ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಒಕ್ಕೂಟ ಸರ್ಕಾರ ಝಡ್ (Z) ಶ್ರೇಣಿಯ ಭದ್ರತೆ ಒದಗಿಸಿದೆ. ಉತ್ತರ ಪ್ರದೇಶದ ಮೀರತ್ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ವಾಪಸಾಗುತ್ತಿದ್ದ ಎಐಎಂಐಎಂ ಅಸಾದುದ್ದೀನ್ ಓವೈಸಿ ಅವರ ಕಾರಿನ ಮೇಲೆ ಗುಂಡಿನ ದಾಳಿಯಾದ ಬೆನ್ನಲ್ಲೇ ಈ ಆದೇಶ ನೀಡಲಾಗಿದೆ.
ಕಳೆದ ರಾತ್ರಿಯ ದಾಳಿಯ ಬೆನ್ನಲ್ಲೆಗೃಹ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದ್ದು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಓವೈಸಿಗೆ Z ಕೆಟಗರಿ ಭದ್ರತೆಯನ್ನು ಒದಗಿಸಲಿದೆ. ಮೀರತ್ನ ಕಿತೌಧ್ ಪ್ರದೇಶದಲ್ಲಿ ಅವರ ಬೆಂಗಾವಲು ಪಡೆಯ ಮೇಲೆ ಗುಂಡು ಹಾರಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬರಾದ ಸಚಿನ್ ನೋಯ್ಡಾ ನಿವಾಸಿಯಾಗಿದ್ದು, ಈತನ ವಿರುದ್ಧ ಈ ಹಿಂದೆ ಕೊಲೆ ಯತ್ನ ಪ್ರಕರಣವಿದೆ. ತಾನು ಕಾನೂನು ಪದವಿ ಪಡೆದಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದು, ಪೊಲೀಸರು ಪರಿಶೀಲಿಸುತ್ತಿದ್ದಾರೆ. ತನ್ನ ಫೇಸ್ಬುಕ್ ಪ್ರೊಫೈಲ್ನಲ್ಲಿ, ಸಚಿನ್ ತಾನು ಹಿಂದೂ ಬಲಪಂಥೀಯ ಸಂಘಟನೆಯ ಸದಸ್ಯ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ಸಹಾರನ್ಪುರದ ರೈತ ಶುಭಂ ಎಂಬುವವರಾಗಿದ್ದು, ಯಾವುದೇ ಅಪರಾಧದ ದಾಖಲೆ ಹೊಂದಿಲ್ಲ.
ಇದನ್ನೂ ಓದಿ: ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ; ಒಬ್ಬನ ಬಂಧನ
ಸಂಸದ ಓವೈಸಿ ಮತ್ತು ಅವರ ಸಹೋದರ, ಶಾಸಕ ಅಕ್ಬರುದ್ದೀನ್ ಓವೈಸಿ ನೀಡಿರುವ ಹೇಳಿಕೆಗಳಿಂದ ತಾವು ಅಸಮಾಧಾನಗೊಂಡಿದ್ದೇವೆ ಎಂದು ಇಬ್ಬರು ವಿಚಾರಣೆಯ ಸಮಯದಲ್ಲಿ ಹೇಳಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಅವರು ಇತ್ತೀಚೆಗೆ ಖರೀದಿಸಿದ್ದ ಕಂಟ್ರಿಮೇಡ್ ಪಿಸ್ತೂಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೀಗ ಇವರಿಗೆ ಬಂದೂಕು ಮಾರಾಟ ಮಾಡಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ಕಸ್ಟಡಿಗೆ ಕೋರಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದ ಹಾಪುರ್ನಲ್ಲಿರುವ ದೆಹಲಿ ಬಳಿಯ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಶೂಟರ್ಗಳು ಶಸ್ತ್ರಾಸ್ತ್ರಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಓವೈಸಿ ತಿಳಿಸಿದ್ದಾರೆ.
“ಮೀರತ್ನ ಕಿಥೌರ್ನಲ್ಲಿ ಚುನಾವಣಾ ಕಾರ್ಯಕ್ರಮದ ನಂತರ ನಾನು ದೆಹಲಿಗೆ ಹೊರಟಿದ್ದೆ. ಛಜರ್ಸಿ ಟೋಲ್ ಪ್ಲಾಜಾ ಬಳಿ ಇಬ್ಬರು ನನ್ನ ವಾಹನದ ಮೇಲೆ ಮೂರರಿಂದ ನಾಲ್ಕು ಸುತ್ತಿನ ಬುಲೆಟ್ಗಳನ್ನು ಹಾರಿಸಿಸಲಾಗಿದೆ. ಒಟ್ಟು 3 ರಿಂದ 4 ಮಂದಿಯಿದ್ದರು. ನನ್ನ ವಾಹನದ ಟೈರ್ (ಚಿತ್ರದಲ್ಲಿ) ಪಂಕ್ಚರ್ ಆಗಿದೆ, ಹೀಗಾಗಿ ನಾನು ಇನ್ನೊಂದು ವಾಹನದಲ್ಲಿ ಹೊರಟೆ” ಎಂದು ಟ್ವೀಟ್ ಮಾಡಿದ್ದಾರೆ.
कुछ देर पहले छिजारसी टोल गेट पर मेरी गाड़ी पर गोलियाँ चलाई गयी। 4 राउंड फ़ायर हुए। 3-4 लोग थे, सब के सब भाग गए और हथियार वहीं छोड़ गए। मेरी गाड़ी पंक्चर हो गयी, लेकिन मैं दूसरी गाड़ी में बैठ कर वहाँ से निकल गया। हम सब महफ़ूज़ हैं। अलहमदु’लिलाह। pic.twitter.com/Q55qJbYRih
— Asaduddin Owaisi (@asadowaisi) February 3, 2022
ಅವರು ಟ್ವೀಟ್ ಮಾಡಿರುವ ಚಿತ್ರದಲ್ಲಿ ಬಿಳಿ ಕಾರಿನ ಬಾಡಿಯಲ್ಲಿ ಎರಡು ಬುಲೆಟ್ ರಂಧ್ರಗಳು ಕಾಣುತ್ತಿದೆ. ಮೂರನೇ ಬುಲೆಟ್ ಟೈರ್ಗೆ ತಗುಲಿದೆ ಎನ್ನಲಾಗಿದೆ. ಓವೈಸಿ ಮತ್ತೊಂದು ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾರೆ.
ಫೆಬ್ರವರಿ 10 ರಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಚುನಾವಣೆಯ ಪ್ರಚಾರದ ಹಿನ್ನೆಲೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮೀರತ್ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.
ಇದನ್ನೂ ಓದಿ: ಅಂಬೇಡ್ಕರ್ ಅನುಯಾಯಿಗಳು ಸಮಾಜವಾದಿ ಪಕ್ಷಕ್ಕೆ ಕೈಜೋಡಿಸಬೇಕು: ಅಖಿಲೇಶ್ ಯಾದವ್