ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವ ವಿವಾದ ಜೀವಂತ ಇರುವಾಗಲೇ, ಜಿಲ್ಲೆಯ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲೂ ಅದೇ ರೀತಿಯ ವಿವಾದ ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದು ವಿವಾದ ಮಾಡಿದ್ದಾರೆ. ಈ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿನ ಆವರಣದಲ್ಲಿ ಓಡಾಡುತ್ತಿರುವ ವಿಡಿಯೊ ವೈರಲ್ ಆಗಿದೆ.
ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಕಾಲೇಜಿಗೆ ಬರದಂತೆ ಕೇಳಿಕೊಂಡಿದ್ದು, ಆದರೆ ವಿದ್ಯಾರ್ಥಿನಿಯರು ಇದನ್ನು ನಿರಾಕರಿಸಿದ್ದರು. ಇದರ ನಂತರ ಹಲವಾರು ಹಿಂದೂ ಹುಡುಗರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹಿಜಾಬ್ ವಿವಾದ: ಕಾಲೇಜುಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯಗೊಳಿಸಿಲ್ಲ ಎಂದ ಶಿಕ್ಷಣ ಇಲಾಖೆ
ವಿವಾದದ ಬಗ್ಗೆ ಆಡಳಿತ ಮಂಡಳಿ ಹಾಗೂ ಸ್ಥಳೀಯ ಶಾಸಕರು ವಿದ್ಯಾರ್ಥಿಗಳ ಪೋಷಕರೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮಾತನಾಡಿದ ಪೋಷಕರು, “ಶಾಲೆಯಲ್ಲಿ ನಡೆಯುವ ಎಲ್ಲಾ ಹಿಂದೂ ಹಬ್ಬಗಳ ಸಂದರ್ಭದಲ್ಲಿ ನಾವು ನಮ್ಮ ಮಕ್ಕಳನ್ನು ಕಳುಹಿಸಿದ್ದೇವೆ. ಯಾವುದನ್ನೂ ವಿವಾದ ಮಾಡಿಲ್ಲ. ಹಿಜಾಬ್ ನಮ್ಮ ಸಂಪ್ರದಾಯವಾಗಿದ್ದು, ಅದರ ಬಗ್ಗೆ ನೀವೇಕೆ ವಿವಾದ ಮಾಡುತ್ತೀರ” ಎಂದು ಕೇಳಿದ್ದಾರೆ.
A meeting was also conducted by management along with local MlA with parents of the students. A parent of the girl student can be heard saying we didn't discriminate. We sent our students during all the #hindu festivals. Why is that you are discriminating with out students (2/2) pic.twitter.com/OSDbdravXM
— Imran Khan (@KeypadGuerilla) February 2, 2022
“ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬರಬಾರದು ಎಂದು ಪ್ರಿನ್ಸಿಪಾಲ್ ಹೇಳಿದ್ದಾರೆ. ಇದು ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡಿದಂತೆ ಆಗುತ್ತದೆ” ಎಂದು ಮತ್ತೊಬ್ಬ ಪೋಷಕರು ಸಭೆಯಲ್ಲಿ ಹೇಳಿದ್ದಾರೆ.
ಘಟನೆ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, “ಶಾಲೆಯಲ್ಲಿ ನಡೆದ ಸಭೆಯಲ್ಲಿ ಡ್ರೆಸ್ ಕೋಡ್ ಬಗ್ಗೆ ಒಳ್ಳೆಯ ರೀತಿಯಲ್ಲಿ ಹೇಳಿದ್ದೇನೆ. ಇದರ ಫಲಿತಾಂಶ ಏನು ಎಂದು ಹೇಳಲು ಸಾಧ್ಯವಿಲ್ಲ. ನಾನು ಎರಡು ಗಂಟೆ ಮಾನವೀಯತೆಯಲ್ಲಿ ಮಾತನಾಡಿದ್ದೇನೆ. ಸರ್ಕಾರದ ಆದೇಶ ತಿಳಿಸಿದ್ದೇನೆ. ನಮಗೆ ಮಕ್ಕಳೆಲ್ಲವೂ ಒಂದೇ, ಯಾರಿಗೂ ಅನ್ಯಾಯ ಮಾಡುವುದಿಲ್ಲ” ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆಗಾಗಿ ನಾನುಗೌರಿ.ಕಾಂ ಕಾಲೇಜಿಗೆ ಕರೆ ಮಾಡಿದ್ದರೂ, ಪ್ರಿನ್ಸಿಪಾಲ್ ಸಂಪರ್ಕಕ್ಕೆ ಲಭ್ಯವಾಗಿಲ್ಲ.
ಇದನ್ನೂ ಓದಿ: ಹಿಜಾಬ್ v/s ಕೇಸರಿ ಶಾಲು: ಮತೀಯ ದ್ವೇಷದ ಹಿಂದೆ ಎಬಿವಿಪಿ ಕೈವಾಡ- ಎಸ್ಎಫ್ಐ