Homeಮುಖಪುಟಹಿಮಾಲಯ ಪ್ರವಾಸ; ದುಡಿಮೆ ಮತ್ತು ಸ್ತ್ರೀಸೌಂದರ್ಯ

ಹಿಮಾಲಯ ಪ್ರವಾಸ; ದುಡಿಮೆ ಮತ್ತು ಸ್ತ್ರೀಸೌಂದರ್ಯ

- Advertisement -
- Advertisement -

ಭಾರತದ ಬಯಲು ಪ್ರದೇಶಗಳಿಂದ ಹಿಮಾಲಯ ಚಾರಣಕ್ಕೆ ಜನ ನೆರೆಯುತ್ತಾರೆ. ಪರ್ವತ ಪ್ರದೇಶಗಳಲ್ಲಿ ತಿರುಗಾಟಕ್ಕೆ ಹೊರಡುವ ಮುನ್ನ ದೇಹವು ಹೊಸ ಹವಾಮಾನಕ್ಕೆ ಒಗ್ಗಿಕೊಳ್ಳಲೆಂದು ಬೇಸ್‌ಕ್ಯಾಂಪಿನಲ್ಲಿ ಒಂದು ದಿನ ಇರಬೇಕಾಗುವುದು. ಆಗ ಹೊಳೆಯನ್ನು ಕಟ್ಟಿದ ಹಗ್ಗದ ಮೂಲಕ ದಾಟುವ, ಬಂಡೆ ಏರಿಳಿಯುವ, ಓಡುವ ಇತ್ಯಾದಿ ಲಘು ತರಬೇತಿ-ವ್ಯಾಯಾಮ ಇರುತ್ತದೆ. ಸಂಜೆಗೆ, ಹಿಮಾಲಯದ ಹವಾಮಾನ, ಜೀವನಕ್ರಮ, ಸಂಸ್ಕೃತಿ, ಕಾಡಿನ ವಿಶಿಷ್ಟತೆ ಪರಿಚಯಿಸುವ ತಜ್ಞ ಉಪನ್ಯಾಸಗಳು. ಕುಲು ಬೇಸ್‌ಕ್ಯಾಂಪಿನಲ್ಲಿ ಅಂತಹದೊಂದು ಉಪನ್ಯಾಸ ಮಾಡುತ್ತ ಕ್ಯಾಂಪ್ ಆಫೀಸರ್-ಮಾಜಿ ಸೇನಾಧಿಕಾರಿ- ಹೇಳಿದ: “ನೋಡಿ, ಹಿಮಾಲಯದ ಹವಾಮಾನ ಮಹಿಳೆಯಂತೆ ಚಂಚಲ. ನಂಬಲನರ್ಹ. ಯಾವಾಗಲಾದರೂ ಮಳೆ-ಹಿಮಪಾತ ಆಗಬಹುದು. ನೀವು ಸಿದ್ಧತೆ ಮಾಡಿಕೊಂಡಿರಬೇಕು”. ತಂಡದಲ್ಲಿದ್ದ ಹುಡುಗರು ಹುಡುಗಿಯರತ್ತ ನೋಡುತ್ತ ರಣೋತ್ಸಾಹದಲ್ಲಿ ಹೋ ಎಂದು ಕೇಕೆ ಹಾಕಿದರು. ಈ ಮಾತನ್ನು ಸದರಿ ಆಫೀಸರ್ ಹಲವಾರು ಸಲ ಹೇಳಿರಬೇಕು. ಕೇಕೆಯ ಪ್ರತಿಕ್ರಿಯೆ ಪಡೆದಿರಬೇಕು. ಇದು ಪರೋಕ್ಷವಾಗಿ ಹೆಣ್ಣು ಗಂಡಿಗೆ ನಿಷ್ಠಳಾಗಿರಬೇಕು, ಈ ನಿಯಮ ಗಂಡಸರಿಗೆ ಅನ್ವಯವಾಗದು ಎಂಬ ದನಿಯನ್ನೊಳಗೊಂಡಿತ್ತು.

ನಮ್ಮ ಗುಂಪಲ್ಲಿದ್ದ ಮಹಿಳೆಯರು ಈ ಸಮೀಕರಣವನ್ನು ಪ್ರತಿಭಟಿಸಿದರು. ನಾವೂ ಅವರ ಜತೆಗೂಡಿದೆವು. ಅಧಿಕಾರಿಯು ನಮ್ಮ ಪ್ರತಿಭಟನೆಯನ್ನು ತಮಾಷೆಯಲ್ಲಿ ತೇಲಿಸಿದ. ನಿವೃತ್ತ ಮೇಜರುಗಳು ಸಾಮಾಜಿಕವಾಗಿ ಅಸೂಕ್ಷ್ಮವಾಗಿರುತ್ತಾರೆ ಎನ್ನುವುದನ್ನು ಅನೇಕ ಕ್ಯಾಂಪುಗಳಲ್ಲಿ ಕಂಡಿರುವೆ. ಯುದ್ಧಸಂಸ್ಕೃತಿಯ ಒಳಗೆ ಹೆಣ್ಣನ್ನು ಹೇಡಿತನದ ಚಂಚಲತೆಯ ಪ್ರತೀಕವಾಗಿಸುವ ಮನೋಭಾವವಿದೆ. ಪುರುಷವಾದವು ಆಳವಾಗಿ ಬೇರೂರಿರುವ ಎಲ್ಲ ಸೈನಿಕ ಸಂಸ್ಕೃತಿಗಳು ನೂರಾರು ಸೆಕ್ಸಿಸ್ಟ್ ಜೋಕುಗಳನ್ನು ಸೃಷ್ಟಿಮಾಡಿವೆ.

ಈ ಲಿಂಗಸಂವೇದನೆಯಿಲ್ಲದ ಅಪನಂಬಿಕೆ ಮತ್ತು ಜೋಕುಗಳಿಗೆ ಚಾರಿತ್ರಿಕ ಹಿನ್ನೆಲೆಯಿದೆ. ಎಲ್ಲ ಸಮಾಜಗಳಲ್ಲೂ ಪಶುಪಾಲಕ, ಬೇಟೆಗಾರ, ವ್ಯಾಪಾರಿ ಮತ್ತು ಸೈನಿಕ ಸಂಸ್ಕೃತಿಗಳು ಸ್ತ್ರೀಶಂಕಿತ. ಮಾದೇಶ್ವರ ಕಾವ್ಯದಲ್ಲಿ ಬೇಟೆಗೆ ಹೋಗುವ ಮುನ್ನ ಸಂಕಮ್ಮನಿಂದ ವಚನ ಪಡೆಯುವನು. ದುಡಿಮೆಗಾಗಿ ಕುಟುಂಬ ಬಿಟ್ಟು ದೂರ ಮತ್ತು ಬಹುಕಾಲ ಹೋಗುವ ಕಸುಬುಗಳ ಮನೋವೈಜ್ಞಾನಿಕ ಸಮಸ್ಯೆಯಿದು. ಇವಕ್ಕೆ ಹೋಲಿಸಿದರೆ ಗಂಡುಹೆಣ್ಣು ಕೂಡಿ ದುಡಿವ ನೇಕಾರಿಕೆ, ಕೃಷಿ, ಕುಲಕಸುಬುಗಳ ಸಮುದಾಯಗಳಲ್ಲಿ ಸ್ತ್ರೀಶಂಕೆಯ ಅಂಶ ಕಡಿಮೆ. ಸೈನಿಕಸಂಸ್ಕೃತಿಯು ಹೆಣ್ಣನ್ನು ರಕ್ಷಿಸುವ ಇಲ್ಲವೇ ಭೋಗಿಸುವ ದೃಷ್ಟಿಕೋನದಲ್ಲೇ ನೋಡುತ್ತದೆ. ವೀರಗಲ್ಲು-ಶಾಸನಗಳು