Homeಅಂಕಣಗಳುಶೇ.10ರಷ್ಟು ಮೀಸಲಾತಿಗೆ ಉದ್ಯೋಗಗಳೆಲ್ಲಿವೆ?

ಶೇ.10ರಷ್ಟು ಮೀಸಲಾತಿಗೆ ಉದ್ಯೋಗಗಳೆಲ್ಲಿವೆ?

- Advertisement -
- Advertisement -

ಅನು: ಶಿವಸುಂದರ್
ಕೃಪೆ: Economic and Political
Weekly, Jan 12, 2019. Vol. 54. No.2 |

ಕೇಂದ್ರ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ಶೇ.10 ಮೀಸಲಾತಿಯೂ ಒಳಗೊಂಡಂತೆ ಕೈಗೊಂಡಿರುವ ಇತರ ಉದ್ಯೋಗ ರಕ್ಷಣಾ ಕ್ರಮಗಳು 19ನೇ ಶತಮಾನದ ಬಂಗಾಳಿ ದ್ವಿಪದಿಯೊಂದರಲ್ಲಿರುವ ಕಾಲ್ನಡಿಗೆ ಸಾಧನವೊಂದನ್ನು ನೆನಪಿಸುತ್ತದೆ. ಅ ಸಾಧನವು ತನ್ನನ್ನು ತೊಟ್ಟಿರುವ ಹೆಗಲಿಗೆ ಬೆಸೆದುಕೊಂಡು ಮುಂದೆ ಒಂದು ಕ್ಯಾರಟ್ಟನ್ನು ಇಳಿಬಿಟ್ಟಿರುತ್ತದೆ. ಇದರಿಂದಾಗಿ ಅದನ್ನು ಹೊತ್ತುಕೊಂಡಿರುವವರು ಕ್ಯಾರೆಟ್ಟನ್ನು ಪಡೆದುಕೊಳ್ಳುವ ಸಲುವಾಗಿ ಮೈಲುಗಟ್ಟಲೇ ದೂರವನ್ನು ನಿಮಿಷಗಳಲ್ಲಿ ಕ್ರಮಿಸುವಂತೆ ಮಾಡುತ್ತದೆ. ಆದರೆ ಎಷ್ಟೇ ವೇಗವಾಗಿ ನಡೆದರೂ ಆ ಕ್ಯಾರೆಟ್ಟು ಮಾತ್ರ ಆ ಸಾಧನವನ್ನು ಹೊತ್ತುಕೊಂಡವನಿಂದ ಸಮಾನ ದೂರದಲ್ಲೆ ಇರುತ್ತದೆಯೇ ವಿನಃ ಬಾಯಿಗೆಟುಕುವುದಿಲ್ಲ. ಉದಾಹರಣೆಗೆ ಉದ್ಯೋಗಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ಜಾತಿಗಳಿಗೆ ನೀಡಲಾದ ಶೇ.10 ಮೀಸಲಾತಿ ನೀತಿಯನ್ನೇ ಗಮನಿಸಿ. ಅದು ಹುಟ್ಟುಹಾಕಿರುವ ರಾಜಕೀಯ ಕೋಲಾಹಲವನ್ನು ಗಮನಿಸಿದಲ್ಲಿ ಒಂದು ರಾಜಕೀಯ ತಂತ್ರೋಪಾಯವಾಗಿ ಅದರ ಪರಿಣಾಮಕತೆಯನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಲಾಗದ ಅದರ ಪೆÇಳ್ಳುತನವನ್ನೂ ಸಹ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಯಾವ ರೀತಿಯಲ್ಲಿ ಬಂಗಾಳಿ ದ್ವಿಪದಿಯಲ್ಲಿನ ಬಡಪಾಯಿಯು ಎದುರಿಗಿರುವ ಕ್ಯಾರೆಟ್ಟನ್ನು ಪಡೆದು ತನ್ನ ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅದೇ ರೀತಿಯಲ್ಲಿ ಇತ್ತೀಚಿನ ಈ ಶೇ.10 ಕೋಟಾ ಸಹ ಉದ್ಯೋಗವನ್ನು ಒದಗಿಸಲಾರದು.
