Homeಅಂಕಣಗಳುಬಹುಜನ ಭಾರತ; ದೇಶದ ಬಹುಜನರ ಅಣಕಿಸುವ ಬಜೆಟ್!

ಬಹುಜನ ಭಾರತ; ದೇಶದ ಬಹುಜನರ ಅಣಕಿಸುವ ಬಜೆಟ್!

- Advertisement -
- Advertisement -

ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಬಜೆಟ್ ಮಂಗಳವಾರ ಲೋಕಸಭೆಯಲ್ಲಿ ಅನಾವರಣಗೊಂಡಿತು. ದೇಶದ ಷೇರುಪೇಟೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿತು. ಮಾಧ್ಯಮಲೋಕ ಈ ಉತ್ಸಾಹವನ್ನೇ ಬಜೆಟ್‌ನ ಅಳತೆಗೋಲು ಎಂಬಂತೆ ಬಿಂಬಿಸಿದೆ.

ಷೇರುಪೇಟೆಯ ಜಿಗಿತ-ಕುಸಿತದಲ್ಲಿ ಪ್ರತಿಫಲಿಸುವುದು ಶೇ.4ರಷ್ಟು ಭಾರತ ಮಾತ್ರ. ಉಳಿದ ಶೇ.96ರಷ್ಟು ಭಾರತದ ಪಾಲಿಗೆ ಈ ಬಜೆಟ್ ಎಷ್ಟು ಪ್ರಸ್ತುತ ಅಥವಾ ಅಪ್ರಸ್ತುತ ಎಂಬುದೇ ಅಸಲು ಸಂಗತಿ.

ಅಂಕಿಅಂಶಗಳ ಮಾಯಾಜಾಲವನ್ನು ಹರಿದು ನೋಡುವುದಾದರೆ ಬಡವರನ್ನು ಬಡವರನ್ನಾಗಿಯೇ ಉಳಿಸಿ, ಧನಿಕರನ್ನು ಇನ್ನಷ್ಟು ಧನಿಕರನ್ನಾಗಿಸುವ ಯಥಾಸ್ಥಿತಿವಾದಿ ಬಜೆಟ್ ಇದು. ನಿರುದ್ಯೋಗ, ಸಮಾಜ ಕಲ್ಯಾಣ, ವಿತ್ತೀಯ ಸ್ಥಿತಿಗತಿಯಲ್ಲೂ ನಿರಾಶೆಯನ್ನೇ ಧರಿಸಿರುವ ಮುಂಗಡಪತ್ರ.

ಪೆಟ್ರೋಲ್ ಎಂಬುದು ಮೋದಿ ಸರ್ಕಾರದ ಪಾಲಿಗೆ ತೆರಿಗೆ ಸಂಗ್ರಹದ ಕಾಮಧೇನು-ಕಲ್ಪವೃಕ್ಷ. ಜನಸಾಮಾನ್ಯರ ಪಾಲಿಗೆ ನಡು ಮುರಿದು ನೆಲಕ್ಕೆ ಕೆಡವಿರುವ ಭಯಂಕರ ಬಡಿಗೆ. ಅನ್‌ಬ್ಲೆಂಡೆಡ್ ಪೆಟ್ರೋಲ್ ಮೇಲೆ ಲೀಟರಿಗೆ ಎರಡು ರೂಪಾಯಿಯ ಹೊಸ ತೆರಿಗೆಯನ್ನು ಬಜೆಟ್ಟಿನಲ್ಲಿ ಹೇರಲಾಗಿದೆ. ಈ ಹೊಸ ಭಾರವನ್ನು ಜನಸಾಮಾನ್ಯರೇ ಹೊರಬೇಕಿದೆ. ವಿಶ್ವಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಈಗಾಗಲೆ ಏರುಮುಖವಾಗಿದೆ. ಮುಂದಿನ ತಿಂಗಳುಗಳಲ್ಲಿ ಈ ತೈಲದ ಬೆಲೆ ಇನ್ನಷ್ಟು ಏರಿಕೆಯ ಒಜ್ಜೆ ಹೊರಲು ಭಾರತದೇಶವಾಸಿಗಳು ತಯಾರಾಗಬೇಕಿದೆ.

ಮೋದಿಯಂತಹ ಮೋದಿಯವರೇ ಮಂಡಿಯೂರಿರುವಂತಹ ಪ್ರಬಲ ರೈತ ಚಳವಳಿ ವರ್ಷದೊಪ್ಪತ್ತು ನಡೆದದ್ದನ್ನು ವಿಶ್ವವೇ ಎದ್ದು ಕುಳಿತು ನೋಡಿತು. ಆದರೆ ಈ ಬಜೆಟ್ಟಿನಲ್ಲಿ ಅಸಲಿ ಕೃಷಿಯ ವಿಷಯವನ್ನು ಭೂತಗಾಜು ಹಾಕಿ ಹುಡುಕಬೇಕಿದೆ.

