ಸಿಖ್ ಪ್ರತ್ಯೇಕತವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಮೂವರು ಭಾರತೀಯರನ್ನು ಕೆನಡಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಕೆನಡಾದಲ್ಲಿ ಕೆಲ ತಿಂಗಳ ಹಿಂದೆಯೇ ಈ ಶಂಕಿತರನ್ನು ಪೊಲೀಸರು ಗುರುತಿಸಿದ್ದು, ಅವರ ಮೇಲೆ ತೀವ್ರ ಕಣ್ಗಾವಲು ಇರಿಸಲಾಗಿತ್ತು ಎಂದು ಸಿಬಿಸಿ ಹೇಳಿದೆ. ಶಂಕಿತರು ಕೆನಡಾದಲ್ಲಿ ವಾಸಿಸುತ್ತಿದ್ದರು. ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದ ಹೊರಗೆ ನಿಜ್ಜರ್ ಹತ್ಯೆಯಲ್ಲಿ ಈ ಮೂವರು ಶೂಟರ್, ಡ್ರೈವರ್ ಮತ್ತು ಸ್ಪಾಟರ್ಗಳಾಗಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂದು ವರದಿಯಾಗಿದೆ. ಭಾರತ ಸರ್ಕಾರದೊಂದಿಗೆ ಆರೋಪಿಗಳಿಗೆ ಯಾವುದಾದರೂ ಸಂಬಂಧಗಳು ಇದೆಯಾ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು RCMP ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ “ಸಂಭಾವ್ಯ” ಕೈವಾಡದ ಆರೋಪದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಟ್ಟಿತ್ತು. ಭಾರತವು ಟ್ರೂಡೊ ಅವರ ಆರೋಪಗಳನ್ನು “ಅಸಂಬದ್ಧ” ಎಂದು ತಳ್ಳಿಹಾಕಿತ್ತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಯೋಜಿತ ನರಹತ್ಯೆ ತನಿಖಾ ತಂಡದ ನೇತೃತ್ವ ವಹಿಸಿದ್ದ ಮಂದೀಪ್ ಮೂಕರ್, ಶಂಕಿತರನ್ನು ಕರಣ್ ಬ್ರಾರ್, ಕರಣ್ಪ್ರೀತ್ ಸಿಂಗ್ ಮತ್ತು ಕಮಲ್ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಮೂವರು ಕೂಡ 20 ವರ್ಷ ವಯಸ್ಸಿನವರಾಗಿದ್ದಾರೆ. ಅವರನ್ನು ಎಡ್ಮಂಟನ್ನಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಗ್ಲೋಬಲ್ ನ್ಯೂಸ್ನ ವರದಿಯ ಪ್ರಕಾರ ಶಂಕಿತರು ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಪ್ರವೇಶಿಸಿದ್ದಾರೆ. ಹರ್ದಿಪ್ ನಿಜ್ಜರ್ ಹತ್ಯೆಗೆ ಸಂಬಂಧಿಸಿ ಕೆನಡಾ ಪೊಲೀಸರು ಶುಕ್ರವಾರ ಬಾಡಿಗೆ ಹಂತಕರ ತಂಡದ ಸದಸ್ಯರನ್ನು ಬಂಧಿಸಿದೆ ಎಂದು ಕೆನಡಾ ಬ್ರಾಡ್ ಸ್ಟಿಂಗ್ ಕಾರ್ಪೊರೇಷನ್ ಕೂಡ ವರದಿ ಮಾಡಿದೆ.
ಕಳೆದ ವರ್ಷ ಜೂನ್ನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ನಿಜ್ಜರ್ ಹತ್ಯೆಯು ಸಮಸ್ಯೆ ಸೃಷ್ಟಿಸಿದೆ ಮತ್ತು ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಕೆನಡಾ ಪ್ರಧಾನಿ ಟ್ರುಡೊ ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿದ್ದರು. ನಿಜ್ಜರ್ ಹತ್ಯೆಯ ಕುರಿತು ಕೆನಡಾ ಪ್ರಧಾನ ಮಂತ್ರಿ ಟ್ರುಡೊ ಭಾರತವನ್ನು ಗುರಿಯಾಗಿಸಿ ನೀಡುತ್ತಿರುವ ಪುನರಾವರ್ತಿತ ಹೇಳಿಕೆಗೆ ಭಾರತ ವಿರೋಧಿಸಿದೆ.
ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಸಂಭಾವ್ಯ ಕೈವಾಡದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್ನಲ್ಲಿ ಆರೋಪಿಸಿದ್ದರು. ಟ್ರುಡೊ ಅವರ ಆರೋಪಗಳನ್ನು ಭಾರತವು ಅಸಂಬದ್ಧ ಎಂದು ತಿರಸ್ಕರಿಸಿತ್ತು. ಆ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ಉಚ್ಛಾಟಣೆಯು ನಡೆದಿತ್ತು. ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ನಿಜ್ಜರ್ ಹತ್ಯೆಯ ಉದ್ದೇಶಿತ ವಿಡಿಯೋ ದೃಶ್ಯಾವಳಿಗಳು ಈ ಮೊದಲು ವೈರಲ್ ಆಗಿತ್ತು. ಹರ್ದೀಪ್ ಸಿಂಗ್ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿರುವ ವಿಡಿಯೋವನ್ನು ಕೆನಡಾ ಮೂಲದ ಸಿಬಿಸಿ ನ್ಯೂಸ್ ವರದಿ ಮಾಡಿತ್ತು.
ಇದನ್ನು ಓದಿ: ಅಮಿತ್ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?