ಪ್ರಸ್ತುತ ಟಿಆರ್ಪಿ ಹಗರಣದಲ್ಲಿ ಸುದ್ದಿಯಲ್ಲಿರುವ ಸುದ್ದಿ ಮಾಧ್ಯಮ ರಿಪಬ್ಲಿಕ್ ಟಿವಿ ಹಾಗೂ ಚಾನೆಲ್ನ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ, ಹಗರಣಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ತಮ್ಮ ಚಾನೆಲ್ನಲ್ಲಿ ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡುವಂತೆ ಕೋರಿ ಮಾಜಿ ಪೊಲೀಸ್ ಉಪ ಆಯುಕ್ತ(ಎಸಿಪಿ) ಇಕ್ಬಾಲ್ ಶೇಖ್ ಮುಂಬೈಯ ನಗರ ಸಿವಿಲ್ ನ್ಯಾಯಾಲಯದಲ್ಲಿ ಸೋಮವಾರ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: TRP ಹಗರಣದಲ್ಲಿ ವಿಚಾರಣೆಗೆ ಹಾಜರಾಗಲು ಸಮನ್ಸ್; ಬಂಧನ ಭೀತಿಯಲ್ಲಿ ಅರ್ನಾಬ್ ಗೋಸ್ವಾಮಿ
ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು, ಟಿಆರ್ಪಿ ಹಗರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯ ವಿರುದ್ಧ ಟೀಕೆ ಮಾಡುತ್ತಿರುವ ಚಾನೆಲ್ ಹಾಗೂ ಅರ್ನಾಬ್ ಗೋಸ್ವಾಮಿ ವಿರುದ್ಧ ಇಕ್ಬಾಲ್ ಶೇಕ್ ಮಾನನಷ್ಟ ಮೊಕದ್ದಮೆಯನ್ನು ಕೂಡ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಅರ್ನಾಬ್ ಗೋಸ್ವಾಮಿ ಟಿ.ವಿ.ಯಲ್ಲಿ ಚರ್ಚೆ ಹಾಗೂ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಇದು ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಇಕ್ಬಾಲ್ ಶೇಖ್ ಆರೋಪಿಸಿದ್ದಾರೆ.
‘‘ನಿಯಮಗಳ ಪ್ರಕಾರ ಪ್ರಕರಣದ ತನಿಖೆ ನಡೆಯುತ್ತಿರುವಾಗ, ಅದರ ಬಗ್ಗೆ ಟಿ.ವಿ. ಚಾನೆಲ್ನಲ್ಲಿ ಚರ್ಚೆ ನಡೆಸುವ ಸ್ವಾತಂತ್ರ ಹಾಗೂ ಮುಂಬೈ ಪೊಲೀಸರನ್ನು ಅಗೌರವಿಸುವ ಮೂಲಕ ತೀರ್ಮಾನ ನೀಡುವ ಅವಕಾಶವನ್ನು ಅರ್ನಾಬ್ ಗೋಸ್ವಾಮಿ ಅವರಿಗೆ ನೀಡಬಾರದು” ಎಂದು ವಕೀಲ ಅಭಾ ಸಿಂಗ್ ಮೂಲಕ ನೀಡಿದ ದೂರಿನಲ್ಲಿ ಇಕ್ಬಾಲ್ ಶೇಖ್ ಹೇಳಿದ್ದಾರೆ.
ಇದನ್ನೂ ಓದಿ: ನಿಮ್ಮದು ಬನಾನಾ ರಿಪಬ್ಲಿಕ್ ಚಾನೆಲ್: ಅರ್ನಾಬ್ ಗೋಸ್ವಾಮಿ ವಿರುದ್ಧ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಆಕ್ರೋಶ