ಕೇಂದ್ರ ಸರ್ಕಾರದ ದಮನಕಾರಿ ನಡೆಯ ವಿರುದ್ಧ ಎಲ್ಲ ಪ್ರತಿಪಕ್ಷಗಳು ಒಂದಾಗುತ್ತಿವೆ. ಸೋಮವಾರ ರಾತ್ರಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಅವರ ನಿವಾಸದಲ್ಲೇ 18 ವಿರೋಧ ಪಕ್ಷಗಳ ನಾಯಕರು ಸೇರಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಸಲು ಸರ್ವಪಕ್ಷಗಳು ನಿರ್ಧರಿಸಿದವು.
ಡಿಎಂಕೆ, ಎನ್ಸಿಪಿ, ಜೆಡಿಯು, ಬಿಆರ್ಎಸ್, ಎಂಡಿಎಂಕೆ, ಕೆಸಿ, ಟಿಎಂಸಿ, ಆರ್ಎಸ್ಪಿ, ಆರ್ಜೆಡಿ, ಎನ್ಸಿ, ಐಯುಎಂಎಲ್, ವಿಸಿಕೆ ಎಸ್ಪಿ ಹಾಗೂ ಜೆಎಂಎಂ ಪಕ್ಷಗಳ ನಾಯಕರು ಸಭೆಯಲ್ಲಿ ಹಾಜರಿದ್ದರು. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹ ಸಭೆಯಲ್ಲಿ ಭಾಗಿಯಾಗಿದ್ದರು.
ಅದಾನಿ ಸಮೂಹದ ವಿರುದ್ಧ ಕೇಳಿಬಂದಿರುವ ವಂಚನೆ ಆರೋಪಗಳಿಗೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯಿಂದ(ಜೆಪಿಸಿ) ತನಿಖೆ ಮತ್ತು ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹತೆ ಬಗ್ಗೆ ಚರ್ಚೆ ನಡೆಯಿತು. ಈ ಸಂಬಂಧ ಬಿಜೆಪಿ ವಿರುದ್ಧ ಹೋರಾಟ ಮುಂದುವರಿಸಲು ಪ್ರತಿಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಅವರು, ”ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿರುವ ಮತ್ತು ಎಲ್ಲಾ ಸಂಸ್ಥೆಗಳನ್ನು ಬುಡಮೇಲು ಮಾಡಿರುವ ಮೋದಿ ಆಡಳಿತದ ವಿರುದ್ಧ ತಮ್ಮ ಅಭಿಯಾನವನ್ನು ಒಂದೇ ಧ್ವನಿಯಲ್ಲಿ ಮುಂದುವರಿಸಲು ಖರ್ಗೆ ಅವರ ನಿವಾಸದಲ್ಲಿ ಸಭೆ ಸೇರಿದ್ದ 18 ವಿರೋಧ ಪಕ್ಷಗಳ ನಾಯಕರು ನಿರ್ಧರಿಸಿದರು” ಎಂದು ಹೇಳಿದರು.
”ಮೋದಿಯವರ ಬೆದರಿಕೆ ರಾಜಕೀಯವನ್ನು ಎದುರಿಸಲು ಅವರು ತಮ್ಮ ಸಾಮೂಹಿಕ ಸಂಕಲ್ಪವನ್ನು ವ್ಯಕ್ತಪಡಿಸಿದರು. ಈ ಸಂಕಲ್ಪವು ಈಗ ಸಂಸತ್ತಿನ ಒಳಗೂ ಹೊರಗೂ ಪ್ರತಿಫಲಿಸುತ್ತದೆ” ಎಂದು ಜೈರಾಮ್ ರಮೇಶ್ ಹೇಳಿದರು.
ಈ ಸಭೆಯಿಂದ ಶಿವಸೇನಾ ದೂರ ಉಳಿದಿತ್ತು ಏಕೆಂದರೆ, ರಾಹುಲ್ ಗಾಂಧಿ ಅವರು ವೀರ ಸಾವರ್ಕರ್ ಕುರಿತಂತೆ ನೀಡಿರುವ ಹೇಳಿಕೆಗೆ ಅಸಮಧಾನಗೊಂಡಿದ್ದು, ಪ್ರತಿಭಟನಾರ್ಥವಾಗಿ ಶಿವಸೇನಾ ಸಭೆಯಿಂದ ದೂರ ಉಳಿದಿತ್ತು.
ಅದಾನಿ ತನಿಖೆ ವಿಚಾರವಾಗಿ ಕೇಂದ್ರದ ವಿರುದ್ಧ ಟ್ವೀಟ್ ಮಲ್ಲಿಕಾರ್ಜುನ ಖರ್ಗೆ, ”ಒಬ್ಬ ವ್ಯಕ್ತಿಯನ್ನು ಉಳಿಸುವ ಉದ್ದೇಶದಿಂದ ಮೋದಿ, 140 ಕೋಟಿ ಜನರ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆ. ಮೋದಿಯ ಪರಮ ಆಪ್ತನನ್ನು ರಕ್ಷಿಸಲು ಬಿಜೆಪಿ, ಸಂಸತ್ತಿನಲ್ಲಿ ಜನರ ವಿಷಯಗಳ ಕುರಿತ ಚರ್ಚೆಗೆ ತಡೆಹಾಕಿದೆ. ತಪ್ಪೇನೂ ನಡೆದಿಲ್ಲವೆಂದಾದರೆ ಜಂಟಿ ಸದನ ಸಮಿತಿ ರಚನೆಗೆ ಏಕೆ ಹಿಂದೇಟು?” ಎಂದು ಪ್ರಶ್ನೆ ಮಾಡಿದ್ದಾರೆ.
To save one man, Modi ji is trampling the interests of 140 Cr people.
To protect PM's 'Param Mitr', BJP stalls Parliament that discusses people's issues.
If NO wrong is committed, why is Govt shying away from Opposition's demand of a probe by Joint Parliamentary Committee ? pic.twitter.com/53Bz3HEtSE
— Mallikarjun Kharge (@kharge) March 27, 2023