Homeಅಂಕಣಗಳುಬಹುಜನ ಭಾರತ; ದೇಶದ ಬಹುಜನರ ಅಣಕಿಸುವ ಬಜೆಟ್!

ಬಹುಜನ ಭಾರತ; ದೇಶದ ಬಹುಜನರ ಅಣಕಿಸುವ ಬಜೆಟ್!

- Advertisement -
- Advertisement -

ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಬಜೆಟ್ ಮಂಗಳವಾರ ಲೋಕಸಭೆಯಲ್ಲಿ ಅನಾವರಣಗೊಂಡಿತು. ದೇಶದ ಷೇರುಪೇಟೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿತು. ಮಾಧ್ಯಮಲೋಕ ಈ ಉತ್ಸಾಹವನ್ನೇ ಬಜೆಟ್‌ನ ಅಳತೆಗೋಲು ಎಂಬಂತೆ ಬಿಂಬಿಸಿದೆ.

ಷೇರುಪೇಟೆಯ ಜಿಗಿತ-ಕುಸಿತದಲ್ಲಿ ಪ್ರತಿಫಲಿಸುವುದು ಶೇ.4ರಷ್ಟು ಭಾರತ ಮಾತ್ರ. ಉಳಿದ ಶೇ.96ರಷ್ಟು ಭಾರತದ ಪಾಲಿಗೆ ಈ ಬಜೆಟ್ ಎಷ್ಟು ಪ್ರಸ್ತುತ ಅಥವಾ ಅಪ್ರಸ್ತುತ ಎಂಬುದೇ ಅಸಲು ಸಂಗತಿ.

ಅಂಕಿಅಂಶಗಳ ಮಾಯಾಜಾಲವನ್ನು ಹರಿದು ನೋಡುವುದಾದರೆ ಬಡವರನ್ನು ಬಡವರನ್ನಾಗಿಯೇ ಉಳಿಸಿ, ಧನಿಕರನ್ನು ಇನ್ನಷ್ಟು ಧನಿಕರನ್ನಾಗಿಸುವ ಯಥಾಸ್ಥಿತಿವಾದಿ ಬಜೆಟ್ ಇದು. ನಿರುದ್ಯೋಗ, ಸಮಾಜ ಕಲ್ಯಾಣ, ವಿತ್ತೀಯ ಸ್ಥಿತಿಗತಿಯಲ್ಲೂ ನಿರಾಶೆಯನ್ನೇ ಧರಿಸಿರುವ ಮುಂಗಡಪತ್ರ.

ಪೆಟ್ರೋಲ್ ಎಂಬುದು ಮೋದಿ ಸರ್ಕಾರದ ಪಾಲಿಗೆ ತೆರಿಗೆ ಸಂಗ್ರಹದ ಕಾಮಧೇನು-ಕಲ್ಪವೃಕ್ಷ. ಜನಸಾಮಾನ್ಯರ ಪಾಲಿಗೆ ನಡು ಮುರಿದು ನೆಲಕ್ಕೆ ಕೆಡವಿರುವ ಭಯಂಕರ ಬಡಿಗೆ. ಅನ್‌ಬ್ಲೆಂಡೆಡ್ ಪೆಟ್ರೋಲ್ ಮೇಲೆ ಲೀಟರಿಗೆ ಎರಡು ರೂಪಾಯಿಯ ಹೊಸ ತೆರಿಗೆಯನ್ನು ಬಜೆಟ್ಟಿನಲ್ಲಿ ಹೇರಲಾಗಿದೆ. ಈ ಹೊಸ ಭಾರವನ್ನು ಜನಸಾಮಾನ್ಯರೇ ಹೊರಬೇಕಿದೆ. ವಿಶ್ವಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಈಗಾಗಲೆ ಏರುಮುಖವಾಗಿದೆ. ಮುಂದಿನ ತಿಂಗಳುಗಳಲ್ಲಿ ಈ ತೈಲದ ಬೆಲೆ ಇನ್ನಷ್ಟು ಏರಿಕೆಯ ಒಜ್ಜೆ ಹೊರಲು ಭಾರತದೇಶವಾಸಿಗಳು ತಯಾರಾಗಬೇಕಿದೆ.