ಕನಿಷ್ಠ ಬೆಂಬಲ ಬೆಲೆಯ ಸೌಲಭ್ಯ ಎಲ್ಲ ರೈತರ ಉತ್ಪನ್ನಗಳಿಗೂ ದೊರೆಯಬೇಕೆಂಬ ರೈತ ಆಂದೋಲನದ ಬೇಡಿಕೆಗೆ ಕೇಂದ್ರ ಸರ್ಕಾರ ಯಾವ ಕಿಮ್ಮತ್ತನ್ನೂ ನೀಡಿಲ್ಲ. ಕಳೆದ ವರ್ಷದ (2021) ಬಜೆಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ತೆತ್ತು ಕೃಷಿ ಉತ್ಪನ್ನಗಳ ಖರೀದಿಗೆ ತೆಗೆದಿರಿಸಿದ್ದ ಮೊತ್ತ 2.48 ಲಕ್ಷ ಕೋಟಿ ರುಪಾಯಿ. ಇಂದು ಮಂಡಿಸಿದ ಬಜೆಟ್ಟಿನಲ್ಲಿ ಈ ಮೊತ್ತ 2.37 ಲಕ್ಷ ಕೋಟಿ ರುಪಾಯಿ.

ರಸಗೊಬ್ಬರಗಳ ಮೇಲಿನ ಸಬ್ಸಿಡಿಯ ಮೊತ್ತವನ್ನು 1.40 ಲಕ್ಷ ಕೋಟಿ ರುಪಾಯಿಗಳಿಂದ 1.05 ಕೋಟಿ ರುಪಾಯಿಗಳಿಗೆ ಖೋತಾ ಮಾಡಲಾಗಿದೆ. ಇದೇ ರೀತಿ ಬಡಜನಸಮುದಾಯಗಳಿಗೆ ನೀಡಲಾಗುವ ಆಹಾರ ಸಬ್ಸಿಡಿ ಕೂಡ 2.9 ಲಕ್ಷ ಕೋಟಿ ರುಪಾಯಿಗಳಿಂದ 2.1 ಲಕ್ಷ ಕೋಟಿಗೆ ಇಳಿದಿದೆ. ರಾಷ್ಟ್ರೀಯ ಹಸಿರು ಕ್ರಾಂತಿ ಯೋಜನೆಗೆ ಕಳೆದ ಬಜೆಟ್‌ನಲ್ಲಿ 13 ಸಾವಿರ ಕೋಟಿ ತೆಗೆದಿರಿಸಲಾಗಿತ್ತು. ಈ ಬಾರಿ ಅದರ ಪ್ರಸ್ತಾಪವೇ ಇಲ್ಲ.

ಕೃಷಿ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ಕಾಗದದ ಮೇಲೆಯೇ ಉಳಿದಿದೆ. ಪ್ರಧಾನಮಂತ್ರಿ ರೈತ ಧನವೆಂದು ರೈತರಿಗೆ ಪ್ರತಿ ಮೂರು ತಿಂಗಳಿಗೆ ಎರಡು ಸಾವಿರದಂತೆ ವರ್ಷಕ್ಕೆ ಆರು ಸಾವಿರ ರುಪಾಯಿ ನೀಡಲಾಗುತ್ತಿದೆ. ಈ ಮೊತ್ತವನ್ನು ಹನ್ನೆರಡು ಸಾವಿರಕ್ಕೆ ಏರಿಸುವರೆಂಬ ನಿರೀಕ್ಷೆ ಹುಸಿಯಾಗಿದೆ. ಭೂರಹಿತ ಕೃಷಿ ಕೂಲಿ ಕಾರ್ಮಿಕ ಕುಟುಂಬಗಳಿಗೆ ತಲಾ ಆರು ಸಾವಿರ ರೂಪಾಯಿ ನೀಡಿಕೆಯನ್ನು ಆರಂಭಿಸಬಹುದಿತ್ತು.

