ವಿಚಾರಣಾ ನ್ಯಾಯಾಲಯದ ಆದೇಶವನ್ನು ವಜಾ ಮಾಡಿರುವ ದೆಹಲಿ ಹೈ ಕೋರ್ಟ್, ಶಾರ್ಜೀಲ್ ಇಮಾಮ್ ಸೇರಿ 11 ಜನರ ಮೇಲೆ ಜಾಮಿಯಾ ಹಿಂಸಾಚಾರ ಪ್ರಕರಣವನ್ನು ಮರುಸ್ಥಾಪಿಸಿದೆ.
ನವ ದೆಹಲಿಯ ಜಾಮಿಯಾ ಪ್ರದೇಶದಲ್ಲಿ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪದಲ್ಲಿ ಜೆಎನ್ಯು ವಿದ್ಯಾರ್ಥಿ ಶಾರ್ಜೀಲ್ ಇಮಾಮ್, ಆಸಿಫ್ ಇಕ್ಬಾಲ್ ತನ್ಹ, ಸಫೂರ ಜರ್ಗರ್ ಸೇರಿ ಇತರರ ವಿರುದ್ಧದ ಪ್ರಕರಣವನ್ನು ದೆಹಲಿ ನ್ಯಾಯಾಲಯ ಫೆಬ್ರವರಿ 4ರಂದು ರದ್ದುಗೊಳಿಸಿತ್ತು. ಅದನ್ನು ಹೈಕೋರ್ಟ್ ವಜಾಗೊಳಿಸಿದ್ದು, ಅವರ ಮೇಲಿನ ಗಲಭೆ, ಕಾನೂನುಬಾಹಿರ ಸಭೆ ಇತ್ಯಾದಿ ಆರೋಪಗಳಿಗೆ ಮರು ಜೀವ ನೀಡಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನಿರಾಕರಿಸದಿದ್ದರೂ, ಈ ನ್ಯಾಯಾಲಯವು ತನ್ನ ಕರ್ತವ್ಯದ ಬಗ್ಗೆ ತಿಳಿದಿದ್ದು, ಅದರಂತೆಯೇ ಸಮಸ್ಯೆಯನ್ನು ನಿರ್ಧರಿಸಲು ಪ್ರಯತ್ನಿಸಿದೆ. ಶಾಂತಿಯುತ ಸಭೆಯ ಹಕ್ಕು ನಿರ್ಬಂಧಕ್ಕೆ ಒಳಪಟ್ಟಿರುತ್ತದೆ. ಆಸ್ತಿಪಾಸ್ತಿ ಹಾನಿ ಮತ್ತು ಶಾಂತಿ ಭಂಗ ತರುವುದು ಒಳ್ಳೆಯದಲ್ಲ ಎಂದು ಹೈಕೋರ್ಟ್ನ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಹೇಳಿದ್ದಾರೆ.
ಫೆಬ್ರವರಿ 04 ರಂದು, ಸಾಕೇತ್ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅರುಲ್ ವರ್ಮಾ ಅವರು, “ನಿಜವಾದ ದುಷ್ಕರ್ಮಿಗಳನ್ನು ಬಂಧಿಸಲು ಪ್ರಾಸಿಕ್ಯೂಷನ್ಗೆ ಸಾಧ್ಯವಾಗಲಿಲ್ಲ. ಆದರೆ ಅಮಾಯಕರನ್ನು ಆರೋಪಿಗಳೆಂದು ತೋರಿಸಿ ಬಲಿಪಶು ಮಾಡಲಾಗುತ್ತಿದೆ. ಭಿನ್ನಾಭಿಪ್ರಾಯವು ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ವಿಸ್ತರಣೆಯಾಗಿದೆ” ಎಂದು ತೀರ್ಪು ನೀಡಿದ್ದರು.
ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು. ಫೆಬ್ರವರಿ 13 ರಂದು ನ್ಯಾಯಮೂರ್ತಿ ಶರ್ಮಾ ಅವರ ಮುಂದೆ ವಿಚಾರಣೆ ಬಂದಾಗ, ವಿಚಾರಣಾ ನ್ಯಾಯಾಲಯದ ಹೇಳಿಕೆಗಳು ಪ್ರಕರಣದ ನಡೆಯುತ್ತಿರುವ ತನಿಖೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದರು.
2019ರ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಜಾರಿ ವಿರೋಧಿಸಿ ವಿದ್ಯಾರ್ಥಿಗಳು ಜಾಮಿಯಾ ಮಿಲಿಯಾದಿಂದ ಸಂಸತ್ತಿನತ್ತ ಪಾದಯಾತ್ರೆ ಹೊರಟಾಗ ಹಿಂಸಾಚಾರ ಭುಗಿಲೆದ್ದಿತ್ತು. ಆ ಪ್ರಕರಣದಲ್ಲಿ 11 ವಿದ್ಯಾರ್ಥಿ ಮುಖಂಡರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
ಇದನ್ನೂ ಓದಿ: ಪಾನ್-ಆಧಾರ್ ಜೋಡಣೆ ಶುಲ್ಕವಾಗಿ 4,000 ಕೋಟಿ ರೂಗೂ ಅಧಿಕ ಸಂಗ್ರಹ