Homeಮುಖಪುಟಕನ್ನಡದ ಅಪರೂಪದ ಹೋಸ್ಟೇಜ್ ಡ್ರಾಮ ಸಿನೆಮಾ ಆಕ್ಟ್-1978 ಗೆದ್ದಿದೆಯೇ?

ಕನ್ನಡದ ಅಪರೂಪದ ಹೋಸ್ಟೇಜ್ ಡ್ರಾಮ ಸಿನೆಮಾ ಆಕ್ಟ್-1978 ಗೆದ್ದಿದೆಯೇ?

ಹೊಡಿ ಬಡಿ, ಅಬ್ಬರಿಸುವ ಡೈಲಾಗ್ ಗಳನ್ನೇ ಪ್ರತಿನಿಧಿಸುವ ಸಿನಿಮಾಗಳು ರಾಶಿರಾಶಿಯಾಗಿ ಮೂಡುವ ಸಮಯದಲ್ಲಿ, ವಿಷಯಾಧಾರಿತವಾದ ಇಂಥಹ ಪ್ರಯತ್ನಗಳು ಒಂದಷ್ಟು ಕುತೂಹಲ ಹುಟ್ಟಿಸುತ್ತವೆ.

- Advertisement -
- Advertisement -

ಮೊದಲಿಗೆ ಕೋವಿಡ್ ಅವಾಂತರಗಳಿಂದ ಬೇಸತ್ತು ಒಂದಷ್ಟು ಕಾಲದ ನಂತರ ಸಿನೆಮಾ ಥಿಯೇಟರ್ ಗಳಿಗೆ ಹೋಗುವಂತಾದ ಖುಷಿಯನ್ನ ಎಲ್ಲರೂ ಹಂಚಿಕೊಳ್ಳೋಣ. ಆಕ್ಟ್-1978 ಸಿನೆಮಾ, ಬಹಳ ಹಿಂದೆ ಕನ್ನಡದಲ್ಲೇ ಬಂದ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ನಿಷ್ಕರ್ಷ’, ಆ ಸಿನೆಮಾಗೆ ಸ್ಫೂರ್ತಿಯಾಗಿದ್ದ ಅಮೆರಿಕನ್ ಚಲನಚಿತ್ರ ‘ಡೈ ಹಾರ್ಡ್’ ಇಂತಹ ಹೋಸ್ಟೇಜ್ ಡ್ರಾಮ ಸಿನೆಮಾಗಳ ಪ್ರಕಾರಕ್ಕೆ ಸೇರಿದರೂ, ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುವ ‘ಕಾರಣ’ದಿಂದಾಗಿ ವಿಭಿನ್ನ ಕಥಾವಸ್ತು ಹೊಂದಿದೆ. ಸಿನೆಮಾದ ಮೂಲ ಉದ್ದೇಶವೇ ಚಿಂತನೆಗಳನ್ನ ಹೆಚ್ಚಿಸುವುದಾದ್ದರಿಂದ, ಆ ನಿಟ್ಟಿನಲ್ಲಿ ಆಕ್ಟ್-1978 ಗೆದ್ದಿದೆಯಾ? ಮುಂದೆ ನೋಡೋಣ…

ಮೊದಲಿಗೆ ಹಿಂಸೆಯನ್ನ ಹೋರಾಟದ ಪ್ರಕ್ರಿಯೆಗಳಿಗೆ ಬಳಸೋದು, ಹಾಗೆ ಬಳಸುವಂತೆ ಪ್ರಚೋದಿಸುವುದು ಸರಿಯೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ತುಂಬು ಗರ್ಭಿಣಿಯ ಪಾತ್ರ ಸೃಷ್ಟಿಸಿ, ಆಕೆಯ ಮೂಲಕ ಕಥೆ ಹೇಳಿ, ಪ್ರೇಕ್ಷಕನನ್ನ ಭಾವನಾತ್ಮಕವಾಗಿ ಹಿಡಿದಿಡುವ ಪ್ರಯತ್ನ ಸಮಂಜಸವಾದುದಲ್ಲ.