ಮೋದಿಯಂತಹ ಮೋದಿಯವರೇ ಮಂಡಿಯೂರಿರುವಂತಹ ಪ್ರಬಲ ರೈತ ಚಳವಳಿ ವರ್ಷದೊಪ್ಪತ್ತು ನಡೆದದ್ದನ್ನು ವಿಶ್ವವೇ ಎದ್ದು ಕುಳಿತು ನೋಡಿತು. ಆದರೆ ಈ ಬಜೆಟ್ಟಿನಲ್ಲಿ ಅಸಲಿ ಕೃಷಿಯ ವಿಷಯವನ್ನು ಭೂತಗಾಜು ಹಾಕಿ ಹುಡುಕಬೇಕಿದೆ.

ಕನಿಷ್ಠ ಬೆಂಬಲ ಬೆಲೆಯ ಸೌಲಭ್ಯ ಎಲ್ಲ ರೈತರ ಉತ್ಪನ್ನಗಳಿಗೂ ದೊರೆಯಬೇಕೆಂಬ ರೈತ ಆಂದೋಲನದ ಬೇಡಿಕೆಗೆ ಕೇಂದ್ರ ಸರ್ಕಾರ ಯಾವ ಕಿಮ್ಮತ್ತನ್ನೂ ನೀಡಿಲ್ಲ. ಕಳೆದ ವರ್ಷದ (2021) ಬಜೆಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ತೆತ್ತು ಕೃಷಿ ಉತ್ಪನ್ನಗಳ ಖರೀದಿಗೆ ತೆಗೆದಿರಿಸಿದ್ದ ಮೊತ್ತ 2.48 ಲಕ್ಷ ಕೋಟಿ ರುಪಾಯಿ. ಇಂದು ಮಂಡಿಸಿದ ಬಜೆಟ್ಟಿನಲ್ಲಿ ಈ ಮೊತ್ತ 2.37 ಲಕ್ಷ ಕೋಟಿ ರುಪಾಯಿ.

ರಸಗೊಬ್ಬರಗಳ ಮೇಲಿನ ಸಬ್ಸಿಡಿಯ ಮೊತ್ತವನ್ನು 1.40 ಲಕ್ಷ ಕೋಟಿ ರುಪಾಯಿಗಳಿಂದ 1.05 ಕೋಟಿ ರುಪಾಯಿಗಳಿಗೆ ಖೋತಾ ಮಾಡಲಾಗಿದೆ. ಇದೇ ರೀತಿ ಬಡಜನಸಮುದಾಯಗಳಿಗೆ ನೀಡಲಾಗುವ ಆಹಾರ ಸಬ್ಸಿಡಿ ಕೂಡ 2.9 ಲಕ್ಷ ಕೋಟಿ ರುಪಾಯಿಗಳಿಂದ 2.1 ಲಕ್ಷ ಕೋಟಿಗೆ ಇಳಿದಿದೆ. ರಾಷ್ಟ್ರೀಯ ಹಸಿರು ಕ್ರಾಂತಿ ಯೋಜನೆಗೆ ಕಳೆದ ಬಜೆಟ್‌ನಲ್ಲಿ 13 ಸಾವಿರ ಕೋಟಿ ತೆಗೆದಿರಿಸಲಾಗಿತ್ತು. ಈ ಬಾರಿ ಅದರ ಪ್ರಸ್ತಾಪವೇ ಇಲ್ಲ.

