ಇಂದು ಮುಂಜಾನೆ ತೀವ್ರ ಚಳಿಗಾಳಿಯಿಂದಾಗಿ ಪಂಜಾಬ್- ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತನೊಬ್ಬ ಸಾವನಪ್ಪಿದ್ದಾನೆ ಎಂದು ರೈತ ಸಂಘಟನೆಗಳು ತಿಳಿಸಿವೆ. 22 ದಿನಗಳಿಂದ ನಡೆಯುತ್ತಿರುವ ಕೇಂದ್ರದ ಕೃಷಿ ಕಾಯ್ದೆಗಳ ವಿರುರದ್ಧ ಹೋರಾಟದಲ್ಲಿ ಸುಮಾರು 24 ಜನ ರೈತರು ಮೃತಪಟ್ಟಿದ್ದಾರೆ ಎಂದು ರೈತರು ತಿಳಿಸಿದ್ದಾರೆ.
ಸಾವನಪ್ಪಿದ ಪಂಜಾಬ್ನ ರೈತನಿಗೆ ಮೂರು ಜನ ಮಕ್ಕಳಿದ್ದು ಕಳೆದ 22 ದಿನಗಳಿಂದಲೂ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಎನ್ನಲಾಗಿದೆ. ತೀವ್ರ ಕೊರೆಯುವ ಚಳಿಯಿಂದಾಗಿಯೇ ಆತ ಮೃತಪಟ್ಟಿದ್ದಾನೆ ಎಂದು ರೈತರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ದೆಹಲಿ ಮತ್ತು ಅದರ ನೆರೆಹೊರೆಯಲ್ಲಿ ತಾಪಮಾನವು ಐದು ಡಿಗ್ರಿ ಅಥವಾ ಅದಕ್ಕಿಂತ ಕಡಿಮೆಯಾಗಿದೆ. ದಿನದ ತಾಪಮಾನವು ಸಾಮಾನ್ಯಕ್ಕಿಂತ ನಾಲ್ಕು ಡಿಗ್ರಿಗಳಿಗಿಂತಲೂ ಕಡಿಮೆಯಾಗಿದೆ.
ನಿನ್ನೆ ತಾನೇ ಸಿಖ್ ಧರ್ಮಗುರುವೊಬ್ಬರು ಪ್ರತಿಭಟನಾನಿರತ ರೈತರನ್ನು ಬೆಂಬಲಿಸಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸರ್ಕಾರದ ವಿರುದ್ಧ ಕೋಪ ಮತ್ತು ನೋವನ್ನು ವ್ಯಕ್ತಪಡಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಿದ್ದೇನೆ ಎಂದು ಅವರು ಆತ್ಮಹತ್ಯಾ ಪತ್ರವನ್ನು ಬರೆದಿಟ್ಟಿದ್ದರು.
ಹರಿಯಾಣದ ಗುರುದ್ವಾರವೊಂದರಲ್ಲಿ ಸಿಖ್ ಧರ್ಮಗುರುವಾಗಿದ್ದ ಬಾಬಾ ರಾಮ್ ಸಿಂಗ್ರವರು “ರೈತರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಡುತ್ತಿದ್ದಾರೆ. ಆ ನೋವನ್ನು ನಾನೂ ಅನುಭವಿಸುತ್ತಿದ್ದೇನೆ… ಸರ್ಕಾರವು ಅವರಿಗೆ ನ್ಯಾಯ ಒದಗಿಸದ ಕಾರಣ ನಾನೂ ಅವರ ನೋವನ್ನು ಹಂಚಿಕೊಳ್ಳುತ್ತೇನೆ. ಅನ್ಯಾಯವನ್ನು ಮಾಡುವುದು ಪಾಪ, ಆದರೆ ಅನ್ಯಾಯವನ್ನು ಸಹಿಸುವುದು ಕೂಡಾ ಪಾಪವಾಗಿದೆ. ರೈತರನ್ನು ಬೆಂಬಲಿಸಲು, ಕೆಲವರು ತಮ್ಮ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ನಾನು ನನ್ನ ಪ್ರಾಣವನ್ನು ತ್ಯಾಗ ಮಾಡಲು ನಿರ್ಧರಿಸಿದ್ದೇನೆ” ಎಂದು ಬರೆದು ಆತ್ಮಹತ್ಯೆಗೆ ಶರಣಾಗಿದ್ದರು.
ಇನ್ನು ದೆಹಲಿಯಲ್ಲಿ ದಿನೇ ದಿನೇ ಪ್ರತಿಭಟನಾ ನಿರತ ರೈತರು ಸಾವನಪ್ಪುತ್ತಿದ್ದರೂ ಸಹ ಪ್ರಧಾನಿ ಮೋದಿ ತಿರುಗಿ ನೋಡುತ್ತಿಲ್ಲ. ಇದು ಅವರ ಕಲ್ಲೆದೆಯನ್ನು, ರೈತರ ಬಗೆಗಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಹಲವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ರೈತ ಹೋರಾಟವನ್ನು ಬೆಂಬಲಿಸಿ ಆತ್ಮಹತ್ಯೆ ಮಾಡಿಕೊಂಡ ಸಿಖ್ ಧರ್ಮಗುರು!