ಸರ್ಕಾರಿ ಕಚೇರಿಯೊಂದರಲ್ಲಿ ನಡೆಯುವ ಕಥೆ, ಆ ಕಚೇರಿಯ ನೌಕರರ ಭ್ರಷ್ಟತೆಯನ್ನು ಅನಾವರಣಗೊಳಿಸುತ್ತಾ, ಅವರ ಮೇಲ್ದರ್ಜೆಯ ಅಧಿಕಾರಿಗಳನ್ನೂ ಒಳಗೊಂಡಂತೆ ಹೇಗೆ ಇವರೆಲ್ಲಾ ಭ್ರಷ್ಟ ಸಮಾಜದ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂಬುದನ್ನ ತೋರಿಸುತ್ತಾ ಸಾಗುತ್ತದೆ.

ಕಥಾನಾಯಕಿ ಅಮಾಯಕಳೇನಲ್ಲ. ಎನ್ ಸಿ ಸಿ ಯಲ್ಲಿ ತರಬೇತಿ ಪಡೆದಿರುವಾಕೆ. ಆದರೆ ಆಕೆ ಸನ್ನಿವೇಶಗಳನ್ನ ಎದುರಿಸುವ ರೀತಿಯಲ್ಲಿ ಕಟ್ಟಿಕೊಟ್ಟಿರುವ ಚಿತ್ರಣ ತಡವರಿಸಿದಂತಿದೆ. ಉದಾಹರಣೆಗೆ ಆಕೆ ಒಂದೇ ಟ್ರಿಗರ್ ಗೆ ಶೂಟ್ ಮಾಡುವಾಗ ಇರುವ ಪಕ್ವತೆಗೂ, ತನ್ನ ಬೇಡಿಕೆ ಇಡುವಾಗ ತೋರಿಸುವ ಅಮಾಯಕತೆಗೂ, ಬಹಳವೇ ಅಂತರವಿದೆ.

ಮಹಾತ್ಮ ಗಾಂಧಿಯ ಹೋಲಿಕೆಯನ್ನು ಬಳಕೆ ಮಾಡಿರುವುದು, ಸಣ್ಣ ಸಣ್ಣ ಅರ್ಥಗಳನ್ನ ಹೊಸೆಯುವಿಕೆಗೆ ಸಹಾಯವಾಗಿದೆ, ಪ್ರತೀ ಸರ್ಕಾರಿ ಕಚೇರಿಯ ಎದುರು ಹೀಗೊಂದು ಪ್ರಜ್ಞೆ ಸದಾ ಜಾಗೃತವಾಗಿದ್ದರೆ ಎಷ್ಟು ಚೆಂದವಿತ್ತು ಅನ್ನುವ ಹಾಗೆ.

ಇನ್ನು, ಕ್ರಿಶ್ಚಿಯನ್ ಮುಸ್ಲಿಂ ಧರ್ಮದಾರಿ ಪಾತ್ರಗಳನ್ನ ಕಾಮಿಡಿ ಪೀಸುಗಳನ್ನಾಗಿಸುವ ಟ್ರೆಂಡ್ ಇತ್ತೀಚಿಗೆ ಬೆಳೆಯುತ್ತಿರುವುದು ಅಪಾಯಕಾರಿ ಸಂಗತಿ. ಈ ಸಿನಿಮಾದಲ್ಲಿ ಬೆಂಜಮಿನ್ ಪಾತ್ರಧಾರಿಯನ್ನು ಹಾಸ್ಯ ಮಾಡುವುದು ಕನಿಷ್ಠ ಎಂಬಂತೆ ಬಳಕೆಯಾದರೂ ಬಹುಸಂಖ್ಯಾತ ಧಾರ್ಮಿಕವಾದ ಯಜಮಾನ್ಯ ಸಾಧಿಸುತ್ತಿರುವ ಸಮಯದಲ್ಲಿ ಅದು ಕಾಣುವ ರೀತಿ ಸಮಸ್ಯಾತ್ಮಕವಾದದ್ದು.

