Homeಅಂಕಣಗಳುಬಹುಜನ ಭಾರತ; ದೇಶದ ಬಹುಜನರ ಅಣಕಿಸುವ ಬಜೆಟ್!

ಬಹುಜನ ಭಾರತ; ದೇಶದ ಬಹುಜನರ ಅಣಕಿಸುವ ಬಜೆಟ್!

- Advertisement -
- Advertisement -

ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಬಜೆಟ್ ಮಂಗಳವಾರ ಲೋಕಸಭೆಯಲ್ಲಿ ಅನಾವರಣಗೊಂಡಿತು. ದೇಶದ ಷೇರುಪೇಟೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿತು. ಮಾಧ್ಯಮಲೋಕ ಈ ಉತ್ಸಾಹವನ್ನೇ ಬಜೆಟ್‌ನ ಅಳತೆಗೋಲು ಎಂಬಂತೆ ಬಿಂಬಿಸಿದೆ.

ಷೇರುಪೇಟೆಯ ಜಿಗಿತ-ಕುಸಿತದಲ್ಲಿ ಪ್ರತಿಫಲಿಸುವುದು ಶೇ.4ರಷ್ಟು ಭಾರತ ಮಾತ್ರ. ಉಳಿದ ಶೇ.96ರಷ್ಟು ಭಾರತದ ಪಾಲಿಗೆ ಈ ಬಜೆಟ್ ಎಷ್ಟು ಪ್ರಸ್ತುತ ಅಥವಾ ಅಪ್ರಸ್ತುತ ಎಂಬುದೇ ಅಸಲು ಸಂಗತಿ.

ಅಂಕಿಅಂಶಗಳ ಮಾಯಾಜಾಲವನ್ನು ಹರಿದು ನೋಡುವುದಾದರೆ ಬಡವರನ್ನು ಬಡವರನ್ನಾಗಿಯೇ ಉಳಿಸಿ, ಧನಿಕರನ್ನು ಇನ್ನಷ್ಟು ಧನಿಕರನ್ನಾಗಿಸುವ ಯಥಾಸ್ಥಿತಿವಾದಿ ಬಜೆಟ್ ಇದು. ನಿರುದ್ಯೋಗ, ಸಮಾಜ ಕಲ್ಯಾಣ, ವಿತ್ತೀಯ ಸ್ಥಿತಿಗತಿಯಲ್ಲೂ ನಿರಾಶೆಯನ್ನೇ ಧರಿಸಿರುವ ಮುಂಗಡಪತ್ರ.

ಪೆಟ್ರೋಲ್ ಎಂಬುದು ಮೋದಿ ಸರ್ಕಾರದ ಪಾಲಿಗೆ ತೆರಿಗೆ ಸಂಗ್ರಹದ ಕಾಮಧೇನು-ಕಲ್ಪವೃಕ್ಷ. ಜನಸಾಮಾನ್ಯರ ಪಾಲಿಗೆ ನಡು ಮುರಿದು ನೆಲಕ್ಕೆ ಕೆಡವಿರುವ ಭಯಂಕರ ಬಡಿಗೆ. ಅನ್‌ಬ್ಲೆಂಡೆಡ್ ಪೆಟ್ರೋಲ್ ಮೇಲೆ ಲೀಟರಿಗೆ ಎರಡು ರೂಪಾಯಿಯ ಹೊಸ ತೆರಿಗೆಯನ್ನು ಬಜೆಟ್ಟಿನಲ್ಲಿ ಹೇರಲಾಗಿದೆ. ಈ ಹೊಸ ಭಾರವನ್ನು ಜನಸಾಮಾನ್ಯರೇ ಹೊರಬೇಕಿದೆ. ವಿಶ್ವಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಈಗಾಗಲೆ ಏರುಮುಖವಾಗಿದೆ. ಮುಂದಿನ ತಿಂಗಳುಗಳಲ್ಲಿ ಈ ತೈಲದ ಬೆಲೆ ಇನ್ನಷ್ಟು ಏರಿಕೆಯ ಒಜ್ಜೆ ಹೊರಲು ಭಾರತದೇಶವಾಸಿಗಳು ತಯಾರಾಗಬೇಕಿದೆ.

