Homeಮುಖಪುಟಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಸಭೆಯಲ್ಲಿ ಟಿಎಂಸಿ ನಾಯಕರು ಪ್ರತ್ಯಕ್ಷ; ಕೇಂದ್ರದ ವಿರುದ್ಧ "ಕಪ್ಪು" ಬಟ್ಟೆ ಧರಿಸಿ...

ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಸಭೆಯಲ್ಲಿ ಟಿಎಂಸಿ ನಾಯಕರು ಪ್ರತ್ಯಕ್ಷ; ಕೇಂದ್ರದ ವಿರುದ್ಧ “ಕಪ್ಪು” ಬಟ್ಟೆ ಧರಿಸಿ ಪ್ರತಿಭಟನೆ

- Advertisement -
- Advertisement -

ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಕಾರ್ಯತಂತ್ರದ ಸಭೆಯಲ್ಲಿ ಇಂದು (ಸೋಮವಾರ) ಮೊದಲ ಬಾರಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾಣಿಸಿಕೊಂಡಿದೆ. ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಇದು ಅಪರೂಪದ ಬೆಳವಣಿಗೆಯಾಗಿದೆ.

ಈ ಸಭೆಯಲ್ಲಿ ಪ್ರಮುಖವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಮತ್ತು ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಹುಲ್ ಗಾಂಧಿಯ ಸಂಸದರಾಗಿ ಅನರ್ಹಗೊಳಿಸುವಿಕೆಯ ವಿರುದ್ಧ “ಕಪ್ಪು” ಬಟ್ಟೆ ಧರಿಸಿ ಪ್ರತಿಭಟನೆಯನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು.

ಸಭೆ ಬಳಿಕ ರಾಹುಲ್ ಗಾಂಧಿ ಅನರ್ಹತೆಯನ್ನು ವಿರೋಧಿಸಿ ಪ್ರತಿಪಕ್ಷದ ಸಂಸದರು ಕಪ್ಪು ಬಟ್ಟೆ, ಕಪ್ಪು ಪಟ್ಟಿ ಧರಿಸಿ ಸಂಸತ್ತಿಗೆ ಆಗಮಿಸಿದ್ದಾರೆ. ಬಳಿಕ ಗಾಂಧಿ ಪ್ರತಿಮೆ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದ್ದಾರೆ.

ಸೋಮವಾರ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಡೆದ ಕಾರ್ಯತಂತ್ರದ ಸಭೆಯಲ್ಲಿ ತೃಣಮೂಲದ ಪ್ರಸೂನ್ ಬ್ಯಾನರ್ಜಿ ಮತ್ತು ಜವಾಹರ್ ಸಿರ್ಕಾರ್ ಭಾಗಿಯಾದರು. ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಸಮಾನವಾಗಿ ಉಳಿಯುವುದಾಗಿ ಘೋಷಿಸಿದ ನಂತರ ಇದು ಪ್ರಮುಖ ಬದಲಾವಣೆಯನ್ನು ಸೂಚಿಸುತ್ತದೆ.

ರಾಹುಲ್ ಗಾಂಧಿ ಅನರ್ಹತೆ ವಿಚಾರದ ವಿರುದ್ಧ ಪ್ರತಿಪಕ್ಷಗಳು ಒಂದಾಗಬೇಕು ಎಂದು ನಂಬಿರುವುದರಿಂದ ಈ ಪ್ರತಿಭಟನೆಗೆ ಮಾತ್ರ ತಮ್ಮ ಬೆಂಬಲವನ್ನು ಸೀಮಿತಗೊಳಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಪ್ರತಿಪಾದಿಸಿದೆ.

ಇದನ್ನೂ ಓದಿ: ‘ಕಳ್ಳರನ್ನು ಕಳ್ಳ ಎನ್ನದೆ ಸಾಧು-ಸಂತರು, ಸಮಾಜ ಸುಧಾರಕರೆಂದು ಕರೆಯಬೇಕೇ?’: ಸಿದ್ದರಾಮಯ್ಯ ಪ್ರಶ್ನೆ

ತೃಣಮೂಲದ ಕಾಂಗ್ರೆಸ್‌ನ ಅಚ್ಚರಿಯ ಈ ನಡೆಗೆ ಪ್ರತಿಕ್ರಿಯಿಸಿದ ಖರ್ಗೆ, ”ಪ್ರಜಾಪ್ರಭುತ್ವವನ್ನು ರಕ್ಷಿಸಲು” ಯಾರೇ ಮುಂದೆ ಬಂದರೂ ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

“ಇದನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಅದಕ್ಕಾಗಿಯೇ ನಾನು ನಿನ್ನೆ ಎಲ್ಲರಿಗೂ ಧನ್ಯವಾದ ಹೇಳಿದ್ದೇನೆ ಮತ್ತು ಇಂದು ಕೂಡ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಮತ್ತು ಜನರನ್ನು ರಕ್ಷಿಸಲು ಯಾರಾದರೂ ಮುಂದೆ ಬಂದರೆ ನಾವು ಸ್ವಾಗತಿಸುತ್ತೇವೆ. ನಮ್ಮನ್ನು ಬೆಂಬಲಿಸುವ ಜನರಿಗೆ ನಾವು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ” ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಹೇಳಿದರು.

