2019 ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಬಿಎಸ್ಪಿ ಶಾಸಕಿ ರಾಮ್ ಬಾಯಿ ಸಿಂಗ್ ಅವರ ಪತಿಯನ್ನು ಬಂಧಿಸಲು ಮಾಹಿತಿ ನೀಡಿದವರಿಗೆ ಮಧ್ಯಪ್ರದೇಶ ಪೊಲೀಸರು 30,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಕಾಂಗ್ರೆಸ್ ನಾಯಕ ದೇವೇಂದ್ರ ಚೌರೇಶಿಯಾ ಹತ್ಯೆ ಪ್ರಕರಣದಲ್ಲಿ ಬಹುಜನ ಸಮಾಜವಾದಿ ಪಕ್ಷದ ಶಾಸಕಿ ರಾಮ್ ಬಾಯಿ ಸಿಂಗ್ ಅವರ ಪತಿ ಗೋವಿಂದ್ ಸಿಂಗ್ ಆರೋಪಿಯಾಗಿದ್ದಾರೆ. ಇವರನ್ನು ಬಂಧಿಸಲು ಸಹಾಯಕವಾಗುವ ಮಾಹಿತಿ ನೀಡಿದವರಿಗೆ 30 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ಬಿಎಸ್ಪಿಯ ರಾಮ್ ಬಾಯಿ ಸಿಂಗ್ ಅವರು ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಪಥಾರಿಯಾ ಕ್ಷೇತ್ರದ ಶಾಸಕಿರಾಗಿದ್ದಾರೆ.
ಕಳೆದ ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, 2019 ರ ಮಾರ್ಚ್ 15 ರಂದು ಹತ್ಯೆ ಕುರಿತು ಎಫ್ಐಆರ್ ಹಾಕಲಾಗಿದೆ. ಮೃತ ದೇವೇಂದ್ರ ಚೌರೇಶಿಯಾ ಅವರ ಪುತ್ರ ಸೋಮೇಶ್ ತನ್ನ ತಂದೆಯ ಹತ್ಯೆಯಲ್ಲಿ ಗೋವಿಂದ್ ಸಿಂಗ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರೂ, ತನಿಖಾ ಅಧಿಕಾರಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ಅನರ್ಹಗೊಳಿಸಲು ಟಿಎಂಸಿ ಒತ್ತಾಯ: ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ವಪನ್ ದಾಸ್ಗುಪ್ತಾ
ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಂತರ ರಾಜ್ಯ ಪೊಲೀಸ್ ಇಲಾಖೆ ಆರೋಪಿ ಗೋವಿಂದ್ ಸಿಂಗ್ ಅವರನ್ನು ಬಂಧಿಸಲು ತಮ್ಮ ಪ್ರಯತ್ನವನ್ನು ತೀವ್ರಗೊಳಿಸಿದ್ದಾರೆ. ಅದರಲ್ಲಿ ಒಂದು ಈ ಬಹುಮಾನ ಘೋಷಣೆಯಾಗಿದೆ.
“ಕಾಂಗ್ರೆಸ್ ನಾಯಕನ ಕೊಲೆ ಪ್ರಕರಣದಲ್ಲಿ ಗೋವಿಂದ್ ಸಿಂಗ್ ಬಂಧನಕ್ಕೆ ಪೊಲೀಸರು 30,000 ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ” ಎಂದು ಐಜಿಪಿ ಅನಿಲ್ ಶರ್ಮಾ ಹೇಳಿದ್ದಾರೆ.
ಅಲ್ಲದೆ, ವಿಶೇಷ ಕಾರ್ಯಪಡೆಯ (ಎಸ್ಟಿಎಫ್) ಹೆಚ್ಚುವರಿ ಮಹಾನಿರ್ದೇಶಕಿ ವಿಪಿನ್ ಮಹೇಶ್ವರಿ ಕೂಡ ಗೋವಿಂದ್ ಸಿಂಗ್ ಅವರನ್ನು ಬಂಧಿಸುವ ಪ್ರಯತ್ನಗಳ ಬಗ್ಗೆ ಮೇಲ್ವಿಚಾರಣೆ ನಡೆಸಲು ಕಳೆದ ಎರಡು ದಿನಗಳಿಂದ ದಾಮೋಹದಲ್ಲಿ ಇದ್ದಾರೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಹುಜನ ಸಮಾಜವಾದಿ ಪಕ್ಷದಲ್ಲಿದ್ದ ದೇವೇಂದ್ರ ಚೌರಾಸಿಯಾ ಅವರು ಕಾಂಗ್ರೆಸ್ ಸೇರ್ಪಡೆಯಾದ ನಂತರ 2019 ರ ಮಾರ್ಚ್ 15 ರಂದು ಹತ್ತಾ ಪಟ್ಟಣದಲ್ಲಿ ಕೊಲೆಯಾಗಿದ್ದರು. ಪೊಲೀಸರು ಬಿಎಸ್ಪಿ ಶಾಸಕಿಯ ಪತಿ ಗೋವಿಂದ್ ಸಿಂಗ್ ಮತ್ತು ಇತರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಮೈತ್ರಿ ತುಂಬಾ ಕೆಟ್ಟ ಮತ್ತು ಕಹಿ ಅನುಭವ ನೀಡಿದೆ- ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