ಕಾನೂನಾತ್ಮಕ ನಿಷೇಧದ ಹೊರತಾಗಿಯೂ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮಲ ತೆಗೆಯುವ, ಹೊರುವ ಪದ್ದತಿಯ ಸಂಬಂಧ ಪ್ರಕಟಗೊಂಡಿರುವ ಮಾಧ್ಯಮ ವರದಿಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಮಲ ಹೊರುವ ಪದ್ದತಿಯಲ್ಲಿ ಜಾತಿ ತಾರತಮ್ಯ ಒಳಗೊಂಡಿರುವುದನ್ನು ಒತ್ತಿ ಹೇಳಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷಗಳಿಗಿಂತ ಹೆಚ್ಚು ಸಮಯ ಕಳೆದರೂ, ಸಮಾಜದಲ್ಲಿರುವ ನಮ್ಮದೇ ಸಹೋದರರು ಜಾತಿಯ ಕಾರಣಕ್ಕೆ ಈ ರೀತಿ ಕೆಲಸ ಮಾಡಬೇಕಿದೆ ಎಂದಿದೆ.
ಹೈಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಉಲ್ಲೇಖಿಸಿತು.
“ಇದು ಪ್ರತಿಯೊಬ್ಬರ ಆತ್ಮಸಾಕ್ಷಿಯನ್ನು ಕೆಣಕುತ್ತದೆ. ಸ್ವಾತಂತ್ರ್ಯ ಬಂದು 60 ವರ್ಷಗಳ ಬಳಿಕವೂ ನಿರ್ದಿಷ್ಟ ಸಮುದಾಯದಲ್ಲಿ ಜನಿಸಿದ, ತನ್ನದಲ್ಲದ ದುರದೃಷ್ಟಕ್ಕೆ ಅವರು ಈ ಕೆಲಸ ಮಾಡಬೇಕಿದೆ. ಇದು ಮಾನವೀಯತೆಗೆ ನಾಚಿಕೆಯಾಗುವ ಸಂಗತಿಯಲ್ಲವೇ? ಈ ಕಾರಣಕ್ಕಾಗಿ ನಾವೆಲ್ಲ ಇಲ್ಲಿ ಇದ್ದೇವೆಯೇ?” ಎಂದು ಪೀಠವು ಮೌಖಿವಾಗಿ ಕೇಳಿದೆ.
“ಯಾರೋ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಪ್ರಾಣಿಗಿಂತ ಕೆಟ್ಟ ಬದುಕು ಬದುಕಬೇಕೆ? ನಾವೆಲ್ಲಾ ದೇವರ ಮಕ್ಕಳು, ಇದೇನಿದು? ಯಂತ್ರೋಪಕರಣಗಳು ಇದ್ದೂ ಹೀಗೇಕೆ? ಮಲಗುಂಡಿ ಸ್ವಚ್ಛಗೊಳಿಸಲು ಒಂದು ತಾಸಿಗೆ ಎರಡು ಸಾವಿರ ರೂಪಾಯಿ ವೆಚ್ಚವಾಗುತ್ತದೆಯಷ್ಟೇ” ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದ್ದಾಗಿ ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ವಕೀಲ ಶ್ರೀಧರ್ ಪ್ರಭು ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಿ, ಸಾರ್ವಜನಿಕ ಹಿತಾಸಕ್ತ ಅರ್ಜಿ ಸಿದ್ಧಪಡಿಸಿ ಶುಕ್ರವಾರದ ಒಳಗೆ ರಿಜಿಸ್ಟ್ರಿಗೆ ಸಲ್ಲಿಸಬೇಕು. ರಿಜಿಸ್ಟ್ರಿ ಅರ್ಜಿಯನ್ನು ವಿಚಾರಣೆಗೆ ಸೋಮವಾರಕ್ಕೆ ಪಟ್ಟಿ ಮಾಡಬೇಕು ಎಂದು ಪೀಠ ನಿರ್ದೇಶನ ನೀಡಿರುವುದಾಗಿ ತಿಳಿದು ಬಂದಿದೆ.
ಕೋಲಾರದಲ್ಲಿ ದಲಿತ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಶಿಕ್ಷಕರು:
ಕೋಲಾರದ ಮಾಲೂರು ತಾಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಘಟನೆ ಇತ್ತೀಚೆಗೆ ದೇಶದಾದ್ಯಂತ ಸುದ್ದಿಯಾಗಿತ್ತು. ಗುಂಡಿಗೆ ಇಳಿದ ಎಲ್ಲಾ ಮಕ್ಕಳು ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎಂಬುವುದು ಮಾತ್ರ ಶಿಕ್ಷಕರೊಳಗಿನ ಜಾತಿಕ್ರೌರ್ಯಕ್ಕೆ ಹಿಡಿದ ಕನ್ನಡಿ ಎನ್ನಬಹುದು. ಡಿಸೆಂಬರ್ 1ರಂದು ಈ ಘಟನೆ ನಡೆದಿದ್ದು, ಡಿ.17ರಂದು ಪ್ರಕರಣ ಬೆಳಕಿದೆ ಬಂದಿದೆ. ಇದೇ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ, ಮಕ್ಕಳು ಮಲದ ಗುಂಡಿ ಸ್ವಚ್ಛಗೊಳಿಸುತ್ತಿರುವುದನ್ನು ವಿಡಿಯೋ ಮಾಡಿದ್ದು, ಅದನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ಕಳಿಸಿದ್ದರು. ಕನ್ನಡದ ಪ್ರಮುಖ ಪತ್ರಿಕೆಯೊಂದು ಈ ವಿಷಯವನ್ನು ವರದಿ ಮಾಡಿ ಸರ್ಕಾರದ ಗಮನ ಸೆಳೆದಿತ್ತು.
ಈ ಪ್ರಕರಣದ ಕುರಿತು ನಾನು ಗೌರಿಯಲ್ಲಿ ಪ್ರಕಟವಾದ ವಿಸ್ಕೃತ ವರದಿ ಇಲ್ಲಿದೆ :
ದಲಿತ ಚಳವಳಿಯ ನೆಲ ಕೋಲಾರದಲ್ಲಿ ’ಅಮಾನವೀಯ ಕೃತ್ಯ’