ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪೇಂದ್ರ ಸಿಂಗ್ ಹನಿ ಎಂಬುವವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ತನಿಖಾ ಸಂಸ್ಥೆ ಭೂಪೇಂದ್ರ ಸಿಂಗ್ ಹನಿಯವರನ್ನು ನಿನ್ನೆ ಸಂಜೆ ಕಸ್ಟಡಿಗೆ ತೆಗೆದುಕೊಂಡಿದ್ದು, ಇಂದು ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯ ನಿಬಂಧನೆಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಚುನಾವಣೆ ನಡೆಯಲು ಕೆಲವೇ ದಿನಗಳಿರುವಾಗ ಈ ಘಟನೆ ನಡೆದಿದೆ. ಈ ಹಿಂದೆ ದಾಳಿ ನಡೆಸಿದಾಗಲೂ ಒಕ್ಕೂಟ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ.
ಕಳೆದ ತಿಂಗಳು ಭೂಪೇಂದ್ರ ಸಿಂಗ್ ಹನಿಗೆ ಸೇರಿದ್ದ ಹಲವು ಜಾಗಗಳಲ್ಲಿ ಇಡಿ ದಾಳಿ ನಡೆಸಿ 8 ಕೋಟಿ ರೂಪಯಿ ವಶಪಡಿಸಿಕೊಂಡಿತ್ತು. ಪಂಜಾಬ್ನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಈ ದಾಳಿ ನಡೆದಿತ್ತು.
ಇದನ್ನೂ ಓದಿ: ಸಿಧು ಅಥವಾ ಚನ್ನಿ? ಫೆಬ್ರವರಿ 6 ರಂದು ಪಂಜಾಬ್ ಸಿಎಂ ಅಭ್ಯರ್ಥಿ ಘೋಷಿಸುವ ಕಾಂಗ್ರೆಸ್
#WATCH | Punjab CM Charanjit Singh Channi's nephew Bhupinder Singh Honey arrested by Enforcement Directorate (ED) from Jalandhar on Thursday evening following day-long questioning in an illegal sand mining case: Sources pic.twitter.com/6ciwmY1mhX
— ANI (@ANI) February 4, 2022
‘ಅಕ್ರಮ’ ಮರಳು ಗಣಿಗಾರಿಕೆ ಮತ್ತು ಆಸ್ತಿ ವಹಿವಾಟಿಗೆ ಸಂಬಂಧಿಸಿದ ದೋಷಪೂರಿತ ದಾಖಲೆಗಳು, ಮೊಬೈಲ್ ಫೋನ್ಗಳು, 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು 12 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.
2018 ರಲ್ಲಿ ಗಣಿಗಾರಿಕೆ ಅಧಿಕಾರಿಯ ದೂರಿನ ಮೇರೆಗೆ ಪಂಜಾಬ್ ಪೊಲೀಸರು ಅಕ್ರಮ ಮರಳು ಗಣಿಗಾರಿಕೆ ಪ್ರಕರಣವನ್ನು ದಾಖಲಿಸಿದ್ದಾರೆ. ಗಣಿ ಮತ್ತು ಖನಿಜಗಳ (ಅಭಿವೃದ್ಧಿ ನಿಯಂತ್ರಣ) ಕಾಯಿದೆ, 1957 ರ ಸೆಕ್ಷನ್ 21 (1) ಮತ್ತು 4 (1) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379, 420, 465, 467, 468 ಮತ್ತು 471 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ 26 ಆರೋಪಿಗಳಿದ್ದು, ಅವರಲ್ಲಿ ಹೆಚ್ಚಿನವರು ಟ್ರಕ್ ಚಾಲಕರಾಗಿದ್ದಾರೆ.
ನಂತರ ಪ್ರಕರಣದಲ್ಲಿ ವಂಚನೆಯ ಆರೋಪಗಳನ್ನು ಸೇರಿಸಲಾಯಿತು. ಇದರ ಆಧಾರದ ಮೇಲೆ ಇಡಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ ಕುದ್ರತ್ದೀಪ್ ಸಿಂಗ್ ಎಂಬಾತನ ಹೆಸರು ಹೊರಬಿದ್ದಿದ್ದು, ಆತನನ್ನು ಏಜೆನ್ಸಿ ವಿಚಾರಣೆಗೊಳಪಡಿಸಿದಾಗ ಭೂಪಿಂದರ್ ಸಿಂಗ್ ಹನಿ ಹೆಸರು ಹೊರ ಬಂದಿದೆ. ಅಕ್ರಮ ಗಣಿಗಾರಿಕೆ ನಡೆಸಲು ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಹೆಸರನ್ನು ಬಳಸಲಾಗಿದೆಯೋ ಇಲ್ಲವೋ ಎಂಬುದು ತನಿಖೆಯಿಂದ ಹೊರ ಬರಬೇಕಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಂಜಾಬ್: ಸೋದರಳಿಯನ ಮನೆ ಮೇಲೆ ಇಡಿ ದಾಳಿ, ಪ್ರಜಾಪ್ರಭುತ್ವಕ್ಕೆ ಮಾರಕ ಎಂದ ಸಿಎಂ ಚರಣ್ಜಿತ್ ಸಿಂಗ್ ಚನ್ನಿ