Homeಮುಖಪುಟಒಂದೇ ವಾರದಲ್ಲಿ ತಮಿಳುನಾಡಿನ ಐವರು ನೀಟ್ ಆಕಾಂಕ್ಷಿಗಳ ಆತ್ಮಹತ್ಯೆ!: ವಿದ್ಯಾರ್ಥಿಗಳಿಂದ ಪ್ರತಿಭಟನೆ

ಒಂದೇ ವಾರದಲ್ಲಿ ತಮಿಳುನಾಡಿನ ಐವರು ನೀಟ್ ಆಕಾಂಕ್ಷಿಗಳ ಆತ್ಮಹತ್ಯೆ!: ವಿದ್ಯಾರ್ಥಿಗಳಿಂದ ಪ್ರತಿಭಟನೆ

ನೀಟ್ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿ, "ಸಾಂಕ್ರಾಮಿಕ ರೋಗದ ಮಧ್ಯೆ ನೀಟ್ ಪರೀಕ್ಷೆಯನ್ನು ಸುರಕ್ಷಿತವಾಗಿ ನಡೆಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ" ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಹೇಳಿತ್ತು.

- Advertisement -
- Advertisement -

ಇಂದು ಆರಂಭವಾಗಿರುವ ನೀಟ್ ಪರೀಕ್ಷೆಗೆ ಹಾಜರಾಗಬೇಕಿದ್ದ 5 ಜನ ವಿದ್ಯಾರ್ಥಿಗಳು ಕಳೆದೊಂದು ವಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕೊರೊನಾ ಮಧ್ಯೆ ಜೆಇಇ ಮತ್ತು ನೀಟ್ ಪ್ರವೇಶ ಪರೀಕ್ಷೆಗಳನ್ನು ಮುಂದೂಡುವಂತೆ ದೆಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದರೂ ಸಹ ಕೇಂದ್ರ ಪರೀಕ್ಷೆ ನಡೆಸುತ್ತಿರುವುದರಿಂದ ಒತ್ತಡಕ್ಕೊಳಗಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ತಮಿಳುನಾಡಿನ ತಿರುಚೆಂಗೋಡ್ ನಗರದ ವ್ಯಾಪಾರಿಯ ಮಗನಾದ ಮೋತಿಲಾಲ್ ಎಂಬ 20 ವರ್ಷದ ಯುವಕ ಕಳೆದ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಲಿಲ್ಲ. ಹಾಗಾಗಿ ಇಂದು ನಡೆಯುವ ಪರೀಕ್ಷೆಗೆ ಹಾಜರಾಗಬೇಕಿದ್ದ ಯುವಕ ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ರೀತಿ ಜೋತಿಶ್ರೀ ಮತ್ತು ಧರ್ಮಪುರಿಯ ವ್ಯಾಪಾರಿಯ ಮಗನಾದ ಆದಿತ್ಯ ಎಂಬ ವಿದ್ಯಾರ್ಥಿಗಳು ಸಹ ನಿನ್ನೆ ಶವವಾಗಿ ಪತ್ತೆಯಾಗಿದ್ದಾರೆ.

“ಕಳೆದ ವರ್ಷ ಪ್ರವೇಶ ಪರೀಕ್ಷೆ ಬರೆದು, ವೈಟಿಂಗ್ ಲಿಸ್ಟ್‌ಗಾಗಿ ಕಾಯುತ್ತಿದ್ದ ಮಧುರೈನ 19 ವರ್ಷದ ಯುವತಿ ಸೇರಿದಂತೆ, ಕಳೆದ ವರ್ಷ ಖಾಸಗೀ ಕಾಲೇಜಿನಲ್ಲಿಯೂ ಪ್ರವೇಶ ಸಿಗದ ರೈತನ ಮಗನಾದ ವಿಗ್ನೇಶ್ ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಜೋತಿಶ್ರೀ ಎನ್ನುವ ಯುವತಿ ಬರೆದಿರುವ ಆತ್ಮಹತ್ಯಾ ಪತ್ರದಲ್ಲಿ, “ನಾನು ಪರೀಕ್ಷೆಗೆ ಚೆನ್ನಾಗಿಯೇ ಸಿದ್ಧತೆ ಮಾಡಿಕೊಂಡಿದ್ದೇನೆ. ಆದರೂ ನನಗೆ ಭಯವಾಗುತ್ತಿದೆ. ಆದರೆ, ವೈದ್ಯಕೀಯ ಸೀಟ್ ಪಡೆಯದಿದ್ದರೆ, ನಾನು ಏನು ಮಾಡಲಿ” ಎಂದು ಬರೆದುಕೊಂಡಿದ್ದಾಳೆ ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸದಿರುವಂತೆ ಅಥವಾ ಪರೀಕ್ಷೆಯಿಂದ ವಿನಾಯಿತಿ ನೀಡುವಂತೆ ಕೇಂದ್ರವನ್ನು ಒತ್ತಾಯಿಸಿ, ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಸೀಟ್‌ಗಳನ್ನು ಹಂಚುವಂತೆ ತಮಿಳುನಾಡು ಕೇಳಿಕೊಂಡಿತ್ತು.

ಇದನ್ನೂ ಓದಿ: ಜೆಇಇ, ನೀಟ್ ಪರೀಕ್ಷೆಗಳ ಬಗ್ಗೆ ಚರ್ಚಿಸಿ ಎಂದರೆ, ಪ್ರಧಾನಿ, ಗೊಂಬೆಗಳ ಬಗ್ಗೆ ಮಾತನಾಡಿದ್ದಾರೆ: ರಾಹುಲ್ ಗಾಂಧಿ

ಪಿಎಂಕೆ ಸಂಸ್ಥಾಪಕ ಎಸ್.ರಾಮದಾಸ್ ಇದಕ್ಕೆ ಸಂಬಂಧಿಸಿದಂತೆ, “ನೀಟ್ ಅನ್ನು ಶಾಶ್ವತವಾಗಿ ರದ್ದುಗೊಳಿಸಬೇಕು. ಇದು ಮಾತ್ರ ಪರಿಹಾರ” ಎಂದು ಬುಧವಾರ ಹೇಳಿದ್ದರು.

ನೀಟ್ ಪರೀಕ್ಷೆಯನ್ನು ಮುಂದೂಡುವಂತೆ ಪ್ರಬಲವಾಗಿ ಒತ್ತಾಯಿಸುತ್ತಿರುವವರಲ್ಲಿ ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಕೂಡ ಒಬ್ಬರು. “ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನವನ್ನು ಅಸ್ಥಿರಗೊಳಿಸುತ್ತದೆ” ಎಂದು ಅವರು ಹೇಳಿದ್ದರು.

ನೀಟ್ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿ, “ಸಾಂಕ್ರಾಮಿಕ ರೋಗದ ಮಧ್ಯೆ ನೀಟ್ ಪರೀಕ್ಷೆಯನ್ನು ಸುರಕ್ಷಿತವಾಗಿ ನಡೆಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ” ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಹೇಳಿತ್ತು.

ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಕಳೆದ ಒಂದು ದಶಕದಿಂದ ತಿರಸ್ಕರಿಸುತ್ತಿರುವ ತಮಿಳುನಾಡು, “ಇದು ವಿದ್ಯಾರ್ಥಿಗಳನ್ನು ಒತ್ತಡಕ್ಕೆ ಸಿಲುಕಿಸುತ್ತದೆ ಮತ್ತು ಬಡ ವಿದ್ಯಾರ್ಥಿಗಳಿಗೆ ಈ ದುಬಾರಿ ಕೋಚಿಂಗ್ ಅನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೊಂಡುಬಂದಿದೆ.

ನೀಟ್‌ಗೂ ಮೊದಲು ವಿದ್ಯಾರ್ಥಿಗಳು ತಮ್ಮ ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಸೀಟುಗಳನ್ನು ಪಡೆಯುತ್ತಿದ್ದರು. ಯುಪಿಎ ಆಡಳಿತದಲ್ಲಿ, ತಮಿಳುನಾಡು ರಾಜ್ಯವು ನೀಟ್‌ನಿಂದ ವಿನಾಯಿತಿಯನ್ನು ಪಡೆದಿತ್ತು. ಆದರೆ ಎನ್‌ಡಿಎ ಸರ್ಕಾರ ಈ ವಿನಾಯಿತಿಯನ್ನು ರದ್ದುಗೊಳಿಸಿದೆ.

