Homeಅಂಕಣಗಳುಶೇ.10ರಷ್ಟು ಮೀಸಲಾತಿಗೆ ಉದ್ಯೋಗಗಳೆಲ್ಲಿವೆ?

ಶೇ.10ರಷ್ಟು ಮೀಸಲಾತಿಗೆ ಉದ್ಯೋಗಗಳೆಲ್ಲಿವೆ?

- Advertisement -
- Advertisement -

ಅನು: ಶಿವಸುಂದರ್
ಕೃಪೆ: Economic and Political
Weekly, Jan 12, 2019. Vol. 54. No.2 |

ಕೇಂದ್ರ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ಶೇ.10 ಮೀಸಲಾತಿಯೂ ಒಳಗೊಂಡಂತೆ ಕೈಗೊಂಡಿರುವ ಇತರ ಉದ್ಯೋಗ ರಕ್ಷಣಾ ಕ್ರಮಗಳು 19ನೇ ಶತಮಾನದ ಬಂಗಾಳಿ ದ್ವಿಪದಿಯೊಂದರಲ್ಲಿರುವ ಕಾಲ್ನಡಿಗೆ ಸಾಧನವೊಂದನ್ನು ನೆನಪಿಸುತ್ತದೆ. ಅ ಸಾಧನವು ತನ್ನನ್ನು ತೊಟ್ಟಿರುವ ಹೆಗಲಿಗೆ ಬೆಸೆದುಕೊಂಡು ಮುಂದೆ ಒಂದು ಕ್ಯಾರಟ್ಟನ್ನು ಇಳಿಬಿಟ್ಟಿರುತ್ತದೆ. ಇದರಿಂದಾಗಿ ಅದನ್ನು ಹೊತ್ತುಕೊಂಡಿರುವವರು ಕ್ಯಾರೆಟ್ಟನ್ನು ಪಡೆದುಕೊಳ್ಳುವ ಸಲುವಾಗಿ ಮೈಲುಗಟ್ಟಲೇ ದೂರವನ್ನು ನಿಮಿಷಗಳಲ್ಲಿ ಕ್ರಮಿಸುವಂತೆ ಮಾಡುತ್ತದೆ. ಆದರೆ ಎಷ್ಟೇ ವೇಗವಾಗಿ ನಡೆದರೂ ಆ ಕ್ಯಾರೆಟ್ಟು ಮಾತ್ರ ಆ ಸಾಧನವನ್ನು ಹೊತ್ತುಕೊಂಡವನಿಂದ ಸಮಾನ ದೂರದಲ್ಲೆ ಇರುತ್ತದೆಯೇ ವಿನಃ ಬಾಯಿಗೆಟುಕುವುದಿಲ್ಲ. ಉದಾಹರಣೆಗೆ ಉದ್ಯೋಗಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ಜಾತಿಗಳಿಗೆ ನೀಡಲಾದ ಶೇ.10 ಮೀಸಲಾತಿ ನೀತಿಯನ್ನೇ ಗಮನಿಸಿ. ಅದು ಹುಟ್ಟುಹಾಕಿರುವ ರಾಜಕೀಯ ಕೋಲಾಹಲವನ್ನು ಗಮನಿಸಿದಲ್ಲಿ ಒಂದು ರಾಜಕೀಯ ತಂತ್ರೋಪಾಯವಾಗಿ ಅದರ ಪರಿಣಾಮಕತೆಯನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಲಾಗದ ಅದರ ಪೆÇಳ್ಳುತನವನ್ನೂ ಸಹ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಯಾವ ರೀತಿಯಲ್ಲಿ ಬಂಗಾಳಿ ದ್ವಿಪದಿಯಲ್ಲಿನ ಬಡಪಾಯಿಯು ಎದುರಿಗಿರುವ ಕ್ಯಾರೆಟ್ಟನ್ನು ಪಡೆದು ತನ್ನ ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅದೇ ರೀತಿಯಲ್ಲಿ ಇತ್ತೀಚಿನ ಈ ಶೇ.10 ಕೋಟಾ ಸಹ ಉದ್ಯೋಗವನ್ನು ಒದಗಿಸಲಾರದು.