ಯಜ್ಞಾಶೆಟ್ಟಿಯವರು ಒಬ್ಬ ಗರ್ಭಿಣಿ ಸ್ತ್ರೀ ಹೇಗೆ ನೆಡೆಯುತ್ತಾಳೆ, ಹೇಗೆ ನೋವನ್ನು ಅನುಭವಿಸುತ್ತಾಳೆ ಎನ್ನುವ ರೀತಿಗಳನ್ನು ಬಹಳ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ, ಡೈಲಾಗ್ ಹೇಳುವಾಗ ಒಂದಷ್ಟು ಹೆಚ್ಚಿನ ಶ್ರಮ ಹಾಕಿದ್ದರೆ ನಟನೆ ಇನ್ನೂ ಆಪ್ತವಾಗಿರುತ್ತಿತ್ತು. ಸಂಚಾರಿ ವಿಜಯ್, ಅವಿನಾಶ್, ಅಚ್ಚುತ್ , ಶ್ರುತಿ, ಇವರೆಲ್ಲರೂ ಕಡಿಮೆ ಸಮಯದಲ್ಲಿಯೇ ಬಂದರೂ , ಯಜ್ಞಾಶೆಟ್ಟಿಯವರನ್ನೂ ಮರೆಸುವಂತೆ ಕಾಣುತ್ತಾರೆ.
ಇದೆಲ್ಲದರ ಹೊರತಾಗಿ ಸಿನೆಮಾ ಕಡೆಗಾಣಿಸುವಂಥಹ ಪ್ರಯತ್ನವಾ?  ಖಂಡಿತಾ ಇಲ್ಲ….

ಹೊಡಿ ಬಡಿ, ಅಬ್ಬರಿಸುವ ಡೈಲಾಗ್ ಗಳನ್ನೇ ಪ್ರತಿನಿಧಿಸುವ ಸಿನಿಮಾಗಳು ರಾಶಿರಾಶಿಯಾಗಿ ಮೂಡುವ ಸಮಯದಲ್ಲಿ, ವಿಷಯಾಧಾರಿತವಾದ ಇಂಥಹ ಪ್ರಯತ್ನಗಳು ಒಂದಷ್ಟು ಕುತೂಹಲ ಹುಟ್ಟಿಸುತ್ತದೆ. ಆದರೆ ವಿಷಯವನ್ನು ಕಟ್ಟುವಾಗ ಇನ್ನಷ್ಟು ಗಂಭೀರತೆ ಅವಶ್ಯಕವಾಗಿತ್ತು ಅನ್ನುವುದೂ ನಿಜ.

ಈ ವಿಷಯಾಧಾರಿತ ಸಿನೆಮಾಗಳು, ಸಾಮಾನ್ಯ ಕಮರ್ಷಿಯಲ್ ಸಿನೆಮಾಗಳಿಗಿಂತ ತುಸು ಹೆಚ್ಚಾಗಿಯೇ ಸಿನೆಮಾ ಗ್ರಾಮರ್ ಅನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗೆ ಪ್ರಯೋಗಿಸಿದ ಮತ್ತಷ್ಟು ಫೈನ್ ಟ್ಯೂನ್ ಚಿತ್ರಗಳು ಹೆಚ್ಚಾಗಿ ಬಂದರೆ, ನಾವುಗಳು (ಕನ್ನಡ ಸಿನೆಮಾದವರು) ಇನ್ನೂ ಹೆಚ್ಚಿಗೆ ಬೆಳೆಯಬಹುದು, ಸಿನೆಮಾ ಕ್ಷೇತ್ರವನ್ನ ಒಂದು ಚರ್ಚಾ ಮಾಧ್ಯಮವನ್ನಾಗಿ ಬಳಸಿಕೊಳ್ಳಬಹುದು.


ಇದನ್ನೂ ಓದಿ: ಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...