ಮೋದಿಯಂತಹ ಮೋದಿಯವರೇ ಮಂಡಿಯೂರಿರುವಂತಹ ಪ್ರಬಲ ರೈತ ಚಳವಳಿ ವರ್ಷದೊಪ್ಪತ್ತು ನಡೆದದ್ದನ್ನು ವಿಶ್ವವೇ ಎದ್ದು ಕುಳಿತು ನೋಡಿತು. ಆದರೆ ಈ ಬಜೆಟ್ಟಿನಲ್ಲಿ ಅಸಲಿ ಕೃಷಿಯ ವಿಷಯವನ್ನು ಭೂತಗಾಜು ಹಾಕಿ ಹುಡುಕಬೇಕಿದೆ.

ಕನಿಷ್ಠ ಬೆಂಬಲ ಬೆಲೆಯ ಸೌಲಭ್ಯ ಎಲ್ಲ ರೈತರ ಉತ್ಪನ್ನಗಳಿಗೂ ದೊರೆಯಬೇಕೆಂಬ ರೈತ ಆಂದೋಲನದ ಬೇಡಿಕೆಗೆ ಕೇಂದ್ರ ಸರ್ಕಾರ ಯಾವ ಕಿಮ್ಮತ್ತನ್ನೂ ನೀಡಿಲ್ಲ. ಕಳೆದ ವರ್ಷದ (2021) ಬಜೆಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ತೆತ್ತು ಕೃಷಿ ಉತ್ಪನ್ನಗಳ ಖರೀದಿಗೆ ತೆಗೆದಿರಿಸಿದ್ದ ಮೊತ್ತ 2.48 ಲಕ್ಷ ಕೋಟಿ ರುಪಾಯಿ. ಇಂದು ಮಂಡಿಸಿದ ಬಜೆಟ್ಟಿನಲ್ಲಿ ಈ ಮೊತ್ತ 2.37 ಲಕ್ಷ ಕೋಟಿ ರುಪಾಯಿ.

ರಸಗೊಬ್ಬರಗಳ ಮೇಲಿನ ಸಬ್ಸಿಡಿಯ ಮೊತ್ತವನ್ನು 1.40 ಲಕ್ಷ ಕೋಟಿ ರುಪಾಯಿಗಳಿಂದ 1.05 ಕೋಟಿ ರುಪಾಯಿಗಳಿಗೆ ಖೋತಾ ಮಾಡಲಾಗಿದೆ. ಇದೇ ರೀತಿ ಬಡಜನಸಮುದಾಯಗಳಿಗೆ ನೀಡಲಾಗುವ ಆಹಾರ ಸಬ್ಸಿಡಿ ಕೂಡ 2.9 ಲಕ್ಷ ಕೋಟಿ ರುಪಾಯಿಗಳಿಂದ 2.1 ಲಕ್ಷ ಕೋಟಿಗೆ ಇಳಿದಿದೆ. ರಾಷ್ಟ್ರೀಯ ಹಸಿರು ಕ್ರಾಂತಿ ಯೋಜನೆಗೆ ಕಳೆದ ಬಜೆಟ್‌ನಲ್ಲಿ 13 ಸಾವಿರ ಕೋಟಿ ತೆಗೆದಿರಿಸಲಾಗಿತ್ತು. ಈ ಬಾರಿ ಅದರ ಪ್ರಸ್ತಾಪವೇ ಇಲ್ಲ.

ಕೃಷಿ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ಕಾಗದದ ಮೇಲೆಯೇ ಉಳಿದಿದೆ. ಪ್ರಧಾನಮಂತ್ರಿ ರೈತ ಧನವೆಂದು ರೈತರಿಗೆ ಪ್ರತಿ ಮೂರು ತಿಂಗಳಿಗೆ ಎರಡು ಸಾವಿರದಂತೆ ವರ್ಷಕ್ಕೆ ಆರು ಸಾವಿರ ರುಪಾಯಿ ನೀಡಲಾಗುತ್ತಿದೆ. ಈ ಮೊತ್ತವನ್ನು ಹನ್ನೆರಡು ಸಾವಿರಕ್ಕೆ ಏರಿಸುವರೆಂಬ ನಿರೀಕ್ಷೆ ಹುಸಿಯಾಗಿದೆ. ಭೂರಹಿತ ಕೃಷಿ ಕೂಲಿ ಕಾರ್ಮಿಕ ಕುಟುಂಬಗಳಿಗೆ ತಲಾ ಆರು ಸಾವಿರ ರೂಪಾಯಿ ನೀಡಿಕೆಯನ್ನು ಆರಂಭಿಸಬಹುದಿತ್ತು.

