Homeಅಂಕಣಗಳುಬಹುಜನ ಭಾರತ; ದೇಶದ ಬಹುಜನರ ಅಣಕಿಸುವ ಬಜೆಟ್!

ಬಹುಜನ ಭಾರತ; ದೇಶದ ಬಹುಜನರ ಅಣಕಿಸುವ ಬಜೆಟ್!

- Advertisement -
- Advertisement -

ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಬಜೆಟ್ ಮಂಗಳವಾರ ಲೋಕಸಭೆಯಲ್ಲಿ ಅನಾವರಣಗೊಂಡಿತು. ದೇಶದ ಷೇರುಪೇಟೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿತು. ಮಾಧ್ಯಮಲೋಕ ಈ ಉತ್ಸಾಹವನ್ನೇ ಬಜೆಟ್‌ನ ಅಳತೆಗೋಲು ಎಂಬಂತೆ ಬಿಂಬಿಸಿದೆ.

ಷೇರುಪೇಟೆಯ ಜಿಗಿತ-ಕುಸಿತದಲ್ಲಿ ಪ್ರತಿಫಲಿಸುವುದು ಶೇ.4ರಷ್ಟು ಭಾರತ ಮಾತ್ರ. ಉಳಿದ ಶೇ.96ರಷ್ಟು ಭಾರತದ ಪಾಲಿಗೆ ಈ ಬಜೆಟ್ ಎಷ್ಟು ಪ್ರಸ್ತುತ ಅಥವಾ ಅಪ್ರಸ್ತುತ ಎಂಬುದೇ ಅಸಲು ಸಂಗತಿ.

ಅಂಕಿಅಂಶಗಳ ಮಾಯಾಜಾಲವನ್ನು ಹರಿದು ನೋಡುವುದಾದರೆ ಬಡವರನ್ನು ಬಡವರನ್ನಾಗಿಯೇ ಉಳಿಸಿ, ಧನಿಕರನ್ನು ಇನ್ನಷ್ಟು ಧನಿಕರನ್ನಾಗಿಸುವ ಯಥಾಸ್ಥಿತಿವಾದಿ ಬಜೆಟ್ ಇದು. ನಿರುದ್ಯೋಗ, ಸಮಾಜ ಕಲ್ಯಾಣ, ವಿತ್ತೀಯ ಸ್ಥಿತಿಗತಿಯಲ್ಲೂ ನಿರಾಶೆಯನ್ನೇ ಧರಿಸಿರುವ ಮುಂಗಡಪತ್ರ.

ಪೆಟ್ರೋಲ್ ಎಂಬುದು ಮೋದಿ ಸರ್ಕಾರದ ಪಾಲಿಗೆ ತೆರಿಗೆ ಸಂಗ್ರಹದ ಕಾಮಧೇನು-ಕಲ್ಪವೃಕ್ಷ. ಜನಸಾಮಾನ್ಯರ ಪಾಲಿಗೆ ನಡು ಮುರಿದು ನೆಲಕ್ಕೆ ಕೆಡವಿರುವ ಭಯಂಕರ ಬಡಿಗೆ. ಅನ್‌ಬ್ಲೆಂಡೆಡ್ ಪೆಟ್ರೋಲ್ ಮೇಲೆ ಲೀಟರಿಗೆ ಎರಡು ರೂಪಾಯಿಯ ಹೊಸ ತೆರಿಗೆಯನ್ನು ಬಜೆಟ್ಟಿನಲ್ಲಿ ಹೇರಲಾಗಿದೆ. ಈ ಹೊಸ ಭಾರವನ್ನು ಜನಸಾಮಾನ್ಯರೇ ಹೊರಬೇಕಿದೆ. ವಿಶ್ವಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಈಗಾಗಲೆ ಏರುಮುಖವಾಗಿದೆ. ಮುಂದಿನ ತಿಂಗಳುಗಳಲ್ಲಿ ಈ ತೈಲದ ಬೆಲೆ ಇನ್ನಷ್ಟು ಏರಿಕೆಯ ಒಜ್ಜೆ ಹೊರಲು ಭಾರತದೇಶವಾಸಿಗಳು ತಯಾರಾಗಬೇಕಿದೆ.

