“ಮೋದಿ ಸರ್ಕಾರವು ಇತಿಹಾಸವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ. ಅವರು ಭವಿಷ್ಯದ ಬಗ್ಗೆ ಭಯಪಡುತ್ತಾರೆ ಜೊತೆಗೆ ವರ್ತಮಾನವನ್ನೂ ನಂಬುವುದಿಲ್ಲ” ಎಂದು ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಲೋಕಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾಷಣ ದೇಶದಲ್ಲಿ ಹೆಚ್ಚು ಚರ್ಚೆಗೆ ಬಂದ ಒಂದು ದಿನದ ಬಳಿಕ ಸಂಸದೆ ಮಹುವಾ ಮೊಯಿತ್ರಾ ತಮ್ಮ ಭಾಷಣದಲ್ಲಿ ಒಕ್ಕೂಟ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
80% ವರ್ಸಸ್ 20% ಜನರ ನಡುವಿನ ಯುದ್ಧವು ನಮ್ಮ ಗಣರಾಜ್ಯವನ್ನು ನಾಶಮಾಡುವ ಅಪಾಯಕ್ಕೆ ಈ ಸರ್ಕಾರ ದೂಡಿದೆ ಎಂದು ಒಕ್ಕೂಟ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ಸಂಸದೆಯ ಭಾಷಣ ಐತಿಹಾಸಿಕ ರೈತರ ಆಂದೋಲನ, ಮುಸ್ಲಿಂ ಮಹಿಳೆಯರನ್ನು ಹರಾಜು ಹಾಕಿದ್ದ ‘ಬುಲ್ಲಿ ಡೀಲ್ಸ್’ ಅಪ್ಲಿಕೇಶನ್ ಮತ್ತು ಪೆಗಾಸಸ್ ಸ್ಪೈವೇರ್ ವಿವಾದಗಳನ್ನು ಒಳಗೊಂಡಿತ್ತು.
ನರೇಂದ್ರ ಮೋದಿ ಸರ್ಕಾರದಿಂದ ಕಳೆದ ಕೆಲವು ವರ್ಷಗಳಲ್ಲಿ ನಡೆದಿರುವ ಹಲವಾರು ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಮಹುವಾ ಧ್ವನಿ ಎತ್ತಿದ್ದಾರೆ. ಭಾರತವು ಮಾನವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 160 ದೇಶಗಳಲ್ಲಿ 17 ಸ್ಥಾನಗಳನ್ನು ಕುಸಿದು 111 ನೇ ಸ್ಥಾನಕ್ಕೆ ಬಂದಿರುವ ಬಗ್ಗೆ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 180 ದೇಶಗಳಲ್ಲಿ 142 ನೇ ಸ್ಥಾನದಲ್ಲಿರುವುದು, ದೇಶವು ಇಂದು ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಒಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅದಾನಿ-ಮಮತಾ ಬ್ಯಾನರ್ಜಿ ಭೇಟಿ: ಅದಾನಿ ಕುರಿತ ತಮ್ಮ ಟ್ವೀಟ್ಗಳಿಗೆ ಬದ್ದ ಎಂದ ಮಹುವಾ ಮೊಯಿತ್ರಾ
“ಸರ್ಕಾರವು ತನ್ನ ಸ್ವಂತ ನಾಗರಿಕರ ಮೇಲೆ ವರ್ಷಗಳ ಕಾಲ ಕಣ್ಣಿಡಲು ತಂತ್ರಜ್ಞಾನವನ್ನು ಖರೀದಿಸಲು ತೆರಿಗೆದಾರರ ಹಣವನ್ನು ಖರ್ಚು ಮಾಡಿದೆ. ಇವರ ಪ್ರಕಾರ ಹೇಳುವುದಾದರೆ, ನ್ಯೂಯಾರ್ಕ್ ಟೈಮ್ಸ್ ಸುಳ್ಳು ಹೇಳುತ್ತಿದೆ, ದಿ ವೈರ್ ಸುಳ್ಳು ಹೇಳುತ್ತಿದೆ, ಆಮ್ನೆಸ್ಟಿ ಸುಳ್ಳು ಹೇಳುತ್ತಿದೆ, ಫ್ರೆಂಚ್ ಸರ್ಕಾರ ಸುಳ್ಳು ಹೇಳುತ್ತಿದೆ, ಜರ್ಮನ್ ಸರ್ಕಾರ ಸುಳ್ಳು ಹೇಳುತ್ತಿದೆ, ಯುಎಸ್ ಸರ್ಕಾರ ಸುಳ್ಳು ಹೇಳುತ್ತಿದೆ, NSO ವಿರುದ್ಧ ಮೊಕದ್ದಮೆ ಹೂಡಿರುವ WhatsApp ಮತ್ತು Apple ಸುಳ್ಳು ಹೇಳುತ್ತಿದೆ. ಆದರೆ, ಈ ಸರ್ಕಾರ ಮಾತ್ರ ಪೆಗಾಸಸ್ನ ಸತ್ಯ ತಿಳಿದಿದೆ. ಈ ಸರ್ಕಾರ ಸುಪ್ರೀಂ ಕೋರ್ಟ್ನನ್ನೂ ದಾರಿ ತಪ್ಪಿಸಿದೆ” ಎಂದು ಕಿಡಿ ಕಾರಿದ್ದಾರೆ.