ರೈತಾಪಿಗಳ ಜನಸಂಖ್ಯೆ ಶೇ.50ಕ್ಕೂ ಹೆಚ್ಚು. ಇವರ ಕೈಗೆ ಹಣ ಹರಿಯುವುದೆಂದರೆ ಖರೀದಿ ಸಾಮರ್ಥ್ಯ
ಹೆಚ್ಚಿಸಿ ಸರಕು ಸರಂಜಾಮುಗಳ ಬೇಡಿಕೆಯನ್ನು ಹೆಚ್ಚಿಸಿದಂತೆ. ಬೇಡಿಕೆ ಹೆಚ್ಚಿಸಿದರೆ ಉತ್ಪಾದನೆ ಚುರುಕು ಪಡೆದು ಉದ್ಯೋಗಾವಕಾಶ ಕುದುರಿ ಅರ್ಥಸ್ಥಿತಿಯ ಆವರ್ತ ಜೀವಂತಗೊಳ್ಳುತ್ತದೆ. ಆದರೆ ನಿರ್ಮಲಾ ಸೀತಾರಾಮನ್ ಈ ಉಸಾಬರಿಗೆ ಹೋಗಿಲ್ಲ. ಸಂಬಳದಾರ ಮಧ್ಯಮವರ್ಗಗಳಿಗೆ ಆದಾಯ ತೆರಿಗೆಯ ಯಾವುದೇ ರಿಯಾಯಿತಿ ಈ ವರ್ಷವೂ ದೊರೆತಿಲ್ಲ.

ಗ್ರಾಮೀಣ ಬಡಜನರನ್ನು ತಕ್ಕಮಟ್ಟಿಗಾದರೂ ಹಸಿವಿನಿಂದ ಕಾಪಾಡುತ್ತ ಬಂದಿರುವುದು ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಕೋವಿಡ್ ಲಾಕ್‌ಡೌನ್‌ಗಳ ನಂತರ ಮಹಾನಗರಗಳಿಂದ ಹಳ್ಳಿಗಳಿಗೆ ನಡೆದ ಮಹಾವಲಸೆಯ ನಂತರ ಆ ಜನರಾಶಿಯನ್ನು ಪೊರೆದ ಯೋಜನೆ. ಗ್ರಾಮೀಣ ಬಡಜನರಿಂದ ಭಾರೀ ಬೇಡಿಕೆ ಇರುವ ಯೋಜನೆಯಿದು. ಆದರೆ ಈ ಯೋಜನೆಯ ಹಂಚಿಕೆಯನ್ನು 98,000 ಕೋಟಿ ರುಪಾಯಿಗಳಿಂದ 73,000 ಕೋಟಿ ರುಪಾಯಿಗಳಿಗೆ ಇಳಿಸಲಾಗಿದೆ!

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಪಾಲಿಗೆ ಎಂದಿನಂತೆ ನಿರಾಶಾದಾಯಕ ಬಜೆಟ್. ಆರೋಗ್ಯ ಮಂತ್ರಾಲಯಕ್ಕೆ ಹಂಚಿಕೆ ಮಾಡಲಾಗಿರುವ ಒಟ್ಟು ಹಣ 86,200 ಕೋಟಿ ರುಪಾಯಿಗಳು. ಕಳೆದ ವರ್ಷದ ಪರಿಷ್ಕೃತ ಬಜೆಟ್ ಹಂಚಿಕೆಗೆ ಹೋಲಿಸಿದರೆ ಕೇವಲ 200 ಕೋಟಿ ರುಪಾಯಿಗಳ ಹೆಚ್ಚಳ!

