ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ 50% ಗ್ಯಾಸ್ ಸಬ್ಸಿಡಿ, 5 ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, “ವರ್ಷಕ್ಕೆ 5 ಅಡುಗೆ ಅನಿಲದ ಸಿಲಿಂಡರ್ಗಳನ್ನು ಉಚಿತವಾಗಿ ನೀಡುತ್ತೇವೆ. ಆನಂತರ 10 ಸಿಲಿಂಡರ್ಗಳ ಮೇಲೆ 50% ಸಬ್ಸಿಡಿ ನೀಡುತ್ತೇವೆ” ಎಂದಿದ್ದಾರೆ.
ನರೇಂದ್ರ ಮೋದಿಯವರು ಉಜ್ವಲ ಯೋಜನೆಯಡಿ ಬಡವರಿಗೆ ಉಚಿತ ಸಿಲಿಂಡರ್ ಕೊಟ್ಟರು. ಆದರೆ ಆನಂತರ ಬೆಲೆ ದುಪ್ಪಟ್ಟುಗೊಳಿಸಿ ಬಡಜನರ ಹೊಟ್ಟೆ ಮೇಲೆ ಹೊಡೆದರು. ಈಗ ಅಡುಗೆ ಅನಿಲದ ಬೆಲೆ 1000 ರೂ ದಾಟಿದೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಹಾಗಾಗಿ ನಾವು ಅರ್ಧ ಹಣಕ್ಕೆ ಅಡುಗೆ ಅನಿಲ ನೀಡುತ್ತೇವೆ ಎಂದರು.
ಅಲ್ಲದೆ ಆಟೋ ಚಾಲಕರಿಗೆ ಪ್ರತಿ ತಿಂಗಳು 2000 ರೂ ನೀಡುತ್ತೇವೆ. ಅಂಗನವಾಡಿ ನೌಕರರ ಹಕ್ಕೊತ್ತಾಯಗಳನ್ನು ಈಡೇರಿಸುತ್ತೇವೆ. ಈ ಕುರಿತು ಆರ್ಥಿಕ ತಜ್ಞರೊಂದಿಗೆ ಚರ್ಚಿಸುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಮ್ಮ ಪಕ್ಷ 123 ಸ್ಥಾನಗಳನ್ನು ಗೆಲ್ಲುವುದು ಖಚಿತ. ಅದಕ್ಕಾಗಿ ಚುನಾವಣೆಯ ಕೊನೆಯ ದಿನದವರೆಗೂ ಪ್ರಚಾರ ಮಾಡುತ್ತೇನೆ. ಗುರಿ ಮುಟ್ಟುವವರೆಗೂ ಯಾವುದೇ ಕಾರಣಕ್ಕೂ ವಿರಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಾದೇಶಿಕ ಪಕ್ಷ ಬಹುಮತ ಗಳಿಸುವುದು ದೊಡ್ಡ ಸಾಧನೆ. ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳು 75 ಸೀಟು ದಾಟುವುದಿಲ್ಲ ಅಂತ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. ಕೆಲವರು ಜೆಡಿಎಸ್ ಮುಗಿಸಿದ್ದೇವೆ ಎಂದು ಮಾತನಾಡುತ್ತಿದ್ದಾರೆ. ಆದರೆ ಗ್ರೌಂಡ್ ರಿಯಾಲಿಟಿ ನನಗೆ ಗೊತ್ತಿದೆ. ಏಪ್ರಿಲ್ 10ನೇ ತಾರೀಖಿನವರೆಗೂ ಪಂಚರತ್ನ ಯಾತ್ರೆ ಮುಂದುವರೆಯುತ್ತದೆ. 123 ಸ್ಥಾನ ಮುಟ್ಟಿಸಲು ಜನ ತೀರ್ಮಾನ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ರಾಹುಲ್ ಗಾಂಧಿಗೆ 19 ಪಕ್ಷಗಳ ಬೆಂಬಲ: ಕಾಂಗ್ರೆಸ್ನಿಂದ ದೇಶಾದ್ಯಂತ ಒಂದು ತಿಂಗಳ ಜೈ ಭಾರತ್ ಮಹಾಸತ್ಯಾಗ್ರಹ ಹೋರಾಟ