ಮೋದಿ ಸರ್ನೇಮ್ ಕುರಿತಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆ ವಿರೋಧಿಸಿ ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಅವರು, ಗಾಂಧಿ ಕುಟುಂಬದ ಮೇಲೆ ವೈಯಕ್ತಿಕ ದಾಳಿ ನಡೆಸುವ ಮೂಲಕ ಕೀಳುಮಟ್ಟದ ಮಾತುಗಳನ್ನಾಡಿದ್ದಾರೆ.
ಮಂಗಳವಾರ ಎನ್ಡಿಟಿವಿ ಜೊತೆ ಮಾತನಾಡಿದ ಬಿಜೆಪಿ ಸಂಸದ ಜೈಸ್ವಾಲ್, ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ”ವಿದೇಶಿ ಮಹಿಳೆಗೆ ಹುಟ್ಟಿದ ವ್ಯಕ್ತಿ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ, ಅದು 2,000 ವರ್ಷಗಳ ಹಿಂದಿನ ಚಾಣಕ್ಯನ ಮಾತುಗಳು” ಎಂದು ಹೇಳಿದ್ದಾರೆ.
”ಭೋಪಾಲ್ನ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮಾರ್ಚ್ 11 ರಂದು ಇದೇ ಹೇಳಿಕೆಯನ್ನು ನೀಡಿದ್ದರು. ರಾಹುಲ್ ಅವರನ್ನು ದೇಶದಲ್ಲಿ ರಾಜಕೀಯ ಮಾಡಲು ಬಿಡಬಾರದು ಮತ್ತು ಅವರನ್ನು ಭಾರತದಿಂದ ಹೊರಹಾಕಬೇಕು. ರಾಹುಲ್ ಗಾಂಧಿ ಭಾರತದವರಲ್ಲ ಎಂಬುದನ್ನು ಪ್ರಜ್ಞಾ ಸಿಂಗ್ ಠಾಕೂರ್ ಕೂಡ ಒಪ್ಪುತ್ತಾರೆ” ಎಂದು ಬಿಜೆಪಿ ಸಂಸದ ಜೈಸ್ವಾಲ್ ಹೇಳಿದ್ದಾರೆ.
”ನೀವು (ರಾಹುಲ್) ಭಾರತದವರಲ್ಲ ಎಂದು ನಮಗೆ ತಿಳಿದಿದೆ… ವಿದೇಶಿ ಮಹಿಳೆಯಿಂದ ಹುಟ್ಟಿದ ಮಗ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳಿದ್ದರು. ಅದನ್ನ ಈಗ ರಾಹುಲ್ ಗಾಂಧಿ ಸಾಬೀತುಪಡಿಸಿದ್ದಾರೆ” ಎಂದು ಜೈಸ್ವಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಲಂಡನ್ನಲ್ಲಿ ಮಾತನಾಡುವ ವೇಳೆ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಟೀಕೆ ಮಾಡಿದ್ದನ್ನು ಉಲ್ಲೇಖಿಸಿ, ”ಅವರು ವಿದೇಶದಲ್ಲಿ ನಿಂತು ನಮ್ಮ ದೇಶವನ್ನು ಅವಮಾನಿಸಿದ್ದಾರೆ. ನಮ್ಮ ಪ್ರಜಾಪ್ರಭುತ್ವ, ನ್ಯಾಯಾಲಯಗಳು ಮತ್ತು ಪತ್ರಕರ್ತರು ಸರಿಯಾಗಿ ಕಾರ್ಯನಿರ್ವಹಿಸಲ್ಲ ಎಂದು ನೀವು ಹೇಳಿದರೆ ನೀವು ಭಾರತವನ್ನು ನಂಬುವುದಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದರು.
ವಯನಾಡ್ನ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಈಗ “ಸಾಮಾನ್ಯ ಅಪರಾಧಿ” ಎಂದು ಜೈಸ್ವಾಲ್ ಕರೆದಿದ್ದಾರೆ.
”ಅವರು ಪ್ರಧಾನಿ ಮೋದಿಯವರೊಂದಿಗೆ ಅಸಮಾಧಾನಗೊಂಡಿದ್ದಾರೆ ಏಕೆಂದರೆ ಅವರು ತಮ್ಮನ್ನು ತಾವು ರಾಜಕುಮಾರ ಎಂದು ತಿಳಿದುಕೊಂಡಿದ್ದಾರೆ. ಆದರೆ ದೇಶದಲ್ಲಿ ಕಳೆದ ಎರಡು ಅವಧಿಗಳಿಂದ ಪ್ರಧಾನಿ ಮೋದಿ ಅವರು ಬಹುಮತದ ಸರ್ಕಾರವನ್ನು ರಚಿಸುತ್ತಿದ್ದಾರೆ” ಎಂದು ಹೇಳಿದರು.
”ರಾಹುಲ್ ಗಾಂಧಿ ಅವರು ಒಬಿಸಿ ಸಮುದಾಯಗಳ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ ಸಂಜಯ್ ಜೈಸ್ವಾಲ್ ಅವರು, ರಾಹುಲ್ ಹೋದಲ್ಲೆಲ್ಲಾ ಒಬಿಸಿಗಳ ಕೋಪವನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.