ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರ. ಅವರಿಗೆ ಸಂವಿಧಾನ ನೀಡಿರುವ ಶಿಕ್ಷಣದ ಹಕ್ಕು, ಧಾರ್ಮಿಕ ಹಕ್ಕನ್ನು ಕಸಿಯುವ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವ ವಿವಾದ ಜೀವಂತ ಇರುವಾಗಲೇ, ಕುಂದಾಪುರದ ಸರ್ಕಾರಿ ಕಾಲೇಜಿನಲ್ಲೂ ಅದೇ ರೀತಿಯ ವಿವಾದ ಪ್ರಾರಂಭವಾಗಿದೆ. ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ವತಂ ಕಾಲೇಜು ಪ್ರಾಂಶುಪಾಲರೇ ಗೇಟ್ ಮುಚ್ಚಿ ಪ್ರವೇಶ ನಿರಾಕರಿಸಿದ್ದಾರೆ.
ಇನ್ನು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದನ್ನು ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದು ವಿವಾದ ಮಾಡಿದ್ದಾರೆ. ಹಿಜಾಬ್ ಮತ್ತು ಕೇಸರಿ ಶಾಲು ಹಾಕಿಕೊಮಡು ಬಂದಿದ್ದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನಿರಾಕರಿಸಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಎಲ್ಲಾ ಕಾಲೇಜುಗಳಿಗೂ ಹಬ್ಬುವ ಹಂತದಲ್ಲಿದೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, “ಸಮವಸ್ತ್ರ ಕಡ್ಡಾಯ ಮಾಡಿ ಎಂದು ಸರ್ಕಾರ ಎಲ್ಲೂ ಹೇಳಿಲ್ಲ. ಪಿಯುಸಿ ಹಂತದಲ್ಲಿ ಸಮವಸ್ತ್ರ ಕಡ್ಡಾಯವಲ್ಲ. ಈಗ ಕುಂದಾಪುರ ಕಾಲೇಜ್ನಲ್ಲಿ ಪ್ರಿನ್ಸಿಪಾಲ್ ಗೇಟ್ ಹಾಕಿ 29 ಮುಸ್ಲಿಂ ಹೆಣ್ಣು ಮಕ್ಕಳನ್ನು ಕ್ಲಾಸ್ಗೆ ಬರಬಾರದು ಎಂದು ತಡೆದಿದ್ದಾರೆ. ಇದು ಮೂಲಭೂತ ಹಕ್ಕಿನ ಉಲ್ಲಂಘನೆ. ಅದು ಸರ್ಕಾರಿ ಕಾಳೇಜಿನಲ್ಲಿ ಹೀಗೆ ಮಾಡಿದ್ದಾರೆ. ಬಿಜೆಪಿಯವರು ಇದೊಂದು ವಿವಾದ ಮಾಡಲು ಮಕ್ಕಳಿಗೆ ಕೇಸರಿ ಶಾಲು ಹಾಕಿಸುತ್ತಾರೆ. ಇಷ್ಟು ದಿನ ಇರದ ಕೇಸರಿ ಶಾಲು ಈಗ ಬಂದಿದೆ. ಶಿಕ್ಷಣ ಮೂಲಭೂತ ಹಕ್ಕು. ಈ ಸ್ಕಾರ್ಫ್ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದನ್ನು ಈಗ ಇದ್ದಕ್ಕಿಂದಂತೆ ತಡೆಯುವ ಪ್ರಯತ್ನ ಯಾಕೆ. ಈ ಬಗ್ಗೆ ಹೈಕೋರ್ಟ್ನಲ್ಲಿ ಫೆ. 8 ರಂದು ವಿಚಾರನೆ ನಡೆಯಲಿದೆ” ಎಂದಿದ್ದಾರೆ.
ಇದನ್ನೂ ಓದಿ: ಕುಂದಾಪುರ ಕಾಲೇಜಿನಲ್ಲೂ ‘ಕೇಸರಿ ಶಾಲು ವಿವಾದ’; ಹಿಜಾಬ್ ಧರಿಸಿ ಬರದಂತೆ ಪ್ರಿನ್ಸಿಪಾಲ್ ಹೇಳಿದ್ದಾರೆಂದು ಪೋಷಕರ ಆರೋಪ
“ಸಂವಿಧಾನದಲ್ಲಿ ನೀಡಿರುವ ಮೂಲಭೂತ ಹಕ್ಕು ಶಿಕ್ಷಣ. ವೈಯಕ್ತಿಕವಾಗಿ ಹೇಳುವುದಾದರೆ, ಇದು ಹೆಣ್ಣುಮಕ್ಕಳ ಮೂಲಭೂತ ಶಿಕ್ಷಣದ ಹಕ್ಕನ್ನು ಕಸಿಯುವುದು. ಆ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗದಂತೆ ನೋಡಿಕೊಳ್ಳುವುದು, ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಕುಟಿಲ ಪ್ರಯತ್ನ ಇದು. ಶಿಕ್ಷಣ, ಧಾರ್ಮಿಕ ಆಚರಣೆ ಪ್ರತಿಯೊಬ್ಬರ ಮೂಲಭೂತ ಹಕ್ಕು. ತಲೆಗೆ ಸ್ಕಾರ್ಫ್ ಹಾಕಿಕೊಳ್ಳೂವುದು ಧಾರ್ಮಿಕ ಆಚರಣೆಯ ಒಂದು ಭಾಗ. ಈಗ ಅದನ್ನು ವಿವಾದ ಏಕೆ ಮಾಡುತ್ತಿದ್ದಾರೆ. ಇದು ತುಂಬ ಕೆಟ್ಟದು” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಂದುವರೆದು, “ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಸುತ್ತೋಲೆಗಳನ್ನು ನೋಡಿದೆ ಅದರಲ್ಲಿ ಸಮವಸ್ತ್ರ ಕಡ್ಡಾಯವಿಲ್ಲ. ಒಬ್ಬ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ಗೇಟಿನ ಮುಂದೆ ನಿಂತು ವಿದ್ಯಾರ್ಥಿಗಳನ್ನು ಕಾಳೇಜಿನ ಒಳಗೆ ಬಿಡದಿರುವುದು ಅಮಾನವೀಯವಲ್ಲವೇ..? ಇದು ಆ ಹೆಣ್ಣು ಮಕ್ಕಳನ್ನು ವಿದ್ಯೆಯಿಂದ ವಂಚಿತರನ್ನಾಗಿಸುವ ಪ್ರಯತ್ನವಲ್ಲವೇ..? ಆ ಶಾಸಕ ರಘುಪತಿ ಭಟ್ ಸಭೆ ನಡೆಸಿ ಸಮವಸ್ತ್ರ ಕಡ್ಡಾಯ ಮಾಡಬೇಕು ಅಂತ ಹೇಳೊಕೆ ಅವರ್ಯಾರು..? ಆತ ಹೇಳಿದ ತಕ್ಷಣ ಜನರ ದುಡ್ಡಲ್ಲಿ ಸಂಬಳ ತೆಗೆದುಕೊಳ್ಳುವ ಈ ಸರ್ಕಾರಿ ಪ್ರಾಂಶುಪಾಲರು ಗೇಟ್ ಹಾಕುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನೋಡಿ ಈಗ ಕೇಸರಿ ಶಾಲು ಹಾಕುವುದರ ಉದ್ದೇಶವೇನು..? ಈ ಮೊದಲಿನಿಂದಲೂ ಹಾಕಿದ್ರಾ..? ಶಾಲು ಹಾಕಿಕೊಳ್ಳಬೇಕು ಎಂದುಬುದು ನಿನ್ನೆ ಮೊನ್ನೆ ಜ್ಞಾನೋದಯವಾಗಿದ್ಯಾ..? ಈ ಹೆಣ್ಣು ಮಕ್ಕಳು ಯಾವಾಗಿನಿಂದ ಸ್ಕಾರ್ಪ ಹಾಕಿಕೊಂಡು ಬರುತ್ತಿದ್ದರು ಹೇಳಿ. ಸುಮ್ಮನೆ ಶಿಕ್ಷಣದ ವಿಷಯದಲ್ಲಿ ಧರ್ಮ ಸೇರಿಸಲು ಹೋಗಬೇಡಿ” ಎಂದಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ಕಾಲೇಜುಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯಗೊಳಿಸಿಲ್ಲ ಎಂದ ಶಿಕ್ಷಣ ಇಲಾಖೆ
ಈ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದೆ ಎಂದಿರುವ ಸಿದ್ದರಾಮಯ್ಯ, ’ಗೃಹ ಸಚಿವ ಅರಗ ಜ್ಞಾನೆಂದ್ರ ರಾಜಕೀಯವಾಗಿ ಹೇಳಿಕೆ ನೀಡುತ್ತಿದ್ದಾರೆ. ಅದೆಲ್ಲಾ ಆಗುವುದಿಲ್ಲ. ಹೈಕೋರ್ಟ್ ಏನು ಹೇಳುತ್ತದೆ ನೋಡೊಣ. ಆದರೆ, ವೈಯಕ್ತಿಕವಾಗಿ ಒಬ್ಬ ವಕೀಲ, ವಿರೋಧ ಪಕ್ಷದ ನಾಯಕನಾಗಿ ಹೇಳುವುದೆನೆಂದರೆ ಇದು ಸಂವಿಧಾನ ವಿರೋಧಿ” ಎಂದು ಹೇಳಿದ್ದಾರೆ.
ಇನ್ನು, ಕುಂದಾಪುರ ಕಾಲೇಜಿನಲ್ಲಿ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆ ಎರಡನೇ ದಿನವೂ ಮುಂದುವರೆದಿದೆ. ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಗೇಟ್ ಹೊರಗೆ ನಿಲ್ಲಿಸಲಾಗಿದೆ. ಅವರಿಗೆ ಬೆಂಬಲ ನೀಡಲು ಮುಸ್ಲಿಂ ವಿದ್ಯಾರ್ಥಿಗಳು ಸಹ ಕಾಲೇಜು ಗೇಟ್ನ ಹೊರಗೆ ಕುಳಿತಿದ್ದಾರೆ.
#Breaking: Protests over #hijab ban in Kundapura college Karnataka, India continue on second day after girls were stopped outside the gate. Muslim male students also sit-in outside the college gate in solidarity. pic.twitter.com/Q5qnqHAEdv
— Rushda Fathima Khan (@Rushda_Khan_) February 4, 2022
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಗೇಟ್ ಮುಚ್ಚಿದ ಕುಂದಾಪುರ ಕಾಲೇಜ್: ಧ್ವನಿ ಎತ್ತಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