ಎಲೆಮರೆ-42
- ಅರುಣ್ ಜೋಳದ ಕೂಡ್ಲಿಗಿ
ಕೊಪ್ಪಳದ ಮಿತ್ರ ಮಂಜುನಾಥ ಗೊಂಡಬಾಳ ತಮ್ಮ ‘ಬದಲಾವಣೆ’ ಪತ್ರಿಕೆಯಲ್ಲಿ ‘ದೇಶ ವಿದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶಿಸಿದ ಮಹಾನ್ ಕಲಾವಿದೆ’ ಎನ್ನುವ ಶೀರ್ಷಿಕೆಯಲ್ಲಿ 103 ವರ್ಷದ ಹಿರಿಯಜ್ಜಿ ಭೀಮವ್ವನ ಬಗ್ಗೆ ಪರಿಚಯಿಸಿದ್ದರು. ಕುತೂಹಲದಿಂದ ಅಜ್ಜಿಯ ಬಗ್ಗೆ ಮತ್ತಷ್ಟು ತಿಳಿದುಕೊಂಡೆ. ಈಚೆಗೆ ಜಾನಪದ ಅಕಾಡೆಮಿ ಅಧ್ಯಕ್ಷೆಯಾದ ಮಂಜಮ್ಮ ಜೋಗತಿಯವರು 2020 ರ ‘ಜಾನಪದ ಶ್ರೀ’ ಪ್ರಶಸ್ತಿಗೆ ಭೀಮವ್ವನನ್ನು ಆಯ್ಕೆ ಮಾಡಿದ್ದು ಖುಷಿಕೊಟ್ಟಿತು. ಗಂಡುಪಾರಮ್ಯದ ಕಲೆಗಳಲ್ಲಿ ಹೆಣ್ಣುಮಕ್ಕಳು ತಮ್ಮದೇ ಛಾಪು ಮೂಡಿಸುವುದು ಜನಪದ ಕಲೆಗಳಲ್ಲಿ ವಿರಳ. ತೆರೆ ಮರೆಯಲ್ಲಿರುವುದೇ ಹೆಚ್ಚು. ಕಿಳ್ಳೇಕ್ಯಾತ ಸಮುದಾಯದ ತೊಗಲುಗೊಂಬೆ ಕಲೆ ಏಕವ್ಯಕ್ತಿ ಪ್ರದರ್ಶಿಸುವ ಕಲೆಯಲ್ಲ. ಈ ಕಲೆಗೆ ಇಡೀ ಕುಟುಂಬವೇ ಪಾಲ್ಗೊಳ್ಳಬೇಕು. ಹಾಗಾಗಿ ಮಹಿಳೆಯರು ಚಿಕ್ಕ ಮಕ್ಕಳು ಕೂಡ ತೊಗಲುಗೊಂಬೆಯಾಟದಲ್ಲಿ ಪಾಲ್ಗೊಳ್ಳುತ್ತಾರೆ. ಈ ಕಾರಣದಿಂದಾಗಿ ವಿಶೇಷವಾಗಿ ಈ ಕಲೆಯಲ್ಲಿ ಮಹಿಳೆಯರು ಕಾಣಸಿಗುತ್ತಾರೆ.
ಕೊಪ್ಪಳದ ಇರಕಲ್ಲಗಡಾದ ಹನುಮಟ್ಟಿಯ ಸಂಜೀವಪ್ಪ ಹೊಳೆಯಮ್ಮರ ಮಗಳಾದ ಭೀಮವ್ವ, ಕೊಪ್ಪಳದಿಂದ 22 ಕಿ.ಮೀ ದೂರದ ಮೊರನಾಳದ ತೊಗಲುಗೊಂಬೆಯಾಟದಲ್ಲಿ ಆಗಲೆ ಪ್ರಸಿದ್ಧಿ ಪಡೆದಿದ್ದ ದೊಡ್ಡಬಾಳಪ್ಪ ಅವರನ್ನು ಮದುವೆಯಾಗುತ್ತಾರೆ. ತವರು ಮನೆಯಲ್ಲಿಯೂ ಭೀಮವ್ವ ತೊಗಲುಗೊಂಬೆ ಕಲೆಯನ್ನು ಬಾಲ್ಯದಿಂದಲೇ ಕಲಿತಿದ್ದರಿಂದ ಬಾಳಪ್ಪನ ಜತೆಗಿನ ಬಾಳುವೆಯಲ್ಲಿ ತೊಗಲುಗೊಂಬೆ ಕಲೆಯನ್ನು ಭೀಮವ್ವ ಮತ್ತಷ್ಟು ತನ್ಮಯತೆಯಿಂದ ಕಲಿಯುತ್ತಾಳೆ. ಇದರಿಂದ ಬಾಳಪ್ಪನ ತೊಗಲುಗೊಂಬೆಯಾಟದಲ್ಲಿ ಭೀಮವ್ವ ತನ್ನದೇ ಪಾತ್ರ ವಹಿಸುತ್ತಾಳೆ. ಹೀಗೆ ನಡೆದ ಜೀವನದಲ್ಲಿ ವಿರೂಪಾಕ್ಷಪ್ಪ, ಯಂಕಪ್ಪ, ಹಾಗೂ ಕೇಶಪ್ಪ ಮೂವರು ಮಕ್ಕಳಾಗುತ್ತಾರೆ. ಈ ಮೂವರೂ ತೊಗಲುಗೊಂಬೆಯಾಟ ಕಲಿಯುತ್ತಾರೆ. ಸೊಸೆಯಂದಿರೂ ತೊಗಲುಗೊಂಬೆಯಾಟದಲ್ಲಿ ತೊಡಗಿಕೊಳ್ಳುತ್ತಾರೆ. ಇದೀಗ ಅಜ್ಜಿಯ ಮೊಮ್ಮಕ್ಕಳಾದ ಶಿವಪ್ಪ, ಶಿವರಾಜ, ವಸಂತಕುಮಾರ್, ಪಾಂಡುರಂಗ, ರಮೇಶ್ ಹಾಗೂ ಪರುಶುರಾಮ ಎಲ್ಲರೂ ಗೊಂಬೆಯಾಟದಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ. ಇದೀಗ ಮರಿ ಮೊಮ್ಮಕ್ಕಳನ್ನು ಪಡೆದ ಭೀಮಜ್ಜಿಯ ಮನೆಯಲ್ಲಿ ನಾಲ್ಕು ತಲೆಮಾರಿನ ಕಲಾವಿದರಿದ್ದಾರೆ.
ಈ ಅಜ್ಜಿಗೆ ಈಗ ನೂರಮೂರು ವರ್ಷ. ಶತಕ ಪೂರೈಸಿದ ಅಜ್ಜಿ ಈಗಲೂ ಖಡಕ್ ಆಗಿ ಮಾತನಾಡುತ್ತಾರೆ. ತಾನು ಬಾಳಪ್ಪನ ತಂಡದ ಭಾಗವಾಗಿ ವಿದೇಶದಲ್ಲಿ ತೊಗಲುಗೊಂಬೆಯಾಟ ಆಡಿಸಿದ್ದನ್ನು ಬೆರಗಿನಿಂದ ಕಣ್ಮುಂದೆ ಕಟ್ಟುವಂತೆ ವಿವರಿಸುತ್ತಾರೆ. 1992 ರಲ್ಲಿ ದೆಹಲಿಯಲ್ಲಿ ಸಂಗೀತ ಮತ್ತು ನಾಟಕ ಅಕಾಡೆಮಿಯವರಿಂದ ಅಂತರಾಷ್ಟ್ರೀಯ ಪೊಪೆಟ್ರಿ ಫೆಸ್ಟಿವೆಲ್ ನಡೆಯುತ್ತದೆ. ಈ ಸಂದರ್ಭದಲ್ಲಿ ಅತ್ಯುತ್ತಮ ಮತ್ತು ಪ್ರಾಚೀನ ಬೊಂಬೆಗಳಿರುವ ತಂಡಗಳನ್ನು ಕಳಿಸಲು ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗೆ ಪತ್ರ ಬರುತ್ತದೆ. ಆಗ ರಿಜಿಸ್ಟ್ರಾರ್ ಆಗಿದ್ದ ಹಿ.ಚಿ.ಬೋರಲಿಂಗಯ್ಯ ಅವರು ಮೊರನಾಳದ ದೊಡ್ಡ ಬಾಳಪ್ಪ ಅವರ ತಂಡವನ್ನು ಆಯ್ಕೆ ಮಾಡಿ, ದೆಹಲಿಗೆ ಕರೆದುಕೊಂಡು ಹೋಗುತ್ತಾರೆ. ಈ ಫೆಸ್ಟಿವೆಲ್ಗೆ ಬಂದ ಯುರೋಪಿನ ಪ್ರಾನ್ಸ್ ದೇಶದ ಕಲ್ಚರ್ ಡುಮ್ಯಾಂಡೆ ಎನ್ನುವ ಸಂಸ್ಥೆಯವರು ದೊಡ್ಡ ಬಾಳಪ್ಪ ಅವರ ತಂಡವನ್ನು ಆಯ್ಕೆ ಮಾಡುತ್ತಾರೆ. ಆಗ ಪ್ರೊ.ಹಿ.ಚಿ.ಬೋರಲಿಂಗಯ್ಯ ಮತ್ತು ಮಂಗಳೂರಿನ ಉಪಧ್ಯಾಯ ಅವರು ದೊಡ್ಡಬಾಳಪ್ಪ ಅವರ ತಂಡವನ್ನು ಕರೆದುಕೊಂಡು ಹೋಗುತ್ತಾರೆ. ಯುರೋಪಿನ ಇಟಲಿ, ಪ್ರಾನ್ಸ್, ನೆದರ್ ಲ್ಯಾಂಡ್ಸ್ ಮೂರು ದೇಶಗಳಲ್ಲಿ ಬಾಳಪ್ಪನ ತಂಡ ಪ್ರದರ್ಶನ ಕೊಡುತ್ತದೆ.