ಕೃಷಿ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ಕಾಗದದ ಮೇಲೆಯೇ ಉಳಿದಿದೆ. ಪ್ರಧಾನಮಂತ್ರಿ ರೈತ ಧನವೆಂದು ರೈತರಿಗೆ ಪ್ರತಿ ಮೂರು ತಿಂಗಳಿಗೆ ಎರಡು ಸಾವಿರದಂತೆ ವರ್ಷಕ್ಕೆ ಆರು ಸಾವಿರ ರುಪಾಯಿ ನೀಡಲಾಗುತ್ತಿದೆ. ಈ ಮೊತ್ತವನ್ನು ಹನ್ನೆರಡು ಸಾವಿರಕ್ಕೆ ಏರಿಸುವರೆಂಬ ನಿರೀಕ್ಷೆ ಹುಸಿಯಾಗಿದೆ. ಭೂರಹಿತ ಕೃಷಿ ಕೂಲಿ ಕಾರ್ಮಿಕ ಕುಟುಂಬಗಳಿಗೆ ತಲಾ ಆರು ಸಾವಿರ ರೂಪಾಯಿ ನೀಡಿಕೆಯನ್ನು ಆರಂಭಿಸಬಹುದಿತ್ತು.

ರೈತಾಪಿಗಳ ಜನಸಂಖ್ಯೆ ಶೇ.50ಕ್ಕೂ ಹೆಚ್ಚು. ಇವರ ಕೈಗೆ ಹಣ ಹರಿಯುವುದೆಂದರೆ ಖರೀದಿ ಸಾಮರ್ಥ್ಯ
ಹೆಚ್ಚಿಸಿ ಸರಕು ಸರಂಜಾಮುಗಳ ಬೇಡಿಕೆಯನ್ನು ಹೆಚ್ಚಿಸಿದಂತೆ. ಬೇಡಿಕೆ ಹೆಚ್ಚಿಸಿದರೆ ಉತ್ಪಾದನೆ ಚುರುಕು ಪಡೆದು ಉದ್ಯೋಗಾವಕಾಶ ಕುದುರಿ ಅರ್ಥಸ್ಥಿತಿಯ ಆವರ್ತ ಜೀವಂತಗೊಳ್ಳುತ್ತದೆ. ಆದರೆ ನಿರ್ಮಲಾ ಸೀತಾರಾಮನ್ ಈ ಉಸಾಬರಿಗೆ ಹೋಗಿಲ್ಲ. ಸಂಬಳದಾರ ಮಧ್ಯಮವರ್ಗಗಳಿಗೆ ಆದಾಯ ತೆರಿಗೆಯ ಯಾವುದೇ ರಿಯಾಯಿತಿ ಈ ವರ್ಷವೂ ದೊರೆತಿಲ್ಲ.

ಗ್ರಾಮೀಣ ಬಡಜನರನ್ನು ತಕ್ಕಮಟ್ಟಿಗಾದರೂ ಹಸಿವಿನಿಂದ ಕಾಪಾಡುತ್ತ ಬಂದಿರುವುದು ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಕೋವಿಡ್ ಲಾಕ್‌ಡೌನ್‌ಗಳ ನಂತರ ಮಹಾನಗರಗಳಿಂದ ಹಳ್ಳಿಗಳಿಗೆ ನಡೆದ ಮಹಾವಲಸೆಯ ನಂತರ ಆ ಜನರಾಶಿಯನ್ನು ಪೊರೆದ ಯೋಜನೆ. ಗ್ರಾಮೀಣ ಬಡಜನರಿಂದ ಭಾರೀ ಬೇಡಿಕೆ ಇರುವ ಯೋಜನೆಯಿದು. ಆದರೆ ಈ ಯೋಜನೆಯ ಹಂಚಿಕೆಯನ್ನು 98,000 ಕೋಟಿ ರುಪಾಯಿಗಳಿಂದ 73,000 ಕೋಟಿ ರುಪಾಯಿಗಳಿಗೆ ಇಳಿಸಲಾಗಿದೆ!

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಪಾಲಿಗೆ ಎಂದಿನಂತೆ ನಿರಾಶಾದಾಯಕ ಬಜೆಟ್. ಆರೋಗ್ಯ ಮಂತ್ರಾಲಯಕ್ಕೆ ಹಂಚಿಕೆ ಮಾಡಲಾಗಿರುವ ಒಟ್ಟು ಹಣ 86,200 ಕೋಟಿ ರುಪಾಯಿಗಳು. ಕಳೆದ ವರ್ಷದ ಪರಿಷ್ಕೃತ ಬಜೆಟ್ ಹಂಚಿಕೆಗೆ ಹೋಲಿಸಿದರೆ ಕೇವಲ 200 ಕೋಟಿ ರುಪಾಯಿಗಳ ಹೆಚ್ಚಳ!

ಶೇ.90ರಷ್ಟು ಉದ್ಯೋಗಾವಕಾಶಗಳನ್ನು ಒದಗಿಸುವ ಅಸಂಘಟಿತ ಕ್ಷೇತ್ರವನ್ನು ನೆಲಕಚ್ಚಿಸಲಾಗಿದೆ. ಹೀಗಾಗಿ ಈ ವಲಯಕ್ಕೆ ಪುನಶ್ಚೇತನ ನೀಡುವ ಮಾತನ್ನು ಬಜೆಟ್ಟಿನಲ್ಲಿ ನಿರೀಕ್ಷಿಸುವುದೂ ಮೂರ್ಖತನವಾದೀತು. ಹಣದುಬ್ಬರ ದರವನ್ನು ತಿರುಚಿ ತಗ್ಗಿಸಿ ಮಂಡಿಸಲಾಗಿದೆ.

ದೇಶದ ಅತಿ ಸಿರಿವಂತರ ಪ್ರಮಾಣ ಶೇ.10. ದೇಶದ ಶೇ.64.6ರಷ್ಟು ಸಂಪತ್ತು ಇವರ ಕೈಯಲ್ಲಿದೆ. ದೇಶವನ್ನು ಕಾಡಿದ ನೋಟು ರದ್ದು, ಕೋವಿಡ್ ಮಹಾ ಸಾಂಕ್ರಾಮಿಕ, ನಿರುದ್ಯೋಗ, ಬಡತನ, ಹಸಿವಿನ ಸಂಕಟಗಳು ಈ ವರ್ಗದ ಸಂಪತ್ತನ್ನು ಇನ್ನಷ್ಟು ಹೆಚ್ಚಿಸಿವೆ. ಭಾರತದ ಕೇವಲ ಹತ್ತು ಮಂದಿ ಅಪಾರ ಧನಿಕರ ಬಳಿ ಇರುವ ಸಂಪತ್ತಿನಿಂದ ದೇಶದ ಎಲ್ಲ ಮಕ್ಕಳ ಶಾಲಾ ಮತ್ತು ಪ್ರೌಢ ಶಿಕ್ಷಣವನ್ನು 25 ವರ್ಷಗಳ ಕಾಲ ನಡೆಸಬಹುದೆಂಬ ಅಂಕಿಅಂಶ ಎರಡು ವಾರಗಳ ಹಿಂದೆ ದಾವೋಸ್‌ನಲ್ಲಿ ಜರುಗಿದ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಮಂಡಿತವಾದವು. ದೇಶದ ಆರ್ಥಿಕ ಏಣಿಶ್ರೇಣಿಯ ಮೇಲ್ಭಾಗದ ಶೇ.10 ಮಂದಿ ದೇಶದ ಒಟ್ಟು ಸಂಪತ್ತಿನ ಶೇ.45ರಷ್ಟರ ಒಡೆತನ ಹೊಂದಿದ್ದರೆ ಕೆಳಭಾಗದ ಶೇ.50ರಷ್ಟು ಜನಸಂಖ್ಯೆಯು ದೇಶದ ಒಟ್ಟು ಸಂಪತ್ತಿನ ಶೇ.6ರಷ್ಟರಲ್ಲೇ ಒದ್ದಾಡಿದೆ. ಆಕ್ಸ್‌ಫ್ಯಾಮ್ ಇಂಡಿಯಾದ ಈ ಅಂಕಿ ಅಂಶಗಳ ಪ್ರಕಾರ ಈ ಶೇ.10ರಷ್ಟು ಅತಿ ಧನಿಕರ ಮೇಲೆ ವಿಧಿಸಲಾಗುವ ಶೇ.ಒಂದರಷ್ಟು ತೆರಿಗೆ ಕೂಡ 17.7 ಲಕ್ಷ ಹೆಚ್ಚುವರಿ ಆಮ್ಲಜನಕ ಸಿಲಿಂಡರುಗಳನ್ನು ಒದಗಿಸಬಲ್ಲದು. ಹಾಗೆಯೇ ಭಾರತದ 98 ಮಂದಿ ಶತಕೋಟ್ಯಾಧೀಶ ಕುಬೇರರ ಮೇಲೆ ವಿಧಿಸಲಾಗುವ ಶೇ.1ರಷ್ಟು ಸಂಪತ್ತು ತೆರಿಗೆ ಕೂಡ ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ಎನಿಸಿರುವ ಆಯುಷ್ಮಾನ್ ಭಾರತವನ್ನು ಏಳು ವರ್ಷಗಳಿಗೂ ಹೆಚ್ಚು ಕಾಲ ಸಾಕಬಲ್ಲದು.