ಕೂಡ ಹೆಣ್ಣನ್ನು ರಕ್ಷಿಸುತ್ತ ಮರಣಪ್ಪುವವರನ್ನು ವೀರ ಎನ್ನುತ್ತವೆ; ಯುದ್ಧದಲ್ಲಿ ಮಡಿದವರಿಗೆ ‘ಜಿತೇನ ಲಭ್ಯತೇ ಲಕ್ಷ್ಮೀ ಮೃತೇನಾಪಿ ಸುರಾಂಗನಾ’ ಎಂದು ಘೋಷಿಸುತ್ತವೆ. ಸೈನ್ಯವು ನಾಗರಿಕ ಸಮಾಜದೊಳಗೆ ಪ್ರವೇಶಿಸಿದಾಗೆಲ್ಲ ಹೆಣ್ಣನ್ನು ಬಲಾತ್ಕರಿಸುವ, ಭೋಗಕ್ಕೆ ಒಳಪಡಿಸುವ ಘಟನೆಗಳು ಘಟಿಸಿವೆ. ಯಾವುದೇ ರಾಜ್ಯವನ್ನು ಗೆದ್ದಾಗ ವಿಜೇತ ಸೈನ್ಯ ಮಾಡುತ್ತಿದ್ದ ಮೊದಲ ಕೆಲಸ, ಸೆರೆಸಿಕ್ಕ ಹೆಣ್ಣುಗಳನ್ನು ಹಂಚಿಕೊಳ್ಳುವುದು. ಸ್ತ್ರೀಯರನ್ನು ಕುರಿತ ಧೋರಣೆಯು ಕ್ಯಾಂಪ್ ಆಫಿಸರನ ವೈಯಕ್ತಿಕ ಸಮಸ್ಯೆಯಾಗಿರಲಿಲ್ಲ.

ಇದನ್ನೂ ಓದಿ: ರಾಜೀವ ತಾರಾನಾಥ: ಜಾತ್ಯತೀತ ಪರಂಪರೆಯ ಮಾತು

ಈ ಪ್ರಕರಣವು ಹಿಮಾಲಯದಲ್ಲಿ ಮಹಿಳೆಯರನ್ನು ಕಾಣುವ ನನ್ನ ನೋಟಕ್ರಮವನ್ನು ರೂಪಿಸಿತು. ವಾಸ್ತವವಾಗಿ ಆಫೀಸರನ ಗ್ರಹಿಕೆಗೆ ವಿರುದ್ಧವಾಗಿ ಸ್ತ್ರೀಲೋಕವಿತ್ತು. ಹಿಮಾಲಯವನ್ನು ಭೇಟಿಮಾಡುವ ಹೊರಗಿನವರಿಗೆ ಮಹಿಳೆಯರ ಶ್ರಮಸಂಸ್ಕೃತಿ ಹೆಜ್ಜೆಹೆಜ್ಜೆಗೆ ಕಾಣತೊಡಗಿತು. ಬೆನ್ನಮೇಲೆ ಹೊರೆಯಿಲ್ಲದ ಹೆಣ್ಣೇ ಇಲ್ಲವೆನ್ನಬಹುದು. ಗೊಬ್ಬರ ಹೊರುವ, ಗೋಧಿ ಸಿವುಡನ್ನು ಕಣಕ್ಕೆ ಅಡಕುವ, ಬಟಾಣಿ, ಗೋಧಿ, ಅಲೂಗೆಡ್ಡೆ, ಭತ್ತದ ಹೊಲಗಳಲ್ಲಿ ಕಳೆಕೀಳುತ್ತ ಕೈಗುದ್ದಲಿಯಿಂದ ಅಗೆಯುತ್ತ ಸೊಪ್ಪು ತರಕಾರಿ ಬಿಡಿಸುತ್ತ, ಇರುವುದನ್ನು