ರೈತಾಪಿಗಳ ಜನಸಂಖ್ಯೆ ಶೇ.50ಕ್ಕೂ ಹೆಚ್ಚು. ಇವರ ಕೈಗೆ ಹಣ ಹರಿಯುವುದೆಂದರೆ ಖರೀದಿ ಸಾಮರ್ಥ್ಯ
ಹೆಚ್ಚಿಸಿ ಸರಕು ಸರಂಜಾಮುಗಳ ಬೇಡಿಕೆಯನ್ನು ಹೆಚ್ಚಿಸಿದಂತೆ. ಬೇಡಿಕೆ ಹೆಚ್ಚಿಸಿದರೆ ಉತ್ಪಾದನೆ ಚುರುಕು ಪಡೆದು ಉದ್ಯೋಗಾವಕಾಶ ಕುದುರಿ ಅರ್ಥಸ್ಥಿತಿಯ ಆವರ್ತ ಜೀವಂತಗೊಳ್ಳುತ್ತದೆ. ಆದರೆ ನಿರ್ಮಲಾ ಸೀತಾರಾಮನ್ ಈ ಉಸಾಬರಿಗೆ ಹೋಗಿಲ್ಲ. ಸಂಬಳದಾರ ಮಧ್ಯಮವರ್ಗಗಳಿಗೆ ಆದಾಯ ತೆರಿಗೆಯ ಯಾವುದೇ ರಿಯಾಯಿತಿ ಈ ವರ್ಷವೂ ದೊರೆತಿಲ್ಲ.

ಗ್ರಾಮೀಣ ಬಡಜನರನ್ನು ತಕ್ಕಮಟ್ಟಿಗಾದರೂ ಹಸಿವಿನಿಂದ ಕಾಪಾಡುತ್ತ ಬಂದಿರುವುದು ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಕೋವಿಡ್ ಲಾಕ್‌ಡೌನ್‌ಗಳ ನಂತರ ಮಹಾನಗರಗಳಿಂದ ಹಳ್ಳಿಗಳಿಗೆ ನಡೆದ ಮಹಾವಲಸೆಯ ನಂತರ ಆ ಜನರಾಶಿಯನ್ನು ಪೊರೆದ ಯೋಜನೆ. ಗ್ರಾಮೀಣ ಬಡಜನರಿಂದ ಭಾರೀ ಬೇಡಿಕೆ ಇರುವ ಯೋಜನೆಯಿದು. ಆದರೆ ಈ ಯೋಜನೆಯ ಹಂಚಿಕೆಯನ್ನು 98,000 ಕೋಟಿ ರುಪಾಯಿಗಳಿಂದ 73,000 ಕೋಟಿ ರುಪಾಯಿಗಳಿಗೆ ಇಳಿಸಲಾಗಿದೆ!

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಪಾಲಿಗೆ ಎಂದಿನಂತೆ ನಿರಾಶಾದಾಯಕ ಬಜೆಟ್. ಆರೋಗ್ಯ ಮಂತ್ರಾಲಯಕ್ಕೆ ಹಂಚಿಕೆ ಮಾಡಲಾಗಿರುವ ಒಟ್ಟು ಹಣ 86,200 ಕೋಟಿ ರುಪಾಯಿಗಳು. ಕಳೆದ ವರ್ಷದ ಪರಿಷ್ಕೃತ ಬಜೆಟ್ ಹಂಚಿಕೆಗೆ ಹೋಲಿಸಿದರೆ ಕೇವಲ 200 ಕೋಟಿ ರುಪಾಯಿಗಳ ಹೆಚ್ಚಳ!

ಶೇ.90ರಷ್ಟು ಉದ್ಯೋಗಾವಕಾಶಗಳನ್ನು ಒದಗಿಸುವ ಅಸಂಘಟಿತ ಕ್ಷೇತ್ರವನ್ನು ನೆಲಕಚ್ಚಿಸಲಾಗಿದೆ. ಹೀಗಾಗಿ ಈ ವಲಯಕ್ಕೆ ಪುನಶ್ಚೇತನ ನೀಡುವ ಮಾತನ್ನು ಬಜೆಟ್ಟಿನಲ್ಲಿ ನಿರೀಕ್ಷಿಸುವುದೂ ಮೂರ್ಖತನವಾದೀತು. ಹಣದುಬ್ಬರ ದರವನ್ನು ತಿರುಚಿ ತಗ್ಗಿಸಿ ಮಂಡಿಸಲಾಗಿದೆ.

ದೇಶದ ಅತಿ ಸಿರಿವಂತರ ಪ್ರಮಾಣ ಶೇ.10. ದೇಶದ ಶೇ.64.6ರಷ್ಟು ಸಂಪತ್ತು ಇವರ ಕೈಯಲ್ಲಿದೆ. ದೇಶವನ್ನು ಕಾಡಿದ ನೋಟು ರದ್ದು, ಕೋವಿಡ್ ಮಹಾ ಸಾಂಕ್ರಾಮಿಕ, ನಿರುದ್ಯೋಗ, ಬಡತನ, ಹಸಿವಿನ ಸಂಕಟಗಳು ಈ ವರ್ಗದ ಸಂಪತ್ತನ್ನು ಇನ್ನಷ್ಟು ಹೆಚ್ಚಿಸಿವೆ. ಭಾರತದ ಕೇವಲ ಹತ್ತು ಮಂದಿ ಅಪಾರ ಧನಿಕರ ಬಳಿ ಇರುವ ಸಂಪತ್ತಿನಿಂದ ದೇಶದ ಎಲ್ಲ ಮಕ್ಕಳ ಶಾಲಾ ಮತ್ತು ಪ್ರೌಢ ಶಿಕ್ಷಣವನ್ನು 25 ವರ್ಷಗಳ ಕಾಲ ನಡೆಸಬಹುದೆಂಬ ಅಂಕಿಅಂಶ ಎರಡು ವಾರಗಳ ಹಿಂದೆ ದಾವೋಸ್‌ನಲ್ಲಿ ಜರುಗಿದ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಮಂಡಿತವಾದವು. ದೇಶದ ಆರ್ಥಿಕ ಏಣಿಶ್ರೇಣಿಯ ಮೇಲ್ಭಾಗದ ಶೇ.10 ಮಂದಿ ದೇಶದ ಒಟ್ಟು ಸಂಪತ್ತಿನ ಶೇ.45ರಷ್ಟರ ಒಡೆತನ ಹೊಂದಿದ್ದರೆ ಕೆಳಭಾಗದ ಶೇ.50ರಷ್ಟು ಜನಸಂಖ್ಯೆಯು ದೇಶದ ಒಟ್ಟು ಸಂಪತ್ತಿನ ಶೇ.6ರಷ್ಟರಲ್ಲೇ ಒದ್ದಾಡಿದೆ. ಆಕ್ಸ್‌ಫ್ಯಾಮ್ ಇಂಡಿಯಾದ ಈ ಅಂಕಿ ಅಂಶಗಳ ಪ್ರಕಾರ ಈ ಶೇ.10ರಷ್ಟು ಅತಿ ಧನಿಕರ ಮೇಲೆ ವಿಧಿಸಲಾಗುವ ಶೇ.ಒಂದರಷ್ಟು ತೆರಿಗೆ ಕೂಡ 17.7 ಲಕ್ಷ ಹೆಚ್ಚುವರಿ ಆಮ್ಲಜನಕ ಸಿಲಿಂಡರುಗಳನ್ನು ಒದಗಿಸಬಲ್ಲದು. ಹಾಗೆಯೇ ಭಾರತದ 98 ಮಂದಿ ಶತಕೋಟ್ಯಾಧೀಶ ಕುಬೇರರ ಮೇಲೆ ವಿಧಿಸಲಾಗುವ ಶೇ.1ರಷ್ಟು ಸಂಪತ್ತು ತೆರಿಗೆ ಕೂಡ ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ಎನಿಸಿರುವ ಆಯುಷ್ಮಾನ್ ಭಾರತವನ್ನು ಏಳು ವರ್ಷಗಳಿಗೂ ಹೆಚ್ಚು ಕಾಲ ಸಾಕಬಲ್ಲದು.

ಆದರೂ ಕೇಂದ್ರ ಸರ್ಕಾರ ಇವರ ಮೇಲೆ ತೆರಿಗೆ ಹೆಚ್ಚಿಸುವ ಮನಸ್ಸು ಮಾಡುವುದಿಲ್ಲ. ಬದಲಿಗೆ ಇಂದು ಮಂಡಿಸಲಾಗಿರುವ ಬಜೆಟ್‌ನಲ್ಲಿ ಈ ಕುಬೇರರ ಸಮೂಹದ ಕಾರ್ಪೊರೇಟ್ ವಲಯದ ಮೇಲೆ ವಿಧಿಸಲಾಗಿರುವ ಕಾರ್ಪೊರೆಟ್ ಸರ್ಚಾರ್ಜ್ ತೆರಿಗೆಯನ್ನು ಶೇ.12ರಿಂದ ಶೇ.ಏಳಕ್ಕೆ ಇಳಿಸಲಾಗಿದೆ! ದಶಕಗಳಿಂದ ಮಾಡಿಟ್ಟಿದ್ದ ರೇಲ್ವೆ, ಬಂದರು, ವಿಮಾನಯಾನ ಸೇರಿದಂತೆ ಸಾರ್ವಜನಿಕ ವಲಯದ ಆಸ್ತಿಪಾಸ್ತಿಗಳನ್ನು ಅಗ್ಗದ ಬೆಲೆಗೆ ಕಾರ್ಪೊರೇಟುಗಳಿಗೆ ಮಾರಾಟ ಮಾಡಲಾಗುತ್ತಿದೆ.

ಇದು ಶೇ.80ರಷ್ಟು ಬಹುಜನ ಭಾರತದ ಅಣಕವಲ್ಲದೆ ಇನ್ನೇನು?

ಮುಕ್ಕಾಲುಪಾಲು ದೇಶವಾಸಿಗಳ ಬದುಕುಗಳು ನೋಟು ರದ್ದು, ಜಿ.ಎಸ್.ಟಿ., ಕೋವಿಡ್‌ನ ಕ್ರೂರ ಆಘಾತದಡಿ ಜರ್ಝರಿತವಾಗಿವೆ. ಆದರೆ ದೇಶದಲ್ಲಿ ಅಮೃತಕಾಲ ನಡೆಯುತ್ತಿದೆ… ಮುಂದಿನ 25 ವರ್ಷಗಳ ಕಾಲವೂ ಹಾಲಿ ಬಜೆಟ್ಟಿನ ದೂರದರ್ಶಿತ್ವ ವಿಸ್ತರಿಸಲಿದೆ ಎಂದು ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ರೊಟ್ಟಿ ಸಿಗದಿದ್ದರೆ ಕೇಕನ್ನು ತಿನ್ನಿ ಎಂದಿದ್ದ ಫ್ರಾನ್ಸಿನ ರಾಜಕುವರಿಯಂತೆ ಥೇಟು.


ಇದನ್ನೂ ಓದಿ: ಬಜೆಟ್‌ 2022-23: ಶಿಕ್ಷಣ, ಕೃಷಿ ಕ್ಷೇತ್ರಕ್ಕೆ ವಂಚನೆ; ಖಾಸಗಿ ಪರ ಧೋರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...

ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯ ಜೊತೆಯಲ್ಲೆ ಸುಪ್ರೀಂ ಕೋರ್ಟ್‌ಗೆ ಹೋಗಲು ಕರ್ನಾಟಕ ಸಜ್ಜು

ಕೇಂದ್ರ ಸರ್ಕಾರದ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)’ (VB-G RAM G) ಕಾಯ್ದೆಯ ಹಲವು ನಿಯಮಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ...

ಉತ್ತರ ಪ್ರದೇಶ: ಮದುವೆ ರಿಸೆಪ್ಷನ್‌ನಲ್ಲಿ ಗೋಮಾಂಸ ಬಡಿಸಿದ ಆರೋಪ; ವರನ ತಂದೆ ಸೇರಿ ಏಳು ಮಂದಿ ಬಂಧನ, ಮಂಟಪ ಸೀಲ್

ಶಾಮ್ಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದಲ್ಲಿ ನಡೆದ ಮದುವೆ ಆರತಕ್ಷತೆ (ವಲೀಮಾ) ಸಮಾರಂಭವೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಮಾರಂಭದಲ್ಲಿ ಅತಿಥಿಗಳಿಗೆ ಗೋಮಾಂಸವನ್ನು ಬೇಯಿಸಿ ಬಡಿಸಲಾಗಿದೆ ಎಂಬ...

ರಾಮ ಮಂದಿರ ದೇಣಿಗೆ ವಿವಾದ: ಎಫ್‌ಐಆರ್ ದಾಖಲಿಸಿ ತ್ವರಿತ ನ್ಯಾಯಾಲಯದ ವಿಚಾರಣೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ

ರಾಮ ದೇಣಿಗೆ ವಿವಾದ ದುರುಪಯೋಗ ಕುರಿತು ಎಸ್‌ಐಟಿ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ ಕೂಡಲೇ, ಬಲಪಂಥೀಯ ಹಿಂದುತ್ವ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದೆ. ವಿಎಚ್‌ಪಿ ಅಂತರರಾಷ್ಟ್ರೀಯ...

ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ: ವಿದೇಶಾಂಗ ಸಚಿವಾಲಯ

ಪಾಸ್‌ಪೋರ್ಟ್ ಒಂದು ಪ್ರಯಾಣದ ದಾಖಲೆಯಾಗಿದೆಯೇ ಹೊರತು, ಪೌರತ್ವದ ದಾಖಲೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಕಾರಿಗಳು ಬುಧವಾರ (ಜೂನ್ 24) ತಿಳಿಸಿದ್ದಾರೆ. ಈ ಮೂಲಕ ಅವರು ಭಾರತೀಯ ಪೌರತ್ವವನ್ನು ಖಚಿತವಾಗಿ ಸಾಬೀತುಪಡಿಸುವ...

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...