ಮೋದಿಯಂತಹ ಮೋದಿಯವರೇ ಮಂಡಿಯೂರಿರುವಂತಹ ಪ್ರಬಲ ರೈತ ಚಳವಳಿ ವರ್ಷದೊಪ್ಪತ್ತು ನಡೆದದ್ದನ್ನು ವಿಶ್ವವೇ ಎದ್ದು ಕುಳಿತು ನೋಡಿತು. ಆದರೆ ಈ ಬಜೆಟ್ಟಿನಲ್ಲಿ ಅಸಲಿ ಕೃಷಿಯ ವಿಷಯವನ್ನು ಭೂತಗಾಜು ಹಾಕಿ ಹುಡುಕಬೇಕಿದೆ.

ಕನಿಷ್ಠ ಬೆಂಬಲ ಬೆಲೆಯ ಸೌಲಭ್ಯ ಎಲ್ಲ ರೈತರ ಉತ್ಪನ್ನಗಳಿಗೂ ದೊರೆಯಬೇಕೆಂಬ ರೈತ ಆಂದೋಲನದ ಬೇಡಿಕೆಗೆ ಕೇಂದ್ರ ಸರ್ಕಾರ ಯಾವ ಕಿಮ್ಮತ್ತನ್ನೂ ನೀಡಿಲ್ಲ. ಕಳೆದ ವರ್ಷದ (2021) ಬಜೆಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ತೆತ್ತು ಕೃಷಿ ಉತ್ಪನ್ನಗಳ ಖರೀದಿಗೆ ತೆಗೆದಿರಿಸಿದ್ದ ಮೊತ್ತ 2.48 ಲಕ್ಷ ಕೋಟಿ ರುಪಾಯಿ. ಇಂದು ಮಂಡಿಸಿದ ಬಜೆಟ್ಟಿನಲ್ಲಿ ಈ ಮೊತ್ತ 2.37 ಲಕ್ಷ ಕೋಟಿ ರುಪಾಯಿ.

ರಸಗೊಬ್ಬರಗಳ ಮೇಲಿನ ಸಬ್ಸಿಡಿಯ ಮೊತ್ತವನ್ನು 1.40 ಲಕ್ಷ ಕೋಟಿ ರುಪಾಯಿಗಳಿಂದ 1.05 ಕೋಟಿ ರುಪಾಯಿಗಳಿಗೆ ಖೋತಾ ಮಾಡಲಾಗಿದೆ. ಇದೇ ರೀತಿ ಬಡಜನಸಮುದಾಯಗಳಿಗೆ ನೀಡಲಾಗುವ ಆಹಾರ ಸಬ್ಸಿಡಿ ಕೂಡ 2.9 ಲಕ್ಷ ಕೋಟಿ ರುಪಾಯಿಗಳಿಂದ 2.1 ಲಕ್ಷ ಕೋಟಿಗೆ ಇಳಿದಿದೆ. ರಾಷ್ಟ್ರೀಯ ಹಸಿರು ಕ್ರಾಂತಿ ಯೋಜನೆಗೆ ಕಳೆದ ಬಜೆಟ್‌ನಲ್ಲಿ 13 ಸಾವಿರ ಕೋಟಿ ತೆಗೆದಿರಿಸಲಾಗಿತ್ತು. ಈ ಬಾರಿ ಅದರ ಪ್ರಸ್ತಾಪವೇ ಇಲ್ಲ.

ಕೃಷಿ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ಕಾಗದದ ಮೇಲೆಯೇ ಉಳಿದಿದೆ. ಪ್ರಧಾನಮಂತ್ರಿ ರೈತ ಧನವೆಂದು ರೈತರಿಗೆ ಪ್ರತಿ ಮೂರು ತಿಂಗಳಿಗೆ ಎರಡು ಸಾವಿರದಂತೆ ವರ್ಷಕ್ಕೆ ಆರು ಸಾವಿರ ರುಪಾಯಿ ನೀಡಲಾಗುತ್ತಿದೆ. ಈ ಮೊತ್ತವನ್ನು ಹನ್ನೆರಡು ಸಾವಿರಕ್ಕೆ ಏರಿಸುವರೆಂಬ ನಿರೀಕ್ಷೆ ಹುಸಿಯಾಗಿದೆ. ಭೂರಹಿತ ಕೃಷಿ ಕೂಲಿ ಕಾರ್ಮಿಕ ಕುಟುಂಬಗಳಿಗೆ ತಲಾ ಆರು ಸಾವಿರ ರೂಪಾಯಿ ನೀಡಿಕೆಯನ್ನು ಆರಂಭಿಸಬಹುದಿತ್ತು.