ಕಾಣಬಹುದು. ಅವರು ಪರ್ವತಗಳಿಂದ ಸೇಬು, ಸೌದೆ, ಹುಲ್ಲುಹೊರೆ ಹೊತ್ತು ಲಯಬದ್ಧವಾಗಿ ಜೀಕುತ್ತ ಸಾಲುಗಟ್ಟಿ ಬರುತ್ತಿದ್ದರು. ಇದು ಇರುವೆಗಳು ಅಕ್ಕಿಕಾಳು ಹೊತ್ತು ಗೂಡಿಗೆ ಹೋಗುವುದನ್ನು ನೆನಪಿಸುತ್ತಿತ್ತು. ಕೆಲವೊಂದೆಡೆ ತಮ್ಮ ಅಂಗಡಿಗಳಿಗೆ ದೂರದ ಪಟ್ಟಣದಿಂದ ಜಿನಸುಗಳನ್ನು ಅವರು ಹೊತ್ತು ತರುತ್ತಿದ್ದರು. ಎಮ್ಮೆ ದನ ಕುರಿ ಕುದುರೆ ಮೇಯಿಸುವಾಗಲೇ, ಉಣ್ಣೆನೂಲಿನ ಚೆಂಡನ್ನು ಸಿಕ್ಕಿಸಿಕೊಂಡು ಹೆಣಿಗೆ ಮಾಡುತ್ತಿದ್ದರು. ಅವರು ತೇನಸಿಂಗರಂತೆ ಹಿಮಶಿಖರಗಳನ್ನು ಹತ್ತಿ ದಾಖಲೆ ನಿರ್ಮಿಸದೆ ಇರಬಹುದು. ಆದರೆ ದುಡಿಮೆ ತೇನಸಿಂಗ್-ಬಚೇಂದ್ರಿಪಾಲರಿಗೆ ಕಡಿಮೆಯಲ್ಲ. ಹಿಮಾಲಯದ ಏರಿಳಿತದ ಭೌಗೋಳಿಕತೆ, ನಾಟಕೀಯ ಹವಾಮಾನಗಳೇ ಅವರ ದೇಹ ಮತ್ತು ಮನಸ್ಸುಗಳನ್ನು ಸಮರಧೀರಗೊಳಿಸಿರಬಹುದು. ಬೆಟ್ಟಪ್ರದೇಶದಲ್ಲಿ ಮಹಿಳೆಯೇ ಕುಟುಂಬದ ಕೇಂದ್ರ. ಎಂತಲೇ ಅಲ್ಲಿ ಬಹುಪತಿತ್ವವೂ ಇದೆ. ತನ್ನ ಇಚ್ಛೆಯನರಿತ ಗಂಡನ್ನು ವರಿಸುವ ಸ್ವಾತಂತ್ರ್ಯವಿದೆ. ಭಾರತದಲ್ಲಿ ಬಹುಪತಿತ್ವ ಇರುವ ಕೆಲವೇ ಪ್ರದೇಶಗಳಲ್ಲಿ ಹಿಮಾಲಯವೂ ಒಂದು. ಅನೇಕ ಸಮುದಾಯಗಳಲ್ಲಿ ಹೆಣ್ಣು ಸಂತತಿ ಕಡಿಮೆ. ಆಗ ಹಲವಾರು ಅಣ್ಣತಮ್ಮಂದಿರು ಒಬ್ಬಳನ್ನೇ ಮದುವೆಯಾಗುತ್ತಾರೆ. ಈ ಅರ್ಥದಲ್ಲಿ ಅಲ್ಲಿನ ಹೆಂಗಸರು ದ್ರೌಪದಿಯರು. ಇದೂ ಪುರುಷರ ಅಸೂಯೆಗೆ ಒಂದು ಕಾರಣವಿದ್ದೀತು.

