ಕಾಂಗ್ರೆಸ್ ಪಕ್ಷವು ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ದೇಶ ಮಟ್ಟದಲ್ಲಿ ತಿಂಗಳು ಪೂರ್ತಿ ಜೈ ಭಾರತ್ ಮಹಾ ಸತ್ಯಾಗ್ರಹ ಹೋರಾಟ ನಡೆಸುತ್ತಿದೆ. ಈ ಹೋರಾಟ ರಾಹುಲ್ಗಾಂಧಿಗಾಗಿ ಅಲ್ಲ ಬದಲಿಗೆ ಆಪತ್ತಿನಲ್ಲಿರುವ ಪ್ರಜಾತಂತ್ರಕ್ಕಾಗಿ ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ತಿಳಿಸಿದ್ದಾರೆ.
ಇಂತು ರಾತ್ರಿ 7 ಗಂಟೆಗೆ ಪ್ರಜಾತಂತ್ರ ಉಳಿಸಿ ಆಂದೋಲನ ಆರಂಭಿಸುತ್ತೇವೆ. ಇದಕ್ಕೆ 19 ವಿರೋಧ ಪಕ್ಷಗಳು ಬೆಂಬಲ ನೀಡಿವೆ. ಸಾವರ್ಕರ್ ವಿಷಯದಲ್ಲಿ ಉದ್ಧವ್ ಠಾಕ್ರೆಯವರಿಗೆ ಭಿನ್ನಾಭಿಪ್ರಾಯವಿದ್ದರೂ ಸಹ ಅವರು ಬೆಂಬಲ ನೀಡಿದ್ದಾರೆ. ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ಹೋರಾಟವಿರುವುದು ರಾಹುಲ್ ಗಾಂಧಿಯನ್ನು ಉಳಿಸುವುದಕ್ಕಾಗಿ ಅಲ್ಲ. ಬದಲಿಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವುದಕ್ಕಾಗಿ. ಅದಾನಿ ಮತ್ತು ನರೇಂದ್ರ ಮೋದಿ ನಡುವೆ ಏನು ಸಂಬಂಧ ಎಂಬುದು ನಮ್ಮ ಪ್ರಶ್ನೆಯಾಗಿದೆ. ಜಂಟಿ ಸಂಸದೀಯ ತನಿಖೆಗೆ ಸರ್ಕಾರ ಏಕೆ ಹೆದರುತ್ತಿದೆ ಎಂದು ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.
ಸರ್ಕಾರ ನೀರವ್ ಮೋದಿಯವರ ಮೇಲೆ ಸಮರ್ಪಕ ತನಿಖೆ ನಡೆಸದೇ ಕ್ಲೀನ್ ಚಿಟ್ ಕೊಟ್ಟಿತ್ತು. ಆನಂತರ ಜನರ ಎಷ್ಟೇ ಹೋರಾಟ ಮಾಡಿದರೂ, ವಿರೋಧ ಪಕ್ಷಗಳು ಎಷ್ಟೇ ಒತ್ತಾಯ ಮಾಡಿದರೂ ಸಹ ಜಾತಿಗಣತಿ ನಡೆಸಲಿಲ್ಲ. ಈಗ ಓಬಿಸಿಗಳಿಗೆ ಅನ್ಯಾಯವಾಗಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಕಾನೂನು ತಂಡವು ಕೆಲಸ ಮಾಡುತ್ತಿದ್ದು, ಸೂರತ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತೇವೆ. ಒಂದು ತಿಂಗಳ ಕಾಲಾವಕಾಶವಿರುವುದರಿಂದ ಅಷ್ಟರಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ.
ಮತ್ತೊರ್ವ ಮುಖಂಡ ಕೆ.ಸಿ ವೇಣುಗೋಪಾಲ್ ಮಾತನಾಡಿ, “ರಾಹುಲ್ ಗಾಂಧಿಯವರ ವಿರುದ್ಧ ತೀರ್ಪು ಬಂದ 24 ಗಂಟೆಯೊಳಗೆ ಅವರ ಲೋಕಸಭಾ ಸ್ಥಾನ ರದ್ದುಗೊಳಿಸಲಾಗುತ್ತದೆ. ಅವರು ಪತ್ರಿಕಾಗೋಷ್ಠಿ ನಡೆಸಿದ 24 ಗಂಟೆಯೊಳಗೆ ಅವರನ್ನು ಬಂಗಲೆಯಿಂದ ಒಕ್ಕಲೆಬ್ಬಿಸಲಾಗುತ್ತದೆ. ಆದರೆ ರಾಹುಲ್ ಗಾಂಧಿ ಬಂಗಲೆ ಬಗ್ಗೆ ಚಿಂತಿರಾಗಿಲ್ಲ. ಅವರನ್ನು ಬೆದರಿಸಿದರೆ ನಾವು ಹೆದರುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಕೋಲಾರದ ಸಂವಿಧಾನ ಉಳಿಸಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗಿ: ಕೆ.ಎಚ್ ಮುನಿಯಪ್ಪ