ರೈತಾಪಿಗಳ ಜನಸಂಖ್ಯೆ ಶೇ.50ಕ್ಕೂ ಹೆಚ್ಚು. ಇವರ ಕೈಗೆ ಹಣ ಹರಿಯುವುದೆಂದರೆ ಖರೀದಿ ಸಾಮರ್ಥ್ಯ
ಹೆಚ್ಚಿಸಿ ಸರಕು ಸರಂಜಾಮುಗಳ ಬೇಡಿಕೆಯನ್ನು ಹೆಚ್ಚಿಸಿದಂತೆ. ಬೇಡಿಕೆ ಹೆಚ್ಚಿಸಿದರೆ ಉತ್ಪಾದನೆ ಚುರುಕು ಪಡೆದು ಉದ್ಯೋಗಾವಕಾಶ ಕುದುರಿ ಅರ್ಥಸ್ಥಿತಿಯ ಆವರ್ತ ಜೀವಂತಗೊಳ್ಳುತ್ತದೆ. ಆದರೆ ನಿರ್ಮಲಾ ಸೀತಾರಾಮನ್ ಈ ಉಸಾಬರಿಗೆ ಹೋಗಿಲ್ಲ. ಸಂಬಳದಾರ ಮಧ್ಯಮವರ್ಗಗಳಿಗೆ ಆದಾಯ ತೆರಿಗೆಯ ಯಾವುದೇ ರಿಯಾಯಿತಿ ಈ ವರ್ಷವೂ ದೊರೆತಿಲ್ಲ.

ಗ್ರಾಮೀಣ ಬಡಜನರನ್ನು ತಕ್ಕಮಟ್ಟಿಗಾದರೂ ಹಸಿವಿನಿಂದ ಕಾಪಾಡುತ್ತ ಬಂದಿರುವುದು ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಕೋವಿಡ್ ಲಾಕ್‌ಡೌನ್‌ಗಳ ನಂತರ ಮಹಾನಗರಗಳಿಂದ ಹಳ್ಳಿಗಳಿಗೆ ನಡೆದ ಮಹಾವಲಸೆಯ ನಂತರ ಆ ಜನರಾಶಿಯನ್ನು ಪೊರೆದ ಯೋಜನೆ. ಗ್ರಾಮೀಣ ಬಡಜನರಿಂದ ಭಾರೀ ಬೇಡಿಕೆ ಇರುವ ಯೋಜನೆಯಿದು. ಆದರೆ ಈ ಯೋಜನೆಯ ಹಂಚಿಕೆಯನ್ನು 98,000 ಕೋಟಿ ರುಪಾಯಿಗಳಿಂದ 73,000 ಕೋಟಿ ರುಪಾಯಿಗಳಿಗೆ ಇಳಿಸಲಾಗಿದೆ!

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಪಾಲಿಗೆ ಎಂದಿನಂತೆ ನಿರಾಶಾದಾಯಕ ಬಜೆಟ್. ಆರೋಗ್ಯ ಮಂತ್ರಾಲಯಕ್ಕೆ ಹಂಚಿಕೆ ಮಾಡಲಾಗಿರುವ ಒಟ್ಟು ಹಣ 86,200 ಕೋಟಿ ರುಪಾಯಿಗಳು. ಕಳೆದ ವರ್ಷದ ಪರಿಷ್ಕೃತ ಬಜೆಟ್ ಹಂಚಿಕೆಗೆ ಹೋಲಿಸಿದರೆ ಕೇವಲ 200 ಕೋಟಿ ರುಪಾಯಿಗಳ ಹೆಚ್ಚಳ!

ಶೇ.90ರಷ್ಟು ಉದ್ಯೋಗಾವಕಾಶಗಳನ್ನು ಒದಗಿಸುವ ಅಸಂಘಟಿತ ಕ್ಷೇತ್ರವನ್ನು ನೆಲಕಚ್ಚಿಸಲಾಗಿದೆ. ಹೀಗಾಗಿ ಈ ವಲಯಕ್ಕೆ ಪುನಶ್ಚೇತನ ನೀಡುವ ಮಾತನ್ನು ಬಜೆಟ್ಟಿನಲ್ಲಿ ನಿರೀಕ್ಷಿಸುವುದೂ ಮೂರ್ಖತನವಾದೀತು. ಹಣದುಬ್ಬರ ದರವನ್ನು ತಿರುಚಿ ತಗ್ಗಿಸಿ ಮಂಡಿಸಲಾಗಿದೆ.

ದೇಶದ ಅತಿ ಸಿರಿವಂತರ ಪ್ರಮಾಣ ಶೇ.10. ದೇಶದ ಶೇ.64.6ರಷ್ಟು ಸಂಪತ್ತು ಇವರ ಕೈಯಲ್ಲಿದೆ. ದೇಶವನ್ನು ಕಾಡಿದ ನೋಟು ರದ್ದು, ಕೋವಿಡ್ ಮಹಾ ಸಾಂಕ್ರಾಮಿಕ, ನಿರುದ್ಯೋಗ, ಬಡತನ, ಹಸಿವಿನ ಸಂಕಟಗಳು ಈ ವರ್ಗದ ಸಂಪತ್ತನ್ನು ಇನ್ನಷ್ಟು ಹೆಚ್ಚಿಸಿವೆ. ಭಾರತದ ಕೇವಲ ಹತ್ತು ಮಂದಿ ಅಪಾರ ಧನಿಕರ ಬಳಿ ಇರುವ ಸಂಪತ್ತಿನಿಂದ ದೇಶದ ಎಲ್ಲ ಮಕ್ಕಳ ಶಾಲಾ ಮತ್ತು ಪ್ರೌಢ ಶಿಕ್ಷಣವನ್ನು 25 ವರ್ಷಗಳ ಕಾಲ ನಡೆಸಬಹುದೆಂಬ ಅಂಕಿಅಂಶ ಎರಡು ವಾರಗಳ ಹಿಂದೆ ದಾವೋಸ್‌ನಲ್ಲಿ ಜರುಗಿದ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಮಂಡಿತವಾದವು. ದೇಶದ ಆರ್ಥಿಕ ಏಣಿಶ್ರೇಣಿಯ ಮೇಲ್ಭಾಗದ ಶೇ.10 ಮಂದಿ ದೇಶದ ಒಟ್ಟು ಸಂಪತ್ತಿನ ಶೇ.45ರಷ್ಟರ ಒಡೆತನ ಹೊಂದಿದ್ದರೆ ಕೆಳಭಾಗದ ಶೇ.50ರಷ್ಟು ಜನಸಂಖ್ಯೆಯು ದೇಶದ ಒಟ್ಟು ಸಂಪತ್ತಿನ ಶೇ.6ರಷ್ಟರಲ್ಲೇ ಒದ್ದಾಡಿದೆ. ಆಕ್ಸ್‌ಫ್ಯಾಮ್ ಇಂಡಿಯಾದ ಈ ಅಂಕಿ ಅಂಶಗಳ ಪ್ರಕಾರ ಈ ಶೇ.10ರಷ್ಟು ಅತಿ ಧನಿಕರ ಮೇಲೆ ವಿಧಿಸಲಾಗುವ ಶೇ.ಒಂದರಷ್ಟು ತೆರಿಗೆ ಕೂಡ 17.7 ಲಕ್ಷ ಹೆಚ್ಚುವರಿ ಆಮ್ಲಜನಕ ಸಿಲಿಂಡರುಗಳನ್ನು ಒದಗಿಸಬಲ್ಲದು. ಹಾಗೆಯೇ ಭಾರತದ 98 ಮಂದಿ ಶತಕೋಟ್ಯಾಧೀಶ ಕುಬೇರರ ಮೇಲೆ ವಿಧಿಸಲಾಗುವ ಶೇ.1ರಷ್ಟು ಸಂಪತ್ತು ತೆರಿಗೆ ಕೂಡ ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ಎನಿಸಿರುವ ಆಯುಷ್ಮಾನ್ ಭಾರತವನ್ನು ಏಳು ವರ್ಷಗಳಿಗೂ ಹೆಚ್ಚು ಕಾಲ ಸಾಕಬಲ್ಲದು.