ಉದ್ಯೋಗಾವಕಾಶಗಳು ಎಲ್ಲಿವೆ? ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ಭಾರತದ ಉದ್ಯೋಗ ಮಾರುಕಟ್ಟೆಯ ಪರಿಸ್ಥಿತಿ ನಿರಾಶಾದಾಯಕವಾಗಿದೆ; ಮೊದಲನೆಯದಾಗಿ 2018ರ ಡಿಸೆಂಬರ್ ವೇಳೆಗೆ ಭಾರತದ ನಿರುದ್ಯೋಗ ದರವು ಶೇ.7.4ಕ್ಕೇರಿದ್ದು ಕಳೆದ 15 ತಿಂಗಳಲ್ಲೇ ಅತಿ ಹೆಚ್ಚಿನ ಮಟ್ಟವನ್ನು ಮುಟ್ಟಿದೆ; ಎರಡನೆಯದಾಗಿ 2017 ಮತ್ತು 2018ರಲ್ಲಿ ಕೆಲಸ ಕಳೆದುಕೊಂಡ ಸುಮಾರು 1.1 ಕೋಟಿಯಷ್ಟು ಜನರು ಈ ನಿರುದ್ಯೋಗಿ ಪಡೆಯಲ್ಲಿ ಸೇರಿಕೊಂಡಿದ್ದಾರೆ; ಮತ್ತು ಮೂರನೆಯದಾಗಿ ನಿರುದ್ಯೋಗದ ಪ್ರಮಾಣವು ಆರ್ಥಿಕವಾಗಿ ತ್ರಾಣ ರಹಿತವಾಗುತ್ತಿರುವ ಕ್ಷೇತ್ರ ಮತ್ತಿದು ಸಮುದಾಯಗಳಲ್ಲಿ ಹೆಚ್ಚಾಗಿದೆ. ಉದಾಹರಣೆಗೆ ಈಗಾಗಲೇ ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಗ್ರಾಮೀಣ ಕ್ಷೇತ್ರದಲ್ಲಿ ಶೇ.82ರಷ್ಟು ಉದ್ಯೋಗಗಳು ನಷ್ಟವಾಗಿದ್ದು, ನಿರುದ್ಯೋಗದ ಶೇ.80ರಷ್ಟು ಹೊರೆ ಮಹಿಳೆಯರ ಮೇಲಿದೆ. ವಿಪರ್ಯಾಸವೆಂದರೆ ಭಾರತೀಯ ಜನತಾ ಪಕ್ಷದ ಹೊಸ “ಅತಂತ್ರರ” ರಾಜಕಾರಣದ ಮುಖ್ಯ ಗಮನವೂ ಇದೇ ಕ್ಷೇತ್ರ ಸಮುದಾಯಗಳ ಮೇಲಿದೆ.