”ಸತ್ಯ ಹೊರಬೇಕೆಂದು ನಾವು ಬಯಸುತ್ತೇವೆ. ಅದಾನಿ ಆಸ್ತಿ ಎರಡೂವರೆ ವರ್ಷಗಳಲ್ಲಿ ಹೆಚ್ಚಾಗಲು ಕಾರಣ ಏನಿರಬಹುದು? ಅವರಲ್ಲಿ ಮಾಟ ಮಂತ್ರವಿದ್ದರೆ ಅದನ್ನು ನಾಗರಿಕರೂ ತಿಳಿಸಲು ಬಯಸುತ್ತೇವೆ. ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯಾದ್ದಲ್ಲಿ ಆ ಮ್ಯಾಜಿಕ್ ಬಗ್ಗೆ ನಮಗೆ ಮತ್ತು ಜನರಿಗೆ ತಿಳಿಯುತ್ತದೆ” ಎಂದು ಹೇಳಿದರು.

ರಾಹುಲ್ ಗಾಂಧಿ ಅವರ ಅನರ್ಹತೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಕಾಂಗ್ರೆಸ್ ಸಂಸದರು ಕಪ್ಪು ಶರ್ಟ್ ಧರಿಸಿದ್ದರು.

ತೆಲಂಗಾಣದಲ್ಲಿ ಕಾಂಗ್ರೆಸ್‌ನ ಪ್ರತಿಸ್ಪರ್ಧಿಯಾಗಿರುವ ಕೆ ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸಹ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಜೊತೆಗೆ “”ಕಪ್ಪು ಬಟ್ಟೆ ಧರಿಸಿ” ಪ್ರತಿಭಟನೆಯಲ್ಲಿ ಸೇರಿಕೊಂಡಿತು.

ಹದಿನೇಳು ವಿರೋಧ ಪಕ್ಷಗಳು – ಕಾಂಗ್ರೆಸ್, ಸಿಎಂಕೆ, ಸಮಾಜವಾದಿ ಪಾರ್ಟಿ, ಜೆಡಿಯು, ಬಿಆರ್‌ಎಸ್, ಸಿಪಿಎಂ, ಆರ್‌ಜೆಡಿ, ನ್ಯಾಷನಲ್ ಕಾಂಗ್ರೆಸ್ ಪಕ್ಷ, ಸಿಪಿಐ, ಇಂಡೀಯನ್ ಯುನಿಯನ್ ಮುಸ್ಲಿಂ ಲೀಗ್, ಎಮ್‌ಡಿಎಮ್‌ಕೆ, ಕೆಸಿ, ಟಿಎಂಸಿ, ಶಿವಸೇನಾ (ಉದ್ಧವ್ ಠಾಕ್ರೆ ಬಣ) ಹಾಗೂ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು.

2019ರ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯ ಅನರ್ಹತೆಯ ಬಗ್ಗೆ ತೃಣಮೂಲ ಕಾಂಗ್ರೆಸ್ ಪಕ್ಷವು ಆರಂಭದಲ್ಲಿ ಲೆಕ್ಕಾಚಾರದ ಮೌನವನ್ನು ವಹಿಸಿತ್ತು. ಬಿಜೆಪಿಯು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡಿರುವುದರ ವಿರುದ್ಧ ಪ್ರತಿಪಕ್ಷಗಳು ಒಂದಾಗಬೇಕು ಎನ್ನುವ ವ್ಯಾಪಕ ಕರೆಗಳು ಬಂದಾಗಲೂ ತೃಣಮೂಲ ಸದಸ್ಯರು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಕಾರ್ಯತಂತ್ರದ ಸಭೆಗಳಿಂದ ದೂರ ಉಳಿದಿದ್ದರು.

ಇದೀಗ ಬಿಜೆಪಿಯ ತೀವ್ರ ಟೀಕಾಕಾರರಾಗಿರುವ ತೃಣಮೂಲ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿದ್ದಾರೆ.

”ಪ್ರಧಾನಿ ಮೋದಿಯವರ ನವಭಾರತದಲ್ಲಿ, ವಿರೋಧ ಪಕ್ಷದ ನಾಯಕರು ಬಿಜೆಪಿಯ ಪ್ರಧಾನ ಗುರಿಯಾಗಿದ್ದಾರೆ! ಕ್ರಿಮಿನಲ್ ಹಿನ್ನಲೆ ಹೊಂದಿರುವ ಬಿಜೆಪಿ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ ಅದೇ, ವಿರೋಧ ಪಕ್ಷದ ನಾಯಕರನ್ನು ಅವರ ಭಾಷಣದ ಕಾರಣಕ್ಕಾಗಿ ಅನರ್ಹಗೊಳಿಸಲಾಗಿದೆ. ಇಂದು, ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಹೊಸ ಕುಸಿತಕ್ಕೆ ನಾವು ಸಾಕ್ಷಿಯಾಗಿದ್ದೇವೆ” ಎಂದು ಬ್ಯಾನರ್ಜಿ ಹೇಳಿದಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...