ಈ ಯುರೋಪ್ನ ಪ್ರವಾಸದ ನಂತರ ಕೇಂದ್ರ ಸಂಸ್ಕೃತಿ ಇಲಾಖೆಯವರು ಇರಾನಿನ ತೆಹ್ರಾನ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಪೊಪೆಟ್ ಥಿಯೇಟರ್ ಫೆಸ್ಟಿವೆಲ್ಗೆ ದೊಡ್ಡ ಬಾಳಪ್ಪನವರ ತಂಡವನ್ನೆ ಆಯ್ಕೆ ಮಾಡುತ್ತಾರೆ. ಈ ಎಲ್ಲಾ ಪ್ರವಾಸದಲ್ಲಿ ಭೀಮವ್ವ ಹಾಡುಗಾರ್ತಿಯಾಗಿ ದೊಡ್ಡಬಾಳಪ್ಪನ ಜೊತೆ ಇರುತ್ತಾರೆ. ಪ್ರೊ.ಹಿ.ಚಿ. ಬೋರಲಿಂಗಯ್ಯ ಅವರು `ದೊಡ್ಡಬಾಳಪ್ಪ ಬಹಳ ಪ್ರತಿಭಾವಂತ ಕಲಾವಿದ. ತುಂಬಾ ಪ್ರಾಚೀನವಾದ ತೊಗಲು ಗೊಂಬೆಗಳನ್ನು ಸಂರಕ್ಷಿಸಿದ್ದರು. ಬಾಳಪ್ಪನ ಹೆಂಡತಿ ಭೀಮವ್ವನಿಗೆ ಒಳ್ಳೆಯ ಕಂಠವಿತ್ತು, ಅದ್ಭುತವಾಗಿ ಹಾಡುತ್ತಿದ್ದರು, ಇವರ ತಂಡವನ್ನು ಯೂರೋಪ್ ಮತ್ತು ಇರಾನ್ಗೆ ಕರೆದುಕೊಂಡು ಹೋಗಿ ಬಂದದ್ದಕ್ಕೆ ಖುಷಿ ಇದೆ’ ಎನ್ನುತ್ತಾರೆ. ಹೀಗೆ ಕೊಪ್ಪಳ ಸಮೀಪದ ಹಳ್ಳಿಯೊಂದರ ಭೀಮವ್ವ ವಿದೇಶಗಳಲ್ಲಿ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.
ಭೀಮವ್ವ ಈಗಲೂ ಇನ್ನೂರು ವರ್ಷದ ಹಳೆಯ ತೊಗಲುಗೊಂಬೆಗಳನ್ನು ಸಂರಕ್ಷಿಸಿದ್ದಾರೆ. ರಾಮಾಯಣ, ಮಹಾಭಾರತ ಕುರಿತ ಪ್ರಸಂಗಗಳನ್ನು ಭೀಮವ್ವ ನೆನಪಿನಿಂದ ಈಗಲೂ ಹಾಡುತ್ತಾರೆ. ಗೊಂಬೆಗಳ ಲಯಕ್ಕೆ ತಕ್ಕ ಹಾಗೆ ಹಾಡಿಕೆಯನ್ನು ಹೊಂದಿಸಬೇಕು. ಇದೊಂದು ಸೂಕ್ಷ್ಮವಾಗ ಕಲೆ. ಇಂತಹ ಕಲೆಯ ಎಲ್ಲಾ ವಿಭಾಗಗಳಲ್ಲೂ ಭೀಮವ್ವನಿಗೆ ಪ್ರಾವಿಣ್ಯತೆಯಿದೆ. ತೊಗಲುಗೊಂಬೆ ತಯಾರಿಕೆ, ಅದಕ್ಕೆ ಬೇಕಾದ ಸ್ಥಳೀಯ ಪರಿಕರಗಳನ್ನು ಬಳಸಿ ಬಣ್ಣಗಾರಿಕೆ ಮಾಡುವುದು, ತೊಗಲುಗೊಂಬೆ ಮಾಡಲು ಜಿಂಕೆ ಚರ್ಮವನ್ನು ಹದ ಮಾಡುವುದು, ಹೀಗೆ ತೊಗಲು ಗೊಂಬೆ ತಯಾರಿಕೆಗೆ ಬೇಕಾದ ದೇಸಿ ತಿಳಿವು ಅಜ್ಜಿಗಿದೆ. ಅದನ್ನು ಮಕ್ಕಳು ಮೊಮ್ಮಕ್ಕಳಿಗೂ ಕಲಿಸಿಕೊಟ್ಟಿದ್ದಾರೆ. ಇದೀಗ ಜಿಂಕೆಯ ಚರ್ಮದ ಕೊರತೆಯಿಂದಲೋ, ಅತಿಯಾದ ಶ್ರಮ ಮತ್ತು ಕೌಶಲ್ಯ ಬೇಡುವುದರಿಂದಲೋ ಅಜ್ಜಿಯ ಮೊಮ್ಮಕ್ಕಳು ಹೊಸ ತೊಗಲುಗೊಂಬೆಗಳನ್ನು ಮಾಡುವಲ್ಲಿ ಹಿಂದೆ ಸರಿದಿದ್ದಾರೆ. ತಮಗೆ ಹೊಸ ಗೊಂಬೆಗಳು ಬೇಕಾದರೆ ಆಂದ್ರದ ಅನಂತಪುರ, ಧರ್ಮಾವರಂ, ಹಿಂದೂಪುರ ಮೊದಲಾದ ಕಡೆಗಳಿಗೆ ಹೋಗಿ ದುಬಾರಿ ಬೆಲೆಕೊಟ್ಟು ತರುತ್ತಾರೆ. ಹೀಗಾಗಿ ಈ ಕುಟುಂಬ ತೊಗಲುಗೊಂಬೆಯ ತಯಾರಿಕೆಯ ಸ್ವಾಯತ್ತತೆಯಿಂದ ಇದೀಗ ಪರಾವಲಂಬಿಯಾಗಿದೆ.
ದೇಶದ ಹಲವೆಡೆ, ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಭೀಮವ್ವ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸಿದ್ದಾರೆ. ಇದೀಗ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು ಕಲಾತಂಡಗಳಾಗಿ ದೇಶ, ರಾಜ್ಯದ ವಿವಿಧ ಭಾಗಗಳಲ್ಲಿ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸುವ ಮೂಲಕ ಕಲೆಯನ್ನು ಜೀವಂತಗೊಳಿಸಿದ್ದಾರೆ. 2004 ರಲ್ಲಿ ಜಾನಪದ ಯಕ್ಷಗಾನ ಅಕಾಡೆಮಿಯು ಭೀಮವ್ವನಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2014 ರಲ್ಲಿ ಭೀಮವ್ವನ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. 2010 ರಲ್ಲಿ ಡಿಸೆಂಬರ್ 1 ರಿಂದ 5 ರ ತನಕ ರಾಷ್ಟ್ರೀಯ ಸಂಗೀತ ನಾಟಕ ಅಕಾಡೆಮಿ ಬೆಂಗಳೂರಿನಲ್ಲಿ ಆಯೋಜಿಸಿದ `ತೊಗಲುಗೊಂಬೆ ಪರಂಪರೆ’ ಕಾರ್ಯಕ್ರಮದಲ್ಲಿ ಈ ಕುಟುಂಬದ ನಾಲ್ಕೈದು ಜನ ಪ್ರತ್ಯೇಕ ತೊಗಲುಗೊಂಬೆ ಪ್ರಸಂಗಗಳನ್ನು ಪ್ರದರ್ಶನ ಮಾಡಿ ಗಮನ ಸೆಳೆದಿದ್ದರು. ಭೀಮವ್ವನ ದೇಶಿ ತಿಳಿವನ್ನು ಸಂಗ್ರಹಿಸುವ ಅಗತ್ಯವಿದೆ. ನೂರಾ ಮೂರು ವರ್ಷದ ಅಜ್ಜಿಯ ಆರೋಗ್ಯ ಚೆನ್ನಾಗಿರಲಿ, ಮತ್ತಷ್ಟು ಪ್ರದರ್ಶನ ನೀಡುವ ಚೈತನ್ಯ ಹೆಚ್ಚಲಿ ಎಂದು ಪತ್ರಿಕೆ ಆಶಿಸುತ್ತದೆ.