ಸಿಎಂಐಇ ಸಂಸ್ಥೆಯು ತನ್ನ ಈ ಅಂಕಿಅಂಶಗಳು ತಾತ್ಕಾಲಿಕವಾದದ್ದೆಂದು ಹೇಳಿದ್ದರೂ ಅಂತಿಮ ವರದಿಯಲ್ಲು ದೇಶದ ಒಟ್ಟಾರೆ ಪರಿಸ್ಥಿತಿ ಇದಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಸರ್ಕಾರಿ ಕ್ಷೇತ್ರದಲ್ಲಿನ ನೇಮಕಾತಿ ಆಮೆಗತಿಯಲ್ಲಿದೆ; ಅಷ್ಟಲ್ಲದೆ ಭರ್ತಿಯಾಗದೆ ಉಳಿದುಕೊಂಡಿರುವ ಬ್ಯಾಕ್‍ಲಾಗ್ ಹುದ್ದೆಗಳ ಮೂರನೇ ಒಂದು ಭಾಗದಷ್ಟು ಹುದ್ದೆಗಳು “ಮೀಸಲು”ವರ್ಗಕ್ಕೆ ಸೇರಿವೆ; ಅದೇ ಸಮಯದಲ್ಲಿ ಉದ್ಯೋಗಾವಕಾಶಗಳ ಪ್ರಮುಖ ಮೂಲವಾಗಿದ್ದ ಅಸಂಘಟಿತ ಮತ್ತು ಅನೌಪಚಾರಿಕ ಕ್ಷೇತ್ರಗಳು ನೋಟು ರದ್ಧತಿ ಮತ್ತು ಜಿಎಸ್‍ಟಿಯೆಂಬ ಅವಳಿ ಸರ್ಜಿಕಲ್ ದಾಳಿಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇಂಥಾ ಸಂದರ್ಭದಲ್ಲಿ ಮೀಸಲಾತಿಯು ಶೇ. 50ರ ಮಿತಿ ಮೀರಬಾರದೆಂಬ ಸುಪ್ರೀಂ ಕೋರ್ಟಿನ ನಿರ್ದೇಶನಗಳನ್ನು ಉಲ್ಲಂಘಿಸಿ ಕೇಂದ್ರ ಸರ್ಕಾರವು ಘೋಷಿಸಿರುವ ಶೇ.10ರ ಮೀಸಲಾತಿಯು ಬಿಜೆಪಿಗೆ ತನ್ನ ಚುನಾವಣಾ ಮಿತ್ರರನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗಬಹುದು. ಹಾಗೆಯೇ ಹಿಂದಿ ಹೃದಯಭಾಗದಲ್ಲಿ ನಡೆದ 2018ರ ಶಾಸನಾಸಭಾ ಚುನಾವಣೆಗಳಲ್ಲಿ ತಾನು ಕಳೆದುಕೊಂಡ “ದುರ್ಬಲ” ಮತದಾರರ ನಡುವೆ ತನ್ನ ಬಗ್ಗೆ ಒಂದಷ್ಟು ಸದಭಿಪ್ರಾಯವನ್ನು ಗಳಿಸಿಕೊಳ್ಳಬಹುದು. ಆದರೆ ವಾಸ್ತವದಲ್ಲಿ ಅದು ಅತಂತ್ರ ಮತ್ತು ನಿತ್ರಾಣ ಮತದಾರರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಮೀಸಲಾತಿಯಿಂದ ಹೊರಗುಳಿದ ಅರ್ಧಕ್ಕಿಂತ ಕಡಿಮೆ ಉದ್ಯೋಗಗಳಿಗಾಗಿ ಎಷ್ಟೋ ಪಟ್ಟು ಅಧಿಕ ಉದ್ಯೋಗಾಕಾಂಕ್ಷಿಗಳು ಸ್ಪರ್ಧಿಸುತ್ತಿದ್ದು ಮೀಸಲಾತಿಯ ಫಲಾನುಭವಿಗಳಿಗೆ ಅದರಿಂದ ಯಾವ ಲಾಭವೂ ಸಿಗುವುದಿಲ್ಲ.
ಇಂದಿನ ರಾಜಕೀಯ ಪರಿಭಾಷೆಗಳಲ್ಲಿ ಹೆಚ್ಚು ಬಳಕೆಯಾಗುವ “ಯುವಕರ ಆಶೋತ್ತರಗಳು” ಎಂಬ ಶಬ್ಧದ ಬಗೆಗೆ ರಾಜಕಾರಣಿಗಳಲ್ಲಿ ಅರೆಮನಸ್ಸಿನ ತಿಳವಳಿಕೆಯಿದೆ. ಮತ್ತದು ಉದ್ಯೋಗಾವಕಾಶಗಳ ಹೆಸರಲ್ಲಿ ಒಂದಷ್ಟು ಪಕೋಡಾಗಳನ್ನು ಎಸೆದರೆ, ಅಥವಾ ಒಂದಷ್ಟು ಹೀನಾಯ ಉದ್ಯೋಗವನ್ನು ನೀಡಿದರೆ ಯುವಜನರ ಬೆಂಬಲ ಪಡೆಯಬಹುದೆಂಬ ಸಂವೇದನಾ ರಹಿತ ಗ್ರಹಿಕೆಗಳಿವೆ. ಉದ್ಯೋಗ ಮಾರುಕಟ್ಟೆಯಲ್ಲಿ ಯುವಜನರ ಸಕ್ರಿಯ ಮತ್ತು ಸ್ವಕೀಯ ಪಾತ್ರವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುವ ಮೂಲಕ ವಾಸ್ತವದಲ್ಲಿರುವ ಅರೆಉದ್ಯೋಗದ ಸಮಸ್ಯೆಯ ಬಗ್ಗೆ ಕುರುಡು ಪ್ರದರ್ಶಿಸುತ್ತಿದೆ.
ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‍ಒ)ಯು 2018ರಲ್ಲಿ ಹೊರತಂದಿರುವ “ವರ್ಲ್ಡ್ ಎಂಪ್ಲಾಯ್‍ಮೆಂಟ್ ಅಂಡ್ ಸೋಷಿಯಲ್ ಔಟ್‍ಲುಕ್” (ಜಾಗತಿಕ ಉದ್ಯೋಗ ಮತ್ತು ಸಾಮಾಜಿಕ ದರ್ಶನ) ವರದಿಯು ಭಾರತದ ಶೇ.80ರಷ್ಟು ಉದ್ಯೋಗಗಳನ್ನು ಅಭದ್ರವೆಂದು ಪರಿಗಣಿಸಿದೆ. ಅದರಲ್ಲಿ ಕೇವಲ ಶೇ.20 ಭಾಗದಷ್ಟು ಉದ್ಯೋಗಿಗಳು ಮಾತ್ರ ನಿಯಮಿತವಾಗಿ ಸಂಬಳ ಪಡೆಯುವ ಉದ್ಯೋಗಿಗಳಾಗಿದ್ದು ಇನ್ನುಳಿದ ಶೇ.40ರಷ್ಟು ಉದ್ಯೋಗಿಗಳು ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದೇವೆಂಬ ಅಭಿಪ್ರಾಯವನ್ನೇ ಹೊಂದಿದ್ದಾರೆ. 2018ರಲ್ಲಿ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು ಹೊರತಂದಿರುವ “ಸ್ಟೇಟ್ ಆಫ್ ವರ್ಕಿಂಗ್ ಇನ್ ಇಂಡಿಯಾ” (ಭಾರತದ ಕೆಲಸ ಮಾಡುವ ಪರಿಸ್ಥಿತಿ) ವರದಿಯು ಸೌಲಭ್ಯರಹಿತ ಕೆಲಸಗಾರರ ತುಲನಾತ್ಮಕ ವರದಿಯನ್ನು ನೀಡಿದ್ದು ಅಸಂಘಟಿತ ಕ್ಷೇತ್ರದಲ್ಲಿನ ಕಡಿಮೆ ವೇತನದ ಸಮಸ್ಯೆ ಹೇಳತೀರದಾಗಿದ್ದರೂ ಸಂಘಟಿತ ಕ್ಷೇತ್ರದಲ್ಲೂ ಸಹ ಆ ಸಮಸ್ಯೆ ಮುಂದುವರೆದಿದೆ ಎಂಬ ಸಂಗತಿಯನ್ನು ಹೊರಹಾಕಿದೆ. ಶೇ.3ರಷ್ಟು ಹಣದುಬ್ಬರದ ಏರಿಕೆಯ ಲೆಕ್ಕಾಚಾರಕ್ಕೆ ತಕ್ಕಂತೆ ಕೂಲಿ ದರವನ್ನು ಹೊಂದಾಣಿಕೆ ಮಾಡಿ ನೋಡಿದಾಗಲೂ, 2015ರಲ್ಲಿ ವಿಶೇಷವಾಗಿ ಸರ್ಕಾರೇತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಶೇ.82ರಷ್ಟು ಪುರುಷರೂ ಮತ್ತು ಶೇ.92ರಷ್ಟು ಮಹಿಳೆಯರು ಏಳನೇ ವೇತನ ಅಯೋಗ ನಿಗದಿಗೊಳಿಸಿದ ಕನಿಷ್ಟ ವೇತನಕ್ಕಿಂತ ಶೇ.40ರಷ್ಟು ಕಡಿಮೆ ವೇತನವನ್ನು ಪಡೆಯುತ್ತಿದ್ದರು. ಅದೆರ ಜೊತೆಜೊತೆಗೆ ಕಾರ್ಮಿಕ ಉತ್ಪಾದಕತೆಗೂ ಮತ್ತು ವೇತನಕ್ಕೂ ಇರುವ ಅಂತರ ಹೆಚ್ಚಾಗುತ್ತಲೇ ಇದೆ. ಉದಾಹರಣೆಗೆ ಕಳೆದ ಮೂರು ದಶಕಗಳಲ್ಲಿ ಸಂಘಟಿತ ಉತ್ಪಾದಕ ಕ್ಷೇತ್ರದಲ್ಲಿನ ಕಾರ್ಮಿಕ ಉತ್ಪಾದಕತೆಯು ಆರು ಪಟ್ಟು ಹೆಚ್ಚಾಗಿದ್ದರೆ ಕೂಲಿ ದರವು ಮಾತ್ರ ಕೇವಲ ಒಂದೂವರೆ ಪಟ್ಟು ಮಾತ್ರ ಹೆಚ್ಚಾಗಿದೆ.
ಈ ಎಲ್ಲಾ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಭಾರತದಲ್ಲಿನ ಹಾಲಿ ನಿರುದ್ಯೋಗವು ಅದರಲ್ಲೂ ಯುವಜನರ ನಿರುದ್ಯೋಗದ ಪ್ರಮಾಣವು “ಭಾವಿ” ಪ್ರಮಾಣವೇ ಹೊರತು “ಹಾಲಿ”ಯಲ್ಲವೆಂದು ಕೆಲವರು ವಾದಿಸಬಹುದು. ಅಂದರೆ, ಈಗ ಹಾಲಿ ಇರುವ ಉದ್ಯೋಗಾವಕಾಶಗಳು ತಮ್ಮ ಆಶೋತ್ತರಗಳಿಗೆ ಪೂರಕವಾದ ವೇತನ ಮತ್ತು ಸೌಲಭ್ಯಗಳನ್ನು ನೀಡುವುದಿಲ್ಲ ಎಂದು ಭಾವಿಸುತ್ತಿರುವುದರಿಂದ ಯುವಜನರು ಉದ್ಯೋಗ ಅರಸುತ್ತಿಲ್ಲ ಎಂಬುದು ಆ ವಾದದ ಸಾರಾಂಶ. ಹೀಗೆ, ನಿಗದಿತ ವೇತನವಿರುವ ಅದರಲ್ಲೂ ಸರ್ಕಾರಿ ಉದ್ಯೋಗಗಳಿಗಾಗಿ ಯುವಜನರು ತೋರುವ ಆದ್ಯತೆಯೇ ನಿರುದ್ಯೋಗಕ್ಕೆ ಕಾರಣವೆಂದು ಹೇಳುತ್ತಾ ನಿರುದ್ಯೋಗದ ಹೊಣೆಗಾರಿಕೆಯನ್ನು ನಿರುದ್ಯೋಗಿಗಳ ಹೆಗಲಿಗೇ ವರ್ಗಾಯಿಸಿಬಿಡಬಹುದು. ಆದರೆ ಈ ವಾದದಿಂದ ವಾಸ್ತವದಲ್ಲಿರುವ ನಿರುದ್ಯೋಗ, ಅರೆ ಉದ್ಯೋಗ ಅಥವಾ ಭಾವಿ ನಿರುದ್ಯೋಗಗಳಿಗೂ ಮತ್ತು ಉದ್ಯೋಗ ಸೃಷ್ಟಿಯಾಗದಿರುವುದಕ್ಕೂ ಇರುವ ಬಲವಾದ ಸಂಬಂಧಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಅಲ್ಲದೆ ಆರ್ಥಿಕ ಅಭಿವೃದ್ಧಿಗೂ ಮತ್ತು ಉದ್ಯೋಗ ಸೃಷ್ಟಿಗೂ ಇರುವ ಸಂಬಂಧಗಳನ್ನು ದುರ್ಬಲಗೊಳಿಸುತ್ತಿರುವ ರಾಚನಿಕ ಕಾರಣಗಳನ್ನು ಗುರುತಿಸುವ ಮತ್ತು ಅದನ್ನು ನಿವಾರಿಸುವ ಹೊಣೆಗಾರಿಕೆ ಸರ್ಕಾರದ್ದೇ ಆಗಿದೆ. ಅದರ ಜೊತೆಜೊತೆಗೆ ಈಗಾಗಲೇ ನಿತ್ರಾಣಗೊಂಡು ಜರ್ಝರಿತವಾಗಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಮೀಸಲಾತಿಯನ್ನು, ಅಂದರೆ ಅತ್ಯಂತ ಅತಂತ್ರತೆಯ ಅಂಚಿನಲ್ಲಿರುವ ವ್ಯಕ್ತಿಯನ್ನು ರಕ್ಷಿಸುವ ಕ್ರಮವನ್ನು, ಹೆಚ್ಚಿಸುತ್ತಿರುವ ಕ್ರಮದ ಹಿಂದಿರುವ ಸರ್ಕಾರದ ಸೋಗಲಾಡಿತನವನ್ನೂ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ್ಲ.
ಹೆಚ್ಚೆಚ್ಚು ವಿದ್ಯಾಭ್ಯಾಸವನ್ನು ಪಡೆದವರ ನಡುವೆ ಇರುವ ಅತಿ ಹೆಚ್ಚು ನಿರುದ್ಯೋಗ ದರಕ್ಕೆ ಅವರÀ ಆಯ್ಕೆ ಮತ್ತು ಆದ್ಯತೆಗಳೇ ಕಾರಣ ಎಂದು ಸರ್ಕಾರವು ವಿವರಿಸಿ ಕೈತೊಳೆದುಕೊಳ್ಳುವ ಪ್ರಯತ್ನ ಮಾಡುತ್ತದೆ. ಅದೇನೇ ಇದ್ದರೂ ಅವರ ಆಯ್ಕೆಗಳು ನಿರ್ದಿಷ್ಟ ಪಥವನ್ನೇ ಅವಲಂಬಿಸುವಂತೆ ಮಾಡಿರುವ ಹೊಣೆಗಾರಿಕೆಯಿಂದ ಸರ್ಕಾರವು ನುಣುಚಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರವು ಮತದಾರರಿಗೆ ನೀಡುª ಮೀಸಲಾತಿಯಂಥ ಹುಸಿ ರಕ್ಷಣಾ ಕ್ರಮಗಳು ಭ್ರಮ ನಿರಸನಗಳನ್ನು ಹುಟ್ಟುಹಾಕುತ್ತದೆ. ಆದರೆ ಅದು ವ್ಯಗ್ರವಾಗದಂತೆ ನೋಡಿಕೊಳ್ಳಲು ಕೂಡಲೇ ದೊಡ್ಡ ದೊಡ್ಡ ಭರವಸೆಗಳನ್ನು ಘೋಷಿಸಲಾಗುತ್ತದೆ ಆದರೆ ಅದರೊಟ್ಟಿಗೆ ಜನರ ಅಭದ್ರತೆಯನ್ನು ಹೆಚ್ಚಿಸುವ ನೀತಿಗಳ ಬೆದರಿಕೆಯನ್ನೂ ಒಡ್ಡಲಾಗುತ್ತದೆ. ಇದು ಮತ್ತಷ್ಟು ಹುಸಿ ಭರವಸೆಗಳ ಘೋಷಣೆಗೆ ಜನರನ್ನು ಬಲಿ ಮಾಡುವ ರಾಜಕೀಯ ವಿಷಚಕ್ರಕ್ಕೆ ದೂಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...