Such fear, such shamelesness. I had only paragraph left to finish, my alloted time of 13 mins was NOT over pic.twitter.com/Xy9PX7BHYE
— Mahua Moitra (@MahuaMoitra) February 3, 2022
ಚುನಾವಣೆಗೆ ಮುನ್ನ ವಿರೋಧ ಪಕ್ಷದ ನಾಯಕರ ಮೇಲೆ ದಾಳಿಗಳು, ಹಿಂದೂ ಮೂಲಭೂತವಾದಿಗಳಿಂದ ಮುಸ್ಲಿಮರನ್ನು ಗುರಿಯಾಗಿಸುವುದು. ದೇಶದ 19 ಪಟ್ಟಣಗಳಲ್ಲಿ ಅದೇ ಗುಂಪುಗಳಿಂದ ಕ್ರಿಶ್ಚಿಯನ್ನರ ಮೇಲೆ ಇತ್ತೀಚಿಗೆ ನಡೆಸಿದ ದಾಳಿಗಳು. ಹರಿದ್ವಾರದ ಧರ್ಮ ಸಂಸದ್ನಲ್ಲಿ ಮುಸ್ಲಿಮರ ನರಹತ್ಯೆಗೆ ಕರೆ. ಐಎಎಸ್ ಕೇಡರ್ ನಿಯಮಗಳನ್ನು ಬದಲಾಯಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹುವಾ ಭಾಷಣಕ್ಕೆ ಪ್ರತಿಕ್ರಿಯಿಸಿ ಸಂಸದೆ ರಮಾ ದೇವಿ, ದಯವಿಟ್ಟು ಮೃದುವಾಗಿ ಮಾತನಾಡಿ, ಕೋಪಗೊಳ್ಳಬೇಡಿ. ಒಳ್ಳೆಯ ರೀತಿಯಲ್ಲಿ ಹೇಳಿ (ಮಹುವಾ ಜೀ, ಥೋಡಾ ಸಾ ಪ್ರೇಮ್ ಸೆ ಬೋಲಿಯೇ. ಇತ್ನಾ ಗುಸ್ಸಾ ಮತ್ ಕರಿಯಾ. ಆಚೆ ಸೆ ಬೋಲಿಯೇ) ಎಂದಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದೆ ,”ನಾನು ಕೋಪ ಅಥವಾ ಪ್ರೀತಿಯಿಂದ ಮಾತನಾಡಬೇಕು ಎಂದು ನನಗೆ ಉಪನ್ಯಾಸ ನೀಡಲು, ನನಗೆ ಅಡ್ಡಿಪಡಿಸಲು ಅಧ್ಯಕ್ಷರು ಯಾರು..? ಇದಕ್ಕೂ ನಿಮಗೂ ಸಂಬಂಧವಿಲ್ಲ. ನೀವು ಲೋಕಸಭೆಯ ನೈತಿಕ ವಿಜ್ಞಾನ ಶಿಕ್ಷಕರಲ್ಲ” ಎಂದು ಹರಿಹಾಯ್ದಿದ್ದಾರೆ.
ಇನ್ನು ಸಂಸದೆಯ ಭಾಷಣ ಮಧ್ಯದಲ್ಲಿರುವಾಗಲೇ ಲೋಕಸಭೆಯ ಅಧ್ಯಕ್ಷೆ, ಬಿಜೆಪಿ ಸಂಸದೆ ರಮಾ ದೇವಿ ನಿಗದಿತ ಸಮಯಕ್ಕಿಂತ ಮುಂಚೆಯೇ ಭಾಷಣವನ್ನು ಹಠಾತ್ ಆಗಿ ಮೊಟಕುಗೊಳಿಸಿದ್ದಾರೆ. ಇದರಿಂದ ಕೋಪಗೊಂಡ ಮಹುವಾ ಮೊಯಿತ್ರಾ ಲೋಕಸಭೆಯ ಹೊರಗೆ ಮಾಧ್ಯಮಗಳ ಮುಂದೆ ಭಾಷಣ ಮಾಡಿ, ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ವೈರಲ್ ವಿಡಿಯೊದಲ್ಲಿರುವ ಈ ಮಹಿಳೆ ಮುಸ್ಲಿಂ ಅಲ್ಲ, ಪಂಜಾಬಿ ಹಿಂದೂ