ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ 32 ಆರೋಪಿಗಳನ್ನು ರಾಮ ಮಂದಿರದ ನಿರ್ಮಾಣಕ್ಕಾಗಿ ನಡೆಯುವ “ಭೂಮಿ ಪೂಜೆ”ಯ ಸಮಾರಂಭಕ್ಕೆ ಆಹ್ವಾನಿಸಿ ಗೌರವಿಸಬೇಕು ಎಂದು ಹಿಂದೂತ್ವ ಸಂಘಟನೆಯ ನಾಯಕರಾದ ಸಂತೋಷ್ ದುಬೆ ಹೇಳಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಹಿಂದೂ ಧರ್ಮಸೇನೆ ಅಧ್ಯಕ್ಷ ಸಂತೋಷ್ ದುಬೆ ಆಗಸ್ಟ್ 5 ರಂದು ನಡೆಯಲಿರುವ ಸಮಾರಂಭಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಲ್ಲಾ ನಾಲ್ಕು ಶಂಕರಾಚಾರ್ಯರನ್ನು ಆಹ್ವಾನಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆ ಇದೆ.
“ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪದಾಧಿಕಾರಿಗಳು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲಾ 32 ಆರೋಪಿಗಳ ಜೊತೆಗೆ, ರಾಮ್ ದೇವಾಲಯ ಚಳವಳಿಯಲ್ಲಿ ಪ್ರಾಣ ಕೊಟ್ಟ ಕರ ಸೇವಕರ ಕುಟುಂಬಗಳನ್ನು ಸಹ ‘ಭೂಮಿ ಪೂಜೆ’ ಸಮಾರಂಭಕ್ಕೆ ಆಹ್ವಾನಿಸಬೇಕು ಎಂದು ಖಚಿತಪಡಿಸಿಕೊಳ್ಳಬೇಕು. ಅಲ್ಲಿ ಅವರನ್ನು ಗೌರವಿಸಬೇಕು ” ಎಂದು ದುಬೆ ಪಿಟಿಐಗೆ ತಿಳಿಸಿದ್ದಾರೆ.
ಬಾಬರಿ ಮಸೀದಿಯನ್ನು ನೆಲಸಮ ಮಾಡದಿದ್ದರೆ ಸ್ಥಳದಲ್ಲಿ ರಾಮ ಮಂದಿರದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
“ಟ್ರಸ್ಟ್ ಕರ ಸೇವಕರನ್ನು ಆಹ್ವಾನಿಸದಿದ್ದರೆ, ಅದು ಅಹಂ ಮತ್ತು ದುರಹಂಕಾರದ ಪ್ರದರ್ಶನವಾಗಿರುತ್ತದೆ. ಬಾಬರಿ ಮಸೀದಿ ಧ್ವಂಸ ಆರೋಪ ಹೊತ್ತಿರುವ ಕರ ಸೇವಕರನ್ನು ಮತ್ತು ಹತ್ಯೆಗೀಡಾದ ಕರ ಸೇವಕರ ಕುಟುಂಬಗಳನ್ನು ಆಹ್ವಾನಿಸದೆ, ‘ಭೂಮಿ ಪೂಜೆ’ ಅಪೂರ್ಣವಾಗಿ ಉಳಿಯುತ್ತದೆ” ಎಂದು ದುಬೆ ಹೇಳಿದ್ದಾರೆ.
ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯವು ಸಿಆರ್ಪಿಸಿಯ ಸೆಕ್ಷನ್ 313 ರ ಅಡಿಯಲ್ಲಿ 32 ಬಾಬರಿ ಧ್ವಂಸದ ಆರೋಪಿಗಳ ಹೇಳಿಕೆಗಳನ್ನು ದಾಖಲಿಸುತ್ತಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆಗಸ್ಟ್ 31 ರೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಲು ನ್ಯಾಯಾಲಯವು ದಿನನಿತ್ಯದ ವಿಚಾರಣೆಗಳನ್ನು ನಡೆಸುತ್ತಿದೆ.
ಅಯೋಧ್ಯೆಯಲ್ಲಿನ ಮಸೀದಿಯನ್ನು 1992 ರ ಡಿಸೆಂಬರ್ 6 ರಂದು ‘ಕರ ಸೇವಕರು’ ನೆಲಸಮ ಮಾಡಿದ್ದರು. ಆ ಸಮಯದಲ್ಲಿ ರಾಮ ಮಂದಿರದ ಆಂದೋಲನವನ್ನು ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಮತ್ತು ಬಿಜೆಪಿ ನಾಯಕ ಮುರುಳಿ ಮನೋಹರ್ ಜೋಶಿ ಮುನ್ನಡೆಸುತ್ತಿದ್ದರು.
ಓದಿ: ರಾಮಮಂದಿರ ನಿರ್ಮಾಣದ ಟ್ರಸ್ಟ್ ಮುಖ್ಯಸ್ಥನಾಗಿ ನೇಮಕವಾದ ರಾಜೀವ್ ಗಾಂಧಿ ಆಪ್ತ