2019ರ ಲೋಕಸಭಾ ಚುನಾವಣೆಗೂ ಮುನ್ನ ಕೋಲಾರದಲ್ಲಿ ಮಾಡಿದ ಭಾಷಣಕ್ಕಾಗಿ ರಾಹುಲ್ ಗಾಂಧಿ ಲೋಕಸಭಾ ಸ್ಥಾನದಿಂದ ಅನರ್ಹರಾಗಿದ್ದಾರೋ, ಅದೇ ಕೋಲಾರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಏಪ್ರಿಲ್ 5ರಂದು ಸಂವಿಧಾನ ಉಳಿಸಿ ಸಮಾವೇಶ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ಕೆ.ಎಚ್ ಮುನಿಯಪ್ಪ ಘೋಷಿಸಿದ್ದಾರೆ.
ಕೋಲಾರದಲ್ಲಿ ಇಂದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, “ರಾಹುಲ್ ಗಾಂಧಿಯವರು ಅನರ್ಹತೆ ನಂತರ ಮೊದಲ ಸಾರ್ವಜನಿಕ ಕಾರ್ಯಕ್ರಮವಾಗಿ ಕೋಲಾರದಲ್ಲಿ ಭಾಗವಹಿಸಲು ಬರುತ್ತಿದ್ದಾರೆ. ಇಲ್ಲಿಂದಲೇ ಸಂವಿಧಾನ ರಕ್ಷಣೆಯ ಕಹಳೆ ಮೊಳಗಿಸಲಿದ್ದಾರೆ” ಎಂದರು.
ರಾಹುಲ್ ಗಾಂಧಿಯವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಲಿದ್ದು, ಕೋಲಾರದಿಂದಲೇ ಬಿಜೆಪಿ ಮತ್ತು ನರೇಂದ್ರ ಮೋದಿಯವರಿಗೆ ಉತ್ತರ ನೀಡುತ್ತಾರೆ. ಸಮಾವೇಶಕ್ಕೆ ಎಲ್ಲಾ ಸಿದ್ದತೆ ನಡೆಸುತ್ತಿದ್ದು, ಲಕ್ಷಕ್ಕೂ ಅಧಿಕ ಜನರು ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರಿಗೆ ಶಿಕ್ಷೆ ವಿಧಿಸಿದ ಕೋರ್ಟ್ ತೀರ್ಪಿನ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ನ್ಯಾಯಾಲಯದ ಆದೇಶ ಸಿಗುವ ಮುನ್ನವೇ ಅವರನ್ನು ಅನರ್ಹಗೊಳಿಸಿರುವುದು ರಾಜಕೀಯ ದ್ವೇಷವಾಗಿದೆ. ಇದು ನರೇಂದ್ರ ಮೋದಿಯವರು ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎಸಗಿದ ದ್ರೋಹವಾಗಿದೆ ಎಂದು ಮುನಿಯಪ್ಪ ಕಿಡಿಕಾರಿದರು.
ಸ್ಪೀಕರ್ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಅನರ್ಹತೆ ಮಾಡಲಾಗಿದೆ. ಅಂದರೆ ರಾಹುಲ್ ಗಾಂಧಿ ಕಂಡರೆ ಇಡೀ ಬಿಜೆಪಿಗೆ ಭಯ ಎಂಬುದು ಇದರಿಂದ ತಿಳಿಯುತ್ತದೆ. ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿಯವರಿಗೆ ಪ್ರಸಿದ್ದಿ ತಂದುಕೊಟ್ಟಿರುವುದನ್ನು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಇದನ್ನೂ ಓದಿ: ಪ್ರಜಾಪ್ರಭುತ್ವ ನಾಶ ಮಾಡುತ್ತಿರುವ ಕೇಂದ್ರದ ವಿರುದ್ಧ ಹೋರಾಟ ಮುಂದುವರೆಯಲಿದೆ: 18 ಪ್ರತಿಪಕ್ಷಗಳ ನಿರ್ಧಾರ