ತಿರುಪ್ಪರಂಕುಂಡ್ರಂನ ಡಿಎಂಕೆ ಶಾಸಕ ಪಿ.ಸರವಣನ್, “ಖಿನ್ನತೆ ಮತ್ತು ನೀಟ್‌ನ ಭಯವು ತಮಿಳುನಾಡಿನಲ್ಲಿ ಮತ್ತೊಂದು ಜೀವವನ್ನು ಬಲಿ ತೆಗೆದುಕೊಂಡಿದೆ. ದೇಶಾದ್ಯಂತ ಏಕರೂಪದ ಶಾಲಾ ಪಠ್ಯಕ್ರಮವಿಲ್ಲ. ಆದರೂ ವೈದ್ಯಕೀಯ ಪ್ರವೇಶಕ್ಕಾಗಿ ರಾಷ್ಟ್ರವ್ಯಾಪಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುತ್ತಿರುವುದು ತರ್ಕಬದ್ಧವಲ್ಲ” ಎಂದು ಆತ್ಮಹತ್ಯೆ ಮಾಡಿಕೊಂಡಿದ್ದ ದುರ್ಗಾ ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಾ ಹೇಳಿದ್ದರು.

“412 ಸರ್ಕಾರಿ ತರಬೇತಿ ಕೇಂದ್ರಗಳ ಮೂಲಕ ಉಚಿತ ನೀಟ್ ಕೋಚಿಂಗ್ ಪಡೆದಿದ್ದ 19,000 ವಿದ್ಯಾರ್ಥಿಗಳಲ್ಲಿ ಯಾರೊಬ್ಬರೂ ಕಳೆದ ವರ್ಷ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲಿಲ್ಲ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯ ಅಗತ್ಯವಿದೆ. ಆದರೆ ಇದಕ್ಕೆ ಭಾರಿ ವೆಚ್ಚ ಮಾಡಬೇಕಾಗುತ್ತದೆ. ತಮಿಳುನಾಡಿನಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವವರೆಗೆ ನೀಟ್ ಅನ್ನು ರದ್ದುಗೊಳಿಸಬೇಕು” ಎಂದು ಅವರು ಹೇಳಿದ್ದರು.

ಈ ಅನ್ಯಾಯದ ಸಾವುಗಳ ವಿರುದ್ಧ ವಿವಿಧ ರಾಜಕೀಯ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಮಧುರೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ದಿ ಹಿಂದು ವರದಿ ಮಾಡಿದೆ.

ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ: 104


ಇದನ್ನೂ ಓದಿ: ಕೊರೊನಾ ಕಾರಣ ಸದನದಲ್ಲಿ ಪ್ರಶ್ನೋತ್ತರ ವೇಳೆ ಇಲ್ಲ, ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಜೆಇಇ, ನೀಟ್ ಪರೀಕ್ಷೆ: ಒವೈಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

- Advertisment -

Must Read

ಎಲ್ಗಾರ್ ಪರಿಷತ್ ಪ್ರಕರಣ: ಗೌತಮ್ ನವ್ಲಾಖಾ ಬಿಡುಗಡೆ; ಇನ್ನೆಷ್ಟು ಮಂದಿ ಜೈಲಿನಲ್ಲಿದ್ದಾರೆ?

0
ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ನವಿ ಮುಂಬೈನಲ್ಲಿ ಗೃಹಬಂಧನದಲ್ಲಿದ್ದ ಗೌತಮ್ ನವ್ಲಾಖಾ ಅವರನ್ನು ಶನಿವಾರ ತಡರಾತ್ರಿ 8:30ರ ಸುಮಾರಿಗೆ ಬಂಧನದಿಂದ ಬಿಡುಗಡೆ ಮಾಡಲಾಗಿದೆ. ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ...