆಣ್ಣುಮಕ್ಕಳು ಇಂದು ಲೈಂಗಿಕ ದೌರ್ಜನ್ಯಗಳ ಭೀತಿಯಿಲ್ಲದೆ ಸೈಕಲ್ ತುಳಿದುಕೊಂಡು ಶಾಲೆಗೆ ಹೋಗಲು ಸಾಧ್ಯವಾಗುತ್ತಿದೆ. ನಾನು ಜೀವಶಾಸ್ತ್ರ ಕಲಿತು ಮುಂದೆ ವೈದ್ಯೆಯಾಗಬೇಕು, ನೊಂದವರಿಗಾಗಿ ಉಚಿತ ಚಿಕಿತ್ಸಾಲಯಗಳನ್ನು ತೆರೆಯಬೇಕು’ ಎಂಬ ಕನಸು ಕಾಣುವುದು ರಚನಾಗೆ ಈಗ ಸಾಧ್ಯವಾಗಿದೆ. ಆಕೆಯು ಭೀಮಶಾಲೆಯ ಮತ್ತೊಬ್ಬ ಸ್ವಯಂಸೇವಕ ಬೋಧಕಿ!

ಈ ಅನೌಪಚಾರಿಕ ಶಾಲೆಗಳು ದಲಿತ ಸ್ವಾಭಿಮಾನದ, ಅರಿವಿನ ಮತ್ತು ಐಕ್ಯತೆಯ ಪ್ರತೀಕಗಳಾಗಿ ಛಾಪು ಮೂಡಿಸುತ್ತಾ ವಿಸ್ತರಣೆಗೊಳ್ಳುತ್ತಲೇ ಹೋಗುತ್ತಿವೆ.
ಶೋಷಿತರ ಸ್ವಾಭಿಮಾನದ ಚಳವಳಿಗಳಿಗೆ ಶಿಕ್ಷಣವು ಕೇವಲ ಅನ್ನದ ಮಾರ್ಗ ಮಾತ್ರವಲ್ಲ; ಸಮಾಜ ಪರಿವರ್ತನೆಯ ಮಾರ್ಗ. ಶೋಷಿತ ಸಮುದಾಯಗಳು ತಮ್ಮದೇ ಆದ ಸಾಮಾಜಿಕ ಸಾಂಸ್ಕøತಿಕ ಗುರುತನ್ನು ಗಳಿಸಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಮಾರ್ಗ. ಆದ್ದರಿಂದಲೇ ರಷ್ಯಾ ಕ್ರಾಂತಿಯ ನಂತರ ಲೆನಿನ್ ತಮ್ಮ ಭಾಷಣವೊಂದರಲ್ಲಿ “ರಷ್ಯಾದ ದುಡಿಯುವ ಜನತೆಯ ಶೇ.90ಕ್ಕಿಂತ ಹೆಚ್ಚು ಮಂದಿ ಶಿಕ್ಷಣ ಪಡೆದಿಲ್ಲ; ಆದರೆ, ಬಂಡವಾಳಶಾಹಿಗಳ ಮೇಲೆ ವಿಜಯ ಸಾಧಿಸಲು ತಮಗೆ ಅದು ಬೇಕೇಬೇಕು ಎಂಬುದನ್ನು ಅರಿತಿದ್ದಾರೆ. ಇಲ್ಲಿ ಶಿಕ್ಷಣ ಕೇವಲ ಅಕ್ಷರ ಜ್ಞಾನವಲ್ಲ, ಹೊಸ ಮಾನವರ ಹುಟ್ಟು” ಎನ್ನುತ್ತಾರೆ. ಇದೇ ಮಾದರಿಯಲ್ಲಿ ಭೀಮ್ ಪಾಠಶಾಲೆಯ ಪ್ರಯೋಗ ಏಕಕಾಲದಲ್ಲಿ ರಚನಾತ್ಮಕವಾದದ್ದೂ ಹಾಗೂ ಅತ್ಯಂತ ರಾಜಕೀಯವಾದದ್ದೂ ಹೌದು.

ಛತ್ತೀಸ್‍ಗಢದಲ್ಲಿ ಹೋರಾಟ ಮತ್ತು ರಚನಾತ್ಮಕ ಕೆಲಸಗಳು ಜೊತೆಜೊತೆಯಾಗಿ ಸಾಗಬೇಕಿರುವ ಕುರಿತು ಛತ್ತೀಸ್‍ಗಡ ಮುಕ್ತಿ ಮೋರ್ಚಾದ ಸಂಸ್ಥಾಪಕ ಶಂಕರ್ ಗುಹಾ ನಿಯೋಗಿ ‘ಸಂಘರ್ಷ್ ಔರ್ ನಿರ್ಮಾಣ್’ ಎಂದು ಸೂತ್ರೀಕರಿಸಿದ್ದರು. ಶಹೀದ್ ಶಾಲೆಗಳು ಮತ್ತು ಶಹೀದ್ ಆಸ್ಪತ್ರೆಗಳು ಇಂದಿಗೂ ಮಾದರಿ ಸಂಸ್ಥೆಗಳಾಗಿವೆ. ಮಹಾರಾಷ್ಟ್ರದಲ್ಲಿ ಅನೂಪ್ ವಾರ್ಧಾರವರು ನಡೆಸುತ್ತಿರುವ ನಳಂದ ಅಕಾಡೆಮಿಯ ಪ್ರಯೋಗದ ಕುರಿತು, ಅವರ ಸಂದರ್ಶನದ ಮೂಲಕ ಓದುಗರಿಗೆ ‘ಪತ್ರಿಕೆ’ ತಿಳಿಸಿತ್ತು.

ಬಹುಶಃ ಸಂಘರ್ಷ್ ಔರ್ ನಿರ್ಮಾಣ್‍ಗಳು ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ. ಈ ತಲೆಮಾರಿನ ಯುವಜನರನ್ನು ಒಳಗೊಂಡು, ಮಕ್ಕಳು ಕುಟುಂಬ ಎಲ್ಲರನ್ನೂ ಜೊತೆಗೊಯ್ಯಬಲ್ಲ ಹೋರಾಟದ ಮಾದರಿಗಳು ಹೆಚ್ಚೆಚ್ಚು ಜನರನ್ನೂ ತಲುಪುತ್ತವೆ ಹಾಗೂ ಇದರ ಪ್ರಭಾವ ಹಾಗೂ ಪರಿಣಾಮ ದೂರಗಾಮಿಯಾದದ್ದೂ ಆಗಿರುತ್ತದೆ. ಇದನ್ನು ಭೀಮ್‍ಆರ್ಮಿ ತಂಡವು ಚೆನ್ನಾಗಿಯೇ ಮನಗಂಡಿದೆ. ಅವರಿಗೊಂದು ಜೈಭೀಮ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...