ಹಿಮಾಲಯದ ಹೊಲಗಳಲ್ಲಿ ನಾವು ಗಂಡಸರನ್ನು ಕಂಡಿದ್ದು ಕಡಿಮೆ. ಹಂಪಿ ಸೀಮೆಯ ಹಳ್ಳಿಗಳಲ್ಲಿ ಇರುವಂತೆ, ಇಲ್ಲಿಯೂ ಕಟ್ಟೆಗಳ ಮೇಲೆ ಕುಳಿತ ಗಂಡಸರುಂಟು. ಹಿಮಾಲಯದ ಹಿಡುವಳಿಗಳು ಸಣ್ಣವು. ಅಲ್ಲಿ ಬಹಳ ಜನರಿಗೆ ಕೆಲಸವಿರುವುದಿಲ್ಲ. ಕಡಿದಾದ ಜಾಗದಲ್ಲಿ ದನಕೋಣ ಹೂಡಿ ನೇಗಿಲು ಹೊಡೆಯುವುದು ಕಷ್ಟ. ಕುರುಪಿ ಕೈಗುದ್ದಲಿಗಳಲ್ಲೇ ನೆಲ ಅಗೆಯಬೇಕು. ಬೀಜ ಬಿತ್ತಬೇಕು. ಕಳೆತೆಗೆಯಬೇಕು. ಜಮೀನು ಮನೆಯಂಗಳ ಇಲ್ಲವೇ ಹಿತ್ತಿಲುಗಳೇ ಚಾಚಿಕೊಂಡಂತೆ ಲಗತ್ತಾಗಿರುತ್ತದೆ. ಹೀಗಾಗಿ ಮಹಿಳೆಯರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು, ಮರದಡಿ ಕೂರಿಸಿಯೊ ಹೊಲಗೆಲಸ ಮಾಡುತ್ತಾರೆ. ಗಂಡಸರು ಕುರಿಕಾವಲಿಗೆ ಹೋಗುವರು. ಹಿಮಾಲಯದ ಬೇಸಾಯ ಹೆಂಗಸರ ಶ್ರಮದಿಂದಲೇ ನಿಂತಿದೆ. ಉಂಕಿಮಠದ ಸಮೀಪ ಗದ್ದೆಯ ಕೆಲಸ ಮಾಡಿ ವಿಶ್ರಾಂತಿಗಾಗಿ ಬಾಳೆ ಗಿಡದಡಿ ಸುಧಾರಿಸಿಕೊಳ್ಳುತ್ತಿದ್ದ ಮಹಿಳೆಯರ ಚಿತ್ರವನ್ನು ಸೆರೆಹಿಡಿಯಲು ಯತ್ನಿಸಿದೆ. ನಾಚಿಕೆಯಿಂದ ಗಿಡದ ಮೆರೆಗೆ ಸರಿದರು. ಒಮ್ಮೆ ಪಾರ್ವತಿ ನದಿಕಣಿವೆಯಲ್ಲಿ ಬರುವ ಫುಲಾನ್ ಎಂಬ ಹಳ್ಳಿಯಲ್ಲಿ ನಮ್ಮ ರಾತ್ರಿ ವಸತಿಯಿತ್ತು. ಹಗಲು ಹದಿನೈದು ಕಿಮೀ ನಡಿಗೆಯಾಗಿದ್ದರಿಂದ, ‘ಮೈಯೆ ಭಾರ ಮನವೆ ಭಾರ’ವಾಗಿತ್ತು. ಹೆಣಗಳಂತೆ ಬಿದ್ದುಕೊಂಡೆವು. ಗಾಜಿನ ಕಿಟಕಿಯಿಂದ ಮಂದವಾದ ಬೆಳಕು ನುಗ್ಗುವಾಗಲೇ ತಿಳಿಯಿತು ಇರುಳು ಮುಗಿಯಿತೆಂದು. ಬೆಳಿಗ್ಗೆಯೆ ಎದ್ದು ಪಾರ್ವತಿ ಕಣಿವೆಯ ಸೂರ್ಯೋದಯ ನೋಡಲು ಮನಸ್ಸಾಯಿತು. ದೇಹ ಏಳಲು ನಿರಾಕರಿಸುತ್ತಿತ್ತು. ಸೇಬುತೋಟದಲ್ಲಿದ್ದ ಬುಲ್‌ಬುಲ್‌ಗಳ ಚೀಚೀಕ್ ಆಲಿಸುತ್ತ, ಸೂರನ್ನು ನೋಡುತ್ತ ಬಿದ್ದುಕೊಂಡಿದ್ದೆ. ತೋಟದಲ್ಲಿ ಗುದ್ದಲಿ ಸದ್ದು ಲಯಬದ್ಧವಾಗಿ ಕೇಳಿಸಿತು. ಕಿಟಕಿಯಲ್ಲಿ ಇಣುಕಿದೆ. ಮಹಿಳೆಯೊಬ್ಬಳು ಸೇಬುತೋಟದ ಬದುವಿನ ಅಂಚನ್ನು ಸವರುತ್ತಿದ್ದಳು. ತಿನ್ನುವವರ ಹೆಸರು ಕಾಳಮೇಲೆ ಬರೆದಿರುತ್ತದೆಯಂತೆ. ಬೆಳೆದವರ ಹೆಸರೇನಾದರೂ ಹಣ್ಣುಕಾಯಿಗಳ ಮೇಲೆ ಬರೆದಿರುತ್ತಿದ್ದರೆ ಅವುಗಳಲ್ಲಿ ಹಿಮಾಲಯದ ಮಹಿಳೆಯರ ಹೆಸರಲ್ಲಿರುತ್ತಿದ್ದವು. ನಮಗೆ ಬರುವ ಕೇಸರಿಯಲ್ಲಿ, ಸೇಬಿನ ರುಚಿಯಲ್ಲಿ ಹಿಮಾಲಯದ ಮಹಿಳೆಯರ ಶ್ರಮವಿದೆ.

ನಗರಗಳಲ್ಲಿ ರಾತ್ರಿ ಎಂಟರ ಮೇಲೆ ಮಹಿಳೆಯರು ತಿರುಗುವುದು ಅಪಾಯಕರ ಎಂದು ನೈತಿಕವಾದಿಗಳು ಅಪ್ಪಣೆ ಕೊಡಿಸುತ್ತಾರೆ. ಆದರೆ ಹಿಮಾಲಯದಲ್ಲಿ ನಿರ್ಜನ ಕಾಡಿನಲ್ಲೂ ಮಹಿಳೆಯರು ಏಕಾಂಗಿಯಾಗಿ ಸುತ್ತುತ್ತಾರೆ. ಅದು ಅನಿವಾರ್ಯ ಕೂಡ. ನಾವೊಮ್ಮೆ ಪಿನ್ನಿ ಎಂಬ ಹಳ್ಳಿಯ ಹೊರಗೆ, ದುರ್ಗಮ ಪರ್ವತದ ಕಿಬ್ಬದಿಯಲ್ಲಿ ಹೊಳೆ ಹುಟ್ಟುವ ಜಾಗದಲ್ಲಿ ಬೀಡುಬಿಟ್ಟಿದ್ದೆವು. ಸೂರ್ಯ ಹುಟ್ಟುವುದನ್ನು