ಶೇ.90ರಷ್ಟು ಉದ್ಯೋಗಾವಕಾಶಗಳನ್ನು ಒದಗಿಸುವ ಅಸಂಘಟಿತ ಕ್ಷೇತ್ರವನ್ನು ನೆಲಕಚ್ಚಿಸಲಾಗಿದೆ. ಹೀಗಾಗಿ ಈ ವಲಯಕ್ಕೆ ಪುನಶ್ಚೇತನ ನೀಡುವ ಮಾತನ್ನು ಬಜೆಟ್ಟಿನಲ್ಲಿ ನಿರೀಕ್ಷಿಸುವುದೂ ಮೂರ್ಖತನವಾದೀತು. ಹಣದುಬ್ಬರ ದರವನ್ನು ತಿರುಚಿ ತಗ್ಗಿಸಿ ಮಂಡಿಸಲಾಗಿದೆ.

ದೇಶದ ಅತಿ ಸಿರಿವಂತರ ಪ್ರಮಾಣ ಶೇ.10. ದೇಶದ ಶೇ.64.6ರಷ್ಟು ಸಂಪತ್ತು ಇವರ ಕೈಯಲ್ಲಿದೆ. ದೇಶವನ್ನು ಕಾಡಿದ ನೋಟು ರದ್ದು, ಕೋವಿಡ್ ಮಹಾ ಸಾಂಕ್ರಾಮಿಕ, ನಿರುದ್ಯೋಗ, ಬಡತನ, ಹಸಿವಿನ ಸಂಕಟಗಳು ಈ ವರ್ಗದ ಸಂಪತ್ತನ್ನು ಇನ್ನಷ್ಟು ಹೆಚ್ಚಿಸಿವೆ. ಭಾರತದ ಕೇವಲ ಹತ್ತು ಮಂದಿ ಅಪಾರ ಧನಿಕರ ಬಳಿ ಇರುವ ಸಂಪತ್ತಿನಿಂದ ದೇಶದ ಎಲ್ಲ ಮಕ್ಕಳ ಶಾಲಾ ಮತ್ತು ಪ್ರೌಢ ಶಿಕ್ಷಣವನ್ನು 25 ವರ್ಷಗಳ ಕಾಲ ನಡೆಸಬಹುದೆಂಬ ಅಂಕಿಅಂಶ ಎರಡು ವಾರಗಳ ಹಿಂದೆ ದಾವೋಸ್‌ನಲ್ಲಿ ಜರುಗಿದ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಮಂಡಿತವಾದವು. ದೇಶದ ಆರ್ಥಿಕ ಏಣಿಶ್ರೇಣಿಯ ಮೇಲ್ಭಾಗದ ಶೇ.10 ಮಂದಿ ದೇಶದ ಒಟ್ಟು ಸಂಪತ್ತಿನ ಶೇ.45ರಷ್ಟರ ಒಡೆತನ ಹೊಂದಿದ್ದರೆ ಕೆಳಭಾಗದ ಶೇ.50ರಷ್ಟು ಜನಸಂಖ್ಯೆಯು ದೇಶದ ಒಟ್ಟು ಸಂಪತ್ತಿನ ಶೇ.6ರಷ್ಟರಲ್ಲೇ ಒದ್ದಾಡಿದೆ. ಆಕ್ಸ್‌ಫ್ಯಾಮ್ ಇಂಡಿಯಾದ ಈ ಅಂಕಿ ಅಂಶಗಳ ಪ್ರಕಾರ ಈ ಶೇ.10ರಷ್ಟು ಅತಿ ಧನಿಕರ ಮೇಲೆ ವಿಧಿಸಲಾಗುವ ಶೇ.ಒಂದರಷ್ಟು ತೆರಿಗೆ ಕೂಡ 17.7 ಲಕ್ಷ ಹೆಚ್ಚುವರಿ ಆಮ್ಲಜನಕ ಸಿಲಿಂಡರುಗಳನ್ನು ಒದಗಿಸಬಲ್ಲದು. ಹಾಗೆಯೇ ಭಾರತದ 98 ಮಂದಿ ಶತಕೋಟ್ಯಾಧೀಶ ಕುಬೇರರ ಮೇಲೆ ವಿಧಿಸಲಾಗುವ ಶೇ.1ರಷ್ಟು ಸಂಪತ್ತು ತೆರಿಗೆ ಕೂಡ ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ಎನಿಸಿರುವ ಆಯುಷ್ಮಾನ್ ಭಾರತವನ್ನು ಏಳು ವರ್ಷಗಳಿಗೂ ಹೆಚ್ಚು ಕಾಲ ಸಾಕಬಲ್ಲದು.

