ಕೊರೊನಾದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಆಶಾವಾದ, ಚೈತನ್ಯ ತುಂಬಲು ಮತ್ತು ಜನಪರ ರಾಜಕಾರಣದ ಅವಶ್ಯಕತೆಯ ಬಗ್ಗೆ ತಿಳಿಸಲು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರವಿಕೃಷ್ಣಾ ರೆಡ್ಡಿಯವರ ನೇತೃತ್ವದಲ್ಲಿ “ಚಲಿಸು ಕರ್ನಾಟಕ” ಎಂಬ 2700 ಕಿ.ಮೀ. ಸೈಕಲ್ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದಾದ್ಯಂತ 3 ಹಂತಗಳಲ್ಲಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಸೆಪ್ಟೆಂಬರ್ 14 ರಿಂದು ಕೋಲಾರದಿಂದ ಮೊದಲ ಹಂತದ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ.
“ಇತ್ತೀಚಿನ ತಿಂಗಳುಗಳಲ್ಲಿ ಜನಜೀವನವು ಏಳುಬೀಳುಗಳೊಂದಿಗೆ ನಡೆಯುತ್ತಿದೆ. ಕೆಲವರದು ಸ್ತಬ್ಧವಾಗಿದ್ದರೆ, ಬಹುತೇಕರದು ಮುಗ್ಗರಿಸಿದೆ. ಇದನ್ನು ಸರಿಪಡಿಸುವಲ್ಲಿ ಮತ್ತು ಜನರ ಬದುಕನ್ನು ಮೇಲೆತ್ತುವಲ್ಲಿ ಸರ್ಕಾರಗಳು ಮತ್ತು ಅಧಿಕಾರ-ಕೇಂದ್ರಿತ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ದಾರುಣವಾಗಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದೆ. ನಾನೂ ಸೇರಿದಂತೆ ನಮ್ಮ ಪಕ್ಷದ ಹಲವು ಪದಾಧಿಕಾರಿಗಳು, ಸದಸ್ಯರು ಮತ್ತು ಬೆಂಬಲಿಗರು ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ‘ಚಲಿಸು ಕರ್ನಾಟಕ’ ಯಾತ್ರೆಯ ಭಾಗವಾಗಿ ಮುಂದಿನ ಮೂರು ತಿಂಗಳ ಕಾಲ ಸಂಚರಿಸಲಿದ್ದೇವೆ” ಎಂದು ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸರು ರವಿಕೃಷ್ಣಾರೆಡ್ಡಿ ಮೇಲೆ ಗೂಂಡಾಗಿರಿ ನಡೆಸಿದ್ದು, ತಮ್ಮ ಸೆಕ್ಸ್ ಹಗರಣ ಮುಚ್ಚಿಡುವುದಕ್ಕಾ!?
“ಇಂತಹ ಚಾರಿತ್ರಿಕ ಯಾತ್ರೆಯು ತಮ್ಮ ಸಹಾಯವಿಲ್ಲದೆ ಸಾಧ್ಯವಾಗುವುದಿಲ್ಲ ಮತ್ತು ಅದು ಜನರಿಗೆ ಮುಟ್ಟದಿದ್ದರೆ ಸಾರ್ಥಕವೂ ಅಲ್ಲ. ಹಾಗಾಗಿ ತಾವು ಉದಾರ ಮನಸ್ಸಿನಿಂದ ನಮ್ಮ ಈ ಅಭಿಯಾನಕ್ಕೆ ಮತ್ತು ಹೋರಾಟಕ್ಕೆ ಬೆಂಬಲ ನೀಡಬೇಕೆಂದು ನಾನು ತಮ್ಮಲ್ಲಿ ಕೋರಿಕೊಳ್ಳುತ್ತೇನೆ. ದಯವಿಟ್ಟು ತಾವು ತಮ್ಮ ಕೈಲಾದಷ್ಟು ಧನಸಹಾಯ ಮಾಡಿ ಈ ಸೈಕಲ್ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಮತ್ತು ರಾಜ್ಯದ ಜನರಲ್ಲಿ ಭವಿಷ್ಯದ ಬಗ್ಗೆ ಆಶಾವಾದ ಮೂಡಿಸುವಲ್ಲಿ ಹಾಗೂ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣವನ್ನು ಬೆಂಬಲಿಸುವಲ್ಲಿ ತಮ್ಮ ಪಾಲೂ ಇರಲಿ” ಎಂದು ಅವರು ಮನವಿ ಮಾಡಿದ್ದಾರೆ.
“ಕಳೆದ ಆರೇಳು ತಿಂಗಳಿನಿಂದ ರಾಜ್ಯದ ಜನರದೂ ಸೇರಿದಂತೆ ಜಗತ್ತಿನಾದ್ಯಂತ ಬಹುತೇಕ ಜನರ ಬದುಕು ಅಯೋಮಯವಾಗಿದೆ, ಅನಿಶ್ಚಿತತೆಯಿಂದ ಕೂಡಿದೆ. ಕೆಲವರದು ಮಾತ್ರ ಅಷ್ಟೇನೂ ತೊಂದರೆಗಳಿಲ್ಲದೆ ನಡೆಯುತ್ತಿದ್ದರೆ, ಬಹುತೇಕರದು ಮುಗ್ಗರಿಸಿದೆ, ಸ್ತಬ್ಧವಾಗಿದೆ, ನಿಶ್ಚಲವಾಗಿದೆ. ಆದರೂ ಜೀವನ ನಡೆಯಲೇಬೇಕು. ಆಶಾವಾದದಿಂದ, ಕ್ರಿಯಾಶೀಲತೆಯಿಂದ, ಎಚ್ಚರಿಕೆಯಿಂದ ನಾವು ಮುನ್ನಡೆಯಬೇಕು, ಚಲಿಸಬೇಕು, ಜೀವನವನ್ನು ಕಟ್ಟಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ, ಕೊರೊನಾ ವೈರಸ್ ತಂದೊಡ್ಡಿರುವ ವಿಪತ್ತು, ಜನರ ಸಮಸ್ಯೆಗಳು ಮತ್ತು ಅದರ ಪರಿಹಾರಗಳು, ಸರ್ಕಾರ ಮಾಡಬೇಕಾಗಿರುವ ಕೆಲಸ, ಜನರ ಸಹಭಾಗಿತ್ವ ಮತ್ತು ಜವಾಬ್ದಾರಿ, ಮುಂತಾದ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅವರು ಸ್ಥೈರ್ಯದಿಂದ ಮುನ್ನಡೆಯುವಂತೆ ಪ್ರೇರೇಪಿಸಲು ನಾಳೆಯಿಂದ ‘ಉಜ್ವಲ ಭವಿಷ್ಯದೆಡೆಗೆ, ಸುಭದ್ರ ಕರ್ನಾಟಕದೆಡೆಗೆ’ ಎಂಬ ಈ ಮಹತ್ವದ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ” ಎಂದರು.
ಇದನ್ನೂ ಓದಿ: ಅಕ್ಕಿಬೇಳೆಯಿಂದ ಪಿಪಿಇ ಕಿಟ್ವರೆಗೂ ಭ್ರಷ್ಟಾಚಾರ ನಡೆಯುತ್ತಿದೆ: ರವಿಕೃಷ್ಣಾರೆಡ್ಡಿ ಸಂದರ್ಶನ