ನೋಡಲೆಂದು ಎದ್ದರೆ, ಗೋಡೆಯಂತೆ ನಮ್ಮೆದುರಿಗೆ ನಿಂತಿರುವ ಕಲ್ಲಿನ ಪಾರ್ಶ್ವ ಮಾತ್ರ ಕಂಡಿತು. ಅದರ ಮೇಲೆ ಗಿಡಮರ ಬೆಳೆದಿದ್ದವು. ಅವಕ್ಕೆ ನೀರು ಹೇಗೆ ಸಿಗುತ್ತದೆ, ಬೇರು ಹೇಗೆ ಬಿಡುತ್ತವೆ ಎಂದು ಸೋಜಿಗದಿಂದ ನೋಡುತ್ತಿದ್ದೆ. ಒಬ್ಬಾಕೆ ಮೇಕೆ ಅಟ್ಟಿಕೊಂಡು ಹಳ್ಳಿಯ ಕಡೆಯಿಂದ ಬಂದಳು. ದುರ್ಗಮವಾದ ಪರ್ವತದ ಸಂದಿಗೊಂದಿಗಳಲ್ಲಿ ಹತ್ತಿ ಹಾದಿ ಹಿಡಿದು ಮೇಕೆಗಳ ಸಮೇತ ನೋಡುತ್ತಲೇ ಮರೆಯಾದಳು. ಒಮ್ಮೆ ಢಿನಾಳಿ ಎಂಬಲ್ಲಿ ಊರಹೊರಗಿದ್ದ ಬೃಹತ್ ಮರದಡಿ ಕುಳಿತು ಕಟ್ಟಿಕೊಂಡು ತಂದ ಬುತ್ತಿ ಉಣ್ಣಬೇಕಾಯಿತು. ಊರಿನ ಹೆಂಗಸರು ನಮ್ಮನ್ನು ನೋಡಲೆಂದು ಸೇರಿದರು. ಕೈಯಲ್ಲಿ ಕೈಗೂಸುಗಳಿದ್ದವು. ಉಣ್ಣೆಯ ಹೆಣಿಗೆ ಮಾಡುತ್ತಲೇ ಇದ್ದರು. ಭಾರತದ ಕೊನೆಯ ಹಳ್ಳಿ ಮಲಾನದಲ್ಲಿ, ಮನೆಯ ಜಗುಲಿಯಲ್ಲಿ ಟೆರೇಸಿನ ಮೇಲೆ ನೂಲುತ್ತ ಹೆಣಿಗೆ ಮಾಡುತ್ತ ಕುಲಾವಿ ಮಾರುತ್ತ ಕುಳಿತ, ಮನೆಯಂಗಳದಲ್ಲಿ ತರಕಾರಿ ಬೆಳೆಯುತ್ತ ಅಜ್ಜಿಯರು ವಿಶೇಷವಾಗಿರುವರು. ಕೆಲವರು ಒನಕೆಯಲ್ಲಿ ಏನನ್ನೊ ಒರಳಿಗೆ ಹಾಕಿ ಕುಟ್ಟುತ್ತಿರುವ ಸದ್ದು ಕೇಳುತ್ತದೆ. ಕುರಿಗಾಹಿಗಳಾಗಿ ಗಂಡಸರು, ತರುಣಿಯರು ಕಾಡಿಗೆ ಹೋದರೆ, ಊರುಮನೆಯನ್ನು ಇವರು ಸಂಭಾಳಿಸುವವರು. ಇವರು ತಮ್ಮ ಕ್ರಿಯಾಶೀಲತೆಯನ್ನು ದುಡಿಮೆಯಲ್ಲೇ ಕಂಡುಕೊಂಡಂತೆ ಭಾಸವಾಗುತ್ತದೆ.