ಆದರೂ ಕೇಂದ್ರ ಸರ್ಕಾರ ಇವರ ಮೇಲೆ ತೆರಿಗೆ ಹೆಚ್ಚಿಸುವ ಮನಸ್ಸು ಮಾಡುವುದಿಲ್ಲ. ಬದಲಿಗೆ ಇಂದು ಮಂಡಿಸಲಾಗಿರುವ ಬಜೆಟ್‌ನಲ್ಲಿ ಈ ಕುಬೇರರ ಸಮೂಹದ ಕಾರ್ಪೊರೇಟ್ ವಲಯದ ಮೇಲೆ ವಿಧಿಸಲಾಗಿರುವ ಕಾರ್ಪೊರೆಟ್ ಸರ್ಚಾರ್ಜ್ ತೆರಿಗೆಯನ್ನು ಶೇ.12ರಿಂದ ಶೇ.ಏಳಕ್ಕೆ ಇಳಿಸಲಾಗಿದೆ! ದಶಕಗಳಿಂದ ಮಾಡಿಟ್ಟಿದ್ದ ರೇಲ್ವೆ, ಬಂದರು, ವಿಮಾನಯಾನ ಸೇರಿದಂತೆ ಸಾರ್ವಜನಿಕ ವಲಯದ ಆಸ್ತಿಪಾಸ್ತಿಗಳನ್ನು ಅಗ್ಗದ ಬೆಲೆಗೆ ಕಾರ್ಪೊರೇಟುಗಳಿಗೆ ಮಾರಾಟ ಮಾಡಲಾಗುತ್ತಿದೆ.

ಇದು ಶೇ.80ರಷ್ಟು ಬಹುಜನ ಭಾರತದ ಅಣಕವಲ್ಲದೆ ಇನ್ನೇನು?

ಮುಕ್ಕಾಲುಪಾಲು ದೇಶವಾಸಿಗಳ ಬದುಕುಗಳು ನೋಟು ರದ್ದು, ಜಿ.ಎಸ್.ಟಿ., ಕೋವಿಡ್‌ನ ಕ್ರೂರ ಆಘಾತದಡಿ ಜರ್ಝರಿತವಾಗಿವೆ. ಆದರೆ ದೇಶದಲ್ಲಿ ಅಮೃತಕಾಲ ನಡೆಯುತ್ತಿದೆ… ಮುಂದಿನ 25 ವರ್ಷಗಳ ಕಾಲವೂ ಹಾಲಿ ಬಜೆಟ್ಟಿನ ದೂರದರ್ಶಿತ್ವ ವಿಸ್ತರಿಸಲಿದೆ ಎಂದು ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ರೊಟ್ಟಿ ಸಿಗದಿದ್ದರೆ ಕೇಕನ್ನು ತಿನ್ನಿ ಎಂದಿದ್ದ ಫ್ರಾನ್ಸಿನ ರಾಜಕುವರಿಯಂತೆ ಥೇಟು.


ಇದನ್ನೂ ಓದಿ: ಬಜೆಟ್‌ 2022-23: ಶಿಕ್ಷಣ, ಕೃಷಿ ಕ್ಷೇತ್ರಕ್ಕೆ ವಂಚನೆ; ಖಾಸಗಿ ಪರ ಧೋರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಿಶಾ ಸಾಲ್ಯಾನ್ ಸಾವು ಪ್ರಕರಣ: ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ (ಸೆಪ್ಟೆಂಬರ್ 2) ಸಿಬಿಐ ತನಿಖೆಗೆ ಆದೇಶಿಸಿದೆ. ಜೂನ್...

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...