ಉದ್ಯೋಗಾವಕಾಶಗಳು ಎಲ್ಲಿವೆ? ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ಭಾರತದ ಉದ್ಯೋಗ ಮಾರುಕಟ್ಟೆಯ ಪರಿಸ್ಥಿತಿ ನಿರಾಶಾದಾಯಕವಾಗಿದೆ; ಮೊದಲನೆಯದಾಗಿ 2018ರ ಡಿಸೆಂಬರ್ ವೇಳೆಗೆ ಭಾರತದ ನಿರುದ್ಯೋಗ ದರವು ಶೇ.7.4ಕ್ಕೇರಿದ್ದು ಕಳೆದ 15 ತಿಂಗಳಲ್ಲೇ ಅತಿ ಹೆಚ್ಚಿನ ಮಟ್ಟವನ್ನು ಮುಟ್ಟಿದೆ; ಎರಡನೆಯದಾಗಿ 2017 ಮತ್ತು 2018ರಲ್ಲಿ ಕೆಲಸ ಕಳೆದುಕೊಂಡ ಸುಮಾರು 1.1 ಕೋಟಿಯಷ್ಟು ಜನರು ಈ ನಿರುದ್ಯೋಗಿ ಪಡೆಯಲ್ಲಿ ಸೇರಿಕೊಂಡಿದ್ದಾರೆ; ಮತ್ತು ಮೂರನೆಯದಾಗಿ ನಿರುದ್ಯೋಗದ ಪ್ರಮಾಣವು ಆರ್ಥಿಕವಾಗಿ ತ್ರಾಣ ರಹಿತವಾಗುತ್ತಿರುವ ಕ್ಷೇತ್ರ ಮತ್ತಿದು ಸಮುದಾಯಗಳಲ್ಲಿ ಹೆಚ್ಚಾಗಿದೆ. ಉದಾಹರಣೆಗೆ ಈಗಾಗಲೇ ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಗ್ರಾಮೀಣ ಕ್ಷೇತ್ರದಲ್ಲಿ ಶೇ.82ರಷ್ಟು ಉದ್ಯೋಗಗಳು ನಷ್ಟವಾಗಿದ್ದು, ನಿರುದ್ಯೋಗದ ಶೇ.80ರಷ್ಟು ಹೊರೆ ಮಹಿಳೆಯರ ಮೇಲಿದೆ. ವಿಪರ್ಯಾಸವೆಂದರೆ ಭಾರತೀಯ ಜನತಾ ಪಕ್ಷದ ಹೊಸ “ಅತಂತ್ರರ” ರಾಜಕಾರಣದ ಮುಖ್ಯ ಗಮನವೂ ಇದೇ ಕ್ಷೇತ್ರ ಸಮುದಾಯಗಳ ಮೇಲಿದೆ.
ಸಿಎಂಐಇ ಸಂಸ್ಥೆಯು ತನ್ನ ಈ ಅಂಕಿಅಂಶಗಳು ತಾತ್ಕಾಲಿಕವಾದದ್ದೆಂದು ಹೇಳಿದ್ದರೂ ಅಂತಿಮ ವರದಿಯಲ್ಲು ದೇಶದ ಒಟ್ಟಾರೆ ಪರಿಸ್ಥಿತಿ ಇದಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಸರ್ಕಾರಿ ಕ್ಷೇತ್ರದಲ್ಲಿನ ನೇಮಕಾತಿ ಆಮೆಗತಿಯಲ್ಲಿದೆ; ಅಷ್ಟಲ್ಲದೆ ಭರ್ತಿಯಾಗದೆ ಉಳಿದುಕೊಂಡಿರುವ ಬ್ಯಾಕ್‍ಲಾಗ್ ಹುದ್ದೆಗಳ ಮೂರನೇ ಒಂದು ಭಾಗದಷ್ಟು ಹುದ್ದೆಗಳು “ಮೀಸಲು”ವರ್ಗಕ್ಕೆ ಸೇರಿವೆ; ಅದೇ ಸಮಯದಲ್ಲಿ ಉದ್ಯೋಗಾವಕಾಶಗಳ ಪ್ರಮುಖ ಮೂಲವಾಗಿದ್ದ ಅಸಂಘಟಿತ ಮತ್ತು ಅನೌಪಚಾರಿಕ ಕ್ಷೇತ್ರಗಳು ನೋಟು ರದ್ಧತಿ ಮತ್ತು ಜಿಎಸ್‍ಟಿಯೆಂಬ ಅವಳಿ ಸರ್ಜಿಕಲ್ ದಾಳಿಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇಂಥಾ ಸಂದರ್ಭದಲ್ಲಿ ಮೀಸಲಾತಿಯು ಶೇ. 50ರ ಮಿತಿ ಮೀರಬಾರದೆಂಬ ಸುಪ್ರೀಂ ಕೋರ್ಟಿನ ನಿರ್ದೇಶನಗಳನ್ನು ಉಲ್ಲಂಘಿಸಿ ಕೇಂದ್ರ ಸರ್ಕಾರವು ಘೋಷಿಸಿರುವ ಶೇ.10ರ ಮೀಸಲಾತಿಯು ಬಿಜೆಪಿಗೆ ತನ್ನ ಚುನಾವಣಾ ಮಿತ್ರರನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗಬಹುದು. ಹಾಗೆಯೇ ಹಿಂದಿ ಹೃದಯಭಾಗದಲ್ಲಿ ನಡೆದ 2018ರ ಶಾಸನಾಸಭಾ ಚುನಾವಣೆಗಳಲ್ಲಿ ತಾನು ಕಳೆದುಕೊಂಡ “ದುರ್ಬಲ” ಮತದಾರರ ನಡುವೆ ತನ್ನ ಬಗ್ಗೆ ಒಂದಷ್ಟು ಸದಭಿಪ್ರಾಯವನ್ನು ಗಳಿಸಿಕೊಳ್ಳಬಹುದು. ಆದರೆ ವಾಸ್ತವದಲ್ಲಿ ಅದು ಅತಂತ್ರ ಮತ್ತು ನಿತ್ರಾಣ ಮತದಾರರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಮೀಸಲಾತಿಯಿಂದ ಹೊರಗುಳಿದ ಅರ್ಧಕ್ಕಿಂತ ಕಡಿಮೆ ಉದ್ಯೋಗಗಳಿಗಾಗಿ ಎಷ್ಟೋ ಪಟ್ಟು ಅಧಿಕ ಉದ್ಯೋಗಾಕಾಂಕ್ಷಿಗಳು ಸ್ಪರ್ಧಿಸುತ್ತಿದ್ದು ಮೀಸಲಾತಿಯ ಫಲಾನುಭವಿಗಳಿಗೆ ಅದರಿಂದ ಯಾವ ಲಾಭವೂ ಸಿಗುವುದಿಲ್ಲ.
ಇಂದಿನ ರಾಜಕೀಯ ಪರಿಭಾಷೆಗಳಲ್ಲಿ ಹೆಚ್ಚು ಬಳಕೆಯಾಗುವ “ಯುವಕರ ಆಶೋತ್ತರಗಳು” ಎಂಬ ಶಬ್ಧದ ಬಗೆಗೆ ರಾಜಕಾರಣಿಗಳಲ್ಲಿ ಅರೆಮನಸ್ಸಿನ ತಿಳವಳಿಕೆಯಿದೆ. ಮತ್ತದು ಉದ್ಯೋಗಾವಕಾಶಗಳ ಹೆಸರಲ್ಲಿ ಒಂದಷ್ಟು ಪಕೋಡಾಗಳನ್ನು ಎಸೆದರೆ, ಅಥವಾ ಒಂದಷ್ಟು ಹೀನಾಯ ಉದ್ಯೋಗವನ್ನು ನೀಡಿದರೆ ಯುವಜನರ ಬೆಂಬಲ ಪಡೆಯಬಹುದೆಂಬ ಸಂವೇದನಾ ರಹಿತ ಗ್ರಹಿಕೆಗಳಿವೆ. ಉದ್ಯೋಗ ಮಾರುಕಟ್ಟೆಯಲ್ಲಿ ಯುವಜನರ ಸಕ್ರಿಯ ಮತ್ತು ಸ್ವಕೀಯ ಪಾತ್ರವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುವ ಮೂಲಕ ವಾಸ್ತವದಲ್ಲಿರುವ ಅರೆಉದ್ಯೋಗದ ಸಮಸ್ಯೆಯ ಬಗ್ಗೆ ಕುರುಡು ಪ್ರದರ್ಶಿಸುತ್ತಿದೆ.
ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‍ಒ)ಯು 2018ರಲ್ಲಿ ಹೊರತಂದಿರುವ “ವರ್ಲ್ಡ್ ಎಂಪ್ಲಾಯ್‍ಮೆಂಟ್ ಅಂಡ್ ಸೋಷಿಯಲ್ ಔಟ್‍ಲುಕ್” (ಜಾಗತಿಕ ಉದ್ಯೋಗ ಮತ್ತು ಸಾಮಾಜಿಕ ದರ್ಶನ) ವರದಿಯು ಭಾರತದ ಶೇ.80ರಷ್ಟು ಉದ್ಯೋಗಗಳನ್ನು ಅಭದ್ರವೆಂದು ಪರಿಗಣಿಸಿದೆ. ಅದರಲ್ಲಿ ಕೇವಲ ಶೇ.20 ಭಾಗದಷ್ಟು ಉದ್ಯೋಗಿಗಳು ಮಾತ್ರ ನಿಯಮಿತವಾಗಿ ಸಂಬಳ ಪಡೆಯುವ ಉದ್ಯೋಗಿಗಳಾಗಿದ್ದು ಇನ್ನುಳಿದ ಶೇ.40ರಷ್ಟು ಉದ್ಯೋಗಿಗಳು ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದೇವೆಂಬ ಅಭಿಪ್ರಾಯವನ್ನೇ ಹೊಂದಿದ್ದಾರೆ. 2018ರಲ್ಲಿ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು ಹೊರತಂದಿರುವ “ಸ್ಟೇಟ್ ಆಫ್ ವರ್ಕಿಂಗ್ ಇನ್ ಇಂಡಿಯಾ” (ಭಾರತದ ಕೆಲಸ ಮಾಡುವ ಪರಿಸ್ಥಿತಿ) ವರದಿಯು ಸೌಲಭ್ಯರಹಿತ ಕೆಲಸಗಾರರ ತುಲನಾತ್ಮಕ ವರದಿಯನ್ನು ನೀಡಿದ್ದು ಅಸಂಘಟಿತ ಕ್ಷೇತ್ರದಲ್ಲಿನ ಕಡಿಮೆ ವೇತನದ ಸಮಸ್ಯೆ ಹೇಳತೀರದಾಗಿದ್ದರೂ ಸಂಘಟಿತ ಕ್ಷೇತ್ರದಲ್ಲೂ ಸಹ ಆ ಸಮಸ್ಯೆ ಮುಂದುವರೆದಿದೆ ಎಂಬ ಸಂಗತಿಯನ್ನು ಹೊರಹಾಕಿದೆ. ಶೇ.3ರಷ್ಟು ಹಣದುಬ್ಬರದ ಏರಿಕೆಯ ಲೆಕ್ಕಾಚಾರಕ್ಕೆ ತಕ್ಕಂತೆ ಕೂಲಿ ದರವನ್ನು ಹೊಂದಾಣಿಕೆ ಮಾಡಿ ನೋಡಿದಾಗಲೂ, 2015ರಲ್ಲಿ ವಿಶೇಷವಾಗಿ ಸರ್ಕಾರೇತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಶೇ.82ರಷ್ಟು ಪುರುಷರೂ ಮತ್ತು ಶೇ.92ರಷ್ಟು ಮಹಿಳೆಯರು ಏಳನೇ ವೇತನ ಅಯೋಗ ನಿಗದಿಗೊಳಿಸಿದ ಕನಿಷ್ಟ ವೇತನಕ್ಕಿಂತ ಶೇ.40ರಷ್ಟು ಕಡಿಮೆ ವೇತನವನ್ನು ಪಡೆಯುತ್ತಿದ್ದರು. ಅದೆರ ಜೊತೆಜೊತೆಗೆ ಕಾರ್ಮಿಕ ಉತ್ಪಾದಕತೆಗೂ ಮತ್ತು ವೇತನಕ್ಕೂ ಇರುವ ಅಂತರ ಹೆಚ್ಚಾಗುತ್ತಲೇ ಇದೆ. ಉದಾಹರಣೆಗೆ ಕಳೆದ ಮೂರು ದಶಕಗಳಲ್ಲಿ ಸಂಘಟಿತ ಉತ್ಪಾದಕ ಕ್ಷೇತ್ರದಲ್ಲಿನ ಕಾರ್ಮಿಕ ಉತ್ಪಾದಕತೆಯು ಆರು ಪಟ್ಟು ಹೆಚ್ಚಾಗಿದ್ದರೆ ಕೂಲಿ ದರವು ಮಾತ್ರ ಕೇವಲ ಒಂದೂವರೆ ಪಟ್ಟು ಮಾತ್ರ ಹೆಚ್ಚಾಗಿದೆ.
ಈ ಎಲ್ಲಾ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಭಾರತದಲ್ಲಿನ ಹಾಲಿ ನಿರುದ್ಯೋಗವು ಅದರಲ್ಲೂ ಯುವಜನರ ನಿರುದ್ಯೋಗದ ಪ್ರಮಾಣವು “ಭಾವಿ” ಪ್ರಮಾಣವೇ ಹೊರತು “ಹಾಲಿ”ಯಲ್ಲವೆಂದು ಕೆಲವರು ವಾದಿಸಬಹುದು. ಅಂದರೆ, ಈಗ ಹಾಲಿ ಇರುವ ಉದ್ಯೋಗಾವಕಾಶಗಳು ತಮ್ಮ ಆಶೋತ್ತರಗಳಿಗೆ ಪೂರಕವಾದ ವೇತನ ಮತ್ತು ಸೌಲಭ್ಯಗಳನ್ನು ನೀಡುವುದಿಲ್ಲ ಎಂದು ಭಾವಿಸುತ್ತಿರುವುದರಿಂದ ಯುವಜನರು ಉದ್ಯೋಗ ಅರಸುತ್ತಿಲ್ಲ ಎಂಬುದು ಆ ವಾದದ ಸಾರಾಂಶ. ಹೀಗೆ, ನಿಗದಿತ ವೇತನವಿರುವ ಅದರಲ್ಲೂ ಸರ್ಕಾರಿ ಉದ್ಯೋಗಗಳಿಗಾಗಿ ಯುವಜನರು ತೋರುವ ಆದ್ಯತೆಯೇ ನಿರುದ್ಯೋಗಕ್ಕೆ ಕಾರಣವೆಂದು ಹೇಳುತ್ತಾ ನಿರುದ್ಯೋಗದ ಹೊಣೆಗಾರಿಕೆಯನ್ನು ನಿರುದ್ಯೋಗಿಗಳ ಹೆಗಲಿಗೇ ವರ್ಗಾಯಿಸಿಬಿಡಬಹುದು. ಆದರೆ ಈ ವಾದದಿಂದ ವಾಸ್ತವದಲ್ಲಿರುವ ನಿರುದ್ಯೋಗ, ಅರೆ ಉದ್ಯೋಗ ಅಥವಾ ಭಾವಿ ನಿರುದ್ಯೋಗಗಳಿಗೂ ಮತ್ತು ಉದ್ಯೋಗ ಸೃಷ್ಟಿಯಾಗದಿರುವುದಕ್ಕೂ ಇರುವ ಬಲವಾದ ಸಂಬಂಧಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಅಲ್ಲದೆ ಆರ್ಥಿಕ ಅಭಿವೃದ್ಧಿಗೂ ಮತ್ತು ಉದ್ಯೋಗ ಸೃಷ್ಟಿಗೂ ಇರುವ ಸಂಬಂಧಗಳನ್ನು ದುರ್ಬಲಗೊಳಿಸುತ್ತಿರುವ ರಾಚನಿಕ ಕಾರಣಗಳನ್ನು ಗುರುತಿಸುವ ಮತ್ತು ಅದನ್ನು ನಿವಾರಿಸುವ ಹೊಣೆಗಾರಿಕೆ ಸರ್ಕಾರದ್ದೇ ಆಗಿದೆ. ಅದರ ಜೊತೆಜೊತೆಗೆ ಈಗಾಗಲೇ ನಿತ್ರಾಣಗೊಂಡು ಜರ್ಝರಿತವಾಗಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಮೀಸಲಾತಿಯನ್ನು, ಅಂದರೆ ಅತ್ಯಂತ ಅತಂತ್ರತೆಯ ಅಂಚಿನಲ್ಲಿರುವ ವ್ಯಕ್ತಿಯನ್ನು ರಕ್ಷಿಸುವ ಕ್ರಮವನ್ನು, ಹೆಚ್ಚಿಸುತ್ತಿರುವ ಕ್ರಮದ ಹಿಂದಿರುವ ಸರ್ಕಾರದ ಸೋಗಲಾಡಿತನವನ್ನೂ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ್ಲ.
ಹೆಚ್ಚೆಚ್ಚು ವಿದ್ಯಾಭ್ಯಾಸವನ್ನು ಪಡೆದವರ ನಡುವೆ ಇರುವ ಅತಿ ಹೆಚ್ಚು ನಿರುದ್ಯೋಗ ದರಕ್ಕೆ ಅವರÀ ಆಯ್ಕೆ ಮತ್ತು ಆದ್ಯತೆಗಳೇ ಕಾರಣ ಎಂದು ಸರ್ಕಾರವು ವಿವರಿಸಿ ಕೈತೊಳೆದುಕೊಳ್ಳುವ ಪ್ರಯತ್ನ ಮಾಡುತ್ತದೆ. ಅದೇನೇ ಇದ್ದರೂ ಅವರ ಆಯ್ಕೆಗಳು ನಿರ್ದಿಷ್ಟ ಪಥವನ್ನೇ ಅವಲಂಬಿಸುವಂತೆ ಮಾಡಿರುವ ಹೊಣೆಗಾರಿಕೆಯಿಂದ ಸರ್ಕಾರವು ನುಣುಚಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರವು ಮತದಾರರಿಗೆ ನೀಡುª ಮೀಸಲಾತಿಯಂಥ ಹುಸಿ ರಕ್ಷಣಾ ಕ್ರಮಗಳು ಭ್ರಮ ನಿರಸನಗಳನ್ನು ಹುಟ್ಟುಹಾಕುತ್ತದೆ. ಆದರೆ ಅದು ವ್ಯಗ್ರವಾಗದಂತೆ ನೋಡಿಕೊಳ್ಳಲು ಕೂಡಲೇ ದೊಡ್ಡ ದೊಡ್ಡ ಭರವಸೆಗಳನ್ನು ಘೋಷಿಸಲಾಗುತ್ತದೆ ಆದರೆ ಅದರೊಟ್ಟಿಗೆ ಜನರ ಅಭದ್ರತೆಯನ್ನು ಹೆಚ್ಚಿಸುವ ನೀತಿಗಳ ಬೆದರಿಕೆಯನ್ನೂ ಒಡ್ಡಲಾಗುತ್ತದೆ. ಇದು ಮತ್ತಷ್ಟು ಹುಸಿ ಭರವಸೆಗಳ ಘೋಷಣೆಗೆ ಜನರನ್ನು ಬಲಿ ಮಾಡುವ ರಾಜಕೀಯ ವಿಷಚಕ್ರಕ್ಕೆ ದೂಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೆಲಸದ ಅವಧಿ ಬಳಿಕ ಯಾವುದೇ ಕರೆಗಳು, ಇಮೇಲ್‌ಗಳಿಗೆ ಉತ್ತರಿಸಬೇಕಿಲ್ಲ : ಸಂಪರ್ಕ ಕಡಿತ ಹಕ್ಕು ಮಸೂದೆ ಹೇಳುವುದೇನು?

ದೇಶದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳ ಮೇಲೆ ಅತೀವ ಕೆಲಸದ ಹೊರೆಯನ್ನು ಹೇರಿ ಅವರ ಖಾಸಗಿ ಜೀವನವನ್ನು ಕಿತ್ತುಕೊಳ್ಳುವ ಮೂಲಕ ಮಾನಸಿಕ ಒತ್ತಡಕ್ಕೆ ತಳ್ಳುತ್ತಿರುವ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ. ಅದಾಗ್ಯೂ ಕೆಲ ಕಾರ್ಪೋರೇಟ್‌...

ಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೇಳೆ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲೋರಾ ಶಾಂತಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಸ್‌ಆರ್‌ಎಂನ ಆಂತರಿಕ ಸಮಿತಿಯ ವರದಿಯು ಲೋರಾ...

ಗಾಝಾದಲ್ಲಿ ಕದನ ವಿರಾಮ : ಎರಡು ವರ್ಷಗಳ ಬಳಿಕ ಬೆಥ್ಲೆಹೆಮ್‌ನಲ್ಲಿ ಮರುಕಳಿಸಿದ ಕ್ರಿಸ್‌ಮಸ್ ಸಂಭ್ರಮ

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಮರುಕಳಿಸಿದೆ. ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್...

ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟು : ಜೆಪಿಸಿ ವಿಚಾರಣೆ ಕೋರಿ ಪ್ರಧಾನಿಗೆ ಪತ್ರ ಬರೆದ ಸಂಸದ ಜಾನ್ ಬ್ರಿಟ್ಟಾಸ್

ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಉಂಟಾದ ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆ ಅಥವಾ ನ್ಯಾಯಾಂಗ ತನಿಖೆ ಮಾಡಿಸುವಂತೆ ಕೋರಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಧಾನಿ...

ಒಳಮೀಸಲಾತಿ : ಶೇ.17ರ ಪ್ರಮಾಣದಲ್ಲೇ ಮುಂದುವರಿಯಲು ಸರ್ಕಾರ ತೀರ್ಮಾನ?

ಒಳಮೀಸಲಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಕಗ್ಗಂಟನ್ನು ಎದುರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೇಕಡ 17ರ ಮೀಸಲಾತಿ ಪ್ರಮಾಣದಲ್ಲೇ ಮುಂದುವರಿಯಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಶನಿವಾರ ಸಂಜೆ (ಡಿಸೆಂಬರ್ 6) ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಉತ್ತರ ಗೋವಾದ ನೈಟ್‌ ಕ್ಲಬ್‌ವೊಂದರಲ್ಲಿ ಶನಿವಾರ (ಡಿಸೆಂಬರ್ 6) ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿಯಾಗಿದ್ದು,...

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...