ಆದರೂ ಕೇಂದ್ರ ಸರ್ಕಾರ ಇವರ ಮೇಲೆ ತೆರಿಗೆ ಹೆಚ್ಚಿಸುವ ಮನಸ್ಸು ಮಾಡುವುದಿಲ್ಲ. ಬದಲಿಗೆ ಇಂದು ಮಂಡಿಸಲಾಗಿರುವ ಬಜೆಟ್‌ನಲ್ಲಿ ಈ ಕುಬೇರರ ಸಮೂಹದ ಕಾರ್ಪೊರೇಟ್ ವಲಯದ ಮೇಲೆ ವಿಧಿಸಲಾಗಿರುವ ಕಾರ್ಪೊರೆಟ್ ಸರ್ಚಾರ್ಜ್ ತೆರಿಗೆಯನ್ನು ಶೇ.12ರಿಂದ ಶೇ.ಏಳಕ್ಕೆ ಇಳಿಸಲಾಗಿದೆ! ದಶಕಗಳಿಂದ ಮಾಡಿಟ್ಟಿದ್ದ ರೇಲ್ವೆ, ಬಂದರು, ವಿಮಾನಯಾನ ಸೇರಿದಂತೆ ಸಾರ್ವಜನಿಕ ವಲಯದ ಆಸ್ತಿಪಾಸ್ತಿಗಳನ್ನು ಅಗ್ಗದ ಬೆಲೆಗೆ ಕಾರ್ಪೊರೇಟುಗಳಿಗೆ ಮಾರಾಟ ಮಾಡಲಾಗುತ್ತಿದೆ.

ಇದು ಶೇ.80ರಷ್ಟು ಬಹುಜನ ಭಾರತದ ಅಣಕವಲ್ಲದೆ ಇನ್ನೇನು?

ಮುಕ್ಕಾಲುಪಾಲು ದೇಶವಾಸಿಗಳ ಬದುಕುಗಳು ನೋಟು ರದ್ದು, ಜಿ.ಎಸ್.ಟಿ., ಕೋವಿಡ್‌ನ ಕ್ರೂರ ಆಘಾತದಡಿ ಜರ್ಝರಿತವಾಗಿವೆ. ಆದರೆ ದೇಶದಲ್ಲಿ ಅಮೃತಕಾಲ ನಡೆಯುತ್ತಿದೆ… ಮುಂದಿನ 25 ವರ್ಷಗಳ ಕಾಲವೂ ಹಾಲಿ ಬಜೆಟ್ಟಿನ ದೂರದರ್ಶಿತ್ವ ವಿಸ್ತರಿಸಲಿದೆ ಎಂದು ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ರೊಟ್ಟಿ ಸಿಗದಿದ್ದರೆ ಕೇಕನ್ನು ತಿನ್ನಿ ಎಂದಿದ್ದ ಫ್ರಾನ್ಸಿನ ರಾಜಕುವರಿಯಂತೆ ಥೇಟು.


ಇದನ್ನೂ ಓದಿ: ಬಜೆಟ್‌ 2022-23: ಶಿಕ್ಷಣ, ಕೃಷಿ ಕ್ಷೇತ್ರಕ್ಕೆ ವಂಚನೆ; ಖಾಸಗಿ ಪರ ಧೋರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...