ಆದರೂ ಕೇಂದ್ರ ಸರ್ಕಾರ ಇವರ ಮೇಲೆ ತೆರಿಗೆ ಹೆಚ್ಚಿಸುವ ಮನಸ್ಸು ಮಾಡುವುದಿಲ್ಲ. ಬದಲಿಗೆ ಇಂದು ಮಂಡಿಸಲಾಗಿರುವ ಬಜೆಟ್‌ನಲ್ಲಿ ಈ ಕುಬೇರರ ಸಮೂಹದ ಕಾರ್ಪೊರೇಟ್ ವಲಯದ ಮೇಲೆ ವಿಧಿಸಲಾಗಿರುವ ಕಾರ್ಪೊರೆಟ್ ಸರ್ಚಾರ್ಜ್ ತೆರಿಗೆಯನ್ನು ಶೇ.12ರಿಂದ ಶೇ.ಏಳಕ್ಕೆ ಇಳಿಸಲಾಗಿದೆ! ದಶಕಗಳಿಂದ ಮಾಡಿಟ್ಟಿದ್ದ ರೇಲ್ವೆ, ಬಂದರು, ವಿಮಾನಯಾನ ಸೇರಿದಂತೆ ಸಾರ್ವಜನಿಕ ವಲಯದ ಆಸ್ತಿಪಾಸ್ತಿಗಳನ್ನು ಅಗ್ಗದ ಬೆಲೆಗೆ ಕಾರ್ಪೊರೇಟುಗಳಿಗೆ ಮಾರಾಟ ಮಾಡಲಾಗುತ್ತಿದೆ.

ಇದು ಶೇ.80ರಷ್ಟು ಬಹುಜನ ಭಾರತದ ಅಣಕವಲ್ಲದೆ ಇನ್ನೇನು?

ಮುಕ್ಕಾಲುಪಾಲು ದೇಶವಾಸಿಗಳ ಬದುಕುಗಳು ನೋಟು ರದ್ದು, ಜಿ.ಎಸ್.ಟಿ., ಕೋವಿಡ್‌ನ ಕ್ರೂರ ಆಘಾತದಡಿ ಜರ್ಝರಿತವಾಗಿವೆ. ಆದರೆ ದೇಶದಲ್ಲಿ ಅಮೃತಕಾಲ ನಡೆಯುತ್ತಿದೆ… ಮುಂದಿನ 25 ವರ್ಷಗಳ ಕಾಲವೂ ಹಾಲಿ ಬಜೆಟ್ಟಿನ ದೂರದರ್ಶಿತ್ವ ವಿಸ್ತರಿಸಲಿದೆ ಎಂದು ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ರೊಟ್ಟಿ ಸಿಗದಿದ್ದರೆ ಕೇಕನ್ನು ತಿನ್ನಿ ಎಂದಿದ್ದ ಫ್ರಾನ್ಸಿನ ರಾಜಕುವರಿಯಂತೆ ಥೇಟು.


ಇದನ್ನೂ ಓದಿ: ಬಜೆಟ್‌ 2022-23: ಶಿಕ್ಷಣ, ಕೃಷಿ ಕ್ಷೇತ್ರಕ್ಕೆ ವಂಚನೆ; ಖಾಸಗಿ ಪರ ಧೋರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೈದರಾಬಾದ್: ಮದರ್ ತೆರೇಸಾ ಶಾಲೆ ಮೇಲೆ ಕೇಸರಿ ವಸ್ತ್ರಧಾರಿಗಳಿಂದ ದಾಳಿ: ಜೈಶ್ರೀರಾಮ್‌ ಘೋಷಣೆ ಕೂಗಿ...

0
ಕೇಸರಿ ಬಣ್ಣದ ಅಂಗಿ ಮತ್ತು ಶಾಲುಗಳನ್ನು ಧರಿಸಿದ್ಧ ಗುಂಪೊಂದು ಹೈದರಾಬಾದ್‌ ಮಂಚೇರಿಯಲ್ ಜಿಲ್ಲೆಯ ಕನ್ನೆಪಲ್ಲಿಯಲ್ಲಿರುವ ಸೇಂಟ್ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ಆವರಣಕ್ಕೆ ನುಗ್ಗಿ ಶಾಲೆಯಲ್ಲಿ ದಾಂಧಲೆ ನಡೆಸಿ ಪಾದ್ರಿಯ ಮೇಲೆ...