ಇದನ್ನೂ ಓದಿ: ಗಾಂಧಿ ಸ್ಮರಣೆಯ ಕೆಲವು ವೈರುಧ್ಯಗಳು

ನಗರೋಣಿಯಲ್ಲಿ ಕಂಡ ಒಂದು ರೈತ ದಂಪತಿ ಸಿನಿಮಾ ತಾರೆಯರಂತಿದ್ದರು. ಅವರ ಹೊಲ ಹನ್ನೆರಡು ಸಾವಿರ ಅಡಿ ಎತ್ತರದಲಿತ್ತು. ಸುತ್ತಮುತ್ತ ಹಿಮಪರ್ವತ. ನಡುವೆ ಹೊಲ-ಮನೆ. ಬೇಸಿಗೆಯ ನಡುಹಗಲಲ್ಲೇ ಐದು ಡಿಗ್ರಿ ಚಳಿ. ಚಳಿಗಾಲ ಹೇಗಿದ್ದೀತು? ಪಾರ್ವತಿ ನದಿಯ ದಡದಲ್ಲಿ ಮಣಿಕರ್ಣಿಕಾಗೆ ಹೋಗುತ್ತಿರುವಾಗ ಒಂದು ಮನೆಯಂಗಳದಲ್ಲಿ ಗೋಧಿಹುಲ್ಲನ್ನು ಕೋಲುಗಳಿಂದ ಬಡಿಯುತ್ತ ಧಾನ್ಯವನ್ನು ಬೇರ್ಪಡಿಸುತ್ತಿದ್ದ ಮಹಿಳೆ ಅಪ್ರತಿಮ ಚೆಲುವೆಯಾಗಿದ್ದಳು. ಬಾನು ಕೂಡ ಆಕೆಯನ್ನು ಕಣ್ಮಿಸುಕದೆ ನೋಡಿದಳು. ಹಾದಿಹೋಕರಾದ ನಮ್ಮತ್ತ ಆಕೆ ತಿರುಗಿಯೂ ನೋಡಲಿಲ್ಲ. ಹಿಮಾಲಯದ ಮಹಿಳೆಯರು ಕಾಡುಹೂಗಳಂತೆ. ತಮ್ಮ ಸಹಜ ಸೌಂದರ್ಯದ ಅರಿವೇ ಇಲ್ಲದಂತೆ ದುಡಿಯುತ್ತಿರುತ್ತಾರೆ. ಅವರನ್ನು ದುಡಿಮೆಯೇ ಸುಂದರವಾಗಿಸಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮನುಷ್ಯ ಸ್ವಾರ್ಥಿ, ಗಂಡು, ಬಸಿರು ಬಾಣಂತನ, ಮಗುವಿನ ಆರೈಕೆ ಇತ್ಯಾದಿ ಕೋಟಿ ಕೆಲಸಗಳ ಹೊರೆ ಇಲ್ಲದೆ ಬದುಕುವ ಅಪರಿಮಿತ ಸ್ವತಂತ್ರ ಜೀವಿ, ತಾನು ತನ್ನ ಕೆಲಸ ಸಾಧನೆ ಆಕಾಂಕ್ಷೆ ಗುರಿಗಳಲ್ಲಿ ಮೈಮರೆತು ತನ್ನ ಸಹಜೀವಿ ಹೆಣ್ಣನ್ನ ಕಾಲುಕಸ ಮಾಡಿಕೊಂಡು ಅವಳ ಮೇಲೆ ಪಾವಿತ್ರ್ಯ ಶೀಲ ಮರ್ಯಾದೆಗಳನ್ನ ಹೊರಿಸಿ ರೂಡಿ ಸಂಪ್ರದಾಯ ಹಾಡು ಹಸೆಗಳ ಮೂಲಕ ಅದನ್ನ ಶಾಶ್ವತೀಕರಿಸಿದ್ದಾನೆ. ಶತಮಾನಗಳೆ ಉರುಳಿದರೂ ಹೆಣ್ಣಿನ ಶ್ರಮ ನೈಪುಣ್ಯತೆ ಜಾಣತನಗಳು ಪ್ರತಿಭೆ ಕಲಾವಂತಿಕೆ ಯಾವುದಕ್ಕೂ ಬೆಲೆ ಇಲ್ಲ.
    ಸರೋಜ m